ದೀಪಾವಳಿ ಹಬ್ಬದ ವೇಳೆ ಮಲ್ಲೇನಹಳ್ಳಿ ಬೆಟ್ಟದ ಮೇಲಿರುವ ಬಿಂಡಿಗ ದೇವೀರಮ್ಮ ದೇವಸ್ಥಾನದಲ್ಲಿ ತಂತಾನೇ ಬಾಗಿಲು ತೆರೆಯುವ ಪವಾಡವನ್ನು ಭಕ್ತರು ನೋಡಿ ಕಣ್ತುಂಬಿಕೊಂಡರು.

ವರದಿ : ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್
ಚಿಕ್ಕಮಗಳೂರು (ನ.13):
ಬೆಳಕಿನ ಹಬ್ಬ ದೀಪಾವಳಿಯ ಮಹಾ ಅಮಾವಾಸೆಯಂದು ದೇವಿರಮ್ಮ ದೇವಾಲಯದ ಬಾಗಿಲು ತಾನಾಗೀಯೇ ತೆರೆಯುತ್ತದೆ. ಇದನ್ನ ನೋಡಲು ಭಕ್ತರ ದಂಡೆ ಹರಿದು ಬಂದಿತ್ತು. ಅನಾದಿಕಾಲದಿಂದಲೂ ನಡೆದುಕೊಂಡು ಬರುತ್ತಿರುವ ಆಚರಣೆಯಂತೆ ಈ ಬಾರಿಯೂ ಗರ್ಭಗುಡಿಯ ಬಾಗಿಲಲ್ಲಿ ಹಾಕಿದ ಪರದೇ ತಾನಾಗಿಯೇ ತೆರದುಕೊಳ್ಳುವ ಮೂಲಕ ಭಕ್ತರ ನಂಬಿಕೆ ಹುಸಿಯಾಗಿಲ್ಲ. ಬೆಟ್ಟದಲ್ಲಿ ನೆಲಸಿದ್ದ ದೇವಿರಮ್ಮ ದೇವಿ ಇಂದು ಗಾಳಿರೂಪದಲ್ಲಿ ಗರ್ಭಗುಡಿ ಸೇರುತ್ತಾಳೆ ಅನ್ನೋದು ಭಕ್ತರ ನಂಬಿಕೆಯಾಗಿದೆ.

Add Asianetnews Kannada as a Preferred SourcegooglePreferred

ನಾಡಿನೆಲ್ಲೆಡೆ ಬೆಳಕಿನ ಹಬ್ಬದ ಸಂಭ್ರಮ ಮನೆ ಮಾಡಿದರು. ಅದರಲ್ಲೂ ಚಿಕ್ಕಮಗಳೂರು ಜಿಲ್ಲೆ ಸೇರಿದಂತೆ ಸುತ್ತಮುತ್ತಲಿನ ಜನತೆಗೆ ಚಿಕ್ಕಮಗಳೂರು ತಾಲೂಕಿನ ಮಲ್ಲೇನಹಳ್ಳಿ ಬಿಂಡಿಗ ದೇವಿರಮ್ಮಳ ಪವಾಡ ನೋಡುವ ಕೌತುಕ. ಹೌದು, ದೀಪಾವಳಿಯ ಮೂರು ದಿನಗಳ ಕಾಲ ಬಿಂಡಿಗದಲ್ಲಿ ದೇವಿರಮ್ಮಳ ಜಾತ್ರಾ ಮಹೋತ್ಸವ ನಡೆಯುತ್ತದೆ. ನಿನ್ನೆಯಿಂದಲೇ ಜಾತ್ರೆ ಆರಂಭವಾಗಿದ್ದು, ನಿನ್ನೆ ಬೆಟ್ಟದ ಮೇಲೆ 70 ಸಾವಿರ ಭಕ್ತರು ಬೆಟ್ಟವನ್ನೇರಿ ವರ್ಷಕ್ಕೊಮ್ಮೆ ದರ್ಶನ ನೀಡುವ ದೇವಿರಮ್ಮ ದರ್ಶನ ಪಡೆದು ಪುನೀತರಾದರು. ನಿನ್ನೆ ಬೆಟ್ಟದ ಮೇಲೆ ಪೂಜೆ ನಡೆದಿದ್ರೆ ಇಂದು ಮಲ್ಲೇನಹಳ್ಳಿಯಲ್ಲಿರುವ ದೇವಸ್ಥಾನದಲ್ಲಿ ಮುಂಜಾನೆಯಿಂದ ಆರಂಭವಾದ ಧಾರ್ಮಿಕ ಪೂಜಾ ವಿಧಿವಿಧಾನಗಳು ಎಂದಿನಂತೆ ನಡೆಯಿತು. 

