ಅಘೋರಿಗಳು ಚಿರಂಜೀವಿಗಳಾ? ಕೃತಯುಗದಿಂದ ಇಂದಿಗೂ ಬದುಕಿರುವ ಎಂಟನೇ ಚಿರಂಜೀವಿ ಯಾರವನು?

Synopsis
ಅಕ್ಷತ್ ಗುಪ್ತಾ ಎಂಬ ಇಂಗ್ಲಿಷ್ ಲೇಖಕ, ಹಿಂದಿ ಸಿನಿಮಾಗಳ ಸ್ಕ್ರೀನ್ ರೈಟರ್ ಒಂದು ಪಾಡ್ಕಾಸ್ಟ್ನಲ್ಲಿ ಹೇಳಿದ ಮಾತುಗಳು ಇದೀಗ ಕುತೂಹಲ ಮೂಡಿಸಿವೆ. ಅವರ ಪ್ರಕಾರ ಅಘೋರಿಗಳು ಚಿರಂಜೀವಿಗಳಂತೆ, ಎಂಟನೇ ಚಿರಂಜೀವಿಯನ್ನು ಅವರು ಕಂಡಿದ್ದಾರಂತೆ! ಈ ವೈರಲ್ ವಿಡಿಯೋ ಬಗ್ಗೆ ತಿಳಿಯಬನ್ನಿ.
ಅಕ್ಷತ್ ಗುಪ್ತಾ ಅವರು ಇಂಗ್ಲಿಷ್ ಲೇಖಕ, ಹಿಂದಿ ಸಿನಿಮಾಗಳ ಸ್ಕ್ರೀನ್ ರೈಟರ್. ಅವರು ಒಂದು ಪಾಡ್ಕಾಸ್ಟ್ನಲ್ಲಿ ಹೇಳಿದ ಮಾತುಗಳು ಈಗ ವೈರಲ್ ಆಗುತ್ತಿವೆ. ಅದು ಹೀಗಿದೆ: "ಅವನೊಬ್ಬ ಅಘೋರಿ ನಮಗೆ ದೊರೆತ. ನಮಗೆ ಸಿಕ್ಕಿದ ಆತನನ್ನು ಕರೆದುಕೊಂಡು ಬಂದು ಮಾತಿಗೆ ಕೂರಿಸಿದೆವು. ಆತನಿಗೆ ನಾರ್ಕೋ ಇಂಜೆಕ್ಷನ್ ನೀಡಿದೆವು ಹಾಗೂ ಹಿಪ್ನೊಟೈಸ್ ಮಾಡಿದೆವು. ನಾರ್ಕೋಟಿಕ್ ಟೆಸ್ಟ್ ನಂತರ ಆತನಿಗೆ ಸುಳ್ಳು ಹೇಳುವುದಕ್ಕೆ ಅವಕಾಶವಿಲ್ಲ. ಸತ್ಯವನ್ನೇ ಹೇಳುತ್ತಾನೆ. ಆತ ಹೇಳಿದ್ದ- ನನ್ನ ಹೆಸರು ಓಂ ಶಾಸ್ತ್ರಿ. ನನಗೆ ವಯಸ್ಸು 40 ವರ್ಷ. ನನ್ನ ವಯಸ್ಸು ವೃದ್ಧಿಸುವುದಿಲ್ಲ. ನಾನು ಸಾಯುವುದೂ ಇಲ್ಲ. ನಾನು ಸತ್ಯಯುಗದಿಂದ ಈ ಭೂಮಿಯಲ್ಲಿದ್ದೀನಿ. ನಾನು 2020ರಲ್ಲಿದ್ದೀನಿ ಅಂತ ನನಗೆ ಗೊತ್ತಿದೆ. ತ್ರೇತಾಯುಗದಲ್ಲಿ ರಾಮನನ್ನೂ ದ್ವಾಪರಯುಗದಲ್ಲಿ ಕೃಷ್ಣನನ್ನೂ ನೋಡಿದ್ದೀನಿ. ಆದ್ರೆ ನಾನು ನಿಮಗೆ ಗೊತ್ತಿರೋ ಏಳು ಚಿರಂಜೀವಿಗಳಲ್ಲಿ ಯಾರೊಬ್ಬನೂ ಅಲ್ಲ! ನಾನು ಎಂಟನೇ ಚಿರಂಜೀವಿ, ಭೂಮಿಯಲ್ಲಿ ಯಾರಿಗೂ ನನ್ನ ಬಗ್ಗೆ ಗೊತ್ತಿಲ್ಲ."
ಅಕ್ಷತ್ ಗುಪ್ತಾ ಅವರ ಮಾತುಗಳು ತುಂಬಾ ಮಂದಿಯನ್ನು ಚಕಿತಗೊಳಿಸಿವೆ. ಅಘೋರಿಗಳು ಚಿರಂಜೀವಿಗಳಾ ಹಾಗಾದ್ರೆ? ಎಂಬ ಅನುಮಾನವೂ ಮೂಡಿದೆ. ಕೆಲವು ವಿಚಾರಗಳು ಇದನ್ನು ಸಮರ್ಥಿಸುವಂತಿವೆ. ಭಾರತದ ಹಿಂದೂ ಪರಂಪರೆಯಲ್ಲಿ ಸನ್ಯಾಸಿಗಳಿಗೆ ಹೆಚ್ಚಿನ ಪ್ರಾಖ್ಯತೆಯನ್ನು ಕೊಡಲಾಗಿದೆ. ಅದರಲ್ಲೂ ದಿನದ 24 ಗಂಟೆಯೂ ಕಾಲಭೈರವನ ಧ್ಯಾನದಲ್ಲಿರುವ ಅಘೋರಿಗಳಿಗೆ ಹೆಚ್ಚಿನ ಮಹತ್ವ ನೀಡಲಾಗಿದ್ದು, ಸಾಕ್ಷಾತ್ ಶಿವನ ಸ್ವರೂಪಿಗಳೇ ಎಂದು ಇವರನ್ನು ಭಾವಿಸಲಾಗಿದೆ. ಇನ್ನು ಅಘೋರಿಗಳಿಗೆ ಪ್ರಾರಂಭವೂ ಇಲ್ಲ ಅಂತ್ಯವೂ ಇಲ್ಲ ಎಂದು ಹೇಳುತ್ತಾರೆ.
ಅಘೋರಿ ಎಂಬ ಪದವು ವಾಸ್ತವವಾಗಿ ಸಂಸ್ಕೃತ ಪದ ʼಅಘೋರ್ʼನಿಂದ ಬಂದಿದೆ. ಇದರರ್ಥ ನಿರ್ಭೀತ. ಅಘೋರಿಗಳನ್ನು ಶಿವನ ಆರಾಧಕರು ಎಂದು ಪರಿಗಣಿಸಲಾಗುತ್ತದೆ. ಶಿವನ ಹೊರತಾಗಿ, ಅಘೋರಿ ಸಾಧುಗಳನ್ನು ಶಕ್ತಿಯ ರೂಪವಾದ ಕಾಳಿಯ ಆರಾಧಕರು ಎಂದು ಪರಿಗಣಿಸಲಾಗುತ್ತದೆ. ಈ ಕಾರಣಕ್ಕಾಗಿ ಅವರು ತಮ್ಮ ದೇಹಕ್ಕೆ ಬೂದಿಯನ್ನು ಹಚ್ಚಿಕೊಳ್ಳುತ್ತಾರೆ. ಅಘೋರಿ ಸಾಧುಗಳು ಏಕಾಂತದಲ್ಲಿ ವಾಸಿಸಲು ಬಯಸುತ್ತಾರೆ. ಸಾರ್ವಜನಿಕವಾಗಿ ತುಂಬಾ ವಿರಳವಾಗಿ ಕಾಣಿಸಿಕೊಳ್ಳುತ್ತಾರೆ. ಕುಂಭದಂತಹ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಮಾತ್ರ ಅಘೋರಿಗಳು ಸಾರ್ವಜನಿಕವಾಗಿ ಕಾಣಿಸಿಕೊಳ್ಳುತ್ತಾರೆ. ಅಘೋರಿಗಳಿಗೆ ಅತಿ ಇಷ್ಟವಾದ ಜಾಗ ಅಂದರೆ ಅದು ಸ್ಮಶಾನ ಅಥವಾ ಯಾರೂ ಹೋಗದೇ ಇರುವಂತಹ ತುಂಬಾ ಭಯಾನಕ ಸ್ಥಳಗಳಲ್ಲಿ ವಾಸ ಮಾಡ್ತಾರೆ. ಇದಕ್ಕೆ ಬಲವಾದ ಕಾರಣ ಏನೆಂದರೆ ಯಾರೂ ಇಲ್ಲದಿರುವಂತಹ ತುಂಬ ನಿರ್ಜನ ಪ್ರದೇಶಗಳು ಅಘೋರಿಗಳು ತಮ್ಮ ಯೋಗ, ಮಂತ್ರ ಸಿದ್ದಿಗಳನ್ನು ಪಡೆಯುವಲ್ಲಿ ಹಾಗೂ ಭಗವಂತನನ್ನು ಸಾಕಾತ್ಕಾರ ಮಾಡಿಕೊಳ್ಳಲು ಅನೂಕೂಲಕರವಾಗಿರುವುದು.
Indian Mythology: ಸೀತಾದೇವಿ 14 ವರ್ಷ ಒಂದೇ ಸೀರೆಯುಟ್ಟ ಕತೆ ನಿಮಗೆ ಗೊತ್ತೆ?
ಅಕ್ಷತ್ ಗುಪ್ತಾ ಹೇಳಿರೋ ಎಂಟನೇ ಚಿರಂಜೀವಿ ಯಾರಿರಬಹುದು? ನಮಗೆ ಗೊತ್ತಿರುವ ಏಳು ಚಿರಂಜೀವಿಗಳು- ಪರಶುರಾಮ, ವಿಭೀಷಣ, ವೇದವ್ಯಾಸ, ಬಲಿ ಚಕ್ರವರ್ತಿ, ಅಶ್ವತ್ಥಾಮ, ಕೃಪಾಚಾರ್ಯ ಹಾಹೂ ಹನುಮಂತ. ಎಂಟನೇ ಚಿರಂಜೀವಿ ಯಾರಿರಬಹುದು ಎಂದು ಹಲವರು ಮಾರ್ಕಂಡೇಯ ಮುನಿ ಇರಬಹುದು ಎಂದು ಊಹಿಸಿದ್ದಾರೆ. ಯಾಕೆಂದರೆ ಕೃತಯುಗದಲ್ಲಿ ಪ್ರಳಯ ನಡೆದ ಸಂದರ್ಭದಲ್ಲಿ ನೀರಿನಿಂದ ಮುಳುಗಿದ ಬ್ರಹ್ಮಾಂಡ ಸಮುದ್ರದಲ್ಲಿ ಆಲದೆಲೆಯ ಮೇಲೆ ಮಲಗಿದ ಬಾಲಮುಕುಂದನನ್ನು ಮಾರ್ಕಂಡೇಯ ಮುನಿ ಕಾಣುತ್ತಾನೆ ಎಂಬ ಕತೆಯಿದೆ. ಅದೇ ಕತೆಯನ್ನು ಅದೇ ಮಾರ್ಕಂಡೇಯ ಮುನಿ ದ್ವಾಪರಯುಗದಲ್ಲಿ ಧರ್ಮರಾಯನಿಗೆ ಹೇಳುತ್ತಾರೆ. ಹಾಗಾಗಿ ಅವರೇ ಇರಬಹುದು ಎನ್ನಲಾಗಿದೆ.
ಮಹಾಕುಂಭ ಮೇಳದಲ್ಲಿ ಎಲ್ಲರ ಗಮನಸೆಳೆದಿರುವ ರಷ್ಯಾದ 7 ಅಡಿ ಎತ್ತರದ ಮಸ್ಕ್ಯುಲರ್ ಬಾಬ
ಆದರೆ ಕೆಲವರು ಕತೆ ಸುಳ್ಳಿರಬಹುದು ಎಂದೂ ಶಂಕಿಸಿದ್ದಾರೆ. ಎಂಟನೇ ಚಿರಂಜೀವಿ ಅಷ್ಟು ಸುಲಭವಾಗಿ ನಿಮ್ಮ ಕೈಗೆ ಹೇಗೆ ಸಿಕ್ಕಿದ? ಅಷ್ಟು ಮಹಿಮಾವಂತನಾದ ಅವನನ್ನು ಹಿಪ್ನೊಟೈಸ್ ಮಾಡಲು, ನಾರ್ಕೋ ಟೆಸ್ಟ್ ಮಾಡಲು ಸಾಧ್ಯವೇ? ಆತನನ್ನು ಮಾತಾಡಿಸಿದ್ದಕ್ಕೆ ಸಾಕ್ಷಿ ಎಲ್ಲಿದೆ? ಅದನ್ನೇಕೆ ರೆಕಾರ್ಡ್ ಮಾಡಿಕೊಂಡಿಲ್ಲ? ಹೋಗಲಿ, ಅವನೀಗ ಎಲ್ಲಿದ್ದಾನೆ? ಎಂದೆಲ್ಲ ಪ್ರಶ್ನಿಸಿದ್ದಾರೆ. ಹೀಗಾಗಿ ಇದೆಲ್ಲ ಸುಳ್ಳಿನ ಕಂತೆ ಎಂದು ಹಲವರು ಟ್ರೋಲ್ ಮಾಡಿದ್ದಾರೆ.