ಹರಿಪ್ರಿಯಾ ಹೊಸ ಹಾರರ್ ಚಿತ್ರ ಕನ್ನಡ್ ಗೊತ್ತಿಲ್ಲ
ಹರಿಪ್ರಿಯಾ ಮತ್ತೊಂದು ಚಿತ್ರಕ್ಕೆ ಬುಕ್ ಆಗಿದ್ದಾರೆ. ಈ ಬಾರಿ ಅವರು ಕನ್ನಡಿಗರನ್ನು ಪ್ರತಿನಿಧಿಸುವ ಪಾತ್ರ ಮಾಡುತ್ತಿದ್ದಾರೆ. ಈ ಚಿತ್ರದ ಹೆಸರೇ ‘ಕನ್ನಡ್ ಗೊತ್ತಿಲ್ಲ’. ಆರ್ಜೆ ಆಗಿರುವ ಮಯೂರ ರಾಘವೇಂದ್ರ ಮೊದಲ ಬಾರಿಗೆ ನಿರ್ದೇಶನ ಮಾಡುತ್ತಿರುವ ಚಿತ್ರವಿದು. ಇದೊಂದು ಹಾರರ್ ಚಿತ್ರ ಎನ್ನಲಾಗಿದೆ
ಒಂದಿಷ್ಟು ಕಿರು ಚಿತ್ರಗಳನ್ನು ನಿರ್ದೇಶಿಸಿ ಗಮನ ಸೆಳೆದವವರು ಈಗ ಸಿನಿಮಾ ನಿರ್ದೇಶನಕ್ಕಿಳಿದ್ದಾರೆ. ಕುಮಾರ ಕಂಠೀರವ ನಿರ್ಮಾಣದ ಈ ಚಿತ್ರಕ್ಕೆ ನಕುಲ್ ಅಭಯ್ಶಂಕರ್ ಸಂಗೀತ, ಗಿರಿಧರ್ ದಿವಾನ್ ಕ್ಯಾಮೆರಾ ಹಿಡಿಯುತ್ತಿದ್ದಾರೆ. ಇದೊಂದು ನೈಜ ಕತೆಗಳನ್ನು ಒಳಗೊಂಡಿರುವ ಸಿನಿಮಾ. ಕನ್ನಡ, ಕರ್ನಾಟಕ ಹಾಗೂ ಕನ್ನಡಿಗರ ಸುತ್ತ ಸಾಗುವ ಭಾವನಾತ್ಮಕ ಸಿನಿಮಾ ಇದು. ಇಂಥ ಚಿತ್ರದಲ್ಲಿ ಹರಿಪ್ರಿಯಾ ಅವರು ಶ್ರುತಿ ಚಕ್ರವರ್ತಿ ಎನ್ನುವ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
‘ನನಗೆ ಚಿತ್ರದ ಟೈಟಲ್ ಕೇಳಿಯೇ ಕುತೂಹಲ ಹುಟ್ಟಿಕೊಂಡಿತು. ಆ ನಂತರ ಕತೆ ಕೇಳಿದೆ. ತುಂಬಾ ಯೂನಿಕ್ ಆದ ಕತೆ. ಅದರಲ್ಲೂ ಪಾತ್ರಗಳನ್ನು ಸಂಯೋಜಿಸಿರುವ ರೀತಿ ಚೆನ್ನಾಗಿದೆ. ಕನ್ನಡ ಬಂದ್ರೂ ಕನ್ನಡ ಮಾತನಾಡದೆ ಇದ್ದವರು, ಕನ್ನಡ ಬಾರದಿದ್ದರೂ ಕನ್ನಡ ಕಲಿತು ಮಾತನಾಡುವವರು, ಇಲ್ಲಿಗೆ ಬಂದು ಕನ್ನಡಿಗರ ಜತೆ ಸೇರಿ ಸಂಪಾದನೆ ಮಾಡಿಕೊಂಡು ತಮ್ಮ ಊರಿಗೆ ಹೊರಡುವ ಯೋಚನೆಯಲ್ಲಿರುವ ವಲಸಿಗರು. ಇವರ ಸುತ್ತ ಕತೆ ಸಾಗುತ್ತದೆ. ಈ ಕಾಲಕ್ಕೆ ತಕ್ಕಂತಹ ಸಿನಿಮಾ ಇದು ಎಂಬುದು ಹರಿಪ್ರಿಯಾ ಅವರ ಮಾತು. ಸೆ.೬ರಂದು ಚಿತ್ರಕ್ಕೆ ಸರಳವಾಗಿ ಪೂಜೆ ಮಾಡುವ ಮೂಲಕ ಚಿತ್ರೀಕರಣಕ್ಕೆ ಚಾಲನೆ ನೀಡುತ್ತಾರೆ.
