Asianet Suvarna News Asianet Suvarna News

ಸಿಂಹವಾಹಿನಿಯಾದ ಶಾರದಾಂಬೆ, ಸಿದ್ಧಿಧಾತ್ರಿ ಅಲಂಕಾರದಲ್ಲಿ ಅನ್ನಪೂರ್ಣೇಶ್ವರಿ

ಶೃಂಗೇರಿ, ಹೊರನಾಡಿನಲ್ಲಿ ಆಯುಧಪೂಜೆ ಸಂಭ್ರಮ 
ಸಿಂಹಾರೂಢಾ ಸಿದ್ದದಾತ್ರಿ ಅಲಂಕಾರದಲ್ಲಿ ಅನ್ನಪೂಣೇಶ್ವರಿ 
ಸಿಂಹವಾಹಿನಿ ಅಲಂಕಾರದಲ್ಲಿ ಜಗನ್ಮಾತೆ ಶಾರದಾದೇವಿ 

Navratri day 9 Celebrations in Sringeri and Horanadu devi temples skr
Author
First Published Oct 4, 2022, 4:35 PM IST

ವರದಿ : ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು 

ಕಾಫಿನಾಡು ಜಿಲ್ಲೆಯಲ್ಲಿ ನವರಾತ್ರಿ ಸಂಭ್ರಮ ಮನೆ ಮಾಡಿದೆ. ಅದರಲ್ಲೂ ಶೃಂಗೇರಿ, ಹೊರನಾಡಿನಲ್ಲಿ ನವರಾತ್ರಿಯ ಸಂಭ್ರಮ ಕಳೆಕಟ್ಟಿದ್ದು, ಕಳೆದ ಎರಡು ವರ್ಷ ಕೋರೋನಾದಿಂದ ಸರಳವಾಗಿ ನವರಾತ್ರಿಯನ್ನು ಆಚರಣೆ ಮಾಡಲಾಗಿತ್ತು. ಈ ಬಾರಿ ಅದ್ದೂರಿಯಾಗಿ ನವರಾತ್ರಿಯನ್ನು ಆಚರಣೆ ಮಾಡಲಾಗಿದ್ದು, ನವರಾತ್ರಿಯ 9ನೇ ದಿನವಾದ ಇಂದು  ಹೊರನಾಡು, ಶೃಂಗೇರಿಯಲ್ಲಿ ಆಯುಧ ಪೂಜೆ ಸಂಭ್ರಮ ಮನೆ ಮಾಡಿತ್ತು. ದೇವಿ ದರ್ಶನ ಪಡೆಯಲು ಎರಡೂ ಧಾರ್ಮಿಕ ಕ್ಷೇತ್ರದಲ್ಲೂ  ಭಕ್ತ ಸಾಗರವೇ ಹರಿದು ಬರುತ್ತಿದೆ. 

ಸಿಂಹಾರೂಢಾ ಸಿದ್ದಿಧಾತ್ರಿ ಅಲಂಕಾರದಲ್ಲಿ ಅನ್ನಪೂಣೇಶ್ವರಿ 
ಶರನ್ನವರಾತ್ರಿ  ಮಹೋತ್ಸವದ ಅಂಗವಾಗಿ ಚಿಕ್ಕಮಗಳೂರು ಜಿಲ್ಲೆಯ ಕಳಸ ತಾಲ್ಲೂಕಿನ  ಹೊರನಾಡಿನ ಮಾತೆ ಅನ್ನಪೂರ್ಣೇಶ್ವರಿ ಇಂದು ಸಿಂಹಾರೂಢಾ ಸಿದ್ದಿಧಾತ್ರಿ ಅಲಂಕಾರದೊಂದಿಗೆ ಕಂಗೊಳಿಸಿದಳು. ಧಾರ್ಮಿಕ ಕಾರ್ಯಕ್ರಮದ ಅಂಗವಾಗಿ  ಸಪ್ತಶತಿ ಪಾರಾಯಣ, ವೇದ ಪಾರಾಯಣ, ಸುಂದರಕಾಂಡ ಪಾರಾಯಣ, ಕುಂಕುಮಾರ್ಚನೆ ಮತ್ತು  ಶ್ರೀ ದುರ್ಗಾ ಮೂಲಮಂತ್ರ ಹೋಮ ನಡೆಯಿತು. ಸಿಂಹಾರೂಢಾ ಸಿದ್ಧಿಧಾತ್ರಿ ಅಲಂಕಾರದ ಪೂಜೆ ಜೊತೆಗೆ ಆಯುಧ ಪೂಜೆ ಶ್ರೀ ಮಠದಲ್ಲಿ ನಡೆಯಿತು. ಶ್ರೀ ಮಠದ ವಾಹನಗಳಿಗೆ ಪೂಜೆ ಮಾಡಲಾಯಿತು. ತದನಂತರ ಬೆಳಿಗ್ಗೆ 8.30ಕ್ಕೆ ನಡೆದ ಪೂರ್ಣಾಹುತಿಯಲ್ಲಿ ದೇವಸ್ಥಾನದ ಧರ್ಮಕರ್ತ ಡಾ|ಜಿ.ಭೀಮೇಶ್ವರ ಜೋಷಿ ಪಾಲ್ಗೊಂಡರು.ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಶ್ರೀಮತಿ ತೇಜಸ್ವಿನಿ ಚರಣ್ ಮತ್ತು ತಂಡ ಬೆಂಗಳೂರು ಇವರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ ಮತ್ತು ಸುಗಮ ಸಂಗೀತ, ರಾಮಚಂದ್ರಯ್ಯ ಮತ್ತು ಶಿಷ್ಯವೃಂದ ಬೆಂಗಳೂರು ಇವರಿಂದ ಭರತನಾಟ್ಯ ನಡೆಯಿತು.

