ಆರ್ಆರ್ಆರ್ ಖ್ಯಾತಿಯ ನಟ, ಹಾಸ್ಯ ಕಲಾವಿದ ರಾಹುಲ್ ರಾಮಕೃಷ್ಣ ಅವರ ಕುಟುಂಬದಲ್ಲಿ ದುರಂತವೊಂದು ಸಂಭವಿಸಿದೆ. ತಮ್ಮ ಸಹೋದರನನ್ನು ಕಳೆದುಕೊಂಡಿರುವ ರಾಹುಲ್, ಕೃಷಿಯಲ್ಲಿ ಬಳಸುವ ರಾಸಾಯನಿಕವೊಂದೇ ತಮ್ಮನ ಸಾವಿಗೆ ಕಾರಣ ಎಂದು ಹೇಳಿದ್ದಾರೆ.
ತೆಲುಗು ಚಿತ್ರರಂಗದ ನಟ ರಾಹುಲ್ ರಾಮಕೃಷ್ಣ ಅವರ ಕುಟುಂಬದಲ್ಲಿ ನಡೆದ ದುರಂತದಿಂದ ಅವರು ತೀವ್ರ ಮಾನಸಿಕ ನೋವಿನಲ್ಲಿದ್ದಾರೆ. 'ಪ್ಯಾರಾಕ್ವಾಟ್' ಎಂಬ ಅಪಾಯಕಾರಿ ರಾಸಾಯನಿಕದಿಂದಾಗಿ ಅವರ ಸಹೋದರ ಗುರುವಾರ ನಿಧನರಾದರು. ಈ ಘಟನೆಯ ಬಗ್ಗೆ ಪ್ರತಿಕ್ರಿಯಿಸಿದ ರಾಹುಲ್, ಈ ಕಳೆನಾಶಕದ ಬಳಕೆಯ ಮೇಲೆ ಕಠಿಣ ನಿಯಂತ್ರಣ ಹೇರುವಂತೆ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಪ್ಯಾರಾಕ್ವಾಟ್ ಅನ್ನು ಕಳೆ ಗಿಡಗಳನ್ನು ನಿಯಂತ್ರಿಸಲು ಬಳಸುವ ಅತ್ಯಂತ ವಿಷಕಾರಿ ಕಳೆನಾಶಕ ಎಂದು ಗುರುತಿಸಲಾಗಿದೆ. ರೈತರು ಇದನ್ನು 'ಹುಲ್ಲಿನ ಮದ್ದು' ಎಂದು ಕರೆಯುತ್ತಾರೆ. ಈ ರಾಸಾಯನಿಕವು ಮಾರಣಾಂತಿಕವಾಗುವ ಸಾಧ್ಯತೆ ಹೆಚ್ಚಿರುವುದರಿಂದ, ಇದರ ಬಳಕೆಯ ಬಗ್ಗೆ ಈಗಾಗಲೇ ಹಲವು ವೈದ್ಯರು ಮತ್ತು ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ. ತಮ್ಮ ಸಹೋದರನ ಮರಣದ ನಂತರ ರಾಹುಲ್ ರಾಮಕೃಷ್ಣ ಈ ವಿಷಯವನ್ನು ಸೋಶಿಯಲ್ ಮೀಡಿಯಾದಲ್ಲಿ ಪ್ರಸ್ತಾಪಿಸಿ ಚರ್ಚೆಗೆ ಕಾರಣರಾಗಿದ್ದಾರೆ.
ರಾಹುಲ್ ರಾಮಕೃಷ್ಣ ಅವರು ಎಕ್ಸ್ನಲ್ಲಿ (X) ಮಾಡಿದ ಪೋಸ್ಟ್ನಲ್ಲಿ, 'ಇಂದು ನನ್ನ ಸಹೋದರನನ್ನು ಪ್ಯಾರಾಕ್ವಾಟ್ ವಿಷದಿಂದ ಕಳೆದುಕೊಂಡೆ. ಇದು ತುಂಬಾ ಅಪಾಯಕಾರಿ ಮತ್ತು ಆತ್ಮಹತ್ಯೆಗೆ ವ್ಯಾಪಕವಾಗಿ ದುರ್ಬಳಕೆಯಾಗುತ್ತಿದೆ. ಇದು ಇಷ್ಟು ಸುಲಭವಾಗಿ ಲಭ್ಯವಿರುವುದು ಆಶ್ಚರ್ಯ ತರಿಸುತ್ತದೆ. ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿರುವುದರಿಂದ ವೈದ್ಯರು ತೀವ್ರ ಒತ್ತಡಕ್ಕೆ ಒಳಗಾಗುತ್ತಿದ್ದಾರೆ. ದಯವಿಟ್ಟು ಇದನ್ನು ತಕ್ಷಣವೇ ನಿಷೇಧಿಸಿ ಜೀವಗಳನ್ನು ಉಳಿಸಿ' ಎಂದು ಬರೆದುಕೊಂಡಿದ್ದಾರೆ. ಈ ಪೋಸ್ಟ್ನಲ್ಲಿ ಅವರು ಪ್ರಧಾನ ಮಂತ್ರಿ ಕಚೇರಿ ಮತ್ತು ತೆಲಂಗಾಣ ಮುಖ್ಯಮಂತ್ರಿ ಕಚೇರಿಯನ್ನು ಟ್ಯಾಗ್ ಮಾಡಿದ್ದಾರೆ.
