'ರಾಮಾಯಣ' ಸಿನಿಮಾದಲ್ಲಿ ಯಶ್ ಪಾತ್ರ ಎಷ್ಟು ಪವರ್ಫುಲ್ ಆಗಿದೆ? ಯಶ್ ಕೇವಲ ರಾವಣನ ಪಾತ್ರ ಮಾಡ್ತಿದ್ದಾರಾ ಅಥವಾ ಸಿನಿಮಾ ನಿರ್ಮಾಣದಲ್ಲೂ ಭಾಗಿಯಾಗಿದ್ದಾರಾ? 'ರಾಮಾಯಣ' ಭಾರತದ ಅತೀ ದುಬಾರಿ ಸಿನಿಮಾನಾ? ಈ ಎಲ್ಲಾ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ.
ಸೌತ್ ಸೂಪರ್ಸ್ಟಾರ್ ಯಶ್ ತಮ್ಮ ಮುಂದಿನ ಸಿನಿಮಾ 'ಟಾಕ್ಸಿಕ್' ಜೊತೆಗೆ, 4000 ಕೋಟಿ ರೂಪಾಯಿ ಬಜೆಟ್ನ 'ರಾಮಾಯಣ' ಚಿತ್ರದ ವಿಚಾರವಾಗಿಯೂ ಸಖತ್ ಸುದ್ದಿಯಲ್ಲಿದ್ದಾರೆ. ಈ ಸಿನಿಮಾದಲ್ಲಿ ಅವರು ರಾವಣನಾಗಿ ಒಂದು ಜಬರ್ದಸ್ತ್ ಪಾತ್ರ ಮಾಡುತ್ತಿದ್ದಾರೆ. ಆದರೆ, ಚಿತ್ರದಿಂದ ಅವರ ಲುಕ್ ಇನ್ನೂ ರಿವೀಲ್ ಆಗಿಲ್ಲ. ಇದರ ನಡುವೆಯೇ ಒಂದು ಹೊಸ ಮಾಹಿತಿ ಹೊರಬಿದ್ದಿದೆ. ಚಿತ್ರದ ನಿರ್ಮಾಪಕ ನಮಿತ್ ಮಲ್ಹೋತ್ರಾ, ಯಶ್ ಅವರ ರಾವಣನ ಪಾತ್ರದ ಬಗ್ಗೆ ಮಾತನಾಡಿದ್ದು, ಈ ಪಾತ್ರ ಮಾಡಲು ಯಶ್ ಯಾಕೆ ಒಪ್ಪಿಕೊಂಡರು ಅನ್ನೋದನ್ನು ರಿವೀಲ್ ಮಾಡಿದ್ದಾರೆ. ಇದರ ಹಿಂದಿನ ದೊಡ್ಡ ಕಾರಣ, ಚಿತ್ರದ ಸ್ಟಾರ್ಕಾಸ್ಟ್, ಮೇಕಿಂಗ್ ಮತ್ತು ಹೊಸ ಅಪ್ಡೇಟ್ಗಳ ಬಗ್ಗೆ ಇಲ್ಲಿದೆ ಪೂರ್ತಿ ಮಾಹಿತಿ....
'ರಾಮಾಯಣ'ದಲ್ಲಿ ಸೂಪರ್ಸ್ಟಾರ್ ಯಶ್ ರಾವಣ ಆಗಿದ್ದೇಕೆ?
ನಿರ್ದೇಶಕ ನಿತೇಶ್ ತಿವಾರಿ ಅವರ 4000 ಕೋಟಿ ಬಜೆಟ್ನ 'ರಾಮಾಯಣ' ಸಿನಿಮಾ ಅನೌನ್ಸ್ ಆದಾಗಿನಿಂದಲೂ ಸದ್ದು ಮಾಡುತ್ತಲೇ ಇದೆ. ಕೆಲವು ತಿಂಗಳ ಹಿಂದೆ ಚಿತ್ರದ ಮೊದಲ ಟೀಸರ್ ರಿಲೀಸ್ ಆಗಿತ್ತು. ಇದರಲ್ಲಿ ರಾಮನ ಪಾತ್ರಧಾರಿ ರಣಬೀರ್ ಕಪೂರ್ ಅವರ ಲುಕ್ ನೋಡಬಹುದಾಗಿತ್ತು. ಯಶ್ ನಿರ್ವಹಿಸುತ್ತಿರುವ ರಾವಣನ ಪಾತ್ರದ ಝಲಕ್ ಕೂಡ ಇತ್ತು, ಆದರೆ ಅವರ ಮುಖವನ್ನು ತೋರಿಸಿರಲಿಲ್ಲ. ಅಂದಿನಿಂದಲೇ ಯಶ್ ಪಾತ್ರದ ಬಗ್ಗೆ ಫ್ಯಾನ್ಸ್ ಸಿಕ್ಕಾಪಟ್ಟೆ ಎಕ್ಸೈಟ್ ಆಗಿದ್ದಾರೆ. ಈ ಚಿತ್ರದಲ್ಲಿ ಅವರು ರಾವಣನ ಪಾತ್ರ ಮಾಡುತ್ತಿರುವುದು ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಹಾಗಾದ್ರೆ, ಯಶ್ ರಾವಣನ ಪಾತ್ರವನ್ನು ಯಾಕೆ ಆಯ್ಕೆ ಮಾಡಿಕೊಂಡರು? ಎಂಬ ಪ್ರಶ್ನೆ ಅಭಿಮಾನಿಗಳಲ್ಲಿತ್ತು.
