ಡಾಲಿ ಧನಂಜಯ್‌ ಸ್ಯಾಂಡಲ್‌ವುಡ್‌ನ ಬಹು ಬೇಡಿಕೆಯ ಹೀರೋ ಕಮ್‌ ವಿಲನ್‌ ಆಗುತ್ತಿದ್ದಾರೆ. ಕನ್ನಡದಲ್ಲೇ ಮೂರು ಚಿತ್ರಗಳಲ್ಲಿ ವಿಲನ್‌ ಆಗುವ ಜತೆಗೆ ಉಳಿದಂತೆ ನಾಲ್ಕು ಚಿತ್ರಗಳ ಪೈಕಿ ಎರಡರಲ್ಲಿ ಹೀರೋ, ಮತ್ತೆರಡು ಚಿತ್ರಗಳಲ್ಲಿ ಅತಿಥಿ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಅದರಲ್ಲೂ ಮೂರು ಬಹು ದೊಡ್ಡ ಚಿತ್ರಗಳಲ್ಲೇ ವಿಲನ್‌ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ.

1. ಸಂತೋಷ್‌ ಆನಂದ್‌ರಾಮ್‌ ನಿರ್ದೇಶಿಸಿ, ಪುನೀತ್‌ ರಾಜ್‌ಕುಮಾರ್‌ ನಟನೆಯ ‘ಯುವರತ್ನ’ ಚಿತ್ರದಲ್ಲಿ ಸ್ಟೈಲಿಷ್‌ ವಿಲನ್‌.

Add Asianetnews Kannada as a Preferred SourcegooglePreferred

2. ಧ್ರುವ ಸರ್ಜಾ ಅಭಿನಯದ ‘ಪೊಗರು’ ಚಿತ್ರಕ್ಕೂ ಖಳನಾಯಕನಾಗಿದ್ದಾರೆ ಡಾಲಿ. ಇಲ್ಲಿ ತೆಲುಗಿನ ಜಗಪತಿ ಬಾಬು ಜತೆಗೆ ಹೀರೋ ವಿರುದ್ಧ ಕತ್ತಿ ಮಸೆಯಲಿದ್ದಾರೆ.

3. ದುನಿಯಾ ವಿಜಯ್‌ ಅವರ ‘ಸಲಗ’ ಚಿತ್ರದಲ್ಲೂ ಡಾಲಿ ಖಳನಾಯಕನಾಗಲಿದ್ದಾರೆ. ಚಿತ್ರದಲ್ಲಿ ವಿಶೇಷವಾದ ವಿಲನ್‌ ಪಾತ್ರವಿದ್ದು, ಅದರಲ್ಲಿ ನಟಿಸುವಂತೆ ವಿಜಯ್‌ ಅವರೇ ಕೇಳಿದ್ದಾರೆ ಎನ್ನಲಾಗಿದೆ.

ಅಲ್ಲಿಗೆ ‘ಟಗರು’ ಡಾಲಿಗೆ ಸ್ಯಾಂಡಲ್‌ವುಡ್‌ ದೊಡ್ಡ ಮಟ್ಟದಲ್ಲೇ ಮಣೆ ಹಾಕಿದ್ದು, ಹೀರೋ ಆಗಿದ್ದುಕೊಂಡೇ ನೆಗೇಟಿವ್‌ ಶೇಡ್‌ನಲ್ಲಿ ಕಾಣಿಸುವುದಕ್ಕೆ ಸಾಧ್ಯವಾಗುತ್ತಿರುವುದು ಸದ್ಯ ಧನಂಜಯ್‌ ಅವರಿಗೆ ಮಾತ್ರ ಸಾಧ್ಯವಾಗುತ್ತಿದೆ ಎನ್ನಬಹುದು.

