ಬೆಂಗಳೂರು(ಅ.7): ನಿರ್ಮಾಪಕರ ಕುರಿತು ವಿವಾದಾತ್ಮಕ ಹೇಳಿಕೆ ನೀಡಿರುವ ಸಂಜನಾ ತಮ್ಮ ಹೇಳಿಕೆಯ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಅವರು ಹೇಳಿಕೆಯ ಪರಿಪೂರ್ಣ ಪಾಠ ಇಲ್ಲಿದೆ ನೋಡಿ

'ಬಿಗ್ ಬಾಸ್ ರಿಯಾಲಿಟಿ ಶೋ ಹಾಗೂ ಸಿನಿಮಾ ಕುರಿತ ಚರ್ಚೆ ಸುವರ್ಣ ನ್ಯೂಸ್'ನಲ್ಲಿ ನಡೆಯುತ್ತಿದ್ದಾಗ ನಿರ್ಮಾಪಕ ಟೇಶಿ ವೆಂಕಟೇಶ್ ಕೂಡ ದೂರವಾಣಿ ಮೂಲಕ ಮಾತನಾಡುತ್ತಿದ್ದರು. ಅವರು ನಾನು ಮಾತನಾಡುವಾಗ 'ಸುಮ್ನೆ ಕೂತ್ಕೊಳಮ್ಮ' ಎಂದು ನನ್ನನ್ನು ಗದರಿದರು. ಅವರು ನನ್ನ ವಿರುದ್ಧ ಜೋರು ದನಿಯಲ್ಲಿ ಮಾತನಾಡಿದಾಗ ನನ್ನ ಸ್ವಾಭಿಮಾನಕ್ಕೆ ಧಕ್ಕೆಯುಂಟಾಯಿತು. ಆಗ ನಾನು ಕೋಪಗೊಂಡು' ನೀವು ಒಳ್ಳೆಯ ಸಿನಿಮಾ ಮಾಡಿ ಆಗ ಜನರು ನೋಡುತ್ತಾರೆ' ಎಂದು ಟೇಶಿ ವೆಂಕಟೇಶ್ ಅವರೊಬ್ಬರಿಗೆ ಮಾತ್ರ ಹೇಳಿದೆಯಷ್ಟೆ.

ಎಲ್ಲ ನಿರ್ಮಾಪಕರನ್ನು ಕುರಿತು ನಾನು ಹೇಳಿಲ್ಲ. ನಿರ್ಮಾಪಕರ ಬಗ್ಗೆ ನನಗೆ ಅಪಾರವಾದ ಗೌರವವಿದೆ. ಅವರೇ ನನ್ನ ಅನ್ನಧಾತರು. ಅವರ ವಿರುದ್ಧ ಮಾತನಾಡಲು ನನಗೆ ಯಾವುದೇ ಅರ್ಹತೆಯಿಲ್ಲ. ನನ್ನ ಮಾತಿನಿಂದ ನಿರ್ಮಾಪಕರಿಗೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ. ಅಲ್ಲದೆ ನಾನು ಬಿಗ್'ಬಾಸ್ ರಿಯಾಲಿಟಿ ಶೋದ ವಿವಾದಕ್ಕೂ ನನಗೂ ಯಾವುದೇ ಸಂಬಂಧವಿಲ್ಲ.

ಅ.11 ರಂದು ನಾನು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ಆಗಮಿಸುತ್ತೇನೆ. ಟೇಶಿ ವೆಂಕಟೇಶ್ ಅವರು ಕ್ಷಮೆ ಕೇಳಿದರೆ ನಾನು ಅವರಿಗೆ ವಯಕ್ತಿಕವಾಗಿ ಕ್ಷಮೆ ಕೇಳುತ್ತೇನೆ' ಎಂದು ಸ್ಪಷ್ಟನೆ ನೀಡಿದ್ದಾರೆ.