ಕಬಾಲಿ ನಟಿ ಸಂದರ್ಶನ: #MeTooಗೆ ಬೆಂಬಲ
ಮೀಟೂ ಒಳ್ಳೆಯ ವೇದಿಕೆ. ಅದು ಒಳ್ಳೆಯ ರೀತಿಯಲ್ಲೇ ಬಳಕೆಯಾಗಬೇಕು. ಆಗ ನೊಂದವರಿಗೆ ನ್ಯಾಯವೂ ಸಿಗುತ್ತೆ! ಬಾಲಿವುಡ್ ಸೇರಿದಂತೆ ಸ್ಯಾಂಡಲ್ವುಡ್ನಲ್ಲೂ ಸಂಚಲನ ಮೂಡಿಸಿರುವ ‘ಮೀ ಟೂ’ ಬಿರುಗಾಳಿಗೆ ಹೀಗೆಂದು ತಣ್ಣಗೆ ಪ್ರತಿಕ್ರಿಯೆ ನೀಡಿದವರು ನಟಿ ಸಾಯಿ ಧನ್ಸಿಕಾ. ರಜನೀಕಾಂತ್ ಅಭಿನಯದ ‘ಕಬಾಲಿ’ಯಲ್ಲಿ ಕಾಣಿಸಿಕೊಂಡ ಧನ್ಸಿಕಾ ಇದೀಗ ಸುನೀಲ್ ಕುಮಾರ್ ದೇಸಾಯಿ ನಿರ್ದೇಶನದ ‘ಉದ್ಘರ್ಷ’ಚಿತ್ರದೊಂದಿಗೆ ಕನ್ನಡಕ್ಕೂ ಬಂದಿದ್ದಾರೆ. ಅವರ ಜತೆ ಮಾತುಕತೆ.
‘ಕಬಾಲಿ’ ನಂತರ ನಿಮ್ಮ ಸಿನಿಜರ್ನಿಯಲ್ಲಿ ಆದ ಚೇಂಜಸ್ ಏನು?
ಸಾಕಷ್ಟು ಆಫರ್ ಬಂದವು. ಬೇರೆ ಭಾಷೆಗಳಲ್ಲೂ ಡಿಮ್ಯಾಂಡ್ ಕ್ರಿಯೇಟ್ ಆಯಿತು. ಕನ್ನಡಕ್ಕೂ ಅಲ್ಲಿಂದಲೇ ಬರುವಂತಾಯಿತು. ಜತೆಗೆ ಚಿತ್ರೋ ದ್ಯಮದಲ್ಲಿ ನನಗಿದ್ದ ಇಮೇಜ್ ಕೂಡ ಬದಲಾಯಿತು. ಸಾಕಷ್ಟು ಜನಪ್ರಿಯತೆ ಪಡೆದ ಸ್ಟಾರ್ಗಳೇ ಗುರುತಿಸಿ ಮಾತನಾಡಿಸುವಷ್ಟು ಬದಲಾವಣೆ ಕಾಣಿಸಿತು. ಆದರೂ, ನಾನು ನಾನಾಗಿಯೇ ಇದ್ದೇನೆ. ಹಾಗೆಯೇ, ವೈಯಕ್ತಿಕ ಬದುಕಲ್ಲೂ ಒಂದಷ್ಟು ಬದಲಾವಣೆ ಆದವು. ಇದೆಲ್ಲ ಕಬಾಲಿ ಪ್ರಭಾವ.
ಉದ್ಘರ್ಷ ದ ಅವಕಾಶ ಸಿಕ್ಕಿದ್ದು ಹೇಗೆ?
