ಆಂಧ್ರದಲ್ಲೂ ಜೋರಾಗಿದೆ ಉಪ್ಪಿ ಹವಾ!
ಆಂಧ್ರ ಪ್ರದೇಶದಲ್ಲೂ ಜೋರಾಗಿದೆ ಉಪೇಂದ್ರ ಹವಾ | 300 ಕ್ಕೂ ಹೆಚ್ಚು ಥಿಯೇಟರ್ಗಳಲ್ಲಿ ತೆರೆಗೆ ಬರುತ್ತೆ ‘ಐ ಲವ್ ಯೂ’ ತೆಲುಗು ವರ್ಷನ್
ಜನ, ಉಪೇಂದ್ರ ಅಂದ್ರೆ ಡಿಫೆರೆಂಟ್ ಅಂತಾರೆ. ನಿಜಕ್ಕೂ ಡಿಫೆರೆಂಟ್ ಅವರಲ್ಲ, ನಾವು. ಅವರಿಗೆ ಕ್ಲಾರಿಟಿ ಇದೆ. ಅವರು ಬುದ್ಧಿವಂತರು. ನೀವು ಡಿಫೆರೆಂಟ್ ಆಗಿರಬೇಡಿ ಅಂತ ಪ್ರೇಕ್ಷಕರಿಗೆ ರಿಯಾಲಿಸ್ಟಿಕ್ ಸಿನಿಮಾ ಕೊಟ್ಟು, ರಿಯಲ್ ಸ್ಟಾರ್ ಎನಿಸಿಕೊಂಡಿದ್ದಾರೆ...!
- ಉಪೇಂದ್ರ ಅವರ ಕುರಿತು ಈ ಮಾತು ಹೇಳಿದ್ದು ಯಾರೋ ಕನ್ನಡದ ಸಿನಿ ಪ್ರೇಕ್ಷಕ ಅಲ್ಲ, ಆಂಧ್ರಪ್ರದೇಶದ ಅವರ ಸಿನಿಮಾ ಅಭಿಮಾನಿ. ಹೆಸರು ಸಿದ್ಧಾರ್ಥ. ವಿಶಾಖಪಟ್ಟಣ ನಿವಾಸಿ. ಆತ ಕೂಡ ಕಿರುಚಿತ್ರಗಳ ನಿರ್ದೇಶಕ. ಆತ ನಿರ್ದೇಶಿಸಿದ್ದ ಒಂದು ಕಿರುಚಿತ್ರವನ್ನು ಆನ್ಲೈನ್ನಲ್ಲಿ ನೋಡಿ, ಉಪೇಂದ್ರ ಫೋನ್ ಮಾಡಿ ವಿಷ್ ಮಾಡಿದ್ರಂತೆ.
ಕೋಟ್ಯಧಿಪತಿಯಲ್ಲಿ ಪುನೀತ್ ಪಡೆದ ಸಂಭಾವನೆಯ ಗುಟ್ಟು ರಟ್ಟು?
ಅಂದಿನಿಂತ ಆತ ಉಪೇಂದ್ರ ಅವರ ಫಕ್ಕಾ ಫ್ಯಾನ್. ಅಷ್ಟೇ ಅಲ್ಲ, ಉಪೇಂದ್ರ ಅಭಿನಯದ ಬಹುತೇಕ ಸಿನಿಮಾ ನೋಡಿದ ಹೆಗ್ಗಳಿಕೆ ಸಿದ್ಧಾಥ್ರ್ ಅವರದ್ದು. ಉಪೇಂದ್ರ ತೆಲುಗಿನಲ್ಲಿ ಅಭಿನಯಿಸುವ ಸಿನಿಮಾಗಳಿಗೆ ಆತ ಕಾಯಂ ಪ್ರೇಕ್ಷಕ. ಸಿನಿಮಾ ತೆರೆ ಕಂಡ ಮೊದಲ ದಿನದ ಮೊದಲ ಪ್ರದರ್ಶನದಲ್ಲಿ ಆತ ಕಾಯಂ ವೀಕ್ಷಕ.
