ಮೈಸೂರಿನ ಅಪ್ಪಟ ಕನ್ನಡದ ಪ್ರತಿಭಾವಂತ ನಟಿ ರೋಶಿನಿ ಪ್ರಕಾಶ್. ಆದರೂ ತೆಲುಗು, ತಮಿಳು ಚಿತ್ರಗಳಲ್ಲಿ ಓಡಾಡಿಕೊಂಡಿದ್ದವರು. ಸತೀಶ್ ನೀನಾಸಂ ಜತೆಗೆ ‘ಟೈಗರ್ ಗಲ್ಲಿ’ ಚಿತ್ರದ ಮೂಲಕ ಕನ್ನಡಕ್ಕೆ ಬಂದರು. ಈ ಚಿತ್ರದ ನಂತರ ಅವರು ಒಪ್ಪಿಕೊಂಡ ಸಿನಿಮಾ ‘ಕವಲುದಾರಿ’. ಇನ್ನೇನು ಬಿಡುಗಡೆಯ ಹಂತಕ್ಕೆ ಬಂದಿರುವ ಈ ಚಿತ್ರದ ಮೇಲೆ ರೋಶಿನಿ ಪ್ರಕಾಶ್ ಸಾಕಷ್ಟು ನಂಬಿಕೆ ಇಟ್ಟುಕೊಂಡಿದ್ದಾರೆ. 

ಕತೆ ಮತ್ತು ಅಪ್ಪು ಕಾರಣಕ್ಕೆ ಒಪ್ಪಿಕೊಂಡ ಚಿತ್ರ: ‘ಅನಂತ್‌ನಾಗ್ ಮುಖ್ಯ ಪಾತ್ರ, ಹೇಮಂತ್ ರಾವ್ ನಿರ್ದೇಶನ, ಎಲ್ಲಕ್ಕಿಂತ ಮುಖ್ಯವಾಗಿ ಪುನೀತ್ ರಾಜ್ಕುಮಾರ್ ನಿರ್ಮಿಸುತ್ತಿರುವ ಸಿನಿಮಾ ಎನ್ನುವ ಕಾರಣಕ್ಕೆ ಕವಲುದಾರಿ ಚಿತ್ರದಲ್ಲಿ ನಟಿಸುವುದಕ್ಕೆ ಒಪ್ಪಿಕೊಂಡರಂತೆ. ‘ಕತೆ ಮತ್ತು ಅಪ್ಪು ನಿರ್ಮಾಣದ ಸಿನಿಮಾ ಅಂತ ನಟಿಸಿದೆ. ಮಧ್ಯಮ ವರ್ಗದ ಕುಟುಂಬದ ಹೆಣ್ಣು ಮಗಳ ಪಾತ್ರ. ಹಲವು ಕಷ್ಟಗಳ ನಡುವೆ ಹೇಗೆ ಜೀವನ ಸಾಗಿಸುತ್ತಾಳೆ ಎಂಬುದನ್ನು ನನ್ನ ಪಾತ್ರದಲ್ಲಿ ನೋಡಬಹುದು’ ಎಂದು ಪಾತ್ರದ ವಿವರಣೆ ಕೊಡುತ್ತಾರೆ ರೋಶಿನಿ. ಈ ಚಿತ್ರ ಬಿಡುಗಡೆಯಾದ ಮೇಲೆ ಕನ್ನಡದಲ್ಲಿ ಮತ್ತಷ್ಟು ಒಳ್ಳೆಯ ಅವಕಾಶಗಳು ಸಿಗುತ್ತವೆ ಎನ್ನುತ್ತಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ತಮಿಳಿನಲ್ಲಿ ಜಡ ರೆಡಿಯಾಗಿದೆ: ರೋಶಿನಿ ಪ್ರಕಾಶ್ ತಮಿಳಿನಲ್ಲಿ ‘ಜಡ’ ಎನ್ನುವ ಚಿತ್ರವನ್ನು ಮುಗಿಸಿದ್ದಾರೆ. ಇಲ್ಲಿ ತಮಿಳು ನಟ ಕದೀರ್ ನಾಯಕನಾಗಿ ಕಾಣಿಸಿಕೊಂಡಿದ್ದಾರೆ. ಪೇಯಿಂಟರ್ ಕ್ಯಾರೆಕ್ಟರ್‌ನಲ್ಲಿ ಕಾಣಿಸಿಕೊಂಡಿರುವ ಆಂಗ್ಲೋ ಇಂಡಿಯನ್ ಹುಡುಗಿಯ ಗೆಟಪ್‌ನಲ್ಲಿ ಅಭಿನಯಿಸಿದ್ದಾರೆ.

ನಟನೆ ಜತೆಗೆ ಬ್ಯುಸಿನೆಸ್ ಫೆಮಿನಾ ಮಿಸ್ ಇಂಡಿಯಾ ಕಿರೀಟವನ್ನು ಮುಡಿಗೇರಿಸಿಕೊಂಡಿರುವ ರೋಶಿನಿ, ನಟನೆ ಜತೆಗೆ ಬ್ಯುಸಿನೆಸ್ ಕೂಡ ಮಾಡುತ್ತಿದ್ದಾರೆ. ತಾವೇ ಒಂದು ಕಂಪನಿ ನಡೆಸುತ್ತಿದ್ದು, ಇಂಪೋರ್ಟ್ ಹಾಗೂ ಎಕ್ಸ್‌ಪೋರ್ಟ್ ಬ್ಯುಸಿನೆಸ್ ಮಾಡುತ್ತಿದ್ದಾರೆ. ಮೈಸೂರಿನಲ್ಲೇ ನೆಲೆಸಿದ್ದು, ಸಿನಿಮಾ ಇದ್ದಾಗ ಬೆಂಗಳೂರು, ಚೆನ್ನೈ ಹಾಗೂ ಹೈದರಾಬಾದ್‌ಗೆ ಹೋಗಿ ಬರುತ್ತಾರೆ.