ರಾಹುಲ್ ರಾಮಕೃಷ್ಣ ಅವರ ಈ ಮನವಿಗೆ ವೈದ್ಯಕೀಯ ಕ್ಷೇತ್ರದಿಂದಲೂ ಸ್ಪಂದನೆ ಸಿಕ್ಕಿದೆ. ಹೈದರಾಬಾದ್ನ ವೈದ್ಯಕೀಯ ತಜ್ಞರೊಬ್ಬರು, ಪ್ಯಾರಾಕ್ವಾಟ್ ನಿಷೇಧಕ್ಕಾಗಿ ಈಗಾಗಲೇ ಪ್ರಯತ್ನಗಳು ನಡೆಯುತ್ತಿವೆ ಎಂದು ತಿಳಿಸಿದ್ದಾರೆ. 'ನಾವು ವೈದ್ಯರ ಗುಂಪಾಗಿ ಇದನ್ನು ನಿಷೇಧಿಸಲು ಹೋರಾಡುತ್ತಿದ್ದೇವೆ. 'ಡಾಕ್ಟರ್ಸ್ ಅಗೇನಸ್ಟ್ ಪ್ಯಾರಾಕ್ವಾಟ್ ಪಾಯ್ಸನಿಂಗ್' ಎಂಬ ಗುಂಪನ್ನು ಆರಂಭಿಸಿದ್ದೇವೆ. ಇತ್ತೀಚೆಗೆ ತೆಲಂಗಾಣ ರೈತರ ಆಯುಕ್ತರನ್ನು ಭೇಟಿ ಮಾಡಿ ಚರ್ಚಿಸಿದ್ದೇವೆ. ಶಾಸಕರು ಮತ್ತು ಸಂಸದರು ಈ ವಿಷಯವನ್ನು ಅಸೆಂಬ್ಲಿ ಮತ್ತು ಸಂಸತ್ತಿನಲ್ಲಿ ಪ್ರಸ್ತಾಪಿಸುವಂತೆ ಕ್ರಮ ಕೈಗೊಂಡಿದ್ದೇವೆ' ಎಂದು ಅವರು ಹೇಳಿದ್ದಾರೆ.
ಕಠಿಣ ಕ್ರಮ ಕೈಗೊಳ್ಳಿ
ಈ ಘಟನೆಯಿಂದಾಗಿ ಪ್ಯಾರಾಕ್ವಾಟ್ ಬಳಕೆಯ ಬಗ್ಗೆ ಮತ್ತೊಮ್ಮೆ ಚರ್ಚೆ ಆರಂಭವಾಗಿದೆ. ಕೃಷಿ ಕ್ಷೇತ್ರದಲ್ಲಿ ಬಳಸುವ ರಾಸಾಯನಿಕಗಳ ಸುರಕ್ಷತೆ ಮತ್ತು ಅವುಗಳ ನಿಯಂತ್ರಣದ ಬಗ್ಗೆ ಸರ್ಕಾರಗಳು ಹೆಚ್ಚು ಜಾಗರೂಕರಾಗಿರಬೇಕಾದ ಅಗತ್ಯವಿದೆ ಎಂಬ ವಿಷಯ ಮತ್ತೆ ಮುನ್ನೆಲೆಗೆ ಬಂದಿದೆ. ಜನರ ಪ್ರಾಣಕ್ಕೆ ಅಪಾಯಕಾರಿಯಾಗುವ ರಾಸಾಯನಿಕಗಳ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕೆಂದು ಹಲವು ವಲಯಗಳಿಂದ ಒತ್ತಾಯ ಕೇಳಿಬರುತ್ತಿದೆ.

