Hassan: ಹಾಸನಾಂಬ ದರ್ಶನ ಅಂತ್ಯ, ದೇಗುಲಕ್ಕೆ ಬೀಗ
ಕಳೆದ 15 ದಿನಗಳಿಂದ ನಡೆದ ಹಾಸನಾಂಬ ದರ್ಶನೋತ್ಸವದಲ್ಲಿ 7 ಲಕ್ಷಕ್ಕೂ ಹೆಚ್ಚು ಭಕ್ತರು ಹಾಸನಾಂಬೆ ದರ್ಶನ ಪಡೆದಿದ್ದು, ಗುರುವಾರ ಮಧ್ಯಾಹ್ನ 12.47 ನಿಮಿಷದ ವೇಳೆಗೆ ಗಣ್ಯರ ಸಮ್ಮುಖದಲ್ಲಿ ದೇವಾಲಯದ ಗರ್ಭಗುಡಿಯ ಬಾಗಿಲನ್ನು ಮುಚ್ಚಿ ಬೀಗಮುದ್ರೆ ಹಾಕುವ ಮೂಲಕ 2022ರ ಹಾಸನಾಂಬೆ ಜಾತ್ರೋತ್ಸವಕ್ಕೆ ತೆರೆ ಬಿದ್ದಿತು.
ಹಾಸನ (ಅ.28): ಕಳೆದ 15 ದಿನಗಳಿಂದ ನಡೆದ ಹಾಸನಾಂಬ ದರ್ಶನೋತ್ಸವದಲ್ಲಿ 7 ಲಕ್ಷಕ್ಕೂ ಹೆಚ್ಚು ಭಕ್ತರು ಹಾಸನಾಂಬೆ ದರ್ಶನ ಪಡೆದಿದ್ದು, ಗುರುವಾರ ಮಧ್ಯಾಹ್ನ 12.47 ನಿಮಿಷದ ವೇಳೆಗೆ ಗಣ್ಯರ ಸಮ್ಮುಖದಲ್ಲಿ ದೇವಾಲಯದ ಗರ್ಭಗುಡಿಯ ಬಾಗಿಲನ್ನು ಮುಚ್ಚಿ ಬೀಗಮುದ್ರೆ ಹಾಕುವ ಮೂಲಕ 2022ರ ಹಾಸನಾಂಬೆ ಜಾತ್ರೋತ್ಸವಕ್ಕೆ ತೆರೆ ಬಿದ್ದಿತು.
ಅಕ್ಟೋಬರ್ 13ರಂದು ಹಾಸನಾಂಬೆ ಬಾಗಿಲು ತೆಗೆದು 27ರವರೆಗೂ ಪ್ರತಿನಿತ್ಯ 60 ಸಾವಿರಕ್ಕೂ ಹೆಚ್ಚು ಜನರು ಅಮ್ಮನವರ ದರ್ಶನ ಪಡೆದಿದ್ದು, ಗುರುವಾರ ಮಧ್ಯಾಹ್ನ 11 ಗಂಟೆಯ ವೇಳೆಗೆ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ವಿಶೇಷ ಪೂಜೆ ಸಲ್ಲಿಸಿದ ನಂತರ ಜಿಲ್ಲಾ ಉಸ್ತುವಾರಿ ಸಚಿವರಾದ ಕೆ. ಗೋಪಾಲಯ್ಯ, ಶಾಸಕ ಪ್ರೀತಂ ಜೆ.ಗೌಡ ಸೇರಿ ಗಣ್ಯರು ಹಾಗೂ ಅಧಿಕಾರಿಗಳ ಸಮ್ಮುಖದಲ್ಲಿ ಹಾಸನಾಂಬೆಗೆ ವಿಶೇಷ ಪೂಜೆ ಸಲ್ಲಿಸಿ,ಗರ್ಭಗುಡಿಯ ಬಾಗಿಲಿಗೆ ಬೀಗ ಹಾಕಲಾಯಿತು.
ಹಾಸನಾಂಬೆ ದರ್ಶನಕ್ಕೆ ಬಂದಿದ್ದ ಭಕ್ತ ಹೃದಯಾಘಾತದಿಂದ ಸಾವು..!
ಆರದ ಹಣತೆ: ಇನ್ನು, ದೇವಾಲಯದ ಬಾಗಿಲನ್ನು ಮುಚ್ಚಿ ಬೀಗ ಮುದ್ರೆ ಹಾಕುವ ಮುನ್ನ ಗರ್ಭಗುಡಿಯಲ್ಲಿ ಹಚ್ಚಿಟ್ಟಹಣತೆ ಮುಂದಿನ ವರ್ಷ ಹಾಸನಾಂಬೆ ದೇವಾಲಯ ತೆರೆಯುವವರೆಗೂ ಆರದೆ ಇರುತ್ತದೆ ಎಂಬುದು ಇಲ್ಲಿನ ವಿಶೇಷತೆ.
ಮಹಿಳೆ ಮೈ ಮೇಲೆ ದೇವರು?: ಸರತಿ ಸಾಲಿನಿಂದ ಏಕಾಏಕಿ ದೇವಿ ದರ್ಶನಕ್ಕೆ ನುಗ್ಗಿ ಬಂದ ಮಹಿಳೆಯೊಬ್ಬಕೆ ಹಾಸನಾಂಬೆ ದೇವಿ ಕಾಣುತ್ತಲೇ ಜೋರಾಗಿ ಕಿಡುಚಾಡಿದ ಘಟನೆ ನಡೆಯಿತು. ಹೀಗೆ ಮಹಿಳೆಯನ್ನು ಹಿಡಿದುಕೊಳ್ಳಲು ಆಕೆಯ ಪತಿ ಹಾಗೂ ಪೊಲೀಸರು ಹರಸಾಹಸಪಟ್ಟರು. ಈ ವೇಳೆ ಕುಂಕುಮವನ್ನು ಹಣೆಗೆ ಹಚ್ಚುತ್ತಿದ್ದಂತೆ ಮಹಿಳೆ ಶಾಂತಳಾಗಿದ್ದಾಳೆ.
ಹಾಸನಾಂಬಾ ದರ್ಶನ ಮಾಡಿದ ಶಾಸಕ ನಾಗೇಂದ್ರ: ತಮ್ಮ ಹಿಂಬಾಲಕರಿಗೆ ದರ್ಶನಕ್ಕೆ ಅವಕಾಶ ನೀಡಲಿಲ್ಲ. ಶಾಸಕ ಪ್ರೀತಂ ಗೌಡ ಕೂಡ ತಮ್ಮ ಮನವಿಗೆ ಸ್ಪಂದಿಸಲಿಲ್ಲ ಎಂಬ ಕಾರಣಕ್ಕಾಗಿ ಕೂಗಾಟ ನಡೆಸಿ, ಭಾನುವಾರ ಹಾಸನಾಂಬೆ ದರ್ಶನ ಮಾಡದೆ ವಾಪಸ್ ತೆರಳಿದ್ದ ಚಾಮರಾಜ ಕ್ಷೇತ್ರದ ಬಿಜೆಪಿ ಶಾಸಕ ನಾಗೇಂದ್ರ ಅವರು ಸೋಮವಾರ ಮತ್ತೆ ಆಗಮಿಸಿ ಪ್ರೀತಂ ಗೌಡರ ಹೆಗಲ ಮೇಲೆ ಕೈ ಹಾಕಿಕೊಂಡು ಬಂದು ದೇವಿಯ ದರ್ಶನ ಮಾಡಿದರು. ಅಲ್ಲದೆ, ಪ್ರೀತಂಗೌಡರನ್ನು ಹೊಗಳಿದರು.
ಹಾಸನಾಂಬೆ ದರ್ಶನ ಆರಂಭ: ದಸರಾ ಮಾದರಿಯಲ್ಲಿ ಹಾಸನ ನಗರ ಸಿಂಗಾರ
ನಾಗೇಂದ್ರ ಅವರು ಹಿಂಬಾಲಕರ ಜೊತೆ ಬಂದಾಗ ಅವರ ಹಿಂಬಾಲಕರಿಗೆ ದೇವಿಯ ದರ್ಶನ ಮಾಡಲು ಎಎಸ್ಪಿ ತಮ್ಮಯ್ಯ ಅವರು ಅವಕಾಶ ನೀಡಿರಲಿಲ್ಲ. ಬೇಕಾದರೆ ನೀವು ಒಬ್ಬರು ಹೋಗಿ ಎಂದಿದ್ದರು. ಬಳಿಕ, ಪ್ರೀತಂ ಗೌಡರಿಗೆ ಫೋನ್ ಮಾಡಿದರೆ, ಅವರೂ ಪೋನ್ ರಿಸೀವ್ ಮಾಡಿರಲಿಲ್ಲ. ಇದರಿಂದ ಕೋಪಗೊಂಡ ನಾಗೇಂದ್ರ, ‘ಈ ದೌಲತ್ ರಾಜಕಾರಣ ಜಾಸ್ತಿ ದಿನ ನಡೆಯುವುದಿಲ್ಲ. ನಾಳೆ ನಾನೇ ಜಿಲ್ಲಾಡಳಿತದ ಮೂಲಕ ವ್ಯವಸ್ಥೆ ಮಾಡಿಸಿಕೊಂಡು ಬಂದು ದರ್ಶನ ಮಾಡುತ್ತೇನೆ’ ಎಂದು ಆವಾಜ್ ಹಾಕಿ ಹೋಗಿದ್ದರು.