ಪ್ರಜ್ವಲ್‌ ದೇವರಾಜ್‌ ಪತ್ನಿ ರಾಗಿಣಿ ಚಂದ್ರನ್‌ ಅಭಿನಯದಲ್ಲಿ ಸೆಟ್ಟೇರಿದ್ದ ‘ವಿಜಯದಶಮಿ’ ಸಿನಿಮಾ ಏನಾಯಿತು? ಚಿತ್ರೀಕರಣ ಶುರುವಾಗಿ ಎರಡ್ಮೂರು ದಿನಕ್ಕೆ ನಿರ್ಮಾಪಕರು ಚಿತ್ರವನ್ನು ಕೈ ಬಿಟ್ಟು ಹೋಗಿದ್ದಾರೆ. ಚಿತ್ರ ಟೇಕಾಫ್‌ ಆಗಲಿಲ್ಲ ಎಂದುಕೊಳ್ಳುತ್ತಿರುವಾಗಲೇ ಪುನೀತ್‌ರಾಜ್‌ಕುಮಾರ್‌ ‘ವಿಜಯದಶಮಿ’ಗೆ ಸಾಥ್‌ ನೀಡಲು ಬಂದಿದ್ದಾರೆ.

ಅರ್ಥಾತ್‌ ರಘು ಸಮಥ್‌ರ್‍ ನಿರ್ದೇಶನದ ಈ ಚಿತ್ರಕ್ಕೆ ಅಪ್ಪು ಮರು ಜೀವ ಕೊಡುತ್ತಿದ್ದಾರೆ. ಆದರೆ, ಚಿತ್ರದ ಹೆಸರು ಬದಲಾಗಲಿದೆ. ಈಗಾಗಲೇ ಫಿಕ್ಸ್‌ ಆಗಿದ್ದ ‘ವಿಜಯದಶಮಿ’ ಬದಲು ಬೇರೊಂದು ಹೆಸರನ್ನು ನಾಮಕರಣ ಮಾಡಿ ರೀ-ಲಾಂಚ್‌ ಮಾಡುವ ಯೋಚನೆ ಪಿಆರ್‌ಕೆ ಪ್ರೊಡಕ್ಷನ್‌ನ ಪುನೀತ್‌ ರಾಜ್‌ಕುಮಾರ್‌ ಅವರ ಯೋಚನೆ.

Add Asianetnews Kannada as a Preferred SourcegooglePreferred

ರಘು ಸಮಥ್‌ರ್‍ ಅವರ ಈ ಸಿನಿಮಾ ಮಹಿಳಾ ಪ್ರಧಾನವಾದ ಚಿತ್ರ. ಮೊದಲ ಬಾರಿಗೆ ರಾಗಿಣಿ ಚಂದ್ರನ್‌ ನಾಯಕಿಯಾಗಿ ನಟಿಸುತ್ತಿರುವ ಸಿನಿಮಾ. ಚಿತ್ರಕ್ಕೆ ಬೇಕಾದ ಪೂರ್ವ ತಯಾರಿ ಮಾಡಿಕೊಂಡೇ ಚಿತ್ರೀಕರಣ ಮಾಡಲಾಗಿತ್ತು. ಆದರೆ, ಯಾಕೋ ಮೊದಲೇ ಗೊತ್ತು ಮಾಡಲಾಗಿದ್ದ ನಿರ್ಮಾಪಕರು ಚಿತ್ರವನ್ನು ಮುಂದುವರಿಸಲಿಲ್ಲ. ಹೀಗಾಗಿ ಇದೇ ಸಿನಿಮಾ ಈಗ ಪವರ್‌ಸ್ಟಾರ್‌ ಕೈಗೆ ಬಂದಿದೆ.

ಆ ಮೂಲಕ ಅಪ್ಪು, ಮಹಿಳಾ ಪ್ರಧಾನ ಚಿತ್ರವನ್ನು ಕೈಗೆತ್ತಿಕೊಂಡಿದ್ದಾರೆ. ಹಾಗೆ ನೋಡಿದರೆ ಇದು ಅವರ ಬ್ಯಾನರ್‌ನ ನಾಲ್ಕನೇ ನಿರ್ಮಾಣದ ಸಿನಿಮಾ. ಹೇಮಂತ್‌ ನಿರ್ದೇಶನದಲ್ಲಿ ‘ಕವಲುದಾರಿ’, ರಾಜ್‌ ಬಿ ಶೆಟ್ಟಿನಟನೆಯ ‘ಮಾಯಾಬಜಾರ್‌’ ಹಾಗೂ ಪನ್ನಗಭರಣ ನಿರ್ದೇಶನದ, ಡ್ಯಾನೀಶ್‌ ಸೇಠ್‌ ಅಭಿನಯದ ಚಿತ್ರಗಳು ಶುರುವಾಗಿವೆ. ಯಾವ ಚಿತ್ರವೂ ಇನ್ನೂ ಬಿಡುಗಡೆಯಾಗಿಲ್ಲ. ಆದರೆ, ಈ ಸಾಲಿಗೆ ಈಗ ರಾಗಿಣಿ ಚಂದ್ರನ್‌ ಸಿನಿಮಾ ಸೇರಿಕೊಂಡಿದೆ.