ಫೇಸ್ಬುಕ್ ಪೋಸ್ಟ್ನಿಂದ ಸೀರಿಯಲ್ನಲ್ಲಿ ಅವಕಾಶ ಗಿಟ್ಟಿಸಿಕೊಂಡ ನಟಿ!
ಎರಡು ಕನಸು ಧಾರಾವಾಹಿಯ ಸುನಯನ ಪಾತ್ರಧಾರಿಯಾಗಿ ಬಣ್ಣದ ಲೋಕದಲ್ಲಿ ಕಾಣಿಸಿಕೊಂಡ ಅರಮನೆ ನಗರಿ ಬೆಡಗಿ ರಾಧಿಕಾ ಮಿಂಚು ಆಚಾನಕ್ಕಾಗಿ ನಟನಾ ರಂಗಕ್ಕೆ ಕಾಲಿಟ್ಟವರು. ಬಯಸದೇ ಬಂದ ಅವಕಾಶವನ್ನು ಬದಿಗೊತ್ತದೇ ಸದುಪಯೋಗ ಪಡಿಸಿಕೊಂಡ ರಾಧಿಕಾ ಇಂದು ನಟನಾ ಕ್ಷೇತ್ರದಲ್ಲಿ 'ಮಿಂಚು'ತ್ತಿದ್ದಾರೆ.
ಫೇಸ್ ಬುಕ್ ಕಾರಣ!
ಎಂ.ಕಾಂ ಪದವೀಧರೆ ಯಾಗಿರುವ ರಾಧಿಕಾ ನಟನಾ ರಂಗಕ್ಕೆ ಪಾದಾರ್ಪಣೆ ಮಾಡಲು ಫೇಸ್ ಬುಕ್ ಕಾರಣ. ಫೇಸ್ ಬುಕ್ ನಲ್ಲಿ ತಕ್ಕ ಮಟ್ಟಿಗೆ ಸಕ್ರಿಯರಾಗಿದ್ದ ರಾಧಿಕಾ ತಮ್ಮ ಫೋಟೋಗಳನ್ನು ಅಪ್ ಲೋಡ್ ಮಾಡುತ್ತಿದ್ದರು. ಅದುವೇ ಅವರಿಗೆ ವರವಾಗಿ ಪರಿಣಮಿಸಿತು ಎಂದರೆ ತಪ್ಪಾಗಲಾರದು.
ಅವರ ಫೋಟೋ ನೋಡಿದ ನಿರ್ದೇಶಕ ಸಂಜೀವ ತಗಡೂರು ಅವರು ಪೋನ್ ಮಾಡಿ ' ಫೇಸ್ ಬುಕ್ ನಲ್ಲಿ ನಿಮ್ಮ ಫೋಟೋ ನೋಡಿದೆ. ನಟನೆಯ ಬಗ್ಗೆ ನಿಮಗೆ ಆಸಕ್ತಿ ಇದ್ದರೆ ಒಮ್ಮೆ ನನ್ನನ್ನು ಬಂದು ಮೀಟ್ ಮಾಡಿ. ನಮ್ಮ ಸೀರಿಯಲ್ ನಲ್ಲಿ ಒಂದು ಪಾತ್ರ ಇದೆ' ಎಂದರು. ಅದ್ಯಾವಾಗ ರಾಧಿಕಾ ಅಸ್ತು ಎಂದರೋ ಮುಂದೆ ಕಸ್ತೂರಿ ಚಾನೆಲ್ ನಲ್ಲಿ ಎರಡು ಕನಸು ಅನ್ನುವ ಧಾರಾವಾಹಿಯಲ್ಲಿ ಬಣ್ಣ ಹಚ್ಚತೊಡಗಿದರು.
ಎರಡು ಕನಸು ಧಾರಾವಾಹಿಯ ನಂತರ ಅಳಗುಳಿಮನೆ, ರಾಧಾ ಕಲ್ಯಾಣ, ಖುಷಿ ಕಣಜ, ಕಾದಂಬರಿ, ಮುಂಗಾರುಮಳೆ, ಸ್ವಾತಿಮುತ್ತು, ಪುಟ್ಮಲ್ಲಿ ಧಾರಾವಾಹಿಯಲ್ಲಿ ನಟಿಸಿ ಮನೆ ಮಾತಾಗಿರುವ ರಾಧಿಕಾ ಸದ್ಯ ಮಂಗಳ ಗೌರಿ ಮದುವೆ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ. ಹೆಚ್ಚಾಗಿ ನೆಗೆಟಿವ್ ಪಾತ್ರಗಳಲ್ಲೇ ನಟಿಸಿರುವ ರಾಧಿಕಾ ಅವರಿಗೆ ಮಂಗಳ ಗೌರಿ ಮದುವೆಯ ಸೌಂದರ್ಯ ಪಾತ್ರ ಜನಪ್ರಿಯತೆಯನ್ನು ತಂದು ಕೊಟ್ಟಿದೆ. ಸೌಂದರ್ಯ ಉಡುವ ಸಾರಿ, ಅವಳು ಧರಿಸುವ ತರತರಹದ ವಿನ್ಯಾಸದ ಆಭರಣಗಳಿಗೆ ಸಾಕಷ್ಟು