ಆತನ ಹಾಗೆಯೇ ಉಪೇಂದ್ರ ಅಂದ್ರೆ ಮುಗಿಬೀಳುವ ದೊಡ್ಡ ಅಭಿಮಾನಿ ಬಳಗ ಆಂಧ್ರದಲ್ಲೂ ಇದೆ. ಕನ್ನಡದಲ್ಲಿರುವಷ್ಟೇ ಉಪ್ಪಿಗೆ ಅಲ್ಲೂ ಕ್ರೇಜ್ ಇದೆ. ಉಪ್ಪಿ ಸಿನಿಮಾ ಅಂದ್ರೆ ಅಲ್ಲಿನ ಬಹಳಷ್ಟುಸಿನಿಮಾ ಪ್ರೇಮಿಗಳಿಗೆ ಒಂಥದ ಕಿಕ್ ಅಂತೆ. ಬಹುತೇಕರಿಗೆ ರಿಪ್ರೆಷ್ ಆಗೋದಿಕ್ಕೆ ಟ್ರಿಟ್ಮೆಂಟ್ ಅಂತೆ. ಇದೆಲ್ಲ ಒಂದಷ್ಟುಗೊತ್ತಾಗಿದ್ದು ಇತ್ತೀಚೆಗಷ್ಟೇ ಆಂಧ್ರ ಪ್ರದೇಶದ ವಿಶಾಖಪಟ್ಟಣಂ ನಲ್ಲಿ ನಡೆದ ‘ಐ ಲವ್ ಯೂ’ ಚಿತ್ರದ ಟ್ರೇಲರ್ ಲಾಂಚ್ ಸಂದರ್ಭ.
ಉಪ್ಪಿಗೂ ಇದೇ ದೊಡ್ಡ ಅಭಿಮಾನಿ ಬಳಗ..
ಉಪೇಂದ್ರ ಹಾಗೂ ನಿರ್ದೇಶಕ ಆರ್.ಚಂದ್ರು ಕಾಂಬಿನೇಷನ್ ಸಿನಿಮಾ ‘ಐ ಲವ್ ಯೂ’ ತೆಲುಗು ವರ್ಷನ್ ಟ್ರೇಲರ್ ಲಾಂಚ್ ಕಾರ್ಯಕ್ರಮ ಆ ದಿನ ಕೊಂಚ ಭಿನ್ನವಾಗಿಯೇ ನಡೆಯಿತು. ವಿಶಾಖಪಟ್ಟಣದ ಕಡಲ ತಡಿಯ ವರುಣ್ ಬೀಚ್ ಅಂತಹದೊಂದು ವರ್ಣರಂಜಿತ ಕಾರ್ಯಕ್ರಮಕ್ಕೆ ಸಾಕ್ಷಿ ಆಯಿತು.
ಹಿಂದಿ ರಿಮೇಕ್ ಸೀರಿಯಲ್ನಲ್ಲಿ 'ಅಗ್ನಿಸಾಕ್ಷಿ' ಸಿದ್ದಾರ್ಥ !
ವರುಣ್ ಬೀಚ್ ವಿಶಾಖಪಟ್ಟಣದ ಒಂದು ಒಂದು ಸುಂದರ ತಾಣ. ಕಡಲ ತೀರದ ಮೇಲೆ ಸಂಜೆ ಹೊತ್ತಿಗೆ ಬೀಸುವ ತಂಪಾದ ಗಾಳಿಗೆ ಮೈಯೊಡ್ಡಿ ಮನರಂಜನೆ ಕಾರ್ಯಕ್ರಮ ವೀಕ್ಷಿಸುವುದೇ ಒಂದು ಆಹ್ಲಾದಕರ ಅನುಭವ. ‘ಐ ಲವ್ ಯೂ’ಟ್ರೇಲರ್ ಲಾಂಚ್ ಕೂಡ ಅಂಥದ್ದೇ ಅನುಭವ ನೀಡಿತು. ನಮಗೆಲ್ಲ ಅಲ್ಲೇ ಗೊತ್ತಾಗಿದ್ದು ಆಂಧ್ರದಲಿರುವ ಉಪ್ಪಿ ಹವಾ!
