ಬಹುರಾಷ್ಟ್ರೀಯ ಕಂಪನಿಗಳ ವಿರುದ್ಧ ಸೆಡ್ಡುಹೊಡೆಯಲು ಸಜ್ಜಾದ ರಾಜ್ಯ ಚಲನಚಿತ್ರ ವಾಣಿಜ್ಯ ಮಂಡಳಿ
ಸಕಾಲಕ್ಕೆ ಮಾತುಕತೆ ನಡೆಸಿ ತನ್ನ ಷರತ್ತುಗಳಿಗೆ ಒಪ್ಪದಿದ್ದರೆ ಚಿತ್ರಗಳ ಪ್ರದರ್ಶನಕ್ಕೆ ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳುವುದಾಗಿ ಯುಎಫ್ಓ ಮತ್ತು ಕ್ಯೂಬ್ ಸಂಸ್ಥೆಗೆ ಫಿಲಂ ಚೇಂಬರ್ ಎಚ್ಚರಿಕೆ ನೀಡಿದೆ
ಬೆಂಗಳೂರು(ಮಾ.11): ಯುಎಫ್ಓ ಮತ್ತು ಕ್ಯೂಬ್ ಸಂಸ್ಥೆಯ ವಿರುದ್ಧದ ಪ್ರತಿಭಟನೆಯನ್ನು ಅನಿರ್ದಿಷ್ಟಾವಧಿಗೆ ಮುಂದುವರೆಸಲು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ನಿರ್ಧರಿಸಿದ್ದು, ಇದೇ 16ರಿಂದ ಅನಿರ್ದಿಷ್ಟಾವಧಿಗೆ ಪರಭಾಷೆ ಸೇರಿದಂತೆ ಯಾವುದೇ ಹೊಸ ಚಿತ್ರಗಳನ್ನು ಬಿಡುಗಡೆ ಮಾಡದಿರಲು ನಿರ್ಧರಿಸಿದೆ.
ಸಕಾಲಕ್ಕೆ ಮಾತುಕತೆ ನಡೆಸಿ ತನ್ನ ಷರತ್ತುಗಳಿಗೆ ಒಪ್ಪದಿದ್ದರೆ ಚಿತ್ರಗಳ ಪ್ರದರ್ಶನಕ್ಕೆ ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳುವುದಾಗಿ ಯುಎಫ್ಓ ಮತ್ತು ಕ್ಯೂಬ್ ಸಂಸ್ಥೆಗೆ ಫಿಲಂ ಚೇಂಬರ್ ಎಚ್ಚರಿಕೆ ನೀಡಿದೆ. ಯುಎಫ್ಓ ಮತ್ತು ಕ್ಯೂಬ್ ವಿರುದ್ಧದ ಪ್ರತಿಭಟನೆಯನ್ನು ತೀವ್ರಗೊಳಿಸುವ ಸಂಬಂಧ ಶನಿವಾರ ತಮಿಳುನಾಡು ಮತ್ತು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಪದಾಧಿಕಾರಿ ಗಳು ಹಾಗೂ ನಿರ್ಮಾಪಕರ ಸಭೆಯ ನಂತರ ತಮಿಳುನಾಡು ನಿರ್ಮಾಪಕರ ಸಂಘದ ಅಧ್ಯಕ್ಷ ವಿಶಾಲ್, ಉಪಾಧ್ಯಕ್ಷ ಪ್ರಕಾಶ್ ರೈ ಅವರ ಸಮ್ಮುಖದಲ್ಲಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಸಾ.ರಾ.ಗೋವಿಂದು ಸುದ್ದಿಗೋಷ್ಠಿ ನಡೆಸಿ ಸಭೆಯ ನಿರ್ಧಾರ ಪ್ರಕಟಿಸಿದರು.
ಯುಎಫ್ಓ ಮತ್ತು ಕ್ಯೂಬ್ ಸಂಸ್ಥೆಯ ವಿರುದ್ಧ ಶಾಸಕ ಹಾಗೂ ನಿರ್ಮಾಪಕರ ಸಂಘದ ಅಧ್ಯಕ್ಷ ಮುನಿರತ್ನ, ನಿರ್ಮಾಪಕ ರಾಕ್ಲೈನ್ ವೆಂಕಟೇಶ್ ಕೂಡ ಕಿಡಿಕಾರಿದರು. ತಮಿಳು ನಾಡು ನಿರ್ಮಾಪಕ ಸಂಘದ ಪ್ರಧಾನ ಕಾರ್ಯದರ್ಶಿ ಕದಿರೇಶ್, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಪದಾಧಿಕಾರಿಗಳಾದ ಸುರೇಶ್, ಉಮೇಶ್ ಬಣಕಾರ್, ನರಸಿಂಹ ಮತ್ತಿತರರು ಹಾಜರಿದ್ದರು.