ಆಯುಧ ಪೂಜೆ ವಿಶೇಷ; ನೋಡ ಬನ್ನಿ ಮೈಸೂರು ರಾಜರ ದಸರಾ ವೈಭವ

ಸಿಂಹವಾಹಿನಿ ಅಲಂಕಾರದಲ್ಲಿ ಜಗನ್ಮಾತೆ ಶಾರದಾದೇವಿ 
ಶೃಂಗೇರಿಯಲ್ಲಿ ಅದ್ಧೂರಿಯಾಗಿ ಶಾರದಾ ಶರನ್ನವರಾತ್ರಿ ಉತ್ಸವ ಜರುಗುತ್ತಿದ್ದು, ಇಂದು ಜಗನ್ಮಾತೆ ಶಾರದಾದೇವಿಯು ಸಿಂಹವಾಹಿನಿ ಅಲಂಕಾರದಲ್ಲಿ ಜಗನ್ಮಾತೆ ಶಾರದಾದೇವಿ ಕಂಗೊಳಿಸುತ್ತಿದ್ದು, ಭಕ್ತರನ್ನು ಅನುಗ್ರಹಿಸುತ್ತಿದ್ದಾಳೆ. ನವರಾತ್ರಿಯ 9 ದಿನಗಳಲ್ಲಿ 9 ಅಲಂಕಾರಗಳಿಂದ ಕಂಗೊಳಿಸುವ ಮಾತೆಯು ಇಂದು ನವರಾತ್ರಿಯ ಕೊನದಿನದಲ್ಲಿ ವಿಶೇಷವಾಗಿ ಸಿಂಹವಾಹಿನಿ  ಅಲಂಕಾರದಲ್ಲಿ ಕಂಗೊಳಿಸುತ್ತಿದ್ದು, ಚಾಮುಂಡಿ ಅವತಾರವಾಗಿದ್ದು ಆಯುಧಪೂಜೆ ಅಂಗವಾಗಿ ಶ್ರೀ ಮಠದಲ್ಲಿರುವ ವಾಹನಗಳು ಸೇರಿದಂತೆ ಗಜ, ಅಶ್ವಗಳಿಗೆ ಪೂಜೆಯನ್ನು ಮಾಡಲಾಯಿತು. ವಿಶೇಷದಿನವಾದ ಇಂದು  ಶೃಂಗೇರಿಗೆ ಸುತ್ತಮುತ್ತಲಿನ ಊರುಗಳಿಂದ ರಾಜ್ಯದ ಹಲವೆಡೆಗಳಿಂದ ಜನರು ಆಗಮಿಸುತ್ತಿದ್ದರು. ಪಟ್ಟಣದ ಪ್ರಮುಖ ಬೀದಿಗಳಲ್ಲಿ ಹಾಗೂ ಶೃಂಗೇರಿಯ ಗಾಂಧಿ ಮೈದಾನದಲ್ಲಿ ವಾಹನಗಳು ಸಾಲುಗಟ್ಟಿ ನಿಂತಿವೆ. ಅನೇಕ ಸಂಖ್ಯೆಯಲ್ಲಿ ಮಠಕ್ಕೆ ಆಗಮಿಸುವ ಭಕ್ತರು ದೇವಿ ಹಾಗೂ ಜಗದ್ಗುರುಗಳ ದರ್ಶನ ಪಡೆದು ಶ್ರೀ ಮಠದ ಭೋಜನ ಶಾಲೆಯಲ್ಲಿ ಪ್ರಸಾದ ಸ್ವೀಕರಿಸಿ ಇಲ್ಲಿನ ಪ್ರವಾಸಿ ತಾಣಗಳಿಗೆ ಭೇಟಿ ನೀಡುತ್ತಿದ್ದಾರೆ. ಒಟ್ಟಾರೆ ಶೃಂಗೇರಿಯಲ್ಲಿ ಕೊರೋನಾ ನಂತರದ ಅವಧಿಯ ನವರಾತ್ರಿ ಉತ್ಸವ ಅತ್ಯಂತ ಅದ್ಧೂರಿಯಾಗಿ ನಡೆಯುತ್ತಿದೆ. ವಿದ್ಯುತ್ ದೀಪಾಲಂಕಾರಗಳಿಂದ ಇಡೀ ಪಟ್ಟಣವು ಶೃಂಗಾರಗೊಂಡಿದ್ದು, ರಾತ್ರಿಯ ವೇಳೆ ರಾಜಗೋಪುರದ ದೀಪಾಲಂಕಾರವು ಆಕರ್ಷಣೀಯವಾಗಿ ಕಾಣಿಸುತ್ತಿದೆ.

Navratri 2022: ಬಾಗಲಕೋಟೆಯ ಅಂಬಾಭವಾನಿಗೆ 56 ಬಗೆಯ ನೈವೇದ್ಯ!

Follow Us:
Download App:
  • android
  • ios