ಉಪೇಂದ್ರ ಅಭಿನಯದ ‘ರಾ’ ಸಿನಿಮಾ ಟಾಲಿವುಡ್ನಲ್ಲಿ ದೊಡ್ಡ ಸೆನ್ಸೇಷನ್ ಕ್ರಿಯೇಟ್ ಮಾಡಿತ್ತು. ಅಲ್ಲಿಂದಲೇ ಉಪ್ಪಿಗೆ ಆಂಧ್ರದಲ್ಲೂ ದೊಡ್ಡ ಅಭಿಮಾನಿ ಬಳಗ ಹುಟ್ಟಿಕೊಂಡಿದೆ. ಟ್ರೇಲರ್ ಲಾಂಚ್ ಕಾರ್ಯಕ್ರಮಕ್ಕೆ ಉಪ್ಪಿ ಆಗಮಿಸುತ್ತಿದ್ದಂತೆ ವೇದಿಕೆ ಮುಂಭಾಗ ಜಮಾಯಿಸಿದ್ದ ಭಾರೀ ಸಂಖ್ಯೆ ಜನರು ಉಪೇಂದ್ರ ಕಡೆ ನುಗಿದರು. ಅವರೆಲ್ಲರೂ ಉಪ್ಪಿ ಅಭಿಮಾನಿಗಳು.
ರಾ..ರಾ..ರಾ ಎನ್ನುತ್ತಾ ಉಪೇಂದ್ರ ಮೇಲಿನ ಅಭಿಮಾನ ಮೆರೆದರು. ಕೈ ಬೀಸುತ್ತಾ ಅವರ ಪ್ರೀತಿಗೆ ಶರಣು ಅಂದರು ಉಪ್ಪಿ. ಸೆಲ್ಪಿ ಹಾವಳಿಗೆ ಬೇಸತ್ತು ಹೋದರು. ಆನಂತರ ವೇದಿಕೆ ಏರಿ ಮೊದಲು ಗ್ಲೋಬಲ್ ಡಾನ್ಸ್ ತಂಡವರ ಜತೆಗೆ ಎ ಚಿತ್ರದ ಹಾಡಿಗೆ ಹೆಜ್ಜೆ ಹಾಕಿದರು. ಬಳಿಕ ತೆಲುಗಿನಲ್ಲೇ ಮಾತನಾಡುತ್ತಾ, ರಕ್ತ ಕಣ್ಣೀರು ನೋಡಿದ್ದೀರಾ, ಎ ಸಿನಿಮಾ ನೋಡಿದ್ದೀರಾ, ಸೂಪರ್ ಸಿನಿಮಾ ನೋಡಿದ್ದೀರಾ ..ಎಂದಾಗೆಲ್ಲ ‘ಅವ್ನು..’ ( ಹೌದು) ಎನ್ನುವ ಉತ್ತರ ಕಿವಿಗಡಚ್ಚಿಕುವ ಹಾಗೆ ಕೇಳಿಬರುತ್ತಿತ್ತು. ಇದು ಟಾಲಿವುಡ್ನಲ್ಲಿರುವ ಉಪೇಂದ್ರ ಹವಾ.
ಐ ಲವ್ ಯೂ ನೀವು ಹೇಳ್ತೀರಾ...
‘ಇದೊಂದು ನೀಟ್ ಸಿನಿಮಾ. ಪ್ರೀತಿಯ ಕತೆಯೇ ಹೌದು. ಆದರೆ ನಾನು ಹೇಳುವ ಪ್ರೀತಿಯ ಪೋಸ್ಟ್ ಮಾರ್ಟಂ. ಅದು ನಿಮಗೆ ಇಷ್ಟವಾಗುತ್ತೆ. ಫಸ್ಟ್ಹಾಫ್ ಹಾಗಿರುತ್ತೆ. ಇದಕ್ಕಿದಂತೆ ಸೆಕೆಂಡ್ ಹಾಫ್ ಫ್ಯಾಮಿಲಿ ಸಿನಿಮಾ ಆಗುತ್ತೆ. ಪ್ರತಿ ಒಬ್ಬ ಆಡಿಯನ್ಸ್ಗೂ ಇದು ಕನೆಕ್ಟ್ ಆಗುತ್ತೆ. ನನ್ನೆಲ್ಲ ಸಿನಿಮಾ ನೋಡಿ, ಮೆಚ್ಚಿಕೊಂಡವರಿಗೆ ಇದು ಮನಸಾರೆ ಇಷ್ಟವಾಗುತ್ತೆ.