ನಾಲ್ಕು ಬಿಡುಗಡೆ, ಐದು ಸಾಲಿನಲ್ಲಿ
ಸದ್ಯ ಹರಿಪ್ರಿಯಾ ನಟನೆಯ ಚಿತ್ರಗಳ ಪೈಕಿ ಈ ವರ್ಷ ಅವರ ನಾಲ್ಕು ಚಿತ್ರಗಳು ಬಿಡುಗಡೆಯಾಗಿವೆ. ಈ ವರ್ಷದ ಆರಂಭದಲ್ಲೇ ಯಶಸ್ಸಿನ ರುಚಿ ನೋಡಿದ್ದಾರೆ. ಈಗ ಡಾಟರ್ ಆಫ್ ಪಾರ್ವತಮ್ಮ, ಬೆಲ್ಬಾಟಮ್, ಸೂಜಿದಾರ, ಕುರುಕ್ಷೇತ್ರ ಹಾಗೂ ಕಥಾಸಂಗಮ ಚಿತ್ರಗಳು ತೆರೆಗೆ ಬರಬೇಕಿದೆ. ಈ ಪೈಕಿ ಟಿ ಕೆ ದಯಾನಂದ ಕತೆ ಬರೆದು, ಜಯತೀರ್ಥ ನಿರ್ದೇಶಿಸಿ, ರಿಷಬ್ ಶೆಟ್ಟಿ ನಾಯಕನಾಗಿ ಕಾಣಿಸಿಕೊಳ್ಳುತ್ತಿರುವ ‘ಬೆಲ್ಬಾಟಮ್’ ಚಿತ್ರಕ್ಕೆ ಹಾಡುಗಳ ಚಿತ್ರೀಕರಣ ಮಾತ್ರ ಬಾಕಿ ಉಳಿದಿದೆ.
ಈ ವರ್ಷದ ಆರಂಭದಲ್ಲೇ ನನಗೆ ಯಶಸ್ಸು ಸಿಕ್ಕಿದೆ. ಗುರು ದೇಶಪಾಂಡೆ ನಿರ್ದೇಶನದ ‘ಸಂಹಾರ’ ಚಿತ್ರದ ನಂತರ ನಟನೆಗೆ ಒಳ್ಳೆಯ ಹೆಸರು ಬಂತು. ಜತೆಗೆ ಒಂದೆರಡು ಒಳ್ಳೆಯ ಚಿತ್ರಗಳೂ ಸಿಕ್ಕವು. ನಾನು ಇಲ್ಲಿವರೆಗೂ ಒಂದು ಕ್ಯಾರೆಕ್ಟರ್ ಆಗಿ ಬರುತ್ತಿದ್ದೆ. ಆದರೆ, ‘ಕನ್ನಡ್ ಗೊತ್ತಿಲ್ಲ’ ಚಿತ್ರದಲ್ಲಿ ಸಮಸ್ತ ಕನ್ನಡಿಗರನ್ನೂ ಪ್ರತಿನಿಧಿಸುವ ಪಾತ್ರ ಮಾಡುತ್ತಿದ್ದೇನೆ.
- ಹರಿಪ್ರಿಯಾ, ನಟಿ
ಹರಿಪ್ರೀಯಾಳ ಹೆಚ್ಚಿನ ಸಿದ್ಧಿಗಾಗಿ :
ಇದು ಲೈಫ್ ಜೊತೆ ಒಂದು ಸೆಲ್ಫಿ ಕತೆ