ಮಂಜು ಮಾಂಡವ್ಯ ಚಿತ್ರದಲ್ಲಿ ರಾಜ್ಕುಮಾರ್ ಕಾರು
ಡಾ.ರಾಜ್ಕುಮಾರ್ ಅವರ ಕ್ರೇಜ್ ಆ ಕಾಲದಲ್ಲಿ ಹೀಗಿತ್ತು ಅನ್ನೋದನ್ನು ಚಿತ್ರದಲ್ಲಿ ತೋರಿಸಲು ಹೊರಟ ಚಿತ್ರತಂಡಕ್ಕೆ ಡಾ.ರಾಜ್ಕುಮಾರ್ ಆ ಕಾಲದಲ್ಲಿ ಬಳಸಿದ್ದ ಅಂಬಾಸಿಡರ್ ಕಾರು ಚಿತ್ರೀಕರಣಕ್ಕೆ ಸಿಕ್ಕಿದೆ.
ಹೀಗೊಂದು ಸೆಂಟಿಮೆಂಟ್ನಿಂದ ಥ್ರಿಲ್ ಆಗಿದೆ ‘ಶ್ರೀ ಭರತ್ ಬಾಹುಬಲಿ’ ಚಿತ್ರ ತಂಡ. ಇದು ಮಂಜು ಮಾಂಡವ್ಯ ನಿರ್ದೇಶನದ ಚಿತ್ರ. ‘ಮಾಸ್ಟರ್ ಪೀಸ್’ ಖ್ಯಾತಿಯ ಮಂಜು ಮಾಂಡವ್ಯ ಈಗ ನಿರ್ದೇಶನದ ಜತೆಗೆ ನಾಯಕ ನಟರಾಗಿಯೂ ಬಡ್ತಿ ಪಡೆದಿದ್ದಾರೆ. ‘ಚಿತ್ರದ ಪ್ರಮುಖ ದೃಶ್ಯದಲ್ಲಿ ರಾಜ್ ಕುಮಾರ್ ಅವರ ಕ್ರೇಜ್ ಹಿಂದೆ ಹೇಗಿತ್ತು ಅಂತ ತೋರಿಸುವ ಸನ್ನಿವೇಶವಿದೆ. ಅದಕ್ಕೆ ಅವರು ಆ ಕಾಲದಲ್ಲಿ ಬಳಸುತ್ತಿದ್ದ ಕಾಂಟೆಸ್ಸಾ ಕಾರು ಬಾಡಿಗೆ ಪಡೆದಿದ್ದೆವು. ಆ ಕಾಲದಲ್ಲಿ ಹೆಚ್ಚಾಗಿ ಬಳಸುತ್ತಿದ್ದದ್ದೇ ಕಾಂಟೆಸ್ಸಾ ಕಾರು. ಅಂತಹದೊಂದು ಕಾರು ಬಾಡಿಗೆಗೂ ಸಿಕ್ಕಿತ್ತು. ಆದರೆ ಚಿತ್ರೀಕರಣದ ದಿನ ಡ್ರೈವರ್ ಕೈಕೊಟ್ಟ. ಕೊನೆಗೆ ಮತ್ತೊಂದು ಕಾರಿಗೆ ತಲಾಶ್ ನಡೆಯಿತು. ಆಗ ಸಿಕ್ಕಿದ್ದು ಈ ಅಂಬಾಸಿಡರ್ ಕಾರು. ಅದು ಅಣ್ಣಾವ್ರೇ ಬಳಸಿದ್ದ ಕಾರು. ಅದರ ಮಾಲೀಕರು ಆ ರಹಸ್ಯ ಬಿಚ್ಚಿಟ್ಟರು. ನಮಗೆ ಗೊತ್ತಿಲ್ಲದೆಯೇ ಈ ಕಾರು ಸಿಕ್ಕಿತು. ಅಣ್ಣಾವ್ರ ಆಶೀರ್ವಾದವೇ ಸಿಕ್ಕಿದೆ’ ಎನ್ನುತ್ತಾರೆ ಮಂಜು ಮಾಂಡವ್ಯ.