ಈ ಪ್ರಶ್ನೆಗೆ ಚಿತ್ರದ ನಿರ್ಮಾಪಕ ನಮಿತ್ ಮಲ್ಹೋತ್ರಾ ಇತ್ತೀಚೆಗೆ ನೀಡಿದ ಸಂದರ್ಶನವೊಂದರಲ್ಲಿ ಉತ್ತರ ನೀಡಿದ್ದಾರೆ. ಮನಿ ಕಂಟ್ರೋಲ್ ಜೊತೆ ಮಾತನಾಡಿದ ಅವರು, ಯಶ್ ಪಾತ್ರದ ಬಗ್ಗೆ ಸೀಕ್ರೆಟ್ ಬಿಚ್ಚಿಟ್ಟಿದ್ದಾರೆ. "ಕೆಲವೊಮ್ಮೆ ಕಥೆಗಳು ಹೇಗಿರುತ್ತವೆ ಎಂದರೆ, ಅದರಲ್ಲಿ ನಟರು ಪಾತ್ರದ ಜೊತೆ ಕನೆಕ್ಟ್ ಆಗುವುದು ಬಹಳ ಮುಖ್ಯ. ಯಶ್ ನಮ್ಮ ಈ ವಿಷನ್ಗೆ ಒಂದು ರೂಪ ಕೊಟ್ಟಿದ್ದಾರೆ. ಯಶ್ ಕೇವಲ ಒಬ್ಬ ಅದ್ಭುತ ನಟ ಮಾತ್ರವಲ್ಲ, ಈ ಮಹತ್ವಾಕಾಂಕ್ಷೆಯ ಪ್ರಾಜೆಕ್ಟ್ ಮತ್ತು ನಮ್ಮ ಕನಸಿನ ಬಗ್ಗೆ ತಿಳಿದುಕೊಂಡು ನಮ್ಮ ಜೊತೆ ನಿಂತ ವ್ಯಕ್ತಿ. ಈ ಪಾತ್ರವನ್ನು ಇಡೀ ಪ್ರಪಂಚದ ಮುಂದೆ ಅತ್ಯುತ್ತಮವಾಗಿ ಪ್ರೆಸೆಂಟ್ ಮಾಡಬೇಕು ಅನ್ನೋದು ಯಶ್ ಅವರ ಆಸೆ. ಇದೇ ಕಾರಣಕ್ಕೆ ಅವರು ಈ ಸಿನಿಮಾದಲ್ಲಿ ನಟಿಸಲು ಒಪ್ಪಿಕೊಂಡರು" ಎಂದು ನಮಿತ್ ಹೇಳಿದ್ದಾರೆ.
ಯಾವಾಗ ರಿಲೀಸ್ ಆಗಲಿದೆ 'ರಾಮಾಯಣ'?
ನಿರ್ದೇಶಕ ನಿತೇಶ್ ತಿವಾರಿ ಅವರ 'ರಾಮಾಯಣ' ಚಿತ್ರವನ್ನು ಎರಡು ಭಾಗಗಳಲ್ಲಿ ರಿಲೀಸ್ ಮಾಡಲಿದ್ದಾರೆ. ಮೊದಲ ಭಾಗವನ್ನು ಇದೇ ವರ್ಷ ದೀಪಾವಳಿಗೆ ತೆರೆಗೆ ತರಲು ಪ್ಲ್ಯಾನ್ ಮಾಡಲಾಗಿದೆ. ಇನ್ನು, ಎರಡನೇ ಭಾಗ 2027ರ ದೀಪಾವಳಿಗೆ ರಿಲೀಸ್ ಆಗಲಿದೆ. ಚಿತ್ರದಲ್ಲಿ ರಣಬೀರ್ ಕಪೂರ್, ಸಾಯಿ ಪಲ್ಲವಿ, ಸನ್ನಿ ಡಿಯೋಲ್, ಯಶ್, ರವಿ ದುಬೆ, ಕಾಜಲ್ ಅಗರ್ವಾಲ್, ರಕುಲ್ ಪ್ರೀತ್ ಸಿಂಗ್, ಕುನಾಲ್ ಕಪೂರ್, ಅರುಣ್ ಗೋವಿಲ್, ಇಂದಿರಾ ಕೃಷ್ಣನ್, ವಿವೇಕ್ ಓಬೆರಾಯ್, ಅಮಿತಾಭ್ ಬಚ್ಚನ್, ಲಾರಾ ದತ್ತಾ, ಶಿಬಾ ಚಡ್ಡಾ, ಶೋಭನಾ, ಶಿಶಿರ್ ಶರ್ಮಾ, ಸೋನಿಯಾ ಬಲಾನಿ, ಮೋಹಿತ್ ರೈನಾ, ಆದಿನಾಥ್ ಕೊಠಾರೆ ಮುಂತಾದವರು ಪ್ರಮುಖ ಪಾತ್ರಗಳಲ್ಲಿದ್ದಾರೆ. ಪ್ರೈಮ್ ಫೋಕಸ್ ಸ್ಟುಡಿಯೋಸ್, ಮಾನ್ಸ್ಟರ್ ಮೈಂಡ್ ಕ್ರಿಯೇಷನ್ಸ್ ಮತ್ತು ಡಿಎನ್ಇಜಿ ಬ್ಯಾನರ್ಗಳ ಅಡಿಯಲ್ಲಿ ಈ ಚಿತ್ರ ನಿರ್ಮಾಣವಾಗುತ್ತಿದೆ. ಈ ಚಿತ್ರಕ್ಕೆ ಹ್ಯಾನ್ಸ್ ಜಿಮ್ಮರ್ ಮತ್ತು ಎ.ಆರ್. ರೆಹಮಾನ್ ಸಂಗೀತ ನೀಡುತ್ತಿದ್ದಾರೆ. ಇದನ್ನು ಹಲವು ಭಾಷೆಗಳಲ್ಲಿ ರಿಲೀಸ್ ಮಾಡಲಾಗುತ್ತದೆ.


