ತಮಿಳು ನಿರ್ದೇಶಕನ ಅವಮಾನದಿಂದ ಹುಟ್ಟಿದ ಕನ್ನಡ ಹಾಡಿದು!
ಕನ್ನಡದ ಅಸ್ಮಿತೆ ಸಾರುವ ಅನೇಕ ಹಾಡುಗಳು ಕನ್ನಡ ಚಿತ್ರರಂಗದಲ್ಲಿ ಬಂದಿವೆ. ಅನೇಕ ವರ್ಷಗಳ ನಂತರ ಈಗ ಮತ್ತೆ ‘ರಾಂಧವ’ ಚಿತ್ರತಂಡ ಕರುನಾಡಿನ ವಿಶೇಷವಾದ ತಾಣಗಳನ್ನು ಪರಿಚಯಿಸುವ ಮತ್ತು ಕನ್ನಡದ ಹೆಮ್ಮೆಯನ್ನು ಸಾರುವ ಗೀತೆಯೊಂದನ್ನು ರಚಿಸಿದೆ. ಈ ಧರೆಯ ಬೆರಗು ನಮ್ಮ ನಾಡು ಎಂಬ ಆ ಹಾಡು ಇಂದು ಬಿಡುಗಡೆಯಾಗಲಿದೆ.
ಬೇರೆ ಬೇರೆ ಕೋನಗಳಲ್ಲಿ ಕರ್ನಾಟಕದ ವಿಶೇಷ ತಾಣಗಳನ್ನು ಈ ಹಾಡಿನಲ್ಲಿ ತೋರಿಸಲಾಗಿದೆ. ಸುಮಾರು 28 ತಾಣಗಳಿಗೆ ಹೋಗಿ ಆ ತಾಣಗಳನ್ನು ಬೇರೆ ಕೋನಗಳಲ್ಲಿ ಚಿತ್ರೀಕರಿಸಲಾಗಿದೆ. ಅದಕ್ಕೆ ತಕ್ಕಂತೆ ಕೇಶವಚಂದ್ರ ಸಾಹಿತ್ಯ ರಚನೆ ಮಾಡಿದ್ದಾರೆ. ಸುನೀಲ್ ಆಚಾರ್ಯ ನಿರ್ದೇಶನದ, ಭುವನ್ ಪೊನ್ನಣ್ಣ ನಟನೆಯ ‘ರಾಂಧವ’ ಚಿತ್ರದ ಈ ವಿಶೇಷ ಹಾಡು ಹುಟ್ಟಿದ ಕತೆಯೂ ರೋಚಕವಾಗಿದೆ.
ಕರ್ನಾಟಕದ ಯುವಪೀಳಿಗೆಗೆ ಕರ್ನಾಟಕದ ಶ್ರೇಷ್ಠತೆ ಏನು ಅಂತ ತೋರಿಸಬೇಕು ಎಂಬ ಕಾರಣಕ್ಕೆ ಈ ಹಾಡು ಮಾಡಿದ್ದೇವೆ. ಈ ಹಾಡು ನೋಡಿದ ಎಲ್ಲರೂ ಒಂದೊಳ್ಳೆ ಹಾಡು ನೋಡಿದ ಖುಷಿಯಲ್ಲಿರುತ್ತಾರೆ ಎಂದು ನಾನು ನಂಬಿದ್ದೇನೆ. ಕನ್ನಡದ ಮೇಲಿನ ಪ್ರೀತಿಗೆ ಈ ಹಾಡು ಅರ್ಪಣೆ.- ಭುವನ್ ಪೊನ್ನಣ್ಣ
ಸಿನಿಮಾ ಕೆಲಸದ ನಿಮಿತ್ತ ನಿರ್ದೇಶಕ ಸುನೀಲ್ ಆಚಾರ್ಯ ಚೆನ್ನೈಗೆ ಹೋಗಿದ್ದರು. ಆಗ ಅಲ್ಲಿ ಯಾರೋ ಒಬ್ಬ ತಮಿಳು ನಿರ್ದೇಶಕ ಸಿಕ್ಕಿದ. ‘ಆತ ಮಾತಾಡುತ್ತಾ ಕರ್ನಾಟಕದಲ್ಲಿ ಅಂಥಾ ವಿಶೇಷ ಜಾಗಗಳೇನೂ ಇಲ್ಲ ಅಂತ ಹೀಯಾಳಿಸಿದ. ಅವನಿಗೆ ಕರ್ನಾಟಕದ ವಿಶೇಷ ತಾಣಗಳನ್ನು ಪರಿಚಯಿಸಬೇಕು ಮತ್ತು ನಮ್ಮ ಯುವಪೀಳಿಗೆಗೆ ಕರ್ನಾಟಕ ಎಂಥಾ ಚೆಂದದ ನಾಡು ಅನ್ನುವುದನ್ನು ತೋರಿಸಬೇಕು ಎಂಬ ಕಾರಣಕ್ಕೆ ಈ ಹಾಡು ಮಾಡಿದೆವು’ ಎನ್ನುತ್ತಾರೆ ಸುನೀಲ್ ಆಚಾರ್ಯ.
‘ರಾಂಧವ’ನಾಗಿ ಭುವನ್ ಭರ್ಜರಿ ಎಂಟ್ರಿ
ಈ ಹಾಡಿನಲ್ಲಿ ಕನ್ನಡದ ಮಹಾನ್ ವ್ಯಕ್ತಿಗಳ ಪರಿಚಯವೂ ಇದೆ. ಜ್ಞಾನಪೀಠ ಪ್ರಶಸ್ತಿ ವಿಜೇತರ ಕುರಿತ ಮಾತು, ಕರುನಾಡಿನ ಕಲಾಪ್ರಕಾರಗಳನ್ನೂ ಇಲ್ಲಿ ಪರಿಚಯಿಸಲಾಗಿದೆ. ಈ ಹಾಡು ಇಂದು ಯೂಟ್ಯೂಬಿನಲ್ಲಿ ಬಿಡುಗಡೆಯಾಗಲಿದೆ.
ಹುತಾತ್ಮ ಯೋಧ ಗುರು ಕುಟುಂಬಕ್ಕೆ ಭುವನ್ ನೆರವು