Asianet Suvarna News Asianet Suvarna News

ಸುರಪುರದಲ್ಲಿ ಗಣೇಶನಿಗೆ ಹೆಚ್ಚಿದ ಬೇಡಿಕೆ ; ತಗ್ಗಿದ ಪೂರೈಕೆ

ಕೊರೋನಾದಿಂದ ಮುಕ್ತವಾಗಿದ್ದರಿಂದ ಸಂಭ್ರಮದ ಗಣೇಶ ಹಬ್ಬಕ್ಕೆ ಸರಕಾರ ಅಸ್ತು ಎಂದಿದ್ದರೂ ಮೂರ್ತಿ ಪ್ರತಿಷ್ಠಾಪನೆಗೆ ಭಕ್ತರು ಆಸಕ್ತರಾಗಿದ್ದರಿಂದ ಬೇಡಿಕೆ ಹೆಚ್ಚಿದೆ. ಆದರೆ ಪೂರೈಕೆ ಪ್ರಮಾಣ ಗಣನೀಯವಾಗಿ ತಗ್ಗಿದೆ. ಇದರಿಂದ ಗಣೇಶ ಭಕ್ತರ ಜೇಬಿಗೆ ಪ್ರಸಕ್ತ ವರ್ಷ ಕತ್ತರಿ ಬೀಳಲಿದೆ

Increased demand for Ganesha but Reduced supply surapura
Author
First Published Aug 31, 2022, 5:50 AM IST

ಸುರಪುರ (ಆ.31) : ಕೊರೋನಾದಿಂದ ಮುಕ್ತವಾಗಿದ್ದರಿಂದ ಸಂಭ್ರಮದ ಗಣೇಶ ಹಬ್ಬಕ್ಕೆ ಸರಕಾರ ಅಸ್ತು ಎಂದಿದ್ದರೂ ಮೂರ್ತಿ ಪ್ರತಿಷ್ಠಾಪನೆಗೆ ಭಕ್ತರು ಆಸಕ್ತರಾಗಿದ್ದರಿಂದ ಬೇಡಿಕೆ ಹೆಚ್ಚಿದೆ. ಆದರೆ ಪೂರೈಕೆ ಪ್ರಮಾಣ ಗಣನೀಯವಾಗಿ ತಗ್ಗಿದೆ. ಇದರಿಂದ ಗಣೇಶ ಭಕ್ತರ ಜೇಬಿಗೆ ಪ್ರಸಕ್ತ ವರ್ಷ ಕತ್ತರಿ ಬೀಳಲಿದೆ. ಪರಿಸರ ಸ್ನೇಹಿ ಮಣ್ಣಿನ ಗಣಪ ಹಾಗೂ ಪ್ಲಾಸ್ಟರ್‌ ಆಫ್‌ ಪ್ಯಾರೀಸ್‌ ಗಣೇಶ ವಿಗ್ರಹಗಳನ್ನು 3 ತಿಂಗಳ ಮುಂಚಿನಿಂದಲೇ ಸ್ಥಳೀಯವಾಗಿ ತಯಾರಿಸಲು ಆರಂಭಿಸುತ್ತಿದ್ದರು. ಕೊರೋನಾ ಭಯದಿಂದ ಎಲ್ಲಿ ನಷ್ಟಅನುಭವಿಸುತ್ತೇವೆಯೋ ಎಂಬ ಚಿಂತನೆಯಿಂದ ಗಣೇಶ ಮೂರ್ತಿ ತಯಾರಿಸಲು ಮುಂದಾಗಿಲ್ಲ. ಆದ್ದರಿಂದ ಸೊಲ್ಲಾಪುರ, ಹೈದರಬಾದ್‌, ಕಲಬುರಗಿಯಿಂದ ಆಮದು ಮಾಡಲಾಗುತ್ತಿದೆ.

