ದೀಪಾವಳಿಯಂದು ಈ ರೀತಿ ಮಾಡಿ ಜೀವನದ ಕತ್ತಲನ್ನು ಎಚ್ಚರದಿಂದ ದಾಟಿ..!
ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ಕಾಲ ವಿಶೇಷತೆಯಿಂದ ಎರಡು ಹಬ್ಬಗಳನ್ನ ಬಹು ಮುಖ್ಯವಾಗಿ ಪರಿಗಣಿಸಲಾಗುತ್ತದೆ. ಒಂದು ಯುಗಾದಿ ಮತ್ತೊಂದು ದೀಪಾವಳಿ. ಇವುಗಳು ಉಂಟಾಗುವುದು ವಸಂತ ಹಾಗೂ ಶರತ್ಕಾಲಗಳಲ್ಲಿ. ಈ ವಸಂತ-ಶರತ್ಕಾಲಗಳನ್ನು ಯಮದಂಷ್ಟ್ರ ಅಂದರೆ ಯಮನ ಕೋರೆ ಹಲ್ಲುಗಳು ಅಂತ ಕರೆಯುತ್ತಾರೆ. ಈ ವಸಂತ ಹಾಗೂ ಶರತ್ ಸಂಪಾತಗಳು ವಾತಾವರಣದಲ್ಲಿ ಭೇದವನ್ನು ಉಂಟುಮಾಡಿ ಮನುಷ್ಯನ ದೇಹಕ್ಕೆ ರೋಗ-ರುಜಿನಗಳನ್ನು ತರುತ್ತವೆ. ಆ ಕಾರಣದಿಂದಲೇ ಈ ಕಾಲವನ್ನು ಯಮನ ಕೋರೆಹಲ್ಲು ಎಂದು ಕರೆಯುತ್ತಾರೆ. ಇಂಥ ಸಂದರ್ಭದಲ್ಲಿ ನಾವು ಆರೋಗ್ಯ ದೃಷ್ಟಿಯಿಂದ ಯಾವ ಎಚ್ಚರವಹಿಸಬೇಕು. ಯಾವ ಆರಾಧನೆಯನ್ನು ಮಾಡಬೇಕು ಎಂಬುದನ್ನು ತಿಳಿಯೋಣ.

ಶ್ರೀಕಂಠ ಶಾಸ್ತ್ರಿ
ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ಕಾಲ ವಿಶೇಷತೆಯಿಂದ ಎರಡು ಹಬ್ಬಗಳನ್ನ ಬಹು ಮುಖ್ಯವಾಗಿ ಪರಿಗಣಿಸಲಾಗುತ್ತದೆ. ಒಂದು ಯುಗಾದಿ ಮತ್ತೊಂದು ದೀಪಾವಳಿ. ಇವುಗಳು ಉಂಟಾಗುವುದು ವಸಂತ ಹಾಗೂ ಶರತ್ಕಾಲಗಳಲ್ಲಿ. ಈ ವಸಂತ-ಶರತ್ಕಾಲಗಳನ್ನು ಯಮದಂಷ್ಟ್ರ ಅಂದರೆ ಯಮನ ಕೋರೆ ಹಲ್ಲುಗಳು ಅಂತ ಕರೆಯುತ್ತಾರೆ. ಈ ವಸಂತ ಹಾಗೂ ಶರತ್ ಸಂಪಾತಗಳು ವಾತಾವರಣದಲ್ಲಿ ಭೇದವನ್ನು ಉಂಟುಮಾಡಿ ಮನುಷ್ಯನ ದೇಹಕ್ಕೆ ರೋಗ-ರುಜಿನಗಳನ್ನು ತರುತ್ತವೆ. ಆ ಕಾರಣದಿಂದಲೇ ಈ ಕಾಲವನ್ನು ಯಮನ ಕೋರೆಹಲ್ಲು ಎಂದು ಕರೆಯುತ್ತಾರೆ. ಇಂಥ ಸಂದರ್ಭದಲ್ಲಿ ನಾವು ಆರೋಗ್ಯ ದೃಷ್ಟಿಯಿಂದ ಯಾವ ಎಚ್ಚರವಹಿಸಬೇಕು. ಯಾವ ಆರಾಧನೆಯನ್ನು ಮಾಡಬೇಕು ಎಂಬುದನ್ನು ತಿಳಿಯೋಣ.
ಗ್ರಹಾ: ಕರ್ಮ ಫಲಸೂಚಕಾ: ಎಂಬ ಮಾತಿನಂತೆ ಮನುಷ್ಯನಿಗೆ ಬರುವ ಕಂಟಕಗಳು, ರೋಗಗಳು, ಆಪತ್ತುಗಳು, ಒಳಿತುಗಳು ಎಲ್ಲವೂ ತಿಳಿಯುವುದು ಕಾಲ ಪ್ರಭಾವದಿಂದಲೇ ಇಂಥ ಕಾಲವನ್ನು ಹಾಗೂ ಕಾಲ ಫಲವನ್ನೂ ಸೂಚಿಸುವುದು ನವಗ್ರಹಗಳು. ಹೀಗಾಗಿ 12 ರಾಶಿಗಳಲ್ಲಿ ಯಾವ ಗ್ರಹಗಳು ಯಾವ ರಾಶಿಯಲ್ಲಿ ಸ್ಥಿತರಾಗಿದ್ದಾರೆ ಅವರ ಗಮ್ಯ ಯಾವಕಡೆ ನಡೆಯುತ್ತದೆ ಇತ್ಯಾದಿ ವಿವರಗಳನ್ನಿಟ್ಟುಕೊಂಡು ರಾಶಿಫಲವನ್ನು ಚಿಂತಿಸಿದೆ. ಈ ದೀಪಾವಳಿಯ ಸಂದರ್ಭದಲ್ಲಿ ತಾವು ತಮ್ಮ ರಾಶಿಯ ಫಲವನ್ನು ನೋಡಿಕೊಂಡು ಎಚ್ಚರದಿಂದ ಜೀವನದ ಕತ್ತಲನ್ನು ದಾಟಬಹುದು.
ಮೇ = ದೀಪಾವಳಿ ನಿಮ್ಮ ಪಾಲಿಗೆ ಶುಭಾಶುಭ ಎರಡೂ ಫಲಗಳನ್ನು ತರುತ್ತಿದೆ. ವ್ಯಯ ಸ್ಥಾನದ ರಾಹುವಿನಿಂದ ಅನಗತ್ಯ ಖರ್ಚುಗಳು ಉಂಟಾಗುತ್ತದೆ. ನೀರಿನ ಸಮಸ್ಯೆಗಳು, ನೀರಿನ ರೋಗಗಳು ಬಾಧಿಸಬಹುದು. ಆರೋಗ್ಯ ವಿಚಾರದಲ್ಲಿ ಎಚ್ಚರವಹಿಸಿ. ಕೇತುವಿನಿಂದ ಔದಾರ್ಯಗುಣ ಹೆಚ್ಚಲಿದೆ. ನಾಯಕತ್ವ ಉಂಟಾಗಲಿದೆ. ಉಳಿದಂತೆ ಶನೈಶ್ಚರ ಲಾಭವನ್ನು, ವೃತ್ತಿಯಲ್ಲಿ ಬಲವನ್ನು ತಂದುಕೊಡುತ್ತಾನೆ. ಜನ್ಮ ರಾಶ್ಯಾಧಿಪತಿ ಕುಜನ ಬಲವೂ ಇರುವುದರಿಂದ ಹೆಚ್ಚಿನ ಸೌಖ್ಯಗಳು ನಿಮ್ಮ ಪಾಲಿಗೆ ಇರಲಿದೆ. ಮೊದಲ ಮೂರು ತಿಂಗಳು ನಿಮ್ಮ ಪಾಲಿಗೆ ಸಮಾಧಾನವನ್ನು ತರಲಿದೆ. ಫೆಬ್ರುವರಿ ನಂತರ ಅಧಿಕಾರ ಬಲ ಬರಲಿದೆ. ಆಡಳಿತಾತ್ಮಕವಾಗಿ ಹೆಚ್ಚು ಬಲಾಢ್ಯರಾಗುತ್ತೀರಿ. ಏಪ್ರಿಲ್ ತಿಂಗಳಲ್ಲಿ ಮಕ್ಕಳಿಂದ ನಷ್ಟ. ಮಕ್ಕಳು ದೂರಾಗುವ ಸಾಧ್ಯತೆ. ಹಾಗೂ ಮಾನಸಿಕ ಒತ್ತಡ ಇರಲಿದೆ. ವೃತ್ತಿಯಲ್ಲಿ ಯಾವುದೇ ತೊಂದರೆಗಳು ಕಾಣುವುದಿಲ್ಲವಾಗಿ ನಿರಾಳವಾಗಿರಿ.
ಪರಿಹಾರ - ನಾಗ ಸನ್ನಿಧಾನದಲ್ಲಿ ಗಂಧಾಲಂಕಾರ ಮಾಡಿಸಿ
ವೃಷಭ = ಲಾಭದ ರಾಹುವಿನಿಂದ ಈ ದೀಪಾವಳಿ ನಿಮ್ಮ ಪಾಲಿಗೆ ಲಾಭದಾಯಕವಾಗಲಿದೆ. ವಿದೇಶ ವಹಿವಾಟಿನಲ್ಲಿ ಲಾಭಗಳಿಸುತ್ತೀರಿ. ವ್ಯಯವೂ ಇರಲಿದೆ. ಕಿವಿ ಹಾಗೂ ಗಂಟಲ ಬಾಧೆಗಳು ಕಾಡಲಿವೆ. ಶನೈಶ್ಚರನಿಂದ ವೃತ್ತಿಯಲ್ಲಿ ವಿಶೇಷ ಸ್ಥಾನಮಾನ ಪ್ರಾಪ್ತಿಯಾಗಲಿವೆ. ಹೊಸ ಅವಕಾಶಗಳಿಗೆ ದಾರಿಯಾಗುತ್ತದೆ. ಹಿರಿಯರಿಂದ ಉತತಮ ಸಲಹೆಗಳು ಸಿಗಲಿವೆ. ಪಂಚಮದ ಕೇತು ನಿಮ್ಮನ್ನು ಸ್ವಲ್ಪ ಹೆಚ್ಚಾಗಿ ಕಾಡಬಹುದು. ಮಕ್ಕಳಿಂದ ಹೆಚ್ಚಿನ ಕಿರಿಕಿರಿ ಇರಲಿದೆ. ಉದರ ಬಾಧೆಗಳು ಕಾಡಲಿವೆ. ಜಠರ ಸಂಬಂದಿ ತೊಂದರೆಗಳು ಉಂಟಾಗಬಹುದು. ತೀರ್ಮಾನ ತೆಗೆದುಕೊಳ್ಳುವಾಗ ಎಚ್ಚರವಹಿಸಿ. ಫೆಬ್ರುವರಿಯಲ್ಲಿ ಹೆಚ್ಚಿನ ಅನುಕೂಲ ಉಂಟಾಗಲಿದೆ. ಸಂಗಾತಿಯಿಂದ ಸಹಕಾರಗಳು ಸಿಗಲಿವೆ. ಎಲೆಕ್ಟ್ರಾನಿಕ್ಸ್, ಪೆಟ್ರೋಲಿಯಮ್ ಹಾಗೂ ವಸ್ತ್ರ-ಕಲೆ, ರಂಗಕರ್ಮಿಗಳಿಗೆ ಹೆಚ್ಚಿನ ಲಾಭವಿದೆ. ಹಾಲು-ಹೈನುಗಾರರಿಗೆ ದೀಪಾವಳಿಯಿಂದಲೇ ಶುಭಫಲಗಳು ಹೆಚ್ಚಾಗಲಿವೆ.
ಪರಿಹಾರ = ಗಣಪತಿ ಸನ್ನಿಧಾನದಲ್ಲಿ ಪಂಚಾಮೃತ ಸೇವೆ ಮಾಡಿಸಿ
ಮಿಥುನ = ಈ ದೀಪಾವಳಿ ನಿಮ್ಮ ಪಾಲಿಗೆ ಲಾಭವನ್ನ ತರಲಿದೆ ಎಂಬುದರಲ್ಲಿ ಸಂಶಯವಿಲ್ಲ. ಆದರೆ ಕರ್ಮ ಸ್ಥಾನದ ರಾಹುವಿನಿಂದ ಇನ್ನೊಬ್ಬರ ಕೆಲಸಗಳನ್ನು ಮಾಡಿಕೊಡುವುದರಲ್ಲೇ ಜೀವನ ಹೈರಾಣಾಗುತ್ತದೆ. ಮತ್ತೊಬ್ಬರ ಕಾರ್ಯಗಳಿಗಾಗಿ ಅಲೆದಾಟ. ಆದರೆ ಹಿರಿಯರ ಮಾರ್ಗದರ್ಶನದಿಂದ ಅನುಕೂಲವಾಗುತ್ತದೆ. ಚತುರ್ಥ ಸ್ಥಾನದ ಕೇತು ನಮ್ಮ ಸುಖವನ್ನು ಭಂಗಮಾಡುತ್ತಾನೆ. ಭೂಮಿ, ತೋಟ, ನಿವೇಶನ, ಗೃಹ ಕಾರ್ಯಗಳು, ಸ್ನೇಹಿತರು, ಬಂಧುಗಳು ಇಂಥ ವಿಚಾರಗಳಲ್ಲಿ ಮನಸ್ತಾಪಗಳು, ಬೇಸರಗಳುಂಟಾಗುತ್ತವೆ. ಪ್ರಯಾಣಗಳಲ್ಲಿ ತೊಂದರೆ ಇರಲಿದೆ. ಇದರ ಹೊರತಾಗಿ ವಿದ್ಯಾರ್ಥಿಗಳಿಗೆ ಹೆಚ್ಚಿನ ಅನುಕೂಲವಿದೆ. ಉನ್ನತ ಶಿಕ್ಷಣದವರಿಗೆ ಅನುಕೂಲ ಇರಲಿದೆ. ದಾಂಪತ್ಯ ಜೀವನ ಸಾಮರಸ್ಯದಿಂದ ಕೂಡಿರುತ್ತದೆ. ಪ್ರೀತಿ-ಪ್ರೇಮಗಳಲ್ಲಿ ಅನುಕೂಲವಾತಾವರಣ. ವ್ಯಾಪಾರಿಗಳಿಗೂ ಅನುಕೂಲ. ಕಾನೂನು, ನ್ಯಾಯ ಕ್ಷೇತ್ರಗಳಲ್ಲಿರುವವರಿಗೆ ಹೆಚ್ಚಿನ ಅನುಕೂಲ.
ಪರಿಹಾರ = ವಿಷ್ಣು ಸನ್ನಿಧಾನಕ್ಕೆ ಹುರುಳಿ-ಉದ್ದು ದಾನ ಮಾಡಿ
ಕರ್ಕಾಟಕ = ಕರ್ಮಸ್ಥಾನದ ಗುರುವಿನಿಂದ ವೃತ್ತಿಯಲ್ಲಿ ಬಲವನ್ನು ಕಾಣುತ್ತೀರಿ. ಹೊಸ ಅವಕಾಶಗಳು ಅರಸಿಬರಲಿವೆ. ನಿಮ್ಮ ಜಾಣ್ಮೆಯಿಂದ ಕಾರ್ಯಕ್ಷೇತ್ರದಲ್ಲಿ ಗೆಲುವನ್ನು ಕಾಣುತ್ತೀರಿ. ಆದರೆ ಕೊಂಚ ಚೌಕಟ್ಟನ್ನು ದಾಟುತ್ತೀರಿ, ತೊಂದರೆಗೂ ಗುರಿಯಾಗುತ್ತೀರಿ. ನಿಮ್ಮ ಗುಣಧರ್ಮವನ್ನು ಕಾಪಾಡಿಕೊಂಡರೆ ನಿಮ್ಮ ಕ್ಷೇತ್ರಗಳಲ್ಲಿ ನಾಯಕರಾಗುತ್ತೀರಿ. ಫೆಬ್ರುವರಿ ನಂತರ ನಿಮ್ಮ ಬದುಕಿನಲ್ಲಿ ಹೊಸ ಸಾಧನೆ ಮಾಡುತ್ತೀರಿ. ಪೆಟ್ರೋಲಿಯಮ್, ಎಲೆಕ್ಟ್ರಾನಿಕ್ಸ್, ಆಟೋಮೊಬೈಲ್ಸ್ ಕ್ಷೇತ್ರದವರಿಗೆ ಉತ್ತಮ ಫಲವಿದೆ. ಸೇನೆ-ಪೊಲೀಸ್ ಕ್ಷೇತ್ರದಲ್ಲಿರುವವರಿಗೆ ಸಾಧನೆಯ ಫಲವಿದೆ. ವೃತ್ತಿಯಲ್ಲಿ ಹೆಚ್ಚಿನ ಅನುಕೂಲ, ಬಡ್ತಿ ಇತ್ಯಾದಿ ಶುಭಫಲ ಕಾಣುತ್ತೀರಿ. ತೃತೀಯದ ಕೇತು ನಿಮ್ಮ ಧೈರ್ಯವನ್ನು ಹೆಚ್ಚಿಸುತ್ತಾನೆ. ಬಲವನ್ನು ಕೊಡುತ್ತಾನೆ. ಹೆಚ್ಚಿನ ಹಣಸಂಪಾದನೆಯಾಗಲಿದೆ. ರಾಹುವಿನಿಂದ ಧರ್ಮ ವಿರೋಧಿ ಕ್ರಿಯೆಗಳಲ್ಲಿ ಭಾಗಿಯಾಗಿ ತೊಂದರೆಯಾಗಬಹುದು ಎಚ್ಚರವಾಗಿರಿ.
ಪರಿಹಾರ = ನಾಗ ಸನ್ನಿಧಾನದಲ್ಲಿ ಉದ್ದು ಹಾಗೂ ಹುರುಳಿ ದಾನ ಮಾಡಿ
ಸಿಂಹ = ಈ ದೀಪಾವಳಿ ನಿಮ್ಮ ಪಾಲಿಗೆ ಶುಭಾಶುಭ ಮಿಶ್ರಫಲ ತರಲಿದೆ. ಭಾಗ್ಯ ಸ್ಥಾನದ ಗುರುವಿನಿಂದ ಮನೆಯಲ್ಲಿ ಶುಭಕಾರ್ಯಗಳು ನಡೆಯಲಿವೆ. ಗುರು-ಹಿರಿಯರ ಮಾರ್ಗದರ್ಶನದಿಂದ ಹೆಚ್ಚಿನ ಅನುಕೂಲಗಳುಂಟಾಗಲಿವೆ. ವ್ಯಾಪಾರದಲ್ಲೂ ಹೆಚ್ಚಿನ ಲಾಭಗಳಿಸುತ್ತೀರಿ. ಸಿವಿಲ್ ಕ್ಷೇತ್ರ ಹಾಗೂ ಕಟ್ಟಡ ನಿರ್ಮಾಣದಂಥ ಕ್ಷೇತ್ರಗಳಲ್ಲಿ ಹೆಚ್ಚಿನ ಲಾಭಕಾಣುತ್ತೀರಿ. ಆದರೆ ಅಷ್ಟಮದ ರಾಹುವಿನಿಂದ ವಾತ ರೋಗಗಳು ಬಾಧಿಸಲಿವೆ. ಗುಹ್ಯ ಸ್ಥಾನದಲ್ಲಿ ತೊಂದರೆ ಅನುಭವಿಸಬೇಕಾಗುತ್ತದೆ. ಹಣವನ್ನು ಕಳೆದುಕೊಳ್ಳುತ್ತೀರಿ. ಷೇರು ವ್ಯಾಪಾರಗಳಲ್ಲಿ ಎಚ್ಚರವಾಗಿರಿ. ಸಾಲಬಾಧೆ ನಿಮ್ಮನ್ನು ತೀವ್ರವಾಗಿ ಕಾಡಲಿದೆ. ವಿದ್ಯಾರ್ಥಿಗಳಿಗೆ ಸಂಕಷ್ಟದ ದಿನಗಳಿವೆ. ಸಹವಾಸ ದೋಷದಿಂದ ಅಪಮಾನ, ಸೋಲುಗಳುಂಟಾಗುತ್ತವೆ. ಮಾತು ನಿಮ್ಮ ಕಾರ್ಯಹಾನಿಮಾಡುತ್ತದೆ. ದ್ವಿತೀಯದ ಕೇತು ನಿಮ್ಮ ಕುಟುಂಬ ಕಲಹಕ್ಕೆ ಕಾರಣನಾಗುತ್ತಾನೆ. ಮಾತು-ಹಣದ ವಿಚಾರಗಳಲ್ಲಿ ತುಂಬ ಎಚ್ಚರವಾಗಿರಿ.
ಪರಿಹಾರ = ಈಶ್ವರ ಸನ್ನಿಧಾನಕ್ಕೆ ಉದ್ದು ಹಾಗೂ ಹುರುಳಿ ದಾನ ಮಾಡಿ
ಕನ್ಯಾ = ಈ ದೀಪಾವಳಿ ನಿಮ್ಮ ಪಾಲಿಗೆ ಸ್ವಲ್ಪ ಸಂಕಟವನ್ನು ತರಲಿದೆ. ಗ್ರಹಗಳ ಸ್ಥಾನಪಲ್ಲಟ ನಿಮ್ಮ ಬದುಕಲ್ಲಿ ಸ್ವಲ್ಪ ಶುಭವನ್ನು ಕಳೆಯಲಿದೆ. ಸಪ್ತಮದ ರಾಹು ನಿಮ್ಮ ಸಂಗಾತಿಯ ವಿಚಾರದಲ್ಲಿ ಮನಸ್ತಾಪವನ್ನುಂಟುಮಾಡಲಿದ್ದಾನೆ. ಬಯಸಿದವರಿಗಾಗಿ ಹೆಚ್ಚಿನ ಹಣ ಖರ್ಚು ಮಾಡಬೇಕಾದ ಪರಿಸ್ಥಿತಿ ಬರಲಿದೆ. ದುಡಿದದ್ದೆಲ್ಲಾ ಕೈಜಾರಿಹೋಗುವ ಸಾಧ್ಯತೆ. ಅತಿಯಾದ ಅನಗತ್ಯ ಬಯಕೆಗಳು ನಿಮ್ಮನ್ನು ಅಲೆದಾಡುವಂತೆ ಮಾಡುತ್ತದೆ. ವ್ಯಾಪಾರದಲ್ಲಿ ಕಾಣದ ಕೈಗಳಿಂದ ತೊಂದರೆ. ಶಿರೋಭಾಗದಲ್ಲಿ ತೊಂದರೆಗಳಾಗುವ ಸಾಧ್ಯತೆ. ಫೆಬ್ರುವರಿ ನಂತದ ಬೌದ್ಧಿಕವಾಗಿ ಎಚ್ಚರಗೊಳ್ಳುತ್ತೀರಿ. ಉನ್ನತ ಶಿಕ್ಷಣದವರಿಗೆ ಹೆಚ್ಚಿನ ಅನುಕೂಲಗಳಅಗಲಿವೆ. ಮಕ್ಕಳ ವಿಚಾರದಲ್ಲಿ ಸ್ವಲ್ಪ ಸಮಾಧಾನ ಕಾಣುತ್ತೀರಿ. ಶನೈಶ್ಚರ ನಿಮ್ಮ ಶತ್ರುಗಳನ್ನು ದೂರ ಮಾಡುತ್ತಾನೆ ಸ್ವಲ್ಪ ಧೈರ್ಯವನ್ನು ತಂದುಕೊಡುತ್ತಾನೆ. ಜೀವನ ಸುಸ್ಥಿತಿಗೆ ಬರಬೇಕಾದರೆ ಯುಗಾದಿ ಕಳೆಯಬೇಕು. ಅಲ್ಲಿಯವರೆಗೆ ತಾಳ್ಮೆ ಅಗತ್ಯ.
ಪರಿಹಾರ = ವಿಷ್ಣುಸಹಸ್ರನಾಮ ಪಠಿಸಿ, ಉದ್ದು-ಹುರುಳಿ ದಾನ ಮಾಡಿ
ತುಲಾ = ಈ ದೀಪಾವಳಿ ನಿಮ್ಮ ಪಾಲಿಗೆ ಸ್ವಲ್ಪ ಕಹಿ- ಸ್ವಲ್ಪ ಸಿಹಿ ಎರಡನ್ನೂ ತರಲಿದೆ. ಸಪ್ತಮದ ಗುರು ನಿಮ್ಮ ನಿಜವಾದ ಬಲ. ವ್ಯಾಪಾರಿಗಳಿಗೆ ಹೆಚ್ಚಿನ ಅನುಕೂಲವಿದೆ. ನಿಮ್ಮ ಸಂಗಾತಿಯಿಂದ ಹೆಚ್ಚು ಸೌಖ್ಯವನ್ನು ಕಾಣುತ್ತೀರಿ. ಆದರೆ ರಾಹುವಿನ ಸ್ಥಾನ ಪಲ್ಲಟದಿಂದ ಆರೋಗ್ಯ ಹಾನಿಯಾಗಲಿದೆ. ಹಿತ ಶತ್ರುಗಳು ಬೆನ್ನುಬಿಡದೆ ಕಾಡುತ್ತಾರೆ. ಮೇಲ್ನೋಟಕ್ಕೆ ಸರಿಯಿದ್ದರೂ ಒಳಗೆ ಮಾನಸಿಕ ಪೆಟ್ಟು ಅನುಭವಿಸಬೇಕಾಗುತ್ತದೆ. ಮಾನಸಿಕವಾಗಿ ಕುಗ್ಗುತ್ತೀರಿ. ಕೇತು ನಿಮ್ಮ ಹಣವನ್ನು ವ್ಯಯ ಮಾಡುತ್ತಾನೆ. ಕಾಲಿನ ಸಮಸ್ಯೆ ಉಂಟಾಗಲಿದೆ. ಕಣ್ಣಿನ ಸಮಸ್ಯೆಗಳು ಕಾಡಬಹುದು. ಫೆಬ್ರುವರಿ ನಂತರ ಹಣಕಾಸಿನ ಸಮಸ್ಯೆ ನಿವಾರಣೆಯಾಗಲಿದೆ. ಗೃಹ ನಿರ್ಮಾಣ, ನಿವೇಶನ ಖರೀದಿಯಂಥ ಶುಭ ಫಲಗಳನ್ನು ಕಾಣುತ್ತಿರಿ. ರಿಯಲ್ ಎಸ್ಟೇಟ್ ವ್ಯಾಪಾರದಲ್ಲಿ ಹೆಚ್ಚಿನ ಆದಾಯ ಬರಲಿದೆ. ಯುಗಾದಿವೇಳೆಗೆ ನಿಮ್ಮ ಬದುಕದಲ್ಲಿ ನೆಮ್ಮದಿ-ಶಾಂತಿಗಳು ನೆಲೆಸುತ್ತವೆ.
ಪರಿಹಾರ = ಮಹಾಲಕ್ಷ್ಮೀ ಸನ್ನಿಧಾನಕ್ಕೆ ಉದ್ದು-ಹುರುಳಿ ದಾನ ಮಾಡಿ
ವೃಶ್ಚಿಕ = ದೀಪಾವಳಿ ನಿಮ್ಮ ಪಾಲಿಗೆ ಲಾಭದಾಯಕವಾಗಿರಲಿದೆ. ಸ್ವಲ್ಪ ಎಚ್ಚರವಾಗಿದ್ದಲ್ಲಿ ಹೆಚ್ಚಿನ ಅನುಕೂಲ ಕಾಣುತ್ತಿರಿ. ಸ್ವಕ್ಷೇತ್ರದಲ್ಲಿ ಕುಜ ಸಂಚರಿಸುವಾಗ ದೇಹಬಲ ಗಟ್ಟಿಯಾಗಲಿದೆ. ನಾಯಕತ್ವದಿಂದ ಹೆಸರು ಮಾಡುತ್ತೀರಿ. ಕೃಷ ಕ್ಷೇತ್ರದಲ್ಲಿ ಸಾಧನೆ. ಭೂ ವ್ಯವಹಾರಗಳಲ್ಲಿ ಹೆಚ್ಚಿನ ಆದಾಯ ಗಳಿಸುತ್ತೀರಿ. ನಿಮ್ಮ ವಲಯದ ನಾಯಕರಿಗೆ ಆಪ್ತ ಸಹಾಯಕರಾಗುತ್ತೀರಿ. ರಾಹುವಿನ ಬದಲಾವಣೆ ನಿಮ್ಮ ಆರೋಗ್ಯದಲ್ಲಿ ವ್ಯತ್ಯಾಸ ಮಾಡುತ್ತದೆ. ಉದರ ಸಂಬಂಧಿ ತೊಂದರೆಗಳನ್ನು ತರುತ್ತದೆ. ಮಕ್ಕಳ ವಿಚಾರದಲ್ಲಿ ಮನಸ್ತಾಪಗಳುಂಟಾಗುತ್ತವೆ. ಲಾಭದ ಕೇತುವಿನಿಂದ ವಿಶೇಷ ಲಾಭಗಳಿಸುತ್ತೀರಿ. ಹೆಚ್ಚಿನ ಭೋಗ ಪ್ರಾಪ್ತಿ. ಶನೈಶ್ಚರ ಕೂಡ ನಿಮ್ಮ ಪಾಲಿಗೆ ಸ್ವಲ್ಪ ಸೌಖ್ಯ ಫಲಗಳನ್ನು ಕೊಡುತ್ತಾನೆ.
ಪರಿಹಾರ = ಸುಬ್ರಹ್ಮಣ್ಯ ಕವಚ ಪಠಿಸಿ
ಧನಸ್ಸು = ದೀಪಾವಳಿ ನಿಮ್ಮ ಪಾಲಿಗೆ ಬೌದ್ಧಿಕ ಲಾಭವನ್ನು ತರಲಿದೆ. ವಿದ್ಯಾರ್ಥಿಗಳಿಗೆ ಹೆಚ್ಚಿನ ಅನುಕೂಲ. ಉನ್ನತ ಶಿಕ್ಷಣದವರಿಗೆ ಅನುಕೂಲ. ಪಂಚಮದ ಗುರುವಿನಿಂದ ಮನೆಗಳಲ್ಲಿ ಮಂಗಳಕಾರ್ಯಗಳು ನೆರವೇರಲಿವೆ. ಮಕ್ಕಳಿಂದ ಸಹಾಯ-ಸಹಕಾರ. ಬುದ್ಧಿಬಲದಿಂದ ಕಾರ್ಯಾನುಕೂಲ. ಆದರೆ ರಾಹುವಿನಿಂದ ಸ್ವಲ್ಪ ವಾತ - ಕಫ ಸಂಬಂಧಿ ತೊಂದರೆಗನ್ನು ಅನುಭವಿಸುತ್ತೀರಿ. ಪ್ರಯಾಣದಲ್ಲಿ ತೊಂದರೆಗಳಿರಲಿವೆ. ತಾಯಿಯ ಆರೋಗ್ಯದಲ್ಲಿ ವ್ಯತ್ಯಾಸವಾಗಬಹುದು. ಸ್ನೇಹಿತರು-ಬಂಧುಗಳಲ್ಲಿ ನಿಮ್ಮ ಬಾಂಧವ್ಯ ಹಾಳಾಗಲಿದೆ. ಕರ್ಮ ಸ್ಥಾನದ ಕೇತುವಿನಿಂದ ಕಾರ್ಯಗಳಲ್ಲಿ ಹಿನ್ನಡೆ. ಅನಗತ್ಯ ಕಾರ್ಯಗಳಲ್ಲಿ ಭಾಗಿಯಾಗಿ ಅಪಮಾನ. ಸ್ಥಾನ ಚ್ಯುತಿಯನ್ನು ಅನುಭವಿಸುತ್ತೀರಿ. ಇರುವ ಅಧಿಕಾರ ಕೈತಪ್ಪುವ ಸಾಧ್ಯತೆ ಇದೆ. ಎಚ್ಚರದಿಂದರಬೇಕು. ಫೆಬ್ರುವರಿಯಲ್ಲಿ ಹೆಚ್ಚಿನ ವ್ಯಯ ಕಾಣುತ್ತೀತಿ. ಆದರೆ ಜಾಣ್ಮೆಯಿಂದ ಕಷ್ಟಗಳನ್ನು ದಾಟುತ್ತೀರಿ
ಪರಿಹಾರ = ಸುಬ್ರಹ್ಮಣ್ಯ ಸನ್ನಿಧಾನಕ್ಕೆ ಉದ್ದು-ಹುರುಳಿ ದಾನ ಮಾಡಿ
ಮಕರ = ದೀಪಾವಳಿ ಈ ಬಾರಿ ನಿಮಗೆ ಪ್ರಾರಂಭದಲ್ಲೇ ಹೆಚ್ಚಿನ ಆದಾಯವನ್ನು ತರಲಿದೆ. ಕುಜನ ಸ್ಥಾನಪಲ್ಲಟದಿಂದ ಆದಾಯ ಗಳಿಕೆ ಹೆಚ್ಚಾಗಲಿದೆ. ಹಿರಿಯರಿಂದ ಹೆಚ್ಚಿನ ಸಹಕಾರ ಸಿಗಲಿದೆ. ಭ್ರಾತೃಪ್ರೇಮ ಹೆಚ್ಚಲಿದೆ. ಭೂ ವ್ಯವಹಾರಗಳಲ್ಲಿ ಲಾಭವಿದೆ. ಸೇನೆಯಲ್ಲಿರುವವರಿಗೆ ಆದಾಯ ಹೆಚ್ಚಾಗಲಿದೆ. ಸುಖ ಸ್ಥಾನದ ಗುರು ನಿಮ್ಮ ಸೌಖ್ಯ ಸಮೃದ್ಧ ಮಾಡುತ್ತಾನೆ. ಸ್ನೇಹಿತರಿಂದ ಸಹಕಾರ ಸಿಗಲಿದೆ. ಬಂಧುಗಳಿಂದ ಸೌಖ್ಯ. ತಾಯಿಯಿಂದ ಅನುಕೂಲ. ಸಿಹಿ ವ್ಯಾಪಾರಿಗಳಿಗೆ ವಿಶೇಷ ಲಾಭ. ರಾಹು ಪರಿವರ್ತನೆ ನಿಮ್ಮಲ್ಲಿ ಧೈರ್ಯವನ್ನು ಹೆಚ್ಚಿಸಲಿದೆ. ಶೌರ್ಯ-ಸಾಹಸಗಳಿಂದ ವಿಶೇಷ ಮಾನ್ಯತೆ. ಕೇತುವಿನಿಂದ ತಂದೆ-ಮಕ್ಕಳಲ್ಲಿ ಭಿನ್ನಾಭಿಪ್ರಾಯ. ಧರ್ಮ ಶ್ರದ್ಧೆ ಹಾಳಾಗಲಿದೆ. ಉತ್ತಮ ಕಾರ್ಯಗಳಲ್ಲಿ ಹಿನ್ನಡೆ. ಆಯೋಗ್ಯರ ಸಂಗದಿಂದ ಹಾನಿ. ಫೆಬ್ರುವರಿಯಲ್ಲಿ ಹೆಚ್ಚಿನ ಲಾಭ ಕಾಣುತ್ತೀರಿ. ಭೂ ವ್ಯವಹಾರಗಳಲ್ಲಿ ಲಾಭವಿದೆ. ಗೃಹ-ವಾಹನ ಖರೀದಿಯಂಥ ಫಲಗಳಿವೆ.
ಪರಿಹಾರ = ಈಶ್ವರ ಸನ್ನಿಧಾನಕ್ಕೆ ಉದ್ದು-ಹುರುಳಿ ದಾನ ಮಾಡಿ
ಕುಂಭ = ಈ ದೀಪಾವಳಿ ನಿಮ್ಮ ಪಾಲಿಗೆ ಉದ್ಯೋಗ ಭದ್ರತೆಯನ್ನು ಕೊಡಲಿದೆ. ನಾಯಕರಾಗುವ ಸಾಧ್ಯತೆ ಇದೆ. ಸೇನೆ-ಪೊಲೀಸ್ ಕೆಲಸಗಳಲ್ಲಿರುವವರಿಗೆ ಹೆಚ್ಚಿನ ಅನುಕೂಲ. ಆಡಳಿತ ಕ್ಷೇತ್ರದಲ್ಲಿರುವವರಿಗೆ ಲಾಭದಾಯಕ ಫಲವಿದೆ. ಆದರೆ ರಾಹುವಿನ ಸ್ಥಾನ ಪಲ್ಲಟ ನಿಮಗೆ ಹೆಚ್ಚಿನ ವ್ಯಯವನ್ನು ಉಂಟುಮಾಡುತ್ತದೆ. ರಾಹು ಪ್ರಭಾವದಿಂದ ವಕ್ರ ಮಾತುಗಳು ಮೂಡುತ್ತವೆ ತನ್ಮೂಲಕ ಕಾರ್ಯಹಾನಿಯಾಗುವ ಸಾಧ್ಯತೆ ಇದೆ. ವಿದ್ಯಾರ್ಥಿಗಳಿಗೆ ಮಹಾಲಸ್ಯ. ಓದಿನಲ್ಲಿ ಆಸಕ್ತಿ ಕಳೆದುಹೋಗುತ್ತದೆ. ಅನಗತ್ಯ ಸಂಭಾಷಣೆ, ಸಂದೇಶ ಸಂವಹನಗಳು ನಿಮ್ಮ ಬಾಳಿಗೆ ಮುಳುವಾಗಬಹುದು. ಅಷ್ಟಮದ ಕೇತುವಿನಿಂದ ಮಾನಸಿಕ ಖಿನ್ನತೆ ಉಂಟಾಗಲಿದೆ. ಗುಹ್ಯ ಸ್ಥಾನದಲ್ಲಿ ರೋಗ ಸಂಭವಿಸುವ ಸಾಧ್ಯತೆ ಇದೆ. ಫೆಬ್ರುವರಿ ನಂತರ ಶನಿ-ಕುಜರ ಸಂಯೋಗದಲ್ಲಿ ವಾತ-ಉಷ್ಣ ಸಂಬಂಧಿ ತೊಂದರೆಗಳು ಉಂಟಾಗಲಿದೆ. ಹೆಚ್ಚಿನ ಒತ್ತಡಕ್ಕೆ ಸಿಲುಕುವ ಸಾಧ್ಯತೆ ಇದೆ. ಆದರೆ ಎಂಥ ಕಷ್ಟ ಸನ್ನಿವೇಶದಲ್ಲೂ ನಿಮ್ಮನ್ನು ಪಾರುಮಾಡಲಿಕ್ಕೆ ಶನೈಶ್ಚರ ಇದ್ದೇಇದ್ದಾನೆ. ಶಶ ಯೋಗವೇ ಹೇಳುವಂತೆ ಜನನಾಯಕ ಬಲವನ್ನೂ, ನಿಮ್ಮ ಕ್ಷೇತ್ರಗಳಲ್ಲಿ ಹೆಚ್ಚಿನ ಸಂಪಾದನೆಯನ್ನೂ ತಂದುಕೊಡಲಿದ್ದಾನೆ. ಶ್ರಮ ಜೀವಿಗಳಿಗೆ ಹೆಚ್ಚಿನ ಅನುಕೂಲವಿದೆ. ಆರೋಗ್ಯದಲ್ಲಿ ಎಚ್ಚರವಹಿಸಿ.
ಪರಿಹಾರ = ಶಿವ ಕವಚ ಪಠಣ ಹಾಗೂ ಶಿವ ಸನ್ನಿಧಾನಕ್ಕೆ ಉದ್ದು-ಹುರುಳಿ ದಾನ ಮಾಡಿ
ಮೀನ = ದೀಪಾವಳಿ ನಿಮ್ಮ ಪಾಲಿಗೆ ಗುರುಬಲದ ಶುಭಫಲವನ್ನು ತರಲಿದೆ. ಮನೆಯಲ್ಲಿ ಮಂಗಳಕಾರ್ಯಗಳು ನಡೆಯಲಿವೆ. ಹಣಕಾಸಿನ ಸಮೃದ್ಧತೆ ಉಂಟಾಗಲಿದೆ. ಮಾತಿನ ಬಲ ಹೆಚ್ಚಲಿದೆ. ವಿದ್ಯಾರ್ಥಿಗಳಿಗೆ ಅನುಕೂಲವಿದೆ. ಆದರೆ ರಾಹುವಿನಿಂದ ನಿಮ್ಮ ಆರೋಗ್ಯ ಹಾಳಾಗಲಿದೆ. ತಲೆ ಭಾಗದಲ್ಲಿ ತೊಂದರೆ ಉಂಟಾಗಲಿದೆ. ತಲೆ-ಚರ್ಮ ಸಂಬಂಧಿ ತೊಂದರೆಗಳು ನಿಮ್ಮನ್ನು ಬಾಧಿಸಲಿವೆ. ಎಚ್ಚರವಾಗಿರಿ. ಆದರೆ ಕುಜನ ಬಲ ಇತ್ಯಾದಿ ಗ್ರಹಗಳ ಬಲದಿಂದ ನಿಮ್ಮ ಧೈರ್ಯ-ಸಾಹಸಗಳು ಹೆಚ್ಚಲಿವೆ. ದೈವ ಸಾಹಾಯ ಇರಲಿದೆ. ಕೇತುವು ನಿಮ್ಮ ದಾಂಪತ್ಯದಲ್ಲಿ ಭಿನ್ನಾಭಿಪ್ರಾಯ ತರಬಹುದು. ವ್ಯಾಪಾರಗಳಲ್ಲಿ ಮೋಸ ಸಾಧ್ಯತೆ ಇದೆ. ದೂರ ಪ್ರಯಾಣದಲ್ಲಿ ತೊಂದರೆ ಅನುಭವಿಸುತ್ತೀರಿ. ಕಡಿಮೆ ಖರ್ಚು ಮಾಡಲು ಬಯಸಿವ ನೀವು ಆರೋಗ್ಯದಿಂದ ಹಣ ಕಳೆಯುವ ಸಾಧ್ಯತೆ ಇದೆ. ಇದರ ಹೊರತಾಗಿ ವೃತ್ತಿಯಲ್ಲಿ ಹೆಚ್ಚಿನ ಲಾಭವನ್ನೂ ಪ್ರಶಂಸೆಗಳನ್ನು ಕಾಣುತ್ತೀರಿ. ಹೊಸ ಅವಕಾಶಗಳಿಗೆ ದಾರಿ ಸಿಗಲಿದೆ.
ಪರಿಹಾರ = ಶೀವ ಸನ್ನಿಧಾನಕ್ಕೆ ಉದ್ದು-ಹುರುಳಿ ದಾನ ಮಾಡಿ
ವಿಶೇಷ ಸೂಚನೆ :
ಯದ್ಭಾವಗೋ ಗೋಚರತೋ ವಿಲಗ್ನಾದ್ದಶೇಶ್ವರ: ಸ್ವೋಚ್ಚಸುಹ್ಯದ್ಗೃಹಸ್ಥ: |
ತದ್ಭಾವಪುಷ್ಟಿಂ ಕುರುತೇ ತದಾನೀಂ ಬಲಾನ್ವಿತಶ್ಚೇಜ್ಜನನೇ ಪಿತಸ್ಯ ||
ಎಂಬ ಶಾಸ್ತ್ರಾಧಾರದಂತೆ ನಿಮ್ಮ ಜಾತಕದ ಗ್ರಹಸ್ಥಿತಿ ಬಹಳ ಮುಖ್ಯ. ಜೊತೆಗೆ ಜಾತಕಗಳಲ್ಲಿ ದಶಾಧಿಪತಿ-ಭುಕ್ತಿನಾಥರು ಬಲಿಷ್ಠರಾಗಿ (ಉಚ್ಚ, ಸ್ವಕ್ಷೇತ್ರ, ಮೂಲತ್ರಿಕೋಣ, ಮಿತ್ರಸ್ಥಾನ ಗಳಲ್ಲಿದ್ದರೆ ) ಲಗ್ನಾದಿ ಯಾವ ಭಾವಗಳಲ್ಲಿ ಗೋಚಾರದಲ್ಲಿ ಸಂಚರಿಸುವರೋ ಆ ಭಾವದ ಫಲಗಳನ್ನು ವೃದ್ಧಿಸುತ್ತಾರೆ. ಹೀಗಾಗಿ ರಾಶಿಫಲ ನೋಡಿ ಆತಂಕಕ್ಕೆ ಒಳಗಾಗಬೇಕಿಲ್ಲ. ಹತ್ತಿರದ ಬಲ್ಲ ಜ್ಯೋತಿಷಿಗಳಿಂದ ಜಾತಕ ಪರಾಮರ್ಶಿಸಿಕೊಳ್ಳಿ