Asianet Suvarna News Asianet Suvarna News

ನವರಾತ್ರಿ ಸಂಭ್ರಮದಲ್ಲಿ ಕಳೆಗಟ್ಟಿದ ದಾಂಡಿಯಾ ನೃತ್ಯ

ಶಿರಸಿ, ಕಾರವಾರ, ದಾಂಡೇಲಿ ಭಾಗದಲ್ಲಿ ದಾಂಡಿಯಾ ನೃತ್ಯ ಕಳೆಗಟ್ಟಿದೆ. ರಾತ್ರಿ ವೇಳೆ ಆಬಾಲವೃದ್ಧರಾದಿಯಾಗಿ ಎಲ್ಲರೂ ದಾಂಡಿಯಾ ನೃತ್ಯದಲ್ಲಿ ಹೆಜ್ಜೆ ಹಾಕುತ್ತಿದ್ದಾರೆ. ಎಸ್‌ಪಿ ಕೂಡ ದಾಂಡಿಯಾ ನೃತ್ಯಕ್ಕೆ ಹೆಜ್ಜೆ ಹಾಕಿ ಸಂಭ್ರಮಿಸಿದ್ದಾರೆ.

Navratri celebration at dandeli peoples steps dandiya rav
Author
First Published Oct 4, 2022, 2:18 PM IST

ಕಾರವಾರ (ಅ.4) : ಜಿಲ್ಲೆಯಲ್ಲಿ ನವರಾತ್ರಿ ಸಂಭ್ರಮ ಮನೆ ಮಾಡಿದೆ. ಶಿರಸಿ, ದಾಂಡೇಲಿ, ಕಾರವಾರ ಭಾಗದಲ್ಲಿ ದಾಂಡಿಯಾ ನೃತ್ಯ ಕಳೆಗಟ್ಟಿದೆ. ಕಾರವಾರದ ಸಂತೋಷಿ ಮಾತಾ, ದುರ್ಗಾದೇವಿ, ಬಾಡದ ಕಾಂಚಿಕಾ ಪರಮೇಶ್ವರಿ, ಶಾಂತಿಕಾ ಪರಮೇಶ್ವರಿ, ಹೊನ್ನಾವರದ ಕರಿಕಾನ ಪರಮೇಶ್ವರಿ, ಭಟ್ಕಳದ ದುರ್ಗಾ ಪರಮೇಶ್ವರಿ, ಶಿರಸಿಯ ಮಾರಿಕಾಂಬಾ, ಸಿದ್ದಾಪುರದ ಭುವನಗಿರಿ ಒಳಗೊಂಡು ವಿವಿಧ ದೇವಸ್ಥಾನಗಳಲ್ಲಿ ಧಾರ್ಮಿಕ ಕಾರ್ಯಕ್ರಮ, ವಿಶೇಷ ಪೂಜೆ ನಡೆಯುತ್ತಿದೆ. ವಿದ್ಯುತ್‌ ದೀಪ, ಹೂವಿನ ಅಲಂಕಾರಗಳು ಭಕ್ತರ ಕಣ್ಮನ ಸೆಳೆಯುತ್ತಿದೆ.

ಶಿರಸಿ, ಕಾರವಾರ, ದಾಂಡೇಲಿ ಭಾಗದಲ್ಲಿ ದಾಂಡಿಯಾ ನೃತ್ಯ ಕಳೆಗಟ್ಟಿದೆ. ರಾತ್ರಿ ವೇಳೆ ಆಬಾಲವೃದ್ಧರಾದಿಯಾಗಿ ಎಲ್ಲರೂ ದಾಂಡಿಯಾ ನೃತ್ಯದಲ್ಲಿ ಹೆಜ್ಜೆ ಹಾಕುತ್ತಿದ್ದಾರೆ.

ಕಳೆದ 2 ವರ್ಷ ಕೋವಿಡ್‌ ಸೋಂಕಿನಿಂದಾಗಿ ದಾಂಡಿಯಾ ಆಚರಣೆಗೆ ಅವಕಾಶ ಇರಲಿಲ್ಲ. ಹೀಗಾಗಿ ಈ ವರ್ಷ ಸಹಸ್ರ ಸಂಖ್ಯೆಯಲ್ಲಿ ದಾಂಡಿಯಾ ನೃತ್ಯ ನೋಡಲು ಆಗಮಿಸುತ್ತಿದ್ದಾರೆ. ತಡರಾತ್ರಿಯವರೆಗೂ ದಾಂಡಿಯಾ ನೃತ್ಯ ನಡೆಯುತ್ತಿದೆ. ನವರಾತ್ರಿ ಹಿನ್ನೆಲೆಯಲ್ಲಿ ದಾಂಡಿಯಾ ಆಯೋಜನೆ ಸಮಿತಿಗಳಿಂದ ವಿವಿಧ ಮನರಂಜನಾ, ಕ್ರೀಡಾ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.

ಜನಜಂಗುಳಿ: ಸಾಲು ಸಾಲು ರಜೆ ಬಂದಿರುವ ಹಿನ್ನೆಲೆಯಲ್ಲಿ ಪ್ರೇಕ್ಷಣೀಯ, ಧಾರ್ಮಿಕ ತಾಣಗಳು ಪ್ರವಾಸಿಗರಿಂದ ತುಂಬಿ ತುಳುಕುತ್ತಿವೆ. ಮಂಗಳವಾರ, ಬುಧವಾರ ಮತ್ತಷ್ಟುಪ್ರವಾಸಿಗರ ಆಗಮನದ ನಿರೀಕ್ಷೆಯಿದೆ. ಗೋಕರ್ಣ, ಮುರುಡೇಶ್ವರದ ಕಡಲ ತೀರಗಳಲ್ಲಿ, ಸಾತೊಡ್ಡಿ, ಉಂಚಳ್ಳಿ, ಮಾಗೋಡ, ಸಹಸ್ರಲಿಂಗ ಮೊದಲಾದ ಸ್ಥಳಗಳು ಜನನಿಬಿಡವಾಗಿದೆ. ರಜೆ ಹಾಗೂ ನವರಾತ್ರಿ ಕಾರಣದಿಂದಾಗಿ ಪ್ರಮುಖ ಧಾರ್ಮಿಕ ಕ್ಷೇತ್ರಗಳಿಗೆ ಭಕ್ತ ಆಗಮನ ಹೆಚ್ಚಾಗಿದೆ.