ಈ ಗಣೇಶನಿಗೆ ಬೆಂಗಳೂರಿನಲ್ಲಿ ಭಾರೀ ಬೇಡಿಕೆ

10 ವರ್ಷಗಳಿಂದ ಗಣೇಶ ವಿಗ್ರಹ ತಯಾರಿಕೆಯಲ್ಲಿ ತೊಡಗಿದ್ದೇವೆ. ಬೇರೆಡೆಯಿಂದ ಜನರನ್ನು ಕರೆತಂದು ವಿಗ್ರಹಗಳನ್ನು ತಯಾರಿಸಲಾಗುತ್ತಿತ್ತು. ಕೊರೋನಾ ಬಂದ ಬಳಿಕ ನಮಗೆ ನಷ್ಟವಾಗಿದ್ದು, ಇನ್ನೂ ಚೇತರಿಸಿಕೊಳ್ಳಲು ಸಾಧ್ಯವಾಗಿಲ್ಲ. ಆದರೂ ಕೈ ಕಸುಬನ್ನು ಬಿಡದೆ ಬೇರೆಡೆಯಿಂದ ವಿಗ್ರಹಗಳನ್ನು ತಂದು ಮಾರುತ್ತಿದ್ದೇವೆ ಎಂಬುದಾಗಿ ವಿಗ್ರಹ ಮಾರಾಟಗಾರಾದ ಕೃಷ್ಣಾ ಚವ್ಹಾಣ್‌, ಅಂಬೋಜಿ ತಿಳಿಸುತ್ತಾರೆ.

ಬೆಲೆ ಹೆಚ್ಚಳ: ಗಣೇಶ ತಯಾರಿಕೆಯಲ್ಲಿ ಬಳಸುವಂತಹ ವಸ್ತುಗಳ ಬೆಲೆಗಳು ಗಗನಕ್ಕೇರಿವೆ. ಪೆಟ್ರೋಲ್‌, ಡಿಸೇಲ್‌ ದರ ಹೆಚ್ಚಳದಿಂದ ಸಾರಿಗೆ ವೆಚ್ಚವೂ ಅ​ಕವಾಗಿದೆ. ಗಣೇಶ ಖರೀದಿ, ಸಾರಿಗೆ, ಹಮಾಲಿ, ಬಾಡಿಗೆ, ಕೆಲಸಗಾರರ ಕೂಲಿ ಎಲ್ಲವೂ ಸೇರುವುದರಿಂದ ಗಣೇಶ ಮೂರ್ತಿಗಳ ಬೆಲೆಯಲ್ಲಿ ಹೆಚ್ಚಳವಾಗಿದೆ. ಇದರಿಂದ ಗಣೇಶ ಭಕ್ತರ ಖರ್ಚು ಹೆಚ್ಚಾಗುವುದು ಗ್ಯಾರಂಟಿ.

ಭಕ್ತರಿಗೆ ಹೊರೆ: ಮನೆಯಲ್ಲಿ ಗಣೇಶನನ್ನು ಇಟ್ಟು ಪೂಜಿಸುವವರಿಗೆ ಆರ್ಥಿಕ ತೊಂದರೆಯಿಲ್ಲ. ಸಾರ್ವಜನಿಕವಾಗಿ ಕೂರಿಸುವ ಗಣಪನಿಗೆ ಪ್ರತಿವರ್ಷಕ್ಕಿಂತ ತುಸೇ ಹೆಚ್ಚೇ ಖರ್ಚು ಮಾಡಬೇಕಿದೆ. ಮಾರಾಟಗಾರರಲ್ಲಿ ಗಣೇಶನ ಬೆಲೆ ಕೇಳುತ್ತಿದ್ದಂತೆ ಭಕ್ತರು ದಂಗಾಗುತ್ತಿದ್ದಾರೆ. ಇದರಿಂದ ಈ ವರ್ಷ ಹೆಚ್ಚು ಆರ್ಥಿಕ ಹೊರೆ ಬೀಳಲಿದೆ ಎಂದು ದೇವಾಪುರದ ಚನ್ನಪ್ಪಗೌಡ ತಿಳಿಸಿದ್ದಾರೆ.