ನಿರ್ದೇಶಕ ಸುನೀಲ್ ಕುಮಾರ್ ದೇಸಾಯಿ ಸರ್ ನನ್ನನ್ನು ಫಸ್ಟ್ ಟೈಮ್ ಭೇಟಿ ಮಾಡಿದ್ದು ಕಬಾಲಿ ಬಂದ ನಂತರವೇ. ಅವರು ಆ ಸಿನಿಮಾ ನೋಡಿದ್ದರಂತೆ. ಅಂತಹದ್ದೇ ಒಂದು ಪಾತ್ರಕ್ಕೆ ನಾನೇ ಸೂಕ್ತ ಅಂತ ಡಿಸೈಡ್ ಮಾಡಿಕೊಂಡು ಚೆನ್ನೈಗೆ ಬಂದಿದ್ದರು. ಫಸ್ಟ್ ಟೈಮ್ ಭೇಟಿ ಆದಾಗ ಅವರು ಹಾಗೆ ಹೇಳಿದರು. ಒಂದೊಳ್ಳೆ ಪಾತ್ರ. ನೀವು ಮಾಡ್ಬೇಕು ಅಂತ ಕೇಳಿದ್ರು. ಮೊದಲಿಗೆ ನಾನು ಕತೆ ಮತ್ತು ಪಾತ್ರ ಏನು ಅಂತ ಕೇಳುತ್ತೇನೆ ಆಮೇಲೆ ಡಿಸೈಡ್ ಮಾಡುತ್ತೇನೆ ಅಂತ ಹೇಳಿದೆ. ಅಂತೆಯೇ ಕತೆ ಹೇಳಿದ್ರು. ಪಾತ್ರದ ಬಗ್ಗೆಯೂ ಮಾಹಿತಿ ಕೊಟ್ಟರು. ಎರಡು ಇಂಪ್ರೆಸ್ ಆದವು. ಆ ಮೂಲಕ ಈ ಸಿನಿಮಾ ಒಪ್ಪಿಕೊಂಡು ಇಲ್ಲಿಗೆ ಬರುವಂತಾಯಿತು.
ಸುನೀಲ್ ಕುಮಾರ್ ದೇಸಾಯಿ ನಿರ್ದೇಶನದ ಬಗ್ಗೆ ಹೇಳೋದಾದ್ರೆ..
ಸುಮಾರು ಹತ್ತಿಪ್ಪತ್ತು ಸಿನಿಮಾಗಳಾದವು. ಇಷ್ಟು ಸಿನಿಮಾಗಳಲ್ಲಿ ನಾನು ಕಂಡ ಕೆಲವು ಬುದ್ಧಿವಂತ ಹಾಗೂ ಸೂಕ್ಷ್ಮ ಸಂವೇದನೆಯ ನಿರ್ದೇಶಕರಲ್ಲಿ ಅವರು ಒಬ್ಬರು. ಸಿನಿಮಾವನ್ನು ಅವರು ಪ್ರೀತಿಸುತ್ತಾರೆ. ಆ ಪ್ರೀತಿ ಹೀಗೆ ಇರಬೇಕು ಅಂತ ಹೇಳುತ್ತಾರೆ. ಅದು ತೆರೆ ಮೇಲೆ ಬಂದಾಗಲೇ ಸೀನ್ ಓಕೆ ಎನ್ನುತ್ತಾರೆ. ಹಾಗೆಯೇ ಈ ಸಿನಿಮಾ ಬಂದಿದೆ. ಪ್ರತಿ ದೃಶ್ಯವು ಅದ್ಭುತವಾಗಿದೆ. ಅವರು ಈ ವಯಸ್ಸಿನಲ್ಲಿ ಇಷ್ಟು ಶ್ರಮವಹಿಸಿ, ಸಿನಿಮಾ ಮಾಡುವ ರೀತಿ ನೋಡಿದರೆ , ಅಚ್ಚರಿ ಎನಿಸುತ್ತೆ. ಜತೆಗೆ ಅವರ ಹಾಗೆಯೇ ಸಿನಿಮಾವನ್ನು ಪ್ರೀತಿಸಿ, ಕೆಲಸ ಮಾಡ್ಬೇಕು ಎಂದೆನಿಸುತ್ತದೆ.
ಚಿತ್ರದಲ್ಲಿನ ನಿಮ್ಮ ಪಾತ್ರದ ಬಗ್ಗೆ ಹೇಳೋದಾದ್ರೆ..