ಯಾವುದೇ ಪಾತ್ರ ಕೊಟ್ಟರೂ ಅದಕ್ಕೆ ಕಲಾವಿದನಾಗಿ ಜೀವ ತುಂಬ ಬೇಕು ಎಂಬುದು ‘ಟಗರು’ ಚಿತ್ರದ ನಂತರ ಮತ್ತಷ್ಟುಅರ್ಥವಾಯಿತು. ರಂಗಭೂಮಿಯ ಹಿನ್ನೆಲೆಯಿಂದ ಬಂದ ನಾನು ಇಂಥದ್ದೇ ಪಾತ್ರ ಎಂದು ಕೂರುವ ಬದಲು, ಕೊಟ್ಟಪಾತ್ರವನ್ನು ಪ್ರೇಕ್ಷಕರು ನೆನಪಿನಲ್ಲಿಟ್ಟುಕೊಳ್ಳುವಂತೆ ಅಭಿನಯಿಸುವುದು ನನ್ನ ಕೆಲಸ. ಆ ಕಾರಣಕ್ಕೆ ನಾಯಕ, ಖಳನಾಯಕ, ಅತಿಥಿ ಪಾತ್ರ ಎಂದು ನೋಡದೆ ಸೂಕ್ತ ಎನಿಸಿದ್ದನ್ನು ಒಪ್ಪಿಕೊಳ್ಳುತ್ತಿರುವೆ. - ಧನಂಜಯ್‌

ಎರಡು ಚಿತ್ರಗಳಿಗೆ ಹೀರೋ

ಧನಂಜಯ್‌ ವಿಲನ್‌ ಪಾತ್ರಗಳಿಗೆ ಮಾತ್ರ ಸೀಮಿತವಾಗುತ್ತಿಲ್ಲ. ತಮಗೆ ಸೂಕ್ತ ಎನಿಸುವ ಕತೆಗಳಿಗೆ ತಾವೇ ಹೀರೋ ಆಗುತ್ತಿದ್ದಾರೆ. ಆ ಪೈಕಿ ಸೂರಿ ನಿರ್ದೇಶನದ ‘ಪಾಪ್‌ಕಾರ್ನ್‌ ಮಂಕಿ ಟೈಗರ್‌’ ಚಿತ್ರಕ್ಕೆ ಶೂಟಿಂಗ್‌ ನಡೆಯುತ್ತಿದೆ. ‘ಡಾಲಿ’ ಚಿತ್ರಕ್ಕೂ ಇವರೇ ನಾಯಕ. ಈ ಹಿಂದೆ ‘ಗಣಪ’ ನಿರ್ದೇಶಿಸಿದ ಪ್ರಭು ಶ್ರೀನಿವಾಸ್‌ ನಿರ್ದೇಶಿಸಲಿರುವ ಚಿತ್ರ ಅದು. ‘ಎರಡನೇ ಸಲ’ ನಿರ್ಮಾಪಕ ಯೋಗೀಶ್‌ ನಿರ್ಮಿಸಲಿದ್ದಾರೆ.

ಎರಡರಲ್ಲಿ ಗೆಸ್ಟ್‌ ರೋಲ್‌

ಎರಡು ಚಿತ್ರಗಳಲ್ಲಿ ಅತಿಥಿಯಾಗಿ ಕಾಣಿಸಿಕೊಳ್ಳುತ್ತಿದ್ದು, ಆ ಎರಡು ಚಿತ್ರಗಳ ಪೈಕಿ ಒಂದಕ್ಕೆ ಶೂಟಿಂಗ್‌ ಮುಗಿದರೆ, ಮತ್ತೊಂದಕ್ಕೆ ಚಿತ್ರೀಕರಣ ನಡೆಯುತ್ತಿದೆ. ವಿಜಯ್‌ ಪ್ರಸಾದ್‌ ನಿರ್ದೇಶಿಸಿ, ಜಗ್ಗೇಶ್‌ ನಾಯಕನಾಗಿ ನಟಿಸುತ್ತಿರುವ ‘ತೋತಾಪುರಿ’ ಚಿತ್ರದಲ್ಲಿ ಧನಂಜಯ್‌ ಅವರದ್ದೇ ನಾರಾಯಣ ಪಿಳ್ಳೈ ಎನ್ನುವ ಪಾತ್ರ ಮಾಡುತ್ತಿದ್ದಾರೆ. ದರ್ಶನ್‌ ನಾಯಕನಾಗಿರುವ ‘ಯಜಮಾನ’ ಚಿತ್ರದಲ್ಲಿ ಮಿಠಾಯಿ ಸೂರಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.