ಹೂವಿನ ದರ ಏರಿಕೆ: ನವರಾತ್ರಿ ಹಿನ್ನೆಲೆಯಲ್ಲಿ ಹೂವಿನ ದರ ತುಸು ಜಾಸ್ತಿಯೇ ಏರಿಕೆಯಾಗಿದೆ. ಹಣ್ಣುಗಳ ದರ .10-20 ಏರಿಕೆ ಕಂಡಿದೆ. ದರ ಏರಿಕೆಯ ನಡುವೆಯೂ ಹಬ್ಬದ ವಿಶೇಷ ಪೂಜೆಗಾಗಿ ಹೂವು-ಹಣ್ಣು ಖರೀದಿಯನ್ನು ಜನರು ಮಾಡುತ್ತಿದ್ದಾರೆ. ಬಿಳೆ ಸೇವಂತಿಗೆ .150-200, ಕಣಗಿಲೆ .100-150, ಕನಕಾಂಬರ .150-200, ಹಳದಿ ಸೇವಂತಿಗೆ .200-250, ಮಾಲೆ .80-120, ತುಳಸಿ ಮಾಲೆ .100-120 ದರವಿದೆ. ಸೇಬುಹಣ್ಣು .100-120, ದಾಳಿಂಬೆ .160-180, ಚಿಕ್ಕು .80-100ಕ್ಕೆ ಮಾರಾಟವಾಗುತ್ತಿದೆ.

ಸೋಮವಾರ ವ್ಯಾಪಾರ ಕಡಿಮೆ ಇದ್ದರೂ ಮಂಗಳವಾರ ನವಮಿಯಂದು ಆಯುಧಪೂಜೆ ಇರುವುದರಿಂದ, ಮರುದಿನ ವಿಜಯ ದಶಮಿ ಇರುವುದರಿಂದ ವ್ಯಾಪಾರ ವಹಿವಾಟು ಆಗುವ ಸಾಧ್ಯತೆಯಿದೆ ಎಂದು ವ್ಯಾಪಾರಸ್ಥರು ಹೇಳುತ್ತಾರೆ.

 ದಂಡಿಯಾ ನೃತ್ಯಕ್ಕೆ ಹೆಜ್ಜೆ ಹಾಕಿದ ಎಸ್‌ಪಿ

ಉತ್ತರ ಕನ್ನಡ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ.ಸುಮನಾ ಪೆನ್ನೇಕರ ದಾಂಡಿಯಾದಲ್ಲಿ ಹೆಜ್ಜೆ ಹಾಕಿ ಸಂಭ್ರಮಿಸಿದರು. ಇಲ್ಲಿನ ಬಾಂಡಿಶಿಟ್ಟಾನವರಾತ್ರಿ ಉತ್ಸವ ಸಮಿತಿಯ ರಜತ ಮಹೋತ್ಸವ ಕಾರ್ಯಕ್ರಮದಲ್ಲಿ ಭಾನುವಾರ ಪಾಲ್ಗೊಂಡು ತಮ್ಮ ಸಹೋದರಿಯ ಜತೆಗೂಡಿ ಸ್ಥಳೀಯರೊಂದಿಗೆ ಗರ್ಭಾ ನೃತ್ಯಕ್ಕೆ ಹೆಜ್ಜೆ ಹಾಕಿದರು. ಅರ್ಧ ಗಂಟೆವರೆಗೆ ಎಸ್‌ಪಿ ನೃತ್ಯ ಮಾಡಿ ನೋಡುಗರ ಗಮನ ಸೆಳೆದರು. ಸುಮನಾ ಪೆನ್ನೇಕರ ನೃತ್ಯ ಮಾಡುತ್ತಿರುವಾಗ ಅವರ ಪುಟ್ಟಮಗಳು ಖುಷಿ ಕೂಡ ಅಮ್ಮನೊಂದಿಗೆ ಕೆಲ ನಿಮಿಷಗಳ ಕಾಲ ಹೆಜ್ಜೆ ಸಂಭ್ರಮಿಸಿದರು.

ಗರ್ಭಾಕ್ಕೂ ಮೊದಲು ನಡೆದ ಸಭಾ ಕಾರ್ಯಕ್ರಮದಲ್ಲಿ ದಾಂಡಿಯಾ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಉತ್ತಮ ಪ್ರದರ್ಶನ ನೀಡಿದ ತಂಡಗಳಿಗೆ ಎಸ್ಪಿ ಬಹುಮಾನ ವಿತರಿಸಿದರು. ಕಾರವಾರಿಗರಲ್ಲಿ ಹಾಸುಹೊಕ್ಕಾಗಿರುವ ರಾಜಸ್ಥಾನಿ, ಗುಜರಾತಿಗಳ ನವರಾತ್ರಿ ಸಂಪ್ರದಾಯದ ಬಗ್ಗೆ ಮೆಚ್ಚುಗೆ ಸೂಚಿಸಿದರು

Follow Us:
Download App:
  • android
  • ios