ರಶ್ಮಿ ಅನ್ನೋದು ನನ್ನ ಪಾತ್ರದ ಹೆಸರು. ತುಂಬಾ ಬೋಲ್ಡ್ ಹುಡುಗಿ. ಆ್ಯಕ್ಷನ್ ಸನ್ನಿವೇಶಗಳಲ್ಲೂ ಅಭಿನಯಿಸಿದ್ದೇನೆ. ಟಾಮ್ಬಾಯ್ ಲುಕ್ನಿಂದಲೇ ನನಗೆ ಈ ರೀತಿಯ ಪಾತ್ರ ಸಿಗುತ್ತವೆಯೋ ಏನೋ, ಎದ್ದು ಬಿದ್ದು ಗಾಯ ಮಾಡಿಕೊಂಡು ಆ್ಯಕ್ಷನ್ ದೃಶ್ಯಗಳನ್ನು ಶೂಟ್ ಮಾಡಿದ್ದೇವೆ. ಎಲ್ಲವೂ ರಿಯಲಿಸ್ಟಿಕ್ ಆಗಿ ಬಂದಿವೆ.
ಗ್ಲಾಮರ್ ಪ್ರಪಂಚದ ಬಹು ಚರ್ಚಿತ ಮೀ ಟೂ ಆಂದೋಲನದ ಬಗ್ಗೆ ನಿಮ್ಮ ಅಭಿಪ್ರಾಯ ಏನು?
ಬಾಲಿವುಡ್ ಸೇರಿದಂತೆ ಈಗ ಎಲ್ಲಾ ಕಡೆ ‘ಮೀ ಟೂ’ ಸದ್ದು ಮಾಡುತ್ತಿದೆ. ಆ ಮೂಲಕವೇ ನಾನೂ ಕೂಡ ಇತ್ತೀಚಿನ ಕೆಲವು ಬೆಳವಣಿಗೆಗಳನ್ನು ಮಾಧ್ಯಮದ ಮೂಲಕ ಕೇಳಿ ತಿಳಿದಿದ್ದೇನೆ. ಹಲವರು ತಮ್ಮ ಮೇಲಿನ ದೌರ್ಜನ್ಯದ ಕುರಿತು ಮುಕ್ತವಾಗಿ ಮಾತನಾಡುತ್ತಿದ್ದಾರೆ. ಭಯದಿಂದ ಹೊರ ಬಂದು, ನೋವುಗಳನ್ನು ಹೊರ ಹಾಕುತ್ತಿದ್ದಾರೆ. ಹಾಗೆ ನೊಂದವರು ತಮ್ಮ ನೋವುಗಳನ್ನು ಬಹಿರಂಗ ಪಡಿಸುವುದಕ್ಕೆ ‘ಮೀ ಟೂ’ ಒಂದೊಳ್ಳೆ ವೇದಿಕೆ ಆಗಿದೆ. ನಾನು ಕೂಡ ಅದನ್ನು ಬೆಂಬಲಿಸುತ್ತೇನೆ. ಆದರೆ, ಅದು ನಿಜ ನೋವನ್ನು ಅಭಿವ್ಯಕ್ತಿಸಲು ಮತ್ತು ನ್ಯಾಯಕ್ಕಾಗಿ ಧ್ವನಿ ಎತ್ತಲು ಸೂಕ್ತ ವೇದಿಕೆ ಆಗಬೇಕು. ಆಗ ಮಾತ್ರ ನೊಂದವರಿಗೆ ನ್ಯಾಯ ಸಿಗಲು ಅಥವಾ ಅವರಿಗೆ ನ್ಯಾಯ ಕೊಡಿಸಲು ಇತರರ ಬೆಂಬಲವೂ ಸಿಗುತ್ತದೆ. ಅದು ಬಿಟ್ಟು, ಅದು ಇನ್ನಾವುದೋ ಸೇಡು ತೀರಿಸಿಕೊಳ್ಳಲು ವೇದಿಕೆಯಾದರೆ, ಮೀ ಟೂ ಉದ್ದೇಶವೂ ದಾರಿ ತಪ್ಪಿಹೋಗುತ್ತದೆ.