ಇಂದು ನಡೆದ ಕೌತುಕವನ್ನು ನೋಡಲು ಮುಂಜಾನಯೇ ದೇವಾಲಯಕ್ಕೆ ಸಹಸ್ರಾರು ಸಂಖ್ಯೆಯಲ್ಲಿ ಭಕ್ತಾದಿಗಳು ಆಗಮಿಸಿದ್ರು. ಮೊದಲನೇ ದಿನ ಬೆಟ್ಟದಲ್ಲಿ ದರ್ಶನ ನೀಡುವ ದೇವಿ, ಅಮಾವಾಸೆಯ ದಿನವಾದ ಇಂದು ಗಾಳಿರೂಪದಲ್ಲಿ ಗ್ರಾಮದ ಗುಡಿಗೆ ಪ್ರವೇಶಿಸುತ್ತಾಳೆ ಅನ್ನೋದು ಗ್ರಾಮಸ್ಥರ ಮಾತು. ಈ ಶುಭ ಮೂಹರ್ತದಲ್ಲಿ ಸಂಭವಿಸುವ ಪವಾಡವನ್ನು ನೋಡಲು ಭಕ್ತರ ದಂಡೆ ಹರಿದು ಬಂದಿತ್ತು. ಅರ್ಚಕರು ಅಷ್ಟ ದಿಕ್ಕುಗಳಲ್ಲಿ ವಿಶೇಷ ಪೂಜೆ ಸಲ್ಲಿಸಿ ದೇವಾಲಯ ಸುತ್ತಾ ಪ್ರದಕ್ಷಿಣಿ ಹಾಕಿ ಮುಗಿಸುತ್ತಿದ್ದಂತೆ ಗಂಟೆ, ವಾದ್ಯಗೋಷ್ಠಿಗಳು ಮೊಳಗಲಾರಂಭಿಸುತ್ತಿದಂತೆ ದೇವಾಲಯದ ಬಾಗಿಲಲ್ಲಿ ಹಾಕಿದ ಪರದೇ ತಾನಾಗಿಯೇ ತೆರೆದುಕೊಳ್ಳುತ್ತೆ. ಈ ರೀತಿ ಗಾಳಿರೂಪದಲ್ಲಿ ದೇವಿರಮ್ಮ ಗರ್ಭಗುಡಿ ಸೇರುತ್ತಾಳೆ ಅನ್ನೋದು ಗ್ರಾಮಸ್ಥರ ನಂಬಿಕೆ ಆಗಿದೆ.

ನಾಳೆ ಕೆಂಡಾರ್ಚನೆ ನಡೆಯುವ ಅಂತಿಮ ತೆರೆ: ದೇವಿರಮ್ಮಳ ದೇವಾಲಯದ ಬಾಗಿಲು ತನ್ನಿಂದ ತಾನೇ ತೆರದುಕೊಳ್ಳವುದು ಇಂದಿಗೂ ಕುತೂಹಲ ಮೂಡಿಸಿದೆ. ಜೊತೆಗೆ ಈ ವಿಸ್ಮಯ ಪ್ರಜ್ಞಾವಂತರಲ್ಲಿ ಹಲವು ಸಂಶಯಗಳನ್ನೂ ಹುಟ್ಟಾಕಿದೆ. ಇಲ್ಲಿನ ದೇವಿರಮ್ಮ ದೇವಿ ಪವಾಡ ಸೃಷ್ಠಿಸೋದ್ರ ಜೊತೆ ಭಕ್ತರ ಹರಕೆಯನ್ನು ತೀರಿಸುತ್ತಾಳೆ ಅನ್ನೋದು ಇಲ್ಲಿನ ಭಕ್ತರ ನಂಬಿಕೆ. ಆದ್ರಿಂದ ಇಲ್ಲಿಗೆ ಭಕ್ತರ ದಂಡೆ ಹರಿದು ಬರೋದು ವಿಶೇಷ. ವರ್ಷದಿಂದ ವರ್ಷಕ್ಕೆ ಇಲ್ಲಿಗೆ ಆಗಮಿಸುವ ಭಕ್ತರ ಸಂಖ್ಯೆಯೂ ಗಣನೀಯವಾಗಿ ಏರಿಕೆಯಾಗ್ತಿದೆ. ವರ್ಷಕ್ಕೊಮ್ಮೆ ದರ್ಶನ ನೀಡೋ ದೇವರ ಸಾಲಿಗೆ ಈ ದೇವಿರಮ್ಮ ಕೂಡ ಸೇರಲಿದ್ದಾಳೆ. ಒಟ್ಟಾರೆ, ದೀಪಾವಳಿಯ ಎರಡನೇ ದಿನವಾದ ಇಂದು ದೇವಿರಮ್ಮ ಪವಾಡ ನೋಡಲು ಜನ ಸಾಗರವೇ ಹರಿದು ಬಂದಿತ್ತು. ಜನ ಮರುಳೋ, ಜಾತ್ರೆ ಮರುಳೋ ಗೊತ್ತಿಲ್ಲ. ದೇವಿರಮ್ಮ ಈ ವಿಸ್ಮಯವನ್ನು ನೋಡಲು ಜನರು ಜಾತಕಪಕ್ಷಿಗಳಂತೆ ಕಾದು ಕುಳಿತದ್ದಂತೂ ಸತ್ಯ. ನಾಳೆ ಕೆಂಡಾರ್ಚನೆ ನಡೆಯುವ ಮೂಲಕ ಮೂರು ದಿನಗಳ ದೇವಿರಮ್ಮ ಜಾತ್ರಾ ಮಹೋತ್ಸವಕ್ಕೆ ಅಂತಿಮ ತೆರೆಬೀಳಲಿದೆ.