ಗಣೇಶ ಹಬ್ಬವನ್ನು ವಿಜ್ರಂಭಣೆಯಿಂದ ಆಚರಿಸುವ ನಾವು ಸಂಜೆ ತಲೆ ತಗ್ಗಿಸಿ ನಡೆಯುತ್ತೇವೆ. ಅಪ್ಪಿತಪ್ಪಿ ಚಂದ್ರ ಕಣ್ಣಿಗೆ ಬಿದ್ರೂ ಕಥೆ ಮುಗಿದಂತೆ. ಈ ದಿನ ಚಂದ್ರ ಕಣ್ಣಿಗೆ ಬಿದ್ರೆ ಏನಾಗುತ್ತೆ, ಅದಕ್ಕೆ ಕಾರಣವೇನು ಎಂಬುದು ಇಲ್ಲಿದೆ. 

ಭಾದ್ರಪದ ಮಾಸದ ಶುಕ್ಲ ಪಕ್ಷದ ಚತುರ್ಥಿ ತಿಥಿಯನ್ನು ಗಣೇಶನ ಜನ್ಮದಿನವೆಂದು ಆಚರಿಸಲಾಗುತ್ತದೆ. ಶಿವ ಮತ್ತು ತಾಯಿ ಪಾರ್ವತಿಯ ಪುತ್ರ ಗಣೇಶ ಚತುರ್ಥಿ ತಿಥಿಯಂದು ಮಧ್ಯಾಹ್ನ ಜನಿಸಿದರು ಎಂಬ ಪುರಾಣ ನಂಬಿಕೆ ಇದೆ. ಈ ಬಾರಿ ಸೆಪ್ಟೆಂಬರ್ 19ರಂದು ಗಣೇಶ ಚತುರ್ಥಿ ಆಚರಿಸಲಾಗುತ್ತದೆ. ಅನೇಕ ಕಡೆ 10 ದಿನಗಳ ಕಾಲ ಗಣೇಶೋತ್ಸವವನ್ನು ಆಚರಿಸಲಾಗುತ್ತದೆ. 

Add Asianetnews Kannada as a Preferred SourcegooglePreferred

ಗಣೇಶ (Ganesha ) ನ ಪ್ರತಿಷ್ಠಾಪನೆ ಮಾಡಿ, ಬಗೆ ಬಗೆ ತಿಂಡಿಗಳನ್ನು ಮಾಡಿ, ಗಣೇಶನಿಗೆ ಪೂಜೆ ಮಾಡಿ, ನೈವೇದ್ಯ ಮಾಡಿ, ಪ್ರಸಾದವನ್ನು ಸ್ವೀಕರಿಸಿ, ಪದ್ಧತಿ ಪ್ರಕಾರ ಗಣೇಶನ ಹಬ್ಬವನ್ನು ಭಕ್ತರು ಆಚರಣೆ ಮಾಡ್ತಾರೆ. ಬೆಳಿಗ್ಗೆಯಿಂದ ರಾತ್ರಿಯವರೆಗೆ ಗಣೇಶನ ಪೂಜೆಯಲ್ಲಿ ಮಿಂದೇಳುವ ಜನರು ರಾತ್ರಿ ಸ್ವಲ್ಪ ಎಚ್ಚರದಿಂದ ಇರಬೇಕು. ಅಪ್ಪಿತಪ್ಪಿಯೂ ಚಂದ್ರ (Moon) ನನ್ನು ನೋಡ್ಬಾರದು. ಈ ದಿನ ಚಂದ್ರನನ್ನು ನೋಡುವುದನ್ನು ನಿಷೇಧಿಸಲಾಗಿದೆ. ಭಾದ್ರಪದ ಮಾಸದ ಚತುರ್ಥಿ (Chaturthi) ತಿಥಿಯಂದು ಚಂದ್ರನನ್ನು ನೋಡುವುದ್ರಿಂದ ಅಪಮಾನ ಎದುರಿಸಬೇಕಾಗುತ್ತದೆ. ಸುಳ್ಳು ಆರೋಪಗಳನ್ನು ಎದುರಿಸಬೇಕಾಗುತ್ತದೆ ಎಂಬ ಧಾರ್ಮಿಕ ನಂಬಿಕೆ ಇದೆ.

