ಸಂಕಷ್ಟದಲ್ಲಿ ಪ್ರಿಯಾಮಣಿ?
ಪ್ರಿಯಾಮಣಿಗೆ ಈ ಶುಕ್ರವಾರ ಡಬಲ್ ಧಮಾಕ. ಒಂದೇ ದಿನ ತಮ್ಮ ನಟನೆಯ ಬಹು ನಿರೀಕ್ಷೆಯ ಎರಡು ಚಿತ್ರಗಳು ತೆರೆಗೆ ಬರುತ್ತಿವೆ! ‘ದನ ಕಾಯೋನು’ ಹಾಗೂ ‘ಇದೊಳ್ಳೆ ರಾಮಾಯಣ’. ಈ ಎರಡು ಸಿನಿಮಾಗಳು ಪ್ರಿಯಾಮಣಿ ಅವರಿಗೆ ಬೇರೆ ಬೇರೆ ಕಾರಣಗಳಿಗೆ ಬಹು ಮುಖ್ಯವಾದ ಚಿತ್ರಗಳೇ. ಒಂದು ಯೋಗರಾಜ್ ಭಟ್ ನಿರ್ದೇಶನದ, ನಟ ವಿಜಯ್ ಜತೆಗೆ ಕಾಣಿಸಿಕೊಳ್ಳುತ್ತಿರುವ ಪಕ್ಕಾ ಕಮರ್ಷಿಯಲ್ ಸಿನಿಮಾವಾದರೆ, ಮತ್ತೊಂದು ಪ್ರಕಾಶ್ ರೈ ನಿರ್ದೇಶನದಲ್ಲಿ ನಟಿಸಿರುವ ಚಿತ್ರ. ಆದರೆ, ಎರಡೂ ಸಿನಿಮಾಗಳು ಒಂದೇ ದಿನ ಬಿಡುಗಡೆ ಆಗ್ತಿರೋದ್ರಿಂದ ಯಾವ ಚಿತ್ರವನ್ನು ಪ್ರೇಕ್ಷಕರು ನೋಡಿ ಗೆಲ್ಲಿಸುತ್ತಾರೆಂಬ ಕುತೂಹಲ ಜತೆಗೆ ಯಾವ ಚಿತ್ರದ ಪ್ರಚಾರಕ್ಕೆ ಹೆಚ್ಚು ಒತ್ತು ಕೊಡಬೇಕೆಂಬ ಒತ್ತಡವೂ ಪ್ರಿಯಾಮಣಿ ಅವರನ್ನು ಕಾಡುತ್ತಿದೆ.
ಬೇಡಿಕೆಯ ಕಲಾವಿದರು ನಟಿಸಿರುವ ಬೇರೆ ಬೇರೆ ಸಿನಿಮಾಗಳು ಒಂದೇ ವಾರ ತೆರೆ ಕಂಡರೆ ಸಮಸ್ಯೆ ಹೀಗೇ ಇರುತ್ತದೆ. ‘ಇದೊಳ್ಳೆ ರಾಮಾಯಣ’ದ ಬಗ್ಗೆ ಹೆಚ್ಚು ಮಾತನಾಡಿದರೆ, ‘ದನ ಕಾಯೋನು’ ಚಿತ್ರಕ್ಕೆ ಸಿಟ್ಟು. ಒಂದು ವೇಳೆ ‘ದನ ಕಾಯೋನು’ ಚಿತ್ರದ ಬಗ್ಗೆ ಮಾತನಾಡಿದರೆ ‘ರಾಮಾಯಣ’ವನ್ನು ನಿರ್ಲಕ್ಷಿಸುತ್ತಿದ್ದಾಳೆಂಬ ಅರೋಪ ಹೊತ್ತುಕೊಳ್ಳಬೇಕಾಗುತ್ತದೆ. ಸದ್ಯ ಇದೇ ಸಂಕಟದಲ್ಲಿ ಕಳೆದ ಎರಡು ವಾರಗಳಿಂದ ಯಾವ ಚಿತ್ರದ ಬಗ್ಗೆ ಮಾತನಾಡಬೇಕು ಎನ್ನುವ ಗೊಂದಲದಲ್ಲೇ ಕಾಲ ದೂಡುತ್ತಿದ್ದಾರಂತೆ. ನಿಜವೇ?