ಈ ಲೇಖನವು ಬುದ್ಧ ಪೂರ್ಣಿಮೆಯ ಮಹತ್ವವನ್ನು ವಿವರಿಸುತ್ತಾ, ಸಿದ್ಧಾರ್ಥನಿಂದ ಬುದ್ಧನಾದ ಜ್ಞಾನೋದಯದ ಪಯಣವನ್ನು ಕಟ್ಟಿಕೊಡುತ್ತದೆ. ಬುದ್ಧನ ನಾಲ್ಕು ಉದಾತ್ತ ಸತ್ಯಗಳು, ಪಂಚಶೀಲ ತತ್ವಗಳು ಮತ್ತು ಅಹಿಂಸೆಯ ಸಂದೇಶವು ಇಂದಿನ ಜಗತ್ತಿಗೆ ಹೇಗೆ ಪ್ರಸ್ತುತ ಎಂಬುದನ್ನು ಇದು ಸಾದರಪಡಿಸುತ್ತದೆ.
ಸಿ. ಪಿ. ರಾಧಾಕೃಷ್ಣನ್
ಭಾರತದ ಉಪರಾಷ್ಟ್ರಪತಿ
ವರ್ತಮಾನದ ಬದುಕು, ಸತ್ಯದ ಮಹತ್ವ ಸಾರಿದ ಧೀಮಂತ
ದೇವಾಲಯಗಳಲ್ಲಿ ಉತ್ಸವಗಳನ್ನು ಆಚರಿಸಲಾಗುವ ಚಿತ್ರಾ ಪೌರ್ಣಮಿಯ ಈ ಶುಭ ದಿನದಂದು, ಪ್ರತಿ ಮನೆಯಲ್ಲೂ ಸಮೃದ್ಧಿ ಬೆಳೆಯಲಿ ಎಂದು ನಾನು ಪ್ರಾರ್ಥಿಸುತ್ತೇನೆ. ಎಲ್ಲಾ ಸಹೋದರ ಸಹೋದರಿಯರಿಗೆ ಬುದ್ಧ ಪೂರ್ಣಿಮೆಯ ಹೃತ್ಪೂರ್ವಕ ಶುಭಾಶಯಗಳು. ಭಾರತವು ಜಗತ್ತಿಗೆ ನೀಡಿದ ಅನೇಕ ಶ್ರೇಷ್ಠ ಕೊಡುಗೆಗಳಲ್ಲಿ ಬೌದ್ಧ ಧರ್ಮವು ಪ್ರಮುಖವಾದುದು. ಭಗವಾನ್ ಬುದ್ಧನ ಜೀವನ ಮತ್ತು ಅಮೂಲ್ಯ ಬೋಧನೆಗಳು ಪ್ರಪಂಚದಾದ್ಯಂತ ಕೋಟ್ಯಂತರ ಜನರ ಬದುಕಿಗೆ ಬೆಳಕಾಗಿವೆ.
'ತನ್ನನ್ನು ತಾನು ಅರಿಯುವುದು' ಅಥವಾ ಆತ್ಮಸಾಕ್ಷಾತ್ಕಾರದ ಮಹತ್ವವನ್ನು ಭಾರತವು ಇಡೀ ಜಗತ್ತಿಗೆ ಕಲಿಸಿಕೊಟ್ಟಿದೆ. ‘ಬುದ್ಧ’ ಎಂಬ ಪದದ ಅರ್ಥವೇ ‘ಜಾಗೃತಗೊಂಡವನು’ ಅಥವಾ ಅರಿವು ಪಡೆದವನು ಎಂದಾಗಿದೆ. ಮಾನವಕುಲಕ್ಕೆ ಆತ್ಮದ ಅರಿವು ಮೂಡಿಸಲು ಶ್ರಮಿಸಿದ ಈ ಮಹಾತ್ಮನ ಜನನ ಮತ್ತು ಜ್ಞಾನೋದಯ ಎರಡೂ ಒಂದೇ ದಿನದಂದು ಸಂಭವಿಸಿರುವುದು ಅತ್ಯಂತ ವಿಶೇಷವಾಗಿದೆ.
ಸಿರಿವಂತಿಕೆಯಿಂದ ಸರಳತನದತ್ತ:
ರಾಜಕುಮಾರ ಸಿದ್ಧಾರ್ಥ ಎಲ್ಲಾ ಸುಖ-ಸೌಲಭ್ಯಗಳ ನಡುವೆ ಬೆಳೆದವರು. ಆದರೆ, ತಮ್ಮ 29ನೇ ವಯಸ್ಸಿನಲ್ಲಿ ಅರಮನೆಯ ವೈಭೋಗ, ಪತ್ನಿ, ಮಗ ಮತ್ತು ಸಕಲ ಸಂಪತ್ತನ್ನು ತ್ಯಜಿಸಿ ಸತ್ಯದ ಹುಡುಕಾಟಕ್ಕೆ ಹೊರಟರು. ಆರು ವರ್ಷಗಳ ಕಠಿಣ ತಪಸ್ಸಿನ ನಂತರ, ಬೋಧಗಯಾದ ಬೋಧಿ ವೃಕ್ಷದ ಅಡಿಯಲ್ಲಿ ಅವರಿಗೆ ಪರಮ ಜ್ಞಾನೋದಯವಾಯಿತು. ಅಂದಿನಿಂದ ಅವರು ಬುದ್ಧ ಎಂದು ಪ್ರಸಿದ್ಧರಾದರು.
ಬೌದ್ಧ ಧರ್ಮದ ನಾಲ್ಕು 'ಉದಾತ್ತ ಸತ್ಯಗಳು' ಮತ್ತು ನೈತಿಕ ಜೀವನದ ಹಾದಿಯು ಒಂದು ಹೊಸ ತತ್ವಶಾಸ್ತ್ರಕ್ಕೆ ನಾಂದಿ ಹಾಡಿತು. ಇದು ವಿಶ್ವ ಇತಿಹಾಸದಲ್ಲಿ ಭಾರತದ ಗೌರವವನ್ನು ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸಿತು.
ವಾರಾಣಸಿಯ ಸಮೀಪವಿರುವ ಸಾರನಾಥದಲ್ಲಿ, ಅವರು ಐವರು ಬಿಕ್ಕುಗಳಿಗೆ ತಮ್ಮ ಮೊದಲ ಬೋಧನೆಯನ್ನು ನೀಡಿದರು. ‘ಧರ್ಮಚಕ್ರ ಪ್ರವರ್ತನ’ ಎಂದು ಕರೆಯಲ್ಪಡುವ ಈ ಬೋಧನೆಯು ಬೌದ್ಧಧರ್ಮದ ಅಡಿಪಾಯವಾಯಿತು ಮತ್ತು ಬೌದ್ಧಧರ್ಮದ ಔಪಚಾರಿಕ ಆರಂಭಕ್ಕೆ ದಾರಿಯಾಯಿತು.
ಕಾಲಾನಂತರದಲ್ಲಿ, ಬುದ್ಧನ ಬೋಧನೆಗಳಿಗೆ ಮಾರುಹೋಗಿ ಅನೇಕರು ಅನುಯಾಯಿಗಳಾದರು. ಮಗಧದ ರಾಜ ಬಿಂಬಿಸಾರನು ರಾಜಗೃಹದ ''ವೇಣುವನ'' (ಬಿದಿರಿನ ತೋಪು) ವನ್ನು ದಾನವಾಗಿ ನೀಡಿದರೆ, ಅನಾಥಪಿಂಡಿಕ ಎಂಬ ಶ್ರೀಮಂತ ವ್ಯಾಪಾರಿಯು ಇಡೀ ‘ಜೇತವನ’ವನ್ನು ಚಿನ್ನದ ನಾಣ್ಯಗಳಿಂದ ಮುಚ್ಚಿ ಬೌದ್ಧವಿಹಾರವನ್ನು ನಿರ್ಮಿಸಿಕೊಟ್ಟನು. ಇಂತಹ ಕಾರ್ಯಗಳು ಅಂದಿನ ಭಾರತದಲ್ಲಿದ್ದ ಧರ್ಮದ ಮೇಲಿನ ಅಚಲ ನಂಬಿಕೆಯನ್ನು ತೋರಿಸುತ್ತವೆ.
ಬೌದ್ಧವಿಹಾರಗಳು ನಾಲ್ಕು ಉದಾತ್ತ ಸತ್ಯಗಳನ್ನು ಪ್ರಚಾರ ಮಾಡಿದವು: ಆಸೆಯೇ ದುಃಖಕ್ಕೆ ಮೂಲ ಕಾರಣ; ಆಸೆಯನ್ನು ಗೆದ್ದರೆ ಮಾತ್ರ ದುಃಖದಿಂದ ಮುಕ್ತಿ ಸಾಧ್ಯ; ಮತ್ತು ಅಷ್ಟಾಂಗ ಮಾರ್ಗವನ್ನು ಅನುಸರಿಸುವ ಮೂಲಕ ಮನುಷ್ಯನು ನೆಮ್ಮದಿ ಪಡೆಯಬಹುದು.
ಬುದ್ಧನ ಬೋಧನೆಗಳಿವು:
ಭೂತಕಾಲದ ಬಗ್ಗೆ ಚಿಂತಿಸಬೇಡಿ, ವರ್ತಮಾನದಲ್ಲಿ ಬದುಕಿ. ಸತ್ಯಕ್ಕೆ ಹೆಚ್ಚಿನ ಶಕ್ತಿಯಿದೆ. ಮನಸ್ಸು ಎಲ್ಲಾ ಕ್ರಿಯೆಗಳ ಮೂಲವಾಗಿದೆ, ಆದ್ದರಿಂದ ಸಕಾರಾತ್ಮಕ ಆಲೋಚನೆಗಳನ್ನು ಬೆಳೆಸಿಕೊಳ್ಳಿ. ಕಷ್ಟ ಬಂದಾಗ ಹೆದರಿ ಓಡಬೇಡಿ. ಜೀವನದ ಪಯಣವು ಅಂತಿಮವಾಗಿ ವೈಯಕ್ತಿಕವಾದುದು. ಆಧ್ಯಾತ್ಮಿಕ ಹಾದಿಯಲ್ಲಿ ಮುನ್ನಡೆಸಿ. ಮಾತುಗಳು ನೋಯಿಸಬಹುದು, ಆದ್ದರಿಂದ ಮೃದುವಾಗಿ ಮಾತನಾಡಿ. ಪ್ರೀತಿ ಮತ್ತು ಅಹಿಂಸೆ ಅತ್ಯಗತ್ಯ ಎನ್ನುವುದು ಅವರ ಬೋಧನೆ.
‘ಬುದ್ಧಿಯನ್ನು ಮಬ್ಬುಗೊಳಿಸುವ ಮಾದಕ ದ್ರವ್ಯಗಳು ಮತ್ತು ಜೀವಹಿಂಸೆಯನ್ನು ಜ್ಞಾನಿಗಳು ಯಾವತ್ತೂ ಒಪ್ಪುವುದಿಲ್ಲ. ಅರಿವುಳ್ಳವರು ಇವುಗಳಿಂದ ದೂರವಿರುತ್ತಾರೆ. ಹುಟ್ಟು-ಸಾವುಗಳು ಮತ್ತು ಸಾವಿನ ನಂತರದ ಮರುಜನ್ಮವು ನಿದ್ರೆ ಮತ್ತು ಎಚ್ಚರದಷ್ಟೇ ಸಹಜವಾದ ಸತ್ಯ. ಯಾರು ಸತ್ಕರ್ಮಗಳನ್ನು ಮಾಡುತ್ತಾರೋ ಅವರು ಉನ್ನತ ಗತಿಯನ್ನು ಪಡೆಯುತ್ತಾರೆ, ಕೆಟ್ಟ ಕೆಲಸ ಮಾಡುವವರು ಅಪಾರ ಸಂಕಟಕ್ಕೆ ಗುರಿಯಾಗುತ್ತಾರೆ. ಈ ಸತ್ಯವನ್ನು ಅರಿತ ವಿವೇಚನಾಶೀಲರು ಲೌಕಿಕ ವ್ಯಾಮೋಹಗಳನ್ನು ಕಡಿದುಕೊಳ್ಳುತ್ತಾರೆ’ ಹೀಗೆ ತಮಿಳು ಮಹಾಕಾವ್ಯ ಮಣಿಮೇಖಲೈ ಬೌದ್ಧಧರ್ಮದ ಸಾರವನ್ನು ವಿವರಿಸುತ್ತದೆ. (ಆಧಿರೈ ಪಿಚ್ಚೈಯಿಟ್ಟ ಕಾದೈ: 84–90)
ಬುದ್ಧನ ಪಂಚಶೀಲ ತತ್ವ:
ಬುದ್ಧನು ಪಂಚಶೀಲ ಸೂತ್ರ ಬೋಧಿಸಿದನು. ಅಹಿಂಸೆ, ಕಳ್ಳತನ ಮಾಡದಿರುವುದು, ನೈತಿಕ ನಡವಳಿಕೆ, ಸತ್ಯಸಂಧತೆ ಮತ್ತು ಮಾದಕ ವಸ್ತುಗಳಿಂದ ದೂರವಿರುವುದು. ಕೇವಲ ಧರ್ಮವನ್ನಷ್ಟೇ ಅಲ್ಲದೆ, ಮನಸ್ಸೇ ಎಲ್ಲದಕ್ಕೂ ಮೂಲ ಎಂಬ ಮನೋವೈಜ್ಞಾನಿಕ ಸತ್ಯವನ್ನು ಅವರು ತಿಳಿಸಿಕೊಟ್ಟರು. ಒಳ್ಳೆಯ ಆಲೋಚನೆ ಮತ್ತು ನಡವಳಿಕೆಗಳು ಸಮಾಜದಲ್ಲಿ ಶಾಂತಿಯನ್ನು ನೆಲೆಸುವಂತೆ ಮಾಡುತ್ತವೆ. ಕಂಗೆಟ್ಟ ಮನಸ್ಸುಗಳಿಗೆ ಸ್ಪಷ್ಟತೆ ಮತ್ತು ಜ್ಞಾನದ ಬೆಳಕು ನೀಡಿದ ಕಾರಣಕ್ಕಾಗಿ ಅವರನ್ನು ‘ಏಷ್ಯಾದ ಬೆಳಕು’ ಎಂದು ಕರೆಯಲಾಗುತ್ತದೆ.
ಪ್ರಧಾನಮಂತ್ರಿ ನರೇಂದ್ರ ಮೋದಿಯವರು ತಮ್ಮ ''ಮನ್ ಕಿ ಬಾತ್'' ಕಾರ್ಯಕ್ರಮದಲ್ಲಿ ಹೇಳಿದ ಮಾತುಗಳು ಇಲ್ಲಿ ನೆನಪಿಗೆ ಬರುತ್ತವೆ: ‘ಭಗವಾನ್ ಗೌತಮ ಬುದ್ಧನ ಜೀವನ ಸಂದೇಶವು ಇಂದಿಗೂ ಪ್ರಸ್ತುತವಾಗಿದೆ. ಶಾಂತಿಯು ನಮ್ಮೊಳಗಿನಿಂದಲೇ ಶುರುವಾಗುತ್ತದೆ ಎಂದು ಅವರು ಕಲಿಸಿದರು. ನಮ್ಮನ್ನು ನಾವು ಗೆಲ್ಲುವುದೇ ಜಗತ್ತಿನ ಶ್ರೇಷ್ಠ ವಿಜಯ ಎಂದು ಅವರು ತೋರಿಸಿಕೊಟ್ಟರು. ಇಂದಿನ ಜಗತ್ತಿನ ಸಂಘರ್ಷ ಮತ್ತು ಉದ್ವಿಗ್ನತೆಗಳ ನಡುವೆ ಬುದ್ಧನ ಬೋಧನೆಗಳು ಹಿಂದೆಂದಿಗಿಂತಲೂ ಹೆಚ್ಚು ಅಗತ್ಯವಾಗಿವೆ@.
ಸಾಮ್ರಾಟ ಅಶೋಕ , ಒಬ್ಬ ಯುದ್ಧಕೋರ ಆಡಳಿತಗಾರನನ್ನು ಶಾಂತಿ ಮತ್ತು ಅಹಿಂಸೆಯ ಹರಿಕಾರನನ್ನಾಗಿ ಪರಿವರ್ತಿಸಿದ್ದು ಇದೇ ಬೋಧನೆಗಳು.
ಸಾಮ್ರಾಟ ಅಶೋಕನು ದೇಶಾದ್ಯಂತ ಶಾಸನಗಳನ್ನು ಕೆತ್ತಿಸುವ ಮೂಲಕ ಮತ್ತು ಸ್ತೂಪಗಳನ್ನು ನಿರ್ಮಿಸುವ ಮೂಲಕ ಬೌದ್ಧ ಧರ್ಮದ ತತ್ವಗಳನ್ನು ಪ್ರಚಾರ ಮಾಡಿದನು. ಇಂದಿಗೂ ಸಾಂಚಿ ಮತ್ತು ಸಾರನಾಥದ ಸ್ತೂಪಗಳು ವಿಶ್ವದಾದ್ಯಂತ ಪ್ರವಾಸಿಗರನ್ನು ಸೆಳೆಯುತ್ತಿವೆ. ಸಾರನಾಥದ ಅಶೋಕ ಸ್ತೂಪದ ''ಸಿಂಹದ ಲಾಂಛನ''ವೇ ಇಂದು ಭಾರತದ ಅಧಿಕೃತ ರಾಷ್ಟ್ರೀಯ ಲಾಂಛನವಾಗಿದೆ.
ಅಶೋಕನು ಕೇವಲ ದೇಶದೊಳಗೆ ಮಾತ್ರವಲ್ಲದೆ, ಬಿಕ್ಕುಗಳ ಸಹಾಯದೊಂದಿಗೆ ಏಷ್ಯಾದಾದ್ಯಂತ ಬೌದ್ಧ ಧರ್ಮವನ್ನು ಹರಡಿದನು. ಬೌದ್ಧ ಬಿಕ್ಕುಗಳು ತಮಿಳುನಾಡಿನಲ್ಲೂ ಧರ್ಮ ಪ್ರಚಾರ ಮಾಡಿದ್ದರು ಎಂಬುದಕ್ಕೆ ಅಲ್ಲಿನ ಹಲವಾರು ಪ್ರದೇಶಗಳಲ್ಲಿ ಇಂದಿಗೂ ಕಂಡುಬರುವ ಬೌದ್ಧಧರ್ಮದ ಕುರುಹುಗಳೇ ಸಾಕ್ಷಿ.
ಜಗತ್ತಿನೆಲ್ಲೆಡೆ ಹಬ್ಬಿದೆ ಖ್ಯಾತಿ
ನಮ್ಮ ಈ ಪುಣ್ಯಭೂಮಿಯಲ್ಲಿ ಸಾವಿರಾರು ವರ್ಷಗಳಿಂದ ವಿವಿಧ ಆಧ್ಯಾತ್ಮಿಕ ಚಿಂತನೆಗಳು ಮತ್ತು ತತ್ವಶಾಸ್ತ್ರಗಳು ಹುಟ್ಟಿ ಬೆಳೆದಿವೆ. ಅದು ಬೌದ್ಧಧರ್ಮವಿರಲಿ ಅಥವಾ ಜೈನಧರ್ಮವಿರಲಿ, ಯಾವುದೇ ಧರ್ಮವನ್ನಾದರೂ ಭಾರತದಾದ್ಯಂತ ಏಕತೆಯ ಭಾವದಿಂದ ಸ್ವೀಕರಿಸಲಾಗಿದೆ. ಇದು ನಮ್ಮ ದೇಶವು ಸಾಂಸ್ಕೃತಿಕವಾಗಿ ಮತ್ತು ಭಾವನಾತ್ಮಕವಾಗಿ ಮೊದಲಿನಿಂದಲೂ ಒಂದೇ ಎಂಬ ಸತ್ಯವನ್ನು ಸಾಬೀತುಪಡಿಸುತ್ತದೆ.
ನಿರಂತರ ಕಲಿಕೆಗೆ ಒತ್ತು ನೀಡಿದ ಬೌದ್ಧಧರ್ಮವು, ಅತ್ಯಂತ ದೊಡ್ಡ ಮಟ್ಟದಲ್ಲಿ ಶಿಕ್ಷಣ ಸಂಸ್ಥೆಗಳನ್ನು ಮತ್ತು ಗ್ರಂಥಾಲಯಗಳನ್ನು ನಿರ್ಮಿಸಿತು. ಸುಮಾರು 5 ಶತಮಾನದಷ್ಟು ಹಿಂದೆಯೇ, ನಳಂದಾ ವಿಶ್ವವಿದ್ಯಾನಿಲಯವು ಜಗತ್ತಿನ ಶ್ರೇಷ್ಠ ಕಲಿಕಾ ಕೇಂದ್ರವಾಗಿ ಹೊರಹೊಮ್ಮಿತ್ತು. ಅಲ್ಲಿ ಸುಮಾರು 10,000 ವಿದ್ಯಾರ್ಥಿಗಳು ಮತ್ತು 1,500 ಶಿಕ್ಷಕರು ಅಧ್ಯಯನ ಹಾಗೂ ಬೋಧನೆಯಲ್ಲಿ ತೊಡಗಿದ್ದರು ಎಂಬುದು ಹೆಮ್ಮೆಯ ವಿಷಯ.
ನಳಂದಾದಂತೆಯೇ, ತಮಿಳುನಾಡಿನ ಕಾಂಚೀಪುರಂನಲ್ಲೂ ಒಂದು ಸುಪ್ರಸಿದ್ಧ ವಿಶ್ವವಿದ್ಯಾನಿಲಯವಿತ್ತು ಎಂದು ಇತಿಹಾಸದ ದಾಖಲೆಗಳು ಹೇಳುತ್ತವೆ. ವಿಕ್ರಮಶಿಲಾ ಮತ್ತು ಓದಂತಪುರಿಯಂತಹ ವಿಶ್ವವಿದ್ಯಾನಿಲಯಗಳು ಹಾಗೂ ಅಲ್ಲಿ ರಚಿತವಾದ ಅಪಾರ ಸಾಹಿತ್ಯ ಕೃತಿಗಳು, ಭಾರತದ ಬೌದ್ಧಿಕ ಶಕ್ತಿಯನ್ನು ಇಡೀ ಜಗತ್ತಿಗೆ ಪರಿಚಯಿಸಿದವು.
ಬೌದ್ಧ ಶಿಕ್ಷಣ ಕೇಂದ್ರಗಳಲ್ಲಿ ಕಲಿಯಲು ಏಷ್ಯಾದ ಮೂಲೆ ಮೂಲೆಗಳಿಂದ ವಿದ್ವಾಂಸರು ಭಾರತಕ್ಕೆ ಬರುತ್ತಿದ್ದರು. ಚೀನಾದ ಪ್ರಸಿದ್ಧ ಬಿಕ್ಕು ಫಾಹಿಯಾನ್, ಬೌದ್ಧಧರ್ಮದ ಅಧ್ಯಯನಕ್ಕಾಗಿಯೇ ಭಾರತದಲ್ಲಿ 15 ವರ್ಷಗಳ ಕಾಲ ಸಂಚರಿಸಿದ್ದರು. ಹಾಗೆಯೇ, ಮತ್ತೊಬ್ಬ ಚೀನೀ ಬಿಕ್ಕು ಹ್ಯುಯೆನ್ ತ್ಸಾಂಗ್ ಅವರು 16 ವರ್ಷಗಳ ಕಾಲ ಭಾರತದಲ್ಲಿದ್ದು, ನಳಂದಾ ವಿಶ್ವವಿದ್ಯಾನಿಲಯದಲ್ಲಿ ಅಧ್ಯಯನ ಮಾಡಿದ್ದಲ್ಲದೆ ಅಮೂಲ್ಯ ಗ್ರಂಥಗಳನ್ನು ಸಂಗ್ರಹಿಸಿ ತಮ್ಮ ದೇಶಕ್ಕೆ ಕೊಂಡೊಯ್ದರು.
ಹ್ಯುಯೆನ್ ತ್ಸಾಂಗ್ ಬರೆದಿರುವ ಪ್ರವಾಸ ಕಥನಗಳ ಪ್ರಕಾರ, ಅವರು ತಮಿಳುನಾಡಿನ ಕಾಂಚೀಪುರಂಗೆ ಭೇಟಿ ನೀಡಿದ್ದರು. ಅಲ್ಲಿನ ಬೌದ್ಧ ವಿಶ್ವವಿದ್ಯಾನಿಲಯದಲ್ಲಿ ಉಳಿದುಕೊಂಡು ಹಸ್ತಪ್ರತಿಗಳನ್ನು ನಕಲು ಮಾಡಿಕೊಂಡಿದ್ದರು. ಅಷ್ಟೇ ಅಲ್ಲದೆ, ಅಲ್ಲಿನ ವಿದ್ಯಾರ್ಥಿಗಳಿಗಾಗಿ ಅವರು ವಿಶೇಷ ಉಪನ್ಯಾಸಗಳನ್ನು ನೀಡಿದ್ದರು ಎಂಬ ಮಾಹಿತಿ ಇದೆ.
ತೀವ್ರವಾದ ತಪಸ್ಸಿನಿಂದಾಗಿ ಬುದ್ಧನು ದೈಹಿಕವಾಗಿ ಬಹಳ ಬಳಲಿದ್ದನು. ಆತನ ಸ್ಥಿತಿಯನ್ನು ಕಂಡು ಕನಿಕರಗೊಂಡ ಸುಜಾತೆ, ಪ್ರೀತಿಯಿಂದ ಹಾಲಿನ ಪಾಯಸವನ್ನು (ಕ್ಷೀರಾನ್ನ) ಅರ್ಪಿಸಿದಳು. ಇದು ಬುದ್ಧನಿಗೆ ಪುನಶ್ಚೇತನ ನೀಡಿ ಪ್ರಾಣ ಉಳಿಸಿದ್ದಲ್ಲದೆ, ಬೋಧಿ ವೃಕ್ಷದ ಅಡಿಯಲ್ಲಿ ಜ್ಞಾನೋದಯಕ್ಕಾಗಿ ಧ್ಯಾನ ಮಾಡಲು ಬೇಕಾದ ಶಕ್ತಿಯನ್ನು ನೀಡಿತು. ಆಕೆಯ ಈ ಮಮತೆ ಮತ್ತು ದಯೆಯ ನೆನಪಿಗಾಗಿ, ಇಂದಿಗೂ ಬುದ್ಧ ಪೂರ್ಣಿಮೆಯ ದಿನದಂದು ಪಾಯಸವನ್ನು ತಯಾರಿಸಿ ಅರ್ಪಿಸುವ ಸಂಪ್ರದಾಯವಿದೆ.
‘ಪ್ರೀತಿಯೇ ಸಂತೋಷದ ಸೆಲೆ, ಪ್ರೀತಿಯೇ ಜಗತ್ತಿನ ಬೆಳಕು ಮತ್ತು ಪ್ರೀತಿಯೇ ಎಲ್ಲಕ್ಕಿಂತ ದೊಡ್ಡ ಶಕ್ತಿ’ ಎಂಬ ಬುದ್ಧನ ಬೋಧನೆಗಳು ಇಂದಿನ ಆಧುನಿಕ ಜಗತ್ತಿಗೂ ಅತ್ಯಂತ ಅಗತ್ಯವಾಗಿವೆ. ಈ ಜಗತ್ತಿನಾದ್ಯಂತ ಪ್ರೀತಿ ಮತ್ತು ಶಾಂತಿ ಸದಾ ನೆಲೆಸಲಿ ಎಂದು ನಾನು ಪ್ರಾರ್ಥಿಸುತ್ತೇನೆ.


