ಡಿಸೆಂಬರ್ ಮುಗಿದು ಜನವರಿ ಶುರುವಾಗುವ ಹೊತ್ತಿಗೆ ಸ್ಟಾರ್ ನಟರು ಒಬ್ಬರ ಹಿಂದೆ ಒಬ್ಬರಂತೆ ಚಿತ್ರಮಂದಿರಗಳಿಗೆ ಲಗ್ಗೆ ಹಾಕಲಿದ್ದಾರೆ.

ಆ ಮೂಲಕ ಹೊಸ ವರ್ಷದ ಮೊದಲ ತಿಂಗಳನ್ನು ಸ್ಟಾರ್ ನಟರ ಚಿತ್ರಗಳೇ ಅದ್ದೂರಿಯಾಗಿ ಸ್ವಾಗತಿಸಲಿವೆ. ಅಲ್ಲದೆ ಒಬ್ಬೊಬ್ಬ ಸ್ಟಾರ್ ನಟನಿಗೂ ಒಂದೊಂದು ಸಿನಿಮಾ ಇದ್ದು, ಬಹುತೇಕ ಎಲ್ಲ ಸ್ಟಾರ್‌ಗಳು ಮೊದಲ ತಿಂಗಳಲ್ಲೇ ತಮ್ಮ ಖಾತೆ ತೆರೆಯಲಿದ್ದಾರೆ.

Add Asianetnews Kannada as a Preferred SourcegooglePreferred

ದರ್ಶನ್ ಅಭಿನಯದ ‘ಕುರುಕ್ಷೇತ್ರ’, ‘ಯಜಮಾನ’, ನಿಖಿಲ್ ಕುಮಾರ್ ನಟನೆಯ ‘ಸೀತಾರಾಮ ಕಲ್ಯಾಣ’, ಪುನೀತ್ ರಾಜ್‌ಕುಮಾರ್ ಅವರ ‘ನಟ ಸಾರ್ವಭೌಮ’, ಶಿವಣ್ಣ ನಟನೆಯ ‘ಕವಚ’ ಹಾಗೂ ‘ರುಸ್ತುಂ’, ಸುದೀಪ್ ಅವರ ‘ಪೈಲ್ವಾನ್’ ಚಿತ್ರಗಳು ಜನವರಿಯಲ್ಲೇ ಬರಲು ಸಜ್ಜಾಗಿವೆ. ಈ ಪೈಕಿ ಹರ್ಷ ನಿರ್ದೇಶನದ ‘ಸೀತಾರಾಮ ಕಲ್ಯಾಣ’ ಸಿನಿಮಾ ಜ.24 ಅಥವಾ 25ರಂದು ತೆರೆ ಬಂದರೆ, ಪವನ್ ಒಡೆಯರ್ ಅವರ ‘ನಟ ಸಾರ್ವಭೌಮ’ ಚಿತ್ರ ಗಣರಾಜ್ಯೋತ್ಸವ ಪ್ರಯುಕ್ತ ತೆರೆಗೆ ಬರುತ್ತಿವೆ.

ಇನ್ನೂ ಕುರುಕ್ಷೇತ್ರಕ ಜ.14 ಸಂಕ್ರಾಂತಿಯನ್ನು ಗಮನದಲ್ಲಿಟ್ಟುಕೊಂಡು ಬಂದರೆ, ‘ಯಜಮಾನ’ ಕೂಡ ಅದೇ ಹಬ್ಬವನ್ನು ನಂಬಿಕೊಂಡಿದೆ ಎನ್ನಲಾಗುತ್ತಿದೆ. ಈ ನಡುವೆ ಶಿವಣ್ಣ ನಟನೆಯ ಎರಡು ಚಿತ್ರಗಳಾದ ‘ಕವಚ’ ಹಾಗೂ ‘ರುಸ್ತುಂ’ ಚಿತ್ರಗಳು ಕೂಡ ಒಂದರ ನಂತರ ಒಂದು ಸಿನಿಮಾ ತೆರೆಗೆ ಬರಲಿದೆ.