Asianet Suvarna News Asianet Suvarna News

ಚಾಮರಾಜನಗರ: ಮಹದೇಶ್ವರ ಬೆಟ್ಟದಲ್ಲಿ ದೀಪಾವಳಿ ಜಾತ್ರೆ ಸಂಭ್ರಮ

ದೀಪಾವಳಿ ಸಮಯದಲ್ಲಿ ಮೂರು ದಿನಗಳ ಕಾಲ ನಡೆಯುವ ಜಾತ್ರಾ ಮಹೋತ್ಸವ ಹಾಗೂ ರಥೋತ್ಸವದಲ್ಲಿ ಭಾಗವಹಿಸುವ ಲಕ್ಷಾಂತರ ಮಂದಿ ಭಕ್ತರಿಗೆ ಯಾವುದೇ ಅನಾನುಕೂಲವಾಗದಂತೆ ಈ ಬಾರಿ ಮಲೆ ಮಹದೇಶ್ವರಬೆಟ್ಟ ಅಭಿವೃದ್ಧಿ ಪ್ರಾಧಿಕಾರ ಹಾಗೂ ಜಿಲ್ಲಾಡಳಿತ ಸಕಲ ಸಿದ್ದತೆ ಕೈಗೊಂಡಿತ್ತು. 

Diwali Fair Celebration at Mahadeshwar Hill in Chamarajanagara grg
Author
First Published Nov 15, 2023, 12:00 AM IST

ವರದಿ - ಪುಟ್ಟರಾಜು. ಆರ್. ಸಿ. ಏಷಿಯಾನೆಟ್ ಸುವರ್ಣ  ನ್ಯೂಸ್, ಚಾಮರಾಜನಗರ

ಚಾಮರಾಜನಗರ(ನ.15): ಎಲ್ಲಿ ನೋಡಿದರಲ್ಲಿ ಜನಸಾಗರ, ಉಘೇ ಉಘೇ ಮಾದಪ್ಪ ಎನ್ನುವ ಜಯಕಾರ, ಕುಣಿದು ಕುಪ್ಪಳಿಸಿ ಭಕ್ತಿಯ ಪರಾಕಾಷ್ಟೆ ಮೆರದ ಮಹಿಳೆಯರು, ಇದೆಲ್ಲ ಕಂಡು ಬಂದಿದ್ದು ಮಲೆಮಹದೇಶ್ವರನ ದೀಪಾವಳಿ ರಥೋತ್ಸವದಲ್ಲಿ. ಬನ್ನಿ ಹಾಗಿದ್ರೆ ಮಾದಪ್ಪನ ದೀಪಾವಳಿ ರಥೋತ್ಸವದ ಸಂಭ್ರಮ ಹೇಗಿತ್ತು ನೋಡ್ಕೊಂಡ್ ಬರೋಣ..

ಚಾಮರಾಜನಗರ ಜಿಲ್ಲೆಯಲ್ಲಿರುವ ಮಲೆಮಹದೆಶ್ವರ ಬೆಟ್ಟ ದಕ್ಷಿಣ ಭಾರತದ ಪ್ರಸಿದ್ದ ಯಾತ್ರಾ ಸ್ಥಳ. ಬೆಟ್ಟದಲ್ಲಿ ನೆಲಸಿರುವ ಮಲೆಮಾದಪ್ಪ ಲಕ್ಷಾಂತರ ಭಕ್ತರ ಆರಾಧ್ಯ ದೈವ. ಈ ಬೆಟ್ಟದಲ್ಲಿ ವರ್ಷಕ್ಕೆ ಒಂದಲ್ಲ ಎರಡಲ್ಲ ಮೂರು ಬಾರಿ ಅಂದರೆ ಶಿವರಾತ್ರಿ, ಯುಗಾದಿ ಹಾಗೂ ದೀಪಾವಾಳಿಯಂದು ರಥೋತ್ಸವ ನಡೆಯುತ್ತದೆ. ಇದೇ ರೀತಿ ಈ ಬಾರಿಯು ಬೆಟ್ಟದಲ್ಲಿಂದು ಮಾದಪ್ಪನ ದೀಪಾವಾಳಿ ರಥೋತ್ಸವದಲ್ಲಿ ಲಕ್ಷಾಂತರ ಭಕ್ತರ ಜಯಘೋಷಗಳ ನಡುವೆ ದೀಪಾವಾಳಿ ಅಂಗವಾಗಿ ಮಾದಪ್ಪನ ಸನ್ನಿದಿಯಲ್ಲಿ   ಕಳೆದ ನಾಲ್ಕು ದಿನಗಳಿಂದ  ವಿಶೇಷ ಪೂಜೆ..ಸೇವೆಗಳು ನಡೆದು ಕೊನೆಯ ದಿನವಾದ ಇಂದು ದೀಪಾವಳಿ ರಥೋತ್ಸವ ವಿಜೃಂಭಣೆಯಿಂದ ನಡೆಯಿತು.ಹಸಿರು ಸೀರೆ ಉಟ್ಟ ಬೇಡಗಂಪಣ ಜನಾಂಗದ ಬಾಲಕಿಯರು ಬೆಲ್ಲದಾರತಿ ಬೆಳಗುವ ಮೂಲಕ ರಥೋತ್ಸವಕ್ಕೆ ಚಾಲನೆ ನೀಡಿದರು. 

