ನಿರ್ದೇಶಕಿ Nandini Reddy ಈಗ ಎಲ್ಲರಿಗೂ ಚಿರಪರಿಚಿತರು. ಆದರೆ, ಒಂದು ಕಾಲದಲ್ಲಿ ಸಹಾಯಕ ನಿರ್ದೇಶಕಿಯಾಗಿ ಅವಕಾಶ ಸಿಗುವುದೇ ಅವರಿಗೆ ಕಷ್ಟವಾಗಿತ್ತು. ನಟಿ ರಮ್ಯಾ ಕೃಷ್ಣನ್ ಮಾಡಿದ ಒಂದೇ ಒಂದು ಫೋನ್ ಕಾಲ್ನಿಂದ ತಮ್ಮ ಬದುಕೇ ಬದಲಾಯ್ತು ಎಂದು ನಂದಿನಿ ರೆಡ್ಡಿ ಹೇಳಿಕೊಂಡಿದ್ದಾರೆ.
ನಂದಿನಿ ರೆಡ್ಡಿ ನಿರ್ದೇಶಕ ಕೃಷ್ಣವಂಶಿ ಬಳಿ ಸಹಾಯಕ ನಿರ್ದೇಶಕಿಯಾಗಿ ಕೆಲಸ ಮಾಡಿದ್ದರು. ಆದರೆ, ಆರಂಭದಲ್ಲಿ ನಂದಿನಿಯನ್ನು ನೇಮಿಸಿಕೊಳ್ಳಲು ಕೃಷ್ಣವಂಶಿ ಒಪ್ಪಿರಲಿಲ್ಲ. 'ರಾತ್ರಿ ಹೊತ್ತು ಎಡಿಟಿಂಗ್ ಕೆಲಸ ಇರುತ್ತದೆ, ಈ ಸಮಯದಲ್ಲಿ ಹುಡುಗಿ ಸಹಾಯಕ ನಿರ್ದೇಶಕಿಯಾಗಿರುವುದು ಯಾಕೆ, ಸುಮ್ಮನೆ ತಲೆನೋವು' ಎಂದು ಅವರು ಬೇಡ ಅಂದಿದ್ದರು. ಈ ಅವಕಾಶ ಕೈತಪ್ಪಿ ಹೋಗಿತ್ತು. ನಂತರ, ಸ್ನೇಹಿತರ ಮೂಲಕ ನಂದಿನಿಗೆ ರಮ್ಯಾ ಕೃಷ್ಣನ್ ಅವರ ಪರಿಚಯವಾಯಿತು.
ಒಮ್ಮೆ ರಮ್ಯಾ ಕೃಷ್ಣನ್ ಫೋನ್ ಮಾಡಿದಾಗ, ತಾನು ಬೆಂಗಳೂರಿಗೆ ಹೋಗುತ್ತಿರುವುದಾಗಿ ನಂದಿನಿ ಹೇಳಿದರು. 'ನಿನಗೆ ಕನ್ನಡ ಬರುತ್ತಾ?' ಎಂದು ರಮ್ಯಾ ಕೇಳಿದರು. 'ಬರಲ್ಲ, ಆದರೆ ಇಲ್ಲಿ ಅವಕಾಶ ಸಿಗುತ್ತಿಲ್ಲ, ಕೃಷ್ಣವಂಶಿ ಬಳಿ ಸಿಕ್ಕ ಅವಕಾಶವೂ ಕೈತಪ್ಪಿತು' ಎಂದು ನಂದಿನಿ ಹೇಳಿದರು. ತಕ್ಷಣ ರಮ್ಯಾ ಕೃಷ್ಣನ್ ತಮ್ಮ ಪತಿ ಕೃಷ್ಣವಂಶಿಗೆ ಫೋನ್ ಮಾಡಿ ಒಪ್ಪಿಸಿದರು. ಮರುದಿನವೇ ನಂದಿನಿ 'ಚಂದ್ರಲೇಖ' ಸಿನಿಮಾಗೆ ಸಹಾಯಕ ನಿರ್ದೇಶಕಿಯಾಗಿ ಸೇರಿಕೊಂಡರು.
ನಂದಿನಿ 'ನಿನ್ನೇ ಪೆಳ್ಳಾಡತಾ' ಸಿನಿಮಾಗೂ ಕೆಲಸ ಮಾಡಿದ್ದರು. ಅದಕ್ಕಾಗಿ ತುಂಬಾ ಕಷ್ಟಪಟ್ಟಿದ್ದರು. ಆದರೆ, ಎಷ್ಟೇ ಕೆಲಸ ಮಾಡಿದರೂ ಕೃಷ್ಣವಂಶಿ ಬೈಯುತ್ತಿದ್ದರು. ಒಂದು ದಿನ ಬೆಳ್ಳಂಬೆಳಗ್ಗೆ ಶೂಟಿಂಗ್ ಇತ್ತು. ಆ ಸಮಯದಲ್ಲಿ ಸರಿಯಾಗಿ ಕೆಲಸ ಮಾಡಿಲ್ಲ ಎಂದು ಅವರು ಜೋರಾಗಿ ಬೈದರು. ಇದರಿಂದ ನಂದಿನಿ ಅಳಲು ಆರಂಭಿಸಿದರು. ಅಲ್ಲೇ ಇದ್ದ ರಮ್ಯಾ ಕೃಷ್ಣನ್, ನಂದಿನಿ ಅಳುವುದನ್ನು ನೋಡಿ ತಕ್ಷಣ ಕೃಷ್ಣವಂಶಿಗೆ ಬೈದರು.
ಯಾಕೆ ಅವಳಿಗೆ ಹೇಳುತ್ತೀಯ
ನಂತರ ವಂಶಿ, ನಂದಿನಿ ಬಳಿ ಬಂದು 'ನೀನು ಚೆನ್ನಾಗಿ ಕೆಲಸ ಮಾಡುತ್ತೀಯ ಅಂತಾನೇ ನಿನಗೆ ಕೆಲಸ ಹೇಳೋದು. ನೀನು ಯಾಕೆ ಅವಳಿಗೆ ಹೇಳುತ್ತೀಯ, ಅವಳು ನನಗೆ ಬೈತಾಳೆ' ಎಂದು ಹೇಳಿದರಂತೆ. 'ಮುರಾರಿ' ಸಿನಿಮಾಗಾಗಿ ನಾವು ತುಂಬಾ ಕಷ್ಟಪಟ್ಟಿದ್ದೆವು. ಸಾಮಾನ್ಯವಾಗಿ ಸಹಾಯಕ ನಿರ್ದೇಶಕರ ಹೆಸರುಗಳನ್ನು ಸಿನಿಮಾದ ಕೊನೆಯಲ್ಲಿ ಕ್ರೆಡಿಟ್ಸ್ನಲ್ಲಿ ಹಾಕುತ್ತಾರೆ. ಆದರೆ, ಈ ಚಿತ್ರಕ್ಕಾಗಿ ನಾವು ತುಂಬಾ ಶ್ರಮಿಸಿದ್ದರಿಂದ, ನಮ್ಮ ಹೆಸರುಗಳನ್ನು ಆರಂಭದ ಟೈಟಲ್ಸ್ನಲ್ಲೇ ಹಾಕಿದ್ದರು. ಅದನ್ನು ನೋಡಿ ತುಂಬಾ ಖುಷಿಯಾಯಿತು' ಎಂದು ನಂದಿನಿ ರೆಡ್ಡಿ ಹೇಳಿದ್ದಾರೆ.