ನೀವು ಕೊಟ್ಟಹಣಕ್ಕೆ ಮೋಸ ಆಗುವುದಿಲ್ಲ. ಹಾಗೆಯೇ ಬರೀ ಮನರಂಜನೆ ಮಾತ್ರವಲ್ಲ, ಮೈಂಡ್ ಫ್ರೆಷ್ ಆಗುವುದು ಖಚಿತ. ಚಿತ್ರ ನೋಡಿ ಹೊರಬಂದು ನೀವೇ ಐ ಲವ್ ಯೂ ಅಂತ ಹೇಳುತ್ತೀರಿ..’ ಅಂತ ನೆರೆದಿದ್ದ ಪ್ರೇಕ್ಷಕ ವರ್ಗಕ್ಕೆ ಉಪೇಂದ್ರ ಭರವಸೆ ಕೊಟ್ಟರು. ಉಪೇಂದ್ರ ಹಾಗೆ ಹೇಳುತ್ತಿದ್ದಂತೆ ಅಭಿಮಾನಿಗಳ ಸಿಳ್ಳೇ ಕೇಕೆ ಮುಗಿಲು ಮುಟ್ಟಿತು. ಒಂದೆಡೆ ಕಡಲ ಭೋರ್ಗರೆತ, ಮತ್ತೊಂದೆಡೆ ಅಭಿಮಾನದ ಸಂಕೇತ. ಎರಡು ಮೈಳೈಸಿ, ಹೊಸ ಲೋಕವೇ ಅಲ್ಲಿ ಸೃಷ್ಟಿಆಗಿದ್ದು ಸುಳ್ಳಲ್ಲ.
ಅಭಿಮಾನದ ಹೊಳೆಯಲ್ಲಿ ...
ಅಂಥದ್ದೇ ಹವಾ ಅಲ್ಲಿ ನಿರ್ದೇಶಕ ಆರ್. ಚಂದ್ರುಗೂ ಇದೆ. ಚಂದ್ರು ನಿರ್ದೇಶಿಸಿದ ತೆಲುಗು ಚಿತ್ರ ‘ಕೃಷ್ಣಮ್ಮ ಕಲಿಪಿಂದಿ ಇದ್ದರಿನಿ’ಗೆ ಬೆಸ್ಟ್ ಡೈರೆಕ್ಟರ್ ಅವಾರ್ಡ್ ಬಂತು. ಅದೇ ಅಭಿಮಾನಕ್ಕೆ ಅವತ್ತು ಬಾರೀ ಜನರೇ ಟ್ರೇಲರ್ ಲಾಂಚ್ಗೆ ಸಾಕ್ಷಿಯಾದರು. ಒಂದೆಡೆ ಉಪೇಂದ್ರ, ಮತ್ತೊಂದೆಡೆ ಚಂದ್ರು ಅವರಿಗಿರುವ ನಂಟು, ಅಭಿಮಾನದ ಮೇಲೆಯೇ ‘ಐ ಲವ್ ಯೂ’ ಚಿತ್ರ ಆಂಧ್ರದಲ್ಲೂ ದೊಡ್ಡ ಮಟ್ಟದಲ್ಲಿ ತೆರೆ ಕಾಣುತ್ತಿದೆ. ಸರಿ ಸುಮಾರು 300 ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಅದರ ತೆಲುಗು ವರ್ಷನ್ ರಿಲೀಸ್ ಆಗುತ್ತಿದೆ.
ಕನ್ನಡದ ಸಿನಿಮಾಗಳು ಈಗ ಕಂಟೆಂಟ್ ಮೇಲೆ ಪರಭಾಷೆಗಳಲ್ಲೂ ಅದ್ಧೂರಿಯಾಗಿ ತೆರೆ ಕಾಣುತ್ತಿರುವಾಗ ‘ಐ ಲವ್ ಯೂ’ ಅಭಿಮಾನ ಮತ್ತು ಆಂಧ್ರದ ನಂಟಿನ ಮೇಲೆಯೇ ಅದ್ಧೂರಿಯಾಗಿ ಬಿಡುಗಡೆ ಆಗುತ್ತಿದೆ. ಇದನ್ನ ಪ್ರೇಕ್ಷಕ ಮೆಚ್ಚಿಕೊಳ್ಳುತ್ತಾರಾ ಎನ್ನುವುದು ಸದ್ಯದ ಕುತೂಹಲ.