ಪರವಾನಗಿ ಕಿರಿಕಿರಿ: ಸಾರ್ವನಿಕವಾಗಿ ಗಣಪ ಕೂರಿಸುವ ವಿವಿಧ ಸಂಘಟನೆಗಳು ಹಾಗೂ ಜನರು ಪೊಲೀಸ್‌ ಠಾಣೆ, ನಗರಸಭೆ, ಜೆಸ್ಕಾಂ ಇಲಾಖೆಗಳಿಂದ ಪರವಾನಗಿ ಪಡೆಯುವುದು ಕಡ್ಡಾಯವಾಗಿದೆ. ಸುರಪುರ ಪೊಲೀಸ್‌ ಠಾಣೆ ವ್ಯಾಪ್ತಿಗೆ 55 ಹಳ್ಳಿಗಳು, ಒಂದು ನಗರಸಭೆ ಬರುತ್ತದೆ. ಇಲ್ಲಿಯವರೆಗೂ 20ಕ್ಕೂ ಹೆಚ್ಚು ಪರವಾನಗಿ ನೀಡಲಾಗಿದೆ. ನಗರದ ಜನರು ಮೊದಲಿಗೆ ಜೆಸ್ಕಾಂನಿಂದ ಪಿಇಸಿ ಶುಲ್ಕವೆಂದು 1100 ರೂ., ಪೊಲೀಸರಿಗೆ 300 ರೂ. ಶುಲ್ಕ, ನಗರಸಭೆ-200 ರೂ. ರಶೀದಿ ತುಂಬಬೇಕು. ಹಳ್ಳಿಗರಿಗೆ ಗ್ರಾಮ ಪಂಚಾಯತ್‌ನಿಂದ ಒಪ್ಪಿಗೆ ಪಡೆದಿರುವ ಪತ್ರಬೇಕು. ಎಷ್ಟುದಿನವೆಂದು ಪೊಲೀಸರಿಗೆ ಮೊದಲೇ ಬರೆದುಕೊಡಬೇಕು ಸೇರಿದಂತೆ ವಿವಿಧ ಕಿರಿಕಿರಿ ಹೆದರಿ ಜನರು ಪರವಾನಗಿಯತ್ತ ಸುಳಿಯುತ್ತಿಲೇ ಇಲ್ಲ.

ಬಳ್ಳಾರಿಯಲ್ಲಿ ಮಳೆ ಅವಾಂತರ: ನೀರಿನಲ್ಲಿ ತೇಲುತ್ತಿರೋ ಗಣೇಶ ಮೂರ್ತಿಗಳು

ಗಣೇಶ ಮೂರ್ತಿ ಎಷ್ಟೇ ದುಬಾರಿಯಾದರೂ ಇಡುವುದು ತಪ್ಪಿಸುವುದಿಲ್ಲ. ಪ್ರತಿವರ್ಷದಂತೆ ಈ ವರ್ಷವೂ ಮೂರ್ತಿಯನ್ನು ಇಟ್ಟು ಹಳ್ಳಿಯ ಸಮಸ್ಯೆಗಳನ್ನು ದೂರ ಮಾಡುವಂತೆ ಗಣೇಶನಲ್ಲಿ ಪ್ರಾರ್ಥಿಸಲಾಗುವುದು ಎಂದು ತಳವಾರಗೇರಿ ಗುಡುದಪ್ಪ ತಿಳಿಸಿದ್ದಾರೆ. ಸರಕಾರ ಮೈಕ್‌ಗೆ ಮಾತ್ರ ಅವಕಾಶ ನೀಡಿ ಡಿಜೆ ಪರವಾನಗಿ ನೀಡದಿರುವುದು ಭಕ್ತರಲ್ಲಿ ಬೇಸರ ತರಿಸಿದೆ. ದಾವಣಗೆರೆ, ಶಿವಮೊಗ್ಗ, ಹುಬ್ಬಳ್ಳಿ-ಧಾರವಾಡ, ಬೆಳಗಾವಿ ಕಡೆ ಡಿಜೆ ಪರವಾನಗಿ ನೀಡಿದ್ದಾರೆ. ನಮ್ಮಲ್ಲಿ ವಿವಿಧ ರೂಲ್ಸ್‌ ರೆಗ್ಯುಲೇಷನ್‌ ಮಾಡಿರುವುದು ಬೇಸರ ತರಿಸಿದೆ ಎಂದು ರಾಮ್‌ಸೇನಾ ಕರ್ನಾಟಕ ಜಿಲ್ಲಾಧ್ಯಕ್ಷ ಶರಣುನಾಯಕ ತಿಳಿಸಿದ್ದಾರೆ.

.ಮೈಕ್‌ ಪರವಾನಗಿ ಪಡೆಯಲು 100 ರು. ತುಂಬಿದರೆ ದೊರೆಯುತ್ತಿದೆ. ಮೊದಲು 100 ರು. ನಿತ್ಯ 20 ರು. ನಂತೆ ತೆಗೆದುಕೊಳ್ಳುವಂತೆ ಸೂಚಿಸಿಲ್ಲ. ಸಿಬ್ಬಂದಿ ತಿಳಿಯದೆ ಮಾಡುತ್ತಿದ್ದರೆ ಕೂಡಲೇ ಸರಿಪಡಿಸಿಕೊಳ್ಳುವಂತೆ ಸೂಚಿಸುತ್ತೇನೆ. ಪರಿಸರ ಸ್ನೇಹಿ ಗಣಪ ಇಟ್ಟು ಪೂಜಿಸಬೇಕು. ಸಮಾಜದಲ್ಲಿ ಸ್ವಾಸ್ಥ್ಯ ಕಾಪಾಡಬೇಕು. ಗಣೇಸ ವಿಸರ್ಜನೆ ವೇಳೆ ಮಕ್ಕಳನ್ನು ದೂರವಿಡುವಂತೆ ನೋಡಿಕೊಳ್ಳಬೇಕು.

- ಟಿ.ಮಂಜುನಾಥ, ಡಿವೈಎಸ್‌ಪಿ, ಸುರಪುರ.

ಕೊರೋನಾ ಬರುವುದಕ್ಕಿಂತ ಮುಂಚಿತವಾಗಿ ನಗರಸಭೆಯ ಸ್ಥಳದಲ್ಲಿ ಕೂರಿಸಿದ್ದರೆ 200 ರೂ. ಶುಲ್ಕ ಪಡೆಯುತ್ತಿದ್ದೇವೆ. ಕೊರೋನಾ ಬಂದ ಬಳಿಕ ಯಾರಿಂದಲೂ ಶುಲ್ಕ ವಸೂಲಿ ಮಾಡಿಲ್ಲ. ಪ್ರಸಕ್ತ ವರ್ಷವೂ ಶುಲ್ಕ ವಸೂಲಿ ಮಾಡದೆ ಉಚಿತವಾಗಿ ಪರವಾನಗಿ ನೀಡಲಾಗುತ್ತಿದೆ. ನಗರಸಭೆ ಸಿಬ್ಬಂದಿ ಹಣ ಪಡೆದಿದ್ದಾದರೆ ಕ್ರಮ ಕೈಗೊಳ್ಳಲಾಗುವುದು. ಆ. 31 ಸಂಜೆ ಗಂಟೆವರೆಗೆ ಪರವಾನಗಿ ನೀಡಲಾಗುತ್ತದೆ. ಬಳಿಕ ಬಂದವರಿಗೆ ನೀಡಲಾಗುವುದಿಲ್ಲ

- ಜೀವನ್‌ ಕಟ್ಟಿಮನಿ, ಪೌರಾಯುಕ್ತ, ಸುರಪುರ.

Follow Us:
Download App:
  • android
  • ios