ಬೆರಗು ಮೂಡಿಸಿದ ಬೆಂಗಳೂರು ಕರಗ!
ಜನಪ್ರಿಯ ಬೆಂಗಳೂರು ಕರಗವನ್ನು ಭಾನುವಾರ ಲಕ್ಷಾಂತರ ಜನರು ಕಣ್ತುಂಬಿಕೊಂಡರು. ನಗರದ ನಾಲ್ಕೂ ದಿಕ್ಕಿನಲ್ಲೂ ಕರಗದ ಮೆರವಣಿಗೆ ವೈಭವ ಕಂಡು ಬಂದು, ‘ಗೋವಿಂದ ಗೋವಿಂದ’ ನಾಮಸ್ಮರಣೆ ಎಲ್ಲೆಲ್ಲೂ ಮೊಳಗಿತು.
ಭಕ್ತರ ಹರ್ಷೋದ್ಗಾರ ಹಾಗೂ ‘ಗೋವಿಂದಾ ಗೋವಿಂದ’ ನಾಮಸ್ಮರಣೆ ನಡುವೆ ಐತಿಹಾಸಿಕ ಬೆಂಗಳೂರು ಕರಗ(Bengaluru Karaga) ಶಕ್ತೋಯತ್ಸವದ ಅದ್ಧೂರಿ ಮೆರವಣಿಗೆ ವಿಜೃಂಭಣೆಯಿಂದ ಜರುಗಿತು.
ಚೈತ್ರ ಪೌರ್ಣಿಮೆಯ ರಾತ್ರಿ ತಿಗಳರಪೇಟೆ ಹಾಗೂ ಸುತ್ತಲಿನ ಪ್ರದೇಶಗಳಲ್ಲಿ ಝಗಮಗಿಸುವ ಬೆಳಕು, ಓಲಗದ ಸದ್ದು ಇಡೀ ಪೇಟೆಯನ್ನು ಆವರಿಸಿತ್ತು. ಧರ್ಮರಾಯಸ್ವಾಮಿ ದೇವಸ್ಥಾನದಿಂದ ಶನಿವಾರ ತಡರಾತ್ರಿ 3.08 ಗಂಟೆಗೆ ಕರಗ ಹೊರ ಬರುತ್ತಿದ್ದಂತೆ ಭಕ್ತರ ಹರ್ಷೋದ್ಗಾರ ಮುಗಿಲು ಮುಟ್ಟಿತ್ತು. ನಗರದ ನಾಲ್ಕೂ ದಿಕ್ಕಿನಲ್ಲಿ ಮೆರವಣಿಗೆ ಸಾಗಿ ಭಾನುವಾರ ಬೆಳಗ್ಗೆ 10 ಗಂಟೆಗೆ ದೇವಾಲಯ ಸೇರುವ ಮೂಲಕ ಶಕ್ತೋ್ಯತ್ಸವ ಸಂಪನ್ನಗೊಂಡಿತು.
"
ಸದಾ ಜನಜಂಗುಳಿ ಹಾಗೂ ಸಂಚಾರ ದಟ್ಟಣೆಯಿಂದ ಗಿಜಿಗುಡುತ್ತಿದ್ದ ನಗರದಲ್ಲಿ ಶನಿವಾರ ರಾತ್ರಿಯಿಡೀ ಗೆಜ್ಜೆ ಸದ್ದು, ಪೂಜಾ ಕುಣಿತ, ವಾದ್ಯಗಳ ಮೇಳ ಮೊಳಗಿತ್ತು.
ಶನಿವಾರ ಸಂಜೆ ಸುರಿದ ಭಾರಿ ಮಳೆಯ ನಡುವೆಯೂ ದೇವಾಲಯದಲ್ಲಿ ಹೋಮ ಹವನ ಸೇರಿ ಧಾರ್ಮಿಕ ವಿಧಿವಿಧಾನಗಳು ಸಾಂಗವಾಗಿ ನಡೆದವು. ಮಳೆಯಿಂದಾಗಿ ಕರಗ ಪೂಜಾ ವಿವಿಧಿ- ವಿಧಾನಗಳು ತಡವಾದ್ದರಿಂದ ಹೂವಿನಿಂದ ಅಲಂಕೃತಗೊಂಡಿದ್ದ ಕರಗ ಹೊತ್ತ ಜ್ಞಾನೇಂದ್ರ ಅವರು ತಡರಾತ್ರಿ 2.40ಕ್ಕೆ ಗರ್ಭಗುಡಿಯಿಂದ ಹೊರ ಬಂದು ದೇವಾಲಯದ ಪ್ರಾಂಗಣದಲ್ಲಿ ಮೂರು ಪ್ರದಕ್ಷಿಣೆ ಹಾಕಿ ಹೊರ ಬಂದರು. ಈ ವೇಳೆ ದರ್ಶನಕ್ಕಾಗಿ ಕಾಯುತ್ತಿದ್ದ ಭಕ್ತರು ದೇವರ ಮೇಲೆ ಹೂವಿನ ಮಳೆಗರೆದರು. ಸಹಸ್ರ ಭಕ್ತರು ಭಾವ ಪರವಶರಾಗಿ ‘ಗೋವಿಂದ ಗೋವಿಂದ’ ಎಂದು ನಾಮಸ್ಮರಣೆಗೈದರು.
ಕರಗವು ದೇವಾಲಯದಿಂದ ರಾಜಬೀದಿ ಸೇರಿ ಹಲಸೂರು ಪೇಟೆ ಆಂಜನೇಯ ಮತ್ತು ಪ್ರಸನ್ನ ಗಂಗಾಧರೇಶ್ವರಸ್ವಾಮಿ ದೇವಾಲಯಗಳಲ್ಲಿ ಪೂಜೆ ಸ್ವೀಕರಿಸಿ ಮುಂದೆ ಸಾಗಿತು. ಹೂವು ಮತ್ತು ತಳಿರು ತೋರಣಗಳಿಂದ ಸಿಂಗಾರಗೊಂಡಿದ್ದ ರಥದೊಂದಿಗೆ ಉತ್ಸವ ಮೂರ್ತಿಗಳ ಮೆರವಣಿಗೆ ಸಾಗಿತು. ವೀರಕುಮಾರರು ರಕ್ಷಕರಾಗಿ ನಿರ್ದಿಷ್ಟಸ್ಥಳಗಳಲ್ಲಿ ಅಲಗು ಸೇವೆ ಮಾಡುತ್ತ ಕರಗದೊಂದಿಗೆ ಸಾಗಿದರು. ಕರಗಧಾರಿಗಳ ಸ್ವಾಗತಕ್ಕೆ ಮನೆಗಳ ಮುಂದೆ ರಂಗೋಲಿ, ತಳಿರು ತೋರಣಗಳಿಂದ ಅಲಂಕಾರ ಮಾಡಲಾಗಿತ್ತು.
"
Garuda Purana: ಜೀವನ ಚೆನ್ನಾಗಿರಬೇಕಂದ್ರೆ ಈ 5 ರೀತಿಯ ಜನರಿಂದ ದೂರವಿರಿ
ನಗರ್ತಪೇಟೆಯ ವೇಣುಗೋಪಾಲ ಸ್ವಾಮಿ, ಸಿದ್ದಣ್ಣಗಲ್ಲಿಯ ಭೈರೇದೇವರ ದೇವಸ್ಥಾನ, ಕಬ್ಬನ್ಪೇಟೆಯ ರಾಮಸೇವಾ ಮಂದಿರ, ಬಸವನಗುಡಿ, ಗಾಣಿಗರಪೇಟೆಯ ಚನ್ನರಾಯಸ್ವಾಮಿ, ಚಾಮುಂಡೇಶ್ವರಿ ದೇವಸ್ಥಾನದ ಮೂಲಕ ನಗರದ ನಾಲ್ಕೂ ದಿಕ್ಕುಗಳಲ್ಲಿ ಕರಗ ಸಂಚರಿಸಿತು.
ಮಸ್ತಾನ್ ಸಾಬ್ ದರ್ಗಾಕ್ಕೆ ಭೇಟಿ
ಕರಗ ಶಕ್ತೋಯತ್ಸವ ಪಾರಂಪರಿಕವಾಗಿ ದರ್ಶನ ನೀಡುತ್ತಿದ್ದ ಮಸ್ತಾನ್ ಸಾಬ್ ದರ್ಗಾಕ್ಕೆ ಹೋಗದಂತೆ ಕೆಲವರು ತಡೆಗಟ್ಟುವುದಾಗಿ ತಿಳಿಸಿದ್ದರು. ಈ ಬಗ್ಗೆ ಪೊಲೀಸರು ಮತ್ತು ಸ್ಥಳೀಯ ಜನಪ್ರತಿನಿಧಿಗಳು ಅವರೊಂದಿಗೆ ಚರ್ಚೆ ನಡೆಸಿ ಧಾರ್ಮಿಕ ಆಚರಣೆಗೆ ಚ್ಯುತಿ ತರದಂತೆ ಎಚ್ಚರಿಕೆ ನೀಡಿದ್ದರು. ಶನಿವಾರ ತಡರಾತ್ರಿ ಹೊರಟ ಕರಗ ಮೆರವಣಿಗೆ ಹಿಂದಿನ ಸಂಪ್ರದಾಯದಂತೆ ಅಕ್ಕಿಪೇಟೆಯಲ್ಲಿರುವ ಮಸ್ತಾನ್ ಸಾಬ್ ದರ್ಗಾಕ್ಕೆ ಭೇಟಿ ನೀಡಿತು.
"
ವಿವಿಧೆಡೆಯಿಂದ ಭಕ್ತರ ದಂಡು
ಕೋವಿಡ್ನಿಂದ ಕಳೆದ ಎರಡು ವರ್ಷ ದೇವಸ್ಥಾನಕ್ಕೆ ಸೀಮಿತಗೊಂಡು ಪೂಜೆ-ಪುನಸ್ಕಾರ ಮತ್ತು ಹೋಮ ಹವನಗಳೊಂದಿಗೆ ಸರಳವಾಗಿ ನಡೆದಿದ್ದ ಕರಗ ಮಹೋತ್ಸವ, ಈ ವರ್ಷ ಅದ್ಧೂರಿಯಾಗಿ ನಡೆಯಿತು. ಉತ್ಸವ ಸಾಗಿದ ರಸ್ತೆಗಳಲ್ಲಿ ಸಾಲುಗಟ್ಟಿನಿಂತಿದ್ದ ಭಕ್ತರು ಕರಗದ ದರ್ಶನ ಪಡೆದು ಪುಳಕೀತರಾದರು. ಕರಗ ಉತ್ಸವ ವೀಕ್ಷಿಸಲು ಮಾಲೂರು, ಹೊಸಕೋಟೆ, ನೆಲಮಂಗಲ, ತುಮಕೂರು, ದೊಡ್ಡಬಳ್ಳಾಪುರ, ಚಿಕ್ಕಬಳ್ಳಾಪುರ, ಕೋಲಾರ, ತಮಿಳುನಾಡಿನ ಹೊಸೂರು, ಕೃಷ್ಣಗಿರಿ, ಧರ್ಮಪುರಿ, ಸೇಲಂ, ಸುಳಗಿರಿ, ಚಪ್ಪಡಿ, ಡೆಂಕಣಿಕೋಟೆ, ಗುಮ್ಮಳಾಪುರ, ಈರೋಡ್, ಸೇಲಂ ಮುಂತಾದ ಕಡೆಗಳಿಂದ ಭಕ್ತಸಾಗರ ಆಗಮಿಸಿತ್ತು.
"
Davanagere: ಬೆಟ್ಟದ ಮೇಲಿಂದ ಕೆಳಕ್ಕೆ ಇಳಿಯುವ ರಥೋತ್ಸವ: ಇದು ಭಾರತ ದೇಶದಲ್ಲಿಯೇ ಅಪರೂಪ
ಪುನೀತ್ ಭಾವಚಿತ್ರ ಪ್ರದರ್ಶನ
ಕರಗ ಉತ್ಸವದಲ್ಲಿ ವೀರಕುಮಾರರು ನಟ ಪುನೀತ್ ರಾಜ್ಕುಮಾರ್ ಭಾವಚಿತ್ರ ಹಿಡಿದು ಪ್ರದರ್ಶಿಸಿದರು. ಅಪ್ಪು ಫೋಟೋ ಹಿಡಿದು ಬಂದ ವೀರಕುಮಾರರ ತಂಡ ಅಪ್ಪುಗೆ ಜೈಕಾರ ಹಾಕಿ ಅಭಿಮಾನ ವ್ಯಕ್ತಪಡಿಸಿದರು.