ಮದುವೆ ಭಾಗ್ಯಕ್ಕೆ ಮಲೆ ಮಹದೇಶ್ವರನ ಮೊರೆ ಹೋದ ಬ್ರಹ್ಮಚಾರಿಗಳು!

ಹುಲಿವಾಹನ, ಬಸವವಾಹನ, ರುದ್ರಾಕ್ಷಿಮಂಟಪಗಳು ರಥೋತ್ಸವದಲ್ಲಿ ಪಾಲ್ಗೊಂಡು ಎಲ್ಲರ ಗಮನ ಸೆಳೆದವು. ಅಸಂಖ್ಯಾತ ಭಕ್ತರು ಮಾದಪ್ಪನ ರಥ ಎಳೆದು ಪುನೀತರಾದರು.ರಥಕ್ಕೆ ಹಣ್ಣು ಧವನ ಎಸೆದು ಭಕ್ತಿ ಸಮರ್ಪಿಸಿದರು. ಮಾದೇಶ್ವರ ನಂಬಿದ ಭಕ್ತರನ್ನು ಕೈಬಿಡುವುದಿಲ್ಲ, ಬೇಡಿದ ವರವನ್ನು ಕರುಣಿಸುತ್ತಾನೆ ಎಂಬ ನಂಬಿಕೆ ಈ ಭಕ್ತರದ್ದಾಗಿದೆ. ದೀಪಾವಾಳಿ ರಥೋತ್ಸವ ಸಂಭ್ರಮ ಸಡಗರಗಳೊಂದಿಗೆ ನಡೆಯಿತು..

ಉಘೇ ಉಘೇ ಮಾದಪ್ಪ ಎನ್ನುತ್ತಾ  ಲಕ್ಷಾಂತರ  ಮಂದಿ ಭಕ್ತರು ಮಾದಪ್ಪನ ತೇರು ಎಳೆದು ತಮ್ಮ ಭಕ್ತಿ ಸಮರ್ಪಿಸಿದರು. ಮಹಿಳೆಯರಂತು ಕುಣಿದು ಕುಪ್ಪಳಿಸಿ ಭಕ್ತಿಯ ಪರಾಕಾಷ್ಠೆ ಮೆರೆದರು,  ಮಾದಪ್ಪನ ಭಕ್ತರು ಹರಕೆ ತೀರಿಸುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಮಾದಪ್ಪನ ಸನ್ನಿದಿಯಲ್ಲಿ ದೀಪಾವಳಿಯ ಮೊದಲನೆ ದಿನ ಎಣ್ಣೆಮಜ್ಜನ ಸೇವೆ ನಡೆದರೆ ಎರಡನೇ ದಿನ ಹಾಲರುವೆ ಉತ್ಸವ ನಡೆದಿತ್ತು. ಮೂರನೇ ದಿನವಾದ ಇಂದು ರಥೋತ್ಸವ ರಾಜ್ಯದ ಮೂಲೆಮೂಲೆಗಳಿಂದ ಭಕ್ತ ಸಾಗರ ಹರಿದುಬಂದಿತ್ತು. ಕಳೆದ ಮೂರು ದಿನಗಳಿಂದ ಸಾಗರೋಪಾದಿಯಲ್ಲಿ ಹರಿದು ಬಂದ ಭಕ್ತರಿಗೆ  ವಿಶೇಷ ಅನ್ನದಾಸೋಹ ಮಾಡಲಾಗಿತ್ತು. ಮೂರು ದಿನಗಳಿಂದ ಮೂರಲಕ್ಷಕ್ಕು ಅಧಿಕ ಲಾಡು ಪ್ರಸಾದ ಮಾರಾಟವಾಗಿದೆ.

ದೀಪಾವಳಿ ಸಮಯದಲ್ಲಿ ಮೂರು ದಿನಗಳ ಕಾಲ ನಡೆಯುವ ಜಾತ್ರಾ ಮಹೋತ್ಸವ ಹಾಗೂ ರಥೋತ್ಸವದಲ್ಲಿ ಭಾಗವಹಿಸುವ ಲಕ್ಷಾಂತರ ಮಂದಿ ಭಕ್ತರಿಗೆ ಯಾವುದೇ ಅನಾನುಕೂಲವಾಗದಂತೆ ಈ ಬಾರಿ ಮಲೆ ಮಹದೇಶ್ವರಬೆಟ್ಟ ಅಭಿವೃದ್ಧಿ ಪ್ರಾಧಿಕಾರ ಹಾಗೂ ಜಿಲ್ಲಾಡಳಿತ ಸಕಲ ಸಿದ್ದತೆ ಕೈಗೊಂಡಿತ್ತು. ಭಕ್ತರಿಗೆ ಅಗತ್ಯ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಿಕೊಟ್ಟಿತ್ತು. ಒಟ್ಟಾರೆ ಇವತ್ತಿನ ಮಾದಪ್ಪನ ರಥೋತ್ಸವದೊಂದಿಗೆ ಕಳೆದ ಮೂರು ದಿನಗಳಿಂದ ನಡೆದ ದೀಪಾವಳಿ ಜಾತ್ರೆಗೆ ಸಂಭ್ರಮದ ತೆರೆಬಿದ್ದಿತು..

Follow Us:
Download App:
  • android
  • ios