ಗಣೇಶನಿಗೆ ಏನಿಷ್ಟು? ಹಬ್ಬಕ್ಕೆ ಏನು ಸ್ವೀಟ್ಸ್ ಮಾಡಬೇಕು ಅಂದು ಕೊಂಡಿದ್ದೀರಿ?

ಚೌತಿ ದಿನ ಚಂದ್ರನನ್ನು ಏಕೆ ನೋಡಬಾರದು ? : ಪಾರ್ವತಿ ಬೆವರಿನಿಂದ ರೂಪ ತಳೆದವನು ಗಣೇಶ. ಆದ್ರೆ ಶಿವನ ಕೋಪಕ್ಕೆ ಗುರಿಯಾಗಿ ತಲೆ ಕಳೆದುಕೊಂಡಾಗ ಉತ್ತರ ದಿಕ್ಕಿನಲ್ಲಿ ಮಲಗಿದ್ದ ಆನೆ ತಲೆಯನ್ನು ತಂದು ಗಣಪತಿಗೆ ಹಾಕಲಾಗುತ್ತದೆ. ಅತ್ಯಂತ ಬುದ್ಧಿವಂತ ಹಾಗೂ ವಿಘ್ನಹರ ಗಣೇಶ, ಚೌತಿಯ ದಿನ ತಾಯಿ ಗೌರಿಯನ್ನು ಭೂಲೋಕದಿಂದ ಕರೆದುಕೊಂಡು ಹೋಗ್ತಿದ್ದ. ಇಲಿಯ ಮೇಲೆ ಕುಳಿತಿದ್ದ ಆತ ಚಂದ್ರಲೋಕಕ್ಕೆ ಬರುತ್ತಾನೆ. ಡೊಳ್ಳು ಹೊಟ್ಟೆಯ, ಆನೆ ಸೊಂಡಿಲಿನ ಗಣಪತಿಯನ್ನು ನೋಡಿ ಚಂದ್ರ ನಗ್ತಾನೆ. ಇದರಿಂದ ಕೋಪಗೊಂಡ ಗಣಪತಿ ಚಂದ್ರನಿಗೆ ಶಾಪ ನೀಡ್ತಾನೆ. ನೀನು ಕಪ್ಪಾಗು ಎಂದು ಶಾಪ ನೀಡುತ್ತಾನೆ. ಹಾಗಾಗಿಯೇ ಚಂದ್ರನಿಗೆ ಕಪ್ಪು ಕಲೆಗಳಿವೆ. ಚಂದ್ರನಿಗೆ ತಾನು ಸುಂದರವಾಗಿದ್ದೇನೆಂಬ ಅಹಂಕಾರವಿತ್ತು. ಗಣೇಶನ ಶಾಪದಿಂದ ಈ ಅಹಂಕಾರ ಇಳಿಯುತ್ತದೆ. ಚಂದ್ರ ಕ್ಷಮೆ ಕೇಳುತ್ತಾನೆ. ಇದಕ್ಕೆ ಪರಿಹಾರ ಹೇಳುವಂತೆ ಗಣೇಶನನ್ನು ಕೇಳ್ತಾನೆ. ಆಗ ಚಂದ್ರನನ್ನು ಕ್ಷಮಿಸುವ ಗಣೇಶ, ಸೂರ್ಯನ ಬೆಳಕು ಪಡೆದು ನೀನು ತಿಂಗಳಲ್ಲಿ ಒಂದು ದಿನ ನೀನು ಸಂಪೂರ್ಣ ಹೊಳೆಯುವೆ. ಆದ್ರೆ ಚೌತಿಯ ದಿನ ನಿನ್ನನ್ನು ಕ್ಷಮಿಸಿದ ದಿನವಾಗಿದ್ದು ಅದು ನಿನಗೆ ಸದಾ ನೆನಪಿರಲಿದೆ. ಈ ದಿನವನ್ನು ನೆನಪಿಸಿಕೊಂಡರೆ ಬೇರೆ ಯಾವುದೇ ವ್ಯಕ್ತಿ ತನ್ನ ಸೌಂದರ್ಯದ ಬಗ್ಗೆ ಹೆಚ್ಚು ಹೆಮ್ಮೆ ಪಡುವುದಿಲ್ಲ. ಭಾದ್ರಪದ ಮಾಸದ ಶುಕ್ಲ ಪಕ್ಷದ ಚತುರ್ಥಿಯ ದಿನದಂದು ನಿನ್ನನ್ನು ಯಾರು ನೋಡ್ತಾರೋ ಅವರು ಸುಳ್ಳು ಆರೋಪಕ್ಕೆ ಗುರಿಯಾಗುತ್ತಾರೆ ಎನ್ನುತ್ತಾನೆ.

ಕೆಲ ಗ್ರಂಥಗಳಲ್ಲಿ ಕಥೆ ಸ್ವಲ್ಪ ಭಿನ್ನವಾಗಿದೆ. ಇಲಿಯ ಮೇಲೆ ಕುಳಿತು ಹೊಗ್ತಿದ್ದ ಗಣೇಶನಿಗೆ ಹಾವೊಂದು ಕಾಣಿಸಿಕೊಳ್ಳುತ್ತದೆ. ಭಯಗೊಂಡು ಗಣಪತಿ ನೆಗೆಯುತ್ತಾನೆ. ಆಗ ಆತ ವಾಹನದಿಂದ ಕೆಳಗೆ ಬಿಳ್ತಾನೆ. ನೆಲಕ್ಕೆ ಬಿದ್ದ ಗಣಪತಿ ಯಾರೂ ತನ್ನನ್ನು ನೋಡಿಲ್ಲವೆಂದುಕೊಳ್ತಾನೆ. ಆದ್ರೆ ಮೇಲಿನಿಂದ ನೋಡ್ತಿದ್ದ ಚಂದ್ರ, ಗಣಪತಿ ಸ್ಥಿತಿ ನೋಡಿ ನಗ್ತಾನೆ. ಆಗ ಗಣಪತಿ ಶಾಪ ನೀಡ್ತಾನೆ ಎಂಬ ಕಥೆಯೂ ಇದೆ. 
ಕಥೆ ಯಾವುದೇ ಇರಲಿ, ಸ್ವತಃ ಶ್ರೀಕೃಷ್ಣ ಕೂಡ ಈ ಕಷ್ಟವನ್ನು ಎದುರಿಸಿದ್ದಾನೆ ಎಂದು ಪುರಾಣಗಳಲ್ಲಿ ಹೇಳಲಾಗುತ್ತದೆ. ಶ್ರೀಕೃಷ್ಣ ಚೌತಿಯ ದಿನದಂದು ಚಂದ್ರನನ್ನು ನೋಡಿ ಸುಳ್ಳು ಆರೋಪವನ್ನು ಎದುರಿಸಬೇಕಾಯ್ತು. ಯಾರೇ ಚೌತಿ ದಿನ ಚಂದ್ರನನ್ನು ನೋಡಿದ್ರೂ ಸಮಸ್ಯೆ ತಪ್ಪಿದ್ದಲ್ಲ. 

ಗೌರಿ, ಗಣೇಶ ಪೂಜೆ ಮಾಡುವಾಗ ಲಕ್ಷಣವಾಗಿ ರೆಡಿ ಆದರೆ ಎಷ್ಟು ಚೆಂದ ಅಲ್ವಾ?

ಒಂದ್ವೇಳೆ ನೀವೂ ಚೌತಿ ದಿನ ಚಂದ್ರನನ್ನು ನೋಡಿದ್ರೆ ಅದ್ರ ಪರಿಹಾರಕ್ಕೆ ಹೀಗೆ ಮಾಡಿ : 
• ಶಮಂತಕ ಮಣಿಯ ಕಥೆಯನ್ನು ಆಲಿಸಿ ಅಥವಾ ಪಠಿಸಿ.
• ಕನ್ನಡಿಯಲ್ಲಿ ನಿಮ್ಮ ಮುಖವನ್ನು ನೋಡಿದ ನಂತರ ಹರಿಯುವ ನೀರಿನಲ್ಲಿ ಮುಖ ತೊಳೆಯಿರಿ.
• ಗಣೇಶನ ವಿಗ್ರಹವನ್ನು ಪ್ರತಿಷ್ಠಾಪಿಸಿ 21 ಲಡ್ಡುಗಳನ್ನು ಅರ್ಪಿಸಿ. ಇವುಗಳಲ್ಲಿ 5 ಲಡ್ಡುಗಳನ್ನು ಗಣೇಶನ ವಿಗ್ರಹದ ಬಳಿ ಇಟ್ಟು ಉಳಿದವುಗಳನ್ನು ಬ್ರಾಹ್ಮಣರಿಗೆ ಹಂಚಬೇಕು.