ಬ್ಯುಸಿನೆಸ್ ಪ್ರಪೋಸಲ್ ಅಂತ ಮೊದಲು ನನ್ನನ್ನು ಸಂಪರ್ಕಿಸಿದ್ದು ಇನ್ಸ್ಟಾಗ್ರಾಂ ಮೂಲಕ. ಆಮೇಲೆ ನಡೆದಿದ್ದೇ ಬೇರೆ ಎಂದು ಗಾಯಕಿ ಮತ್ತು ಉದ್ಯಮಿ ಅಭಿರಾಮಿ ಸುರೇಶ್ ಹೇಳಿಕೊಂಡಿದ್ದಾರೆ.
ತಮ್ಮ ಬ್ಯುಸಿನೆಸ್ನಲ್ಲಿ ಆದ ಆರ್ಥಿಕ ವಂಚನೆ ಬಗ್ಗೆ ಗಾಯಕಿ ಮತ್ತು ಉದ್ಯಮಿ ಅಭಿರಾಮಿ ಸುರೇಶ್ ಇತ್ತೀಚೆಗೆ ಮಾತನಾಡಿದ್ದರು. ತಮ್ಮ ಬ್ಯುಸಿನೆಸ್ ವಿಸ್ತರಿಸಬೇಕು, ವರ್ಷಗಳಿಂದ ಕಂಡ ಕನಸನ್ನು ನನಸು ಮಾಡಬೇಕು ಅಂದುಕೊಳ್ಳುವಾಗ ಒಂದು ದೊಡ್ಡ ಆರ್ಥಿಕ ವಂಚನೆ ಜಾಲದಲ್ಲಿ ಸಿಲುಕಿದ್ದಾಗಿ ಅವರು ಹೇಳಿಕೊಂಡಿದ್ದರು. ನೋಡೋಕೆ ತುಂಬಾನೇ ನಂಬಿಕಸ್ಥ, ಸಭ್ಯ ಮತ್ತು ಪ್ರೊಫೆಷನಲ್ ಆಗಿ ಕಾಣುತ್ತಿದ್ದ ವ್ಯಕ್ತಿಯೇ ಈ ಮೋಸ ಮಾಡಿದ್ದಾನೆ ಅಂತಾನೂ ಹೇಳಿದ್ದರು. ಈಗ, ಈ ಘಟನೆ ಬಗ್ಗೆ ಅಭಿರಾಮಿ ಇನ್ನಷ್ಟು ಮಾಹಿತಿ ಹಂಚಿಕೊಂಡಿದ್ದಾರೆ.

ಮೊದಲು ಅವರು ಇನ್ಸ್ಟಾಗ್ರಾಂ ಮೂಲಕ ಬ್ಯುಸಿನೆಸ್ ಪ್ರಪೋಸಲ್ ಅಂತ ನನ್ನನ್ನು ಸಂಪರ್ಕಿಸಿದ್ರು. ನಮ್ಮ ಕಂಪನಿಯ ಎಲ್ಲಾ ವಿವರಗಳನ್ನು ಹಲವು ಹಂತಗಳಲ್ಲಿ ಪರಿಶೀಲನೆ ಮಾಡಿದ್ರು. ಕಂಪನಿಗೆ ಸಾಲ ಮರುಪಾವತಿ ಮಾಡುವ ಶಕ್ತಿ ಇದೆಯಾ ಅಂತ ತಿಳಿದುಕೊಳ್ಳೋಕೆ ಸರ್ಪ್ರೈಸ್ ವಿಸಿಟ್ ಕೂಡ ಮಾಡಿದ್ರು. ಎಲ್ಲವೂ ತುಂಬಾ ವ್ಯವಸ್ಥಿತವಾಗಿ, ಹಂತ ಹಂತವಾಗಿ ನಡೆದಿದ್ದರಿಂದ ಮತ್ತು ಅವರು ತುಂಬಾ ಕನ್ವಿನ್ಸಿಂಗ್ ಆಗಿ ಮಾತನಾಡಿದ್ದರಿಂದ ಇದು ವಂಚನೆ ಅಂತ ನನಗೆ ಅನ್ನಿಸಲೇ ಇಲ್ಲ.
ಪದೇ ಪದೇ ಕಾಲ್ ಮಾಡಿ, ತುಂಬಾನೇ ನಂಬಿಕೆ ಬರುವ ಹಾಗೆ ಅವರು ಮಾತಾಡಿದ್ರು. ಯಾವುದೇ ಸೆಕ್ಯುರಿಟಿ ಇಲ್ಲದೆ ದೊಡ್ಡ ಮೊತ್ತದ ಲೋನ್ ಕೊಡ್ತೀವಿ ಅಂದಾಗ, ನಮ್ಮ ಕನಸುಗಳ ಜೊತೆ ನಾವು ಅದನ್ನ ಕನೆಕ್ಟ್ ಮಾಡಿಕೊಂಡು ಬಿಡ್ತೀವಿ. ಇದೇನೂ ಒಂದೇ ಕಾಲ್ ಮಾಡಿ, ದುಡ್ಡು ಕಳಿಸಿ ಅಂತ ಹೇಳೋ ತರ ಇರಲಿಲ್ಲ. ಕೊನೆ ಹಂತದಲ್ಲಿ ಪ್ರೊಸೆಸಿಂಗ್ ಫೀ ಅಂತ ನಾವು ಹಣ ಕೊಡಬೇಕಾಗಿ ಬಂದಾಗ ನನಗೆ ಸಣ್ಣ ಅನುಮಾನ ಬಂದಿತ್ತು. ಆದರೂ, ಮೊದಲ ಹಂತದ ಎಲ್ಲಾ ಪ್ರಕ್ರಿಯೆಗಳು ಮುಗಿದಿದ್ದರಿಂದ ಹಣ ಕೊಟ್ಟೆ. ಕಷ್ಟಪಟ್ಟು ಸಂಪಾದಿಸಿದ ಹಣ ಸುಮ್ಮನೆ ಹೋದರೆ ಯಾರಿಗಾದರೂ ಬೇಜಾರಾಗುತ್ತೆ. ಅದಕ್ಕೇ ಈ ವಿಷಯಗಳನ್ನು ಹಂಚಿಕೊಂಡೆ.
ಹಂಚಿಕೊಂಡರೆ ಪ್ರಯೋಜನವಿಲ್ಲ
ಇದಕ್ಕೇನೂ ನನಗೆ ಯಾರ ಸಹಾನುಭೂತಿಯೂ ಬೇಕಾಗಿಲ್ಲ. ಕಾನೂನು ಕ್ರಮಗಳು ನಡೀತಿರೋದ್ರಿಂದ ಆ ವ್ಯಕ್ತಿಯ ಹೆಸರನ್ನು ನಾನು ಹೇಳುತ್ತಿಲ್ಲ. ಕೇಸ್ ನಡೆಯುವಾಗ, ಆರೋಪಿಗೆ ಅನುಕೂಲವಾಗುವಂತಹ ಯಾವುದೇ ವಿಚಾರ ನಮ್ಮ ಕಡೆಯಿಂದ ಆಗಬಾರದು. ಕಲಿಯುಗದಲ್ಲಿ ಒಳ್ಳೆಯದನ್ನು ಹಂಚಿಕೊಂಡರೆ ಪ್ರಯೋಜನವಿಲ್ಲ. ಆದರೂ, ಈ ತರಹದ ಫ್ರಾಡ್ಗಳು ನಡೀತಾ ಇದೆ ಅಂತ ನಿಮಗೆ ತಿಳಿಸೋಕೆ ಈ ವಿಡಿಯೋ ಮಾಡಿದ್ದು. ನಿಮ್ಮ ಬ್ಯುಸಿನೆಸ್ನ ಆರ್ಥಿಕ ಸಂಕಷ್ಟ ಸರಿ ಮಾಡ್ತೀವಿ ಅಂತ ನಿಮ್ಮನ್ನು ಹಲವರು ಸಂಪರ್ಕಿಸಬಹುದು. ಬೇರೆ ಬೇರೆ ರೀತಿಗಳಲ್ಲಿ ಅವರು ನಿಮ್ಮನ್ನು ನಂಬಿಸಲು ಪ್ರಯತ್ನಿಸುತ್ತಾರೆ. ಅಂತಹವರು ಬಂದರೆ ನಂಬಬೇಡಿ ಅಂತ ಹೇಳೋಕೆ ಮಾತ್ರ ನಾನು ಬಂದಿದ್ದು ಎಂದು ಅಭಿರಾಮಿ ತಮ್ಮ ಹೊಸ ವಿಡಿಯೋದಲ್ಲಿ ಹೇಳಿದ್ದಾರೆ.


