Asianet Suvarna News Asianet Suvarna News

ಹುಲು ಮಾನವರಿಗೆ ಮಾತ್ರವಲ್ಲ ಸೀತಾ ಮಾತೆಗೂ ಬಿಡಲಿಲ್ಲ ಕೋಪ, ತಾಪ, ಉದ್ವೇಗ!

ದುಃಖವೆನ್ನುವ ಕಲ್ಲು, ಸುಖವೆನ್ನುವ ಕಲ್ಲು, ಪ್ರೀತಿ ಎನ್ನುವ ಕಲ್ಲು, ಭಯ ಎನ್ನುವ ಕಲ್ಲು, ಸಿಟ್ಟು ಎನ್ನುವ ಕಲ್ಲು.. ಕೊಳಕ್ಕೆ ಬಿದ್ದ ಒಂದೊಂದು ಕಲ್ಲೂ ತಳವನ್ನು ಕೆದುಕುತ್ತದೆ, ನೀರನ್ನು ಕಲಕುತ್ತದೆ. ತಿಳಿ ನೀರು ಕೆಂಪಾಗುತ್ತದೆ. ಅಲೆ ಹುಟ್ಟಿ ಸಾಯತೊಡಗುತ್ತದೆ.

Goddess Sita silent power of suffering and sacrificing
Author
Bangalore, First Published Oct 21, 2019, 3:30 PM IST

ಜಗದೀಶ್ ಶರ್ಮಾ ಸಂಪ

ಸೀತೆ ಅಶೋಕವನದಲ್ಲಿದ್ದಾಳೆ. ರಾವಣ ಕದ್ದೊಯ್ದು ಅಲ್ಲಿ ಇರಿಸಿದ್ದಾನೆ. ಗೊತ್ತಿಲ್ಲದ ಪ್ರದೇಶ. ಅಪರಿಚಿತ ಜನಗಳು. ಅಶೋಕವನ ಸುಂದರವಾದರೂ ಸುತ್ತ ಇರುವವರೆಲ್ಲ ಭಯಂಕರರು. ಆಗಾಗ ಆಗಾಗ ಬಂದು ಮದುವೆಯಾಗೆಂದು ಪೀಡಿಸುವ ಹತ್ತು ತಲೆಯ ರಾಕ್ಷಸ.

ಒಪ್ಪದಿದ್ದರೆ ನಾಳೆ ಬೆಳಗಿನ ತಿಂಡಿಯಾಗುವೆ ನೀನು ಎಂದು ಬೆದರಿಸುವ ವಿಕೃತ ರಾಕ್ಷಸಿಯರು. ಇದೆಲ್ಲವನ್ನೂ ಮೀರಿ ಕಾಡುವ ರಾಮನ ನೆನಪು. ಅವನ ಪ್ರೀತಿಯ ಸೆಳೆತ. ಅದರ ಮಧುರಾನುಭವದ ಹೊಳಪು. ಈಗ ಅದಿಲ್ಲವಾದ ನೋವು. ಮುಂದೆ ಆ ಪ್ರೀತಿ ಮತ್ತೆ ಸಿಗದಿದ್ದರೆ ಎನ್ನುವ ಭಯ. ‘ಈ ಪ್ರೀತಿಗೆ ಸಿಲುಕದ ಮುನಿಗಳ ಬದುಕು ಎಷ್ಟು ನೆಮ್ಮದಿ’ ಎಂದು ಯೋಚಿಸುತ್ತಾಳೆ ಅವಳೊಮ್ಮೆ.

ಸಪ್ತಮಾತೆಯರು ಮನ ಸೋತ ಹಾಸನಾಂಬೆ ಕ್ಷೇತ್ರ ಮಹಿಮೆ!

ಹೌದು, ನೋವು ಇನ್ನಿಲ್ಲದಂತೆ ಕಾಡುವಾಗಲೆಲ್ಲ ಈ ಅನಿಸಿಕೆ ಮೂಡುತ್ತದೆ. ನಾನೂ ಮುನಿಯಂತೆ ಇರಬಾರದಿತ್ತೇ, ಈ ಪ್ರೀತಿ, ಈ ದ್ವೇಷ ಎಲ್ಲ ಯಾಕಾದರೂ ಬೇಕಿತ್ತು ಎನಿಸುತ್ತದೆ. ಏನದು ಮುನಿಯ ಬದುಕು, ಹೇಗಿರುತ್ತದೆ ಅದು..

ಮನಸ್ಸು ನಿರ್ಮಲವಾದ ಕೊಳದಂತೆ. ಮೂಲತಃ ಅದು ನಿರ್ಮಲ ಮತ್ತು ಪ್ರಶಾಂತ. ಅದನ್ನು ಅಶಾಂತ ಮಾಡಿಕೊಳ್ಳುವುದು ನಾವೇ. ಅದನ್ನು ಕಲ್ಮಷಗೊಳಿಸುವುದು ನಾವೇ. ಅದನ್ನು ಅದರಷ್ಟಕ್ಕೇ ಬಿಡುವುದಿಲ್ಲ. ಅದನ್ನು ಹಾಗೆಯೇ ಬಿಟ್ಟರೆ ಅದು ತಿಳಿಯಾಗಿಯೇ ಇರುತ್ತದೆ. ಅದಕ್ಕೆ ಕಲ್ಲು ಬಿಸಾಕಿದರೆ ಅದು ಕದಲುತ್ತದೆ. ತರಂಗಗಳು ಏಳುತ್ತವೆ. ನೀರು ಕಂಪಿಸುತ್ತದೆ. ಕೊಳ ಅಲ್ಲೋಲಕಲ್ಲೋಲ ಆದಂತೆ ಅನಿಸುತ್ತದೆ.

ಪ್ರಪಂಚದ ಏಕೈಕ ಸಸ್ಯಾಹಾರಿ ಬುಡಕಟ್ಟು ಜನಾಂಗ 'ಬೇಡಗಂಪಣರು'!

ದಿನದಿನ, ಕ್ಷಣಕ್ಷಣ ಕಲ್ಲು ಎಸೆಯುವ ಕೆಲಸ ಮಾಡುತ್ತಿರುತ್ತೇವೆ ನಾವು. ದುಃಖವೆನ್ನುವ ಕಲ್ಲು. ಸುಖವೆನ್ನುವ ಕಲ್ಲು. ಪ್ರೀತಿ ಎನ್ನುವ ಕಲ್ಲು. ಭಯ ಎನ್ನುವ ಕಲ್ಲು. ಸಿಟ್ಟು ಎನ್ನುವ ಕಲ್ಲು. ಕೊಳಕ್ಕೆ ಬಿದ್ದ ಒಂದೊಂದು ಕಲ್ಲೂ ತಳವನ್ನು ಕೆದುಕುತ್ತದೆ, ನೀರನ್ನು ಕಲಕುತ್ತದೆ. ತಿಳಿ ನೀರು ಕೆಂಪಾಗುತ್ತದೆ. ಅಲೆ ಹುಟ್ಟಿ ಸಾಯತೊಡಗುತ್ತದೆ. ನೋವು ಉದ್ವೇಗಕ್ಕೆ ಕಾರಣ. ತಳಮಳಿಸುವಂತೆ ಮಾಡುತ್ತದೆ ನೋವು. ವಿಲವಿಲ ಒದ್ದಾಡಿಸಿಬಿಡುತ್ತದೆ. ಏನೂ ಬೇಡ, ಬದುಕೇ ಸಾಕು ಎನ್ನಿಸುವಂತೆ ಮಾಡುತ್ತದೆ. ಪುಟಿಯುವ ಉತ್ಸಾಹದ ಚಿಲುಮೆಯಂತೆ ಇದ್ದವರು ಪೇಲವ ಮುಖ ಹೊತ್ತು ನಿಸ್ತೇಜರಾಗಿಬಿಡುತ್ತಾರೆ. ಏನನ್ನೂ ಗೆಲ್ಲಬಲ್ಲೆ ಎನ್ನುವ ಆತ್ಮವಿಶ್ವಾಸದ ಖನಿಯಾಗಿದ್ದವರು ತಮ್ಮ ನೆರಳಿಗೇ ಬೆಚ್ಚುವಂತೆ ಆಗಿಬಿಡಬಹುದು.

ನೋವೇ ಇಲ್ಲದ ಬದುಕನ್ನು ಕಲ್ಪಿಸಲೂ ಸಾಧ್ಯವಿಲ್ಲ. ಅದು ಬದುಕಿನ ಅನಿವಾರ್ಯತೆ. ಆದರೆ ಅದರ ಪ್ರಭಾವ ಮನಸ್ಸಿನ ಮೇಲೆ ಆಗದಂತೆ ನೋಡಿಕೊಳ್ಳಲು ಸಾಧ್ಯವಿದೆ. ಅದೇ ಉದ್ವೇಗಗೊಳ್ಳದಿರುವುದು. ಮನಸ್ಸಿನ ದಾರ್ಢ್ಯ ಕಾಪಾಡಿಕೊಳ್ಳುವುದು. ಕದಲದಿರುವುದು. ಸುಖ ನಮ್ಮ ಅಪೇಕ್ಷೆ. ಅದಕ್ಕಾಗಿಯೇ ತಾನೇ ನಮ್ಮೆಲ್ಲ ಪ್ರಯತ್ನ. ದುಡಿತ, ಬಡಿತ, ಕುಣಿತ, ಮಣಿತ ಇವೆಲ್ಲವೂ ಸುಖಕ್ಕಾಗಿ. ಆದರೆ ಇದರಲ್ಲೂ ಒಂದು ಅಪಾಯವಿದೆ. ಸುಖ ಆಸೆಯನ್ನು ಹೆಚ್ಚಿಸುತ್ತಾ ಹೋಗುತ್ತದೆ. ಅದಕ್ಕೆ ನಿಲುಗಡೆ ಇಲ್ಲ. ಈ ಆಸೆಗಳು ಸುಖವನ್ನೂ ತರಬಹುದು, ದುಃಖವನ್ನಂತೂ ತಂದೇ ತರುತ್ತವೆ.

ಭಗವದ್ಗೀತೆಯ 18 ಅಧ್ಯಾಯಗಳಲ್ಲಿ ಕೃಷ್ಣ ಹೇಳಿದ್ದೇನು?

ಬಯಸಿದ್ದನ್ನು ಪಡೆಯುವ ಹೋರಾಟದ ನೋವುಗಳು ಸಹಿಸಬಹುದಾದವಾದರೂ ಬಯಸಿದ್ದು ಸಿಗದ ನೋವು ಸಹಿಸಲಸಾಧ್ಯ. ಹಾಗಾಗಿ ಸುಖದಲ್ಲಿ ಬೇಕು ಆಸೆಗಳ ನಿಯಂತ್ರಣ.

ಕೃಷ್ಣ ಇದನ್ನೇ ಹೇಳಿದ್ದು ಅರ್ಜುನನಿಗೆ. ‘ಕರ್ತವ್ಯ ಮಾಡು, ಮುನಿಯಾಗಿ ಬದುಕು’ ಎಂದು. ಕೃಷ್ಣನ ಮುನಿಸೂತ್ರಗಳು ಮೂರು:

-  ದುಃಖೇಷ್ವನುದ್ವಿಗ್ನಮನಾಃ ದುಃಖದಲ್ಲಿ ಉದ್ವೇಗಗೊಳ್ಳದ ಮನಸ್ಸು.

-  ಸುಖೇಷು ವಿಗತಸ್ಪಹಃ ಸುಖದಲ್ಲಿ ಆಸೆ ಇಲ್ಲವಾಗುವುದು.

-  ವೀತರಾಗಭಯಕ್ರೋಧಃ ಪ್ರೀತಿ, ಭಯ, ಕೋಪಗಳು ಇಲ್ಲದಿರುವುದು. ಹೀಗಿರುವುದು ಮುನಿ; ಹೀಗಿದ್ದವ ಮುನಿ

ದೇಗುಲದ ವಿಶೇಷ ಪ್ರಸಾದ..ದೇವಲೋಕದ ದೈವೀ ಅನುಬಂಧ

ಸುಖ-ದುಃಖಗಳೆರಡು ಪ್ರೀತಿ, ಭಯ, ಕ್ರೋಧಗಳನ್ನು ಹುಟ್ಟಿಸುತ್ತವೆ. ದುಃಖ ಅದಕ್ಕೆ ಕಾರಣರಾದವರ ಮೇಲೆ ದ್ವೇಷ ಹುಟ್ಟಿಸಿದರೆ, ಸುಖ ಅದಕ್ಕೆ ಕಾರಣರಾದವರ ಮೇಲೆ ಪ್ರೀತಿ ಹುಟ್ಟಿಸುತ್ತದೆ. ಇವೆರಡೂ ಭಯವನ್ನು ಹೊತ್ತೇ ಬದುಕುತ್ತವೆ. ಪ್ರೀತಿಗೆ ಕಳೆದುಹೋಗುವ ಭಯ. ದ್ವೇಷಕ್ಕೆ ಸೋಲು-ಸಾವಿನ ಭಯ. ಈ ಮೂರೂ ಮನಸ್ಸಿನ ನೆಮ್ಮದಿಯನ್ನು ಇನ್ನಿಲ್ಲದಂತೆ ಕೆಡಿಸುತ್ತವೆ. ನಿಯಂತ್ರಿತ ಪ್ರೀತಿ ತಂಪು ಕೊಡುತ್ತದೆ. ಆದರೆ ಅದು ಹೆಚ್ಚಾದರೆ ಅದರಂಥಾ ಶತ್ರು ಇನ್ನೊಂದಿಲ್ಲ.

ದ್ವೇಷವೂ ಅದರಷ್ಟು ಕಷ್ಟ ಕೊಡದು. ಅಷ್ಟು ಕಷ್ಟವಾಗಿಬಿಡುತ್ತದೆ ಪ್ರೀತಿ. ದ್ವೇಷದ ಬಗೆಗಂತೂ ಹೇಳುವುದೇ ಬೇಡ. ಅದು ಗುರಿಯಿಂದ ನಮ್ಮನ್ನು ವಿಚಲಿತಗೊಳಿಸುತ್ತದೆ. ಏನನ್ನೋ ಮಾಡಬೇಕಾದವರು ಇನ್ನೇನೋ ಸಾಧಿಸಲು ಹೊರಡುವಂತಾಗುತ್ತದೆ. ನಮ್ಮ ಸಮಯ, ಸಂಪತ್ತು, ಸಾಮರ್ಥ್ಯಗಳೆಲ್ಲ ಅದಕ್ಕೇ ವಿನಿಯೋಗವಾಗಿಬಿಡುತ್ತದೆ. ಇನ್ನು ಭಯವಂತೂ ಕ್ಷಣ ಕ್ಷಣ ಮನಸ್ಸನ್ನು ಹಿಂಜಿ ಹಿಸುಕುತ್ತಲೇ ಇರುತ್ತದೆ.

Follow Us:
Download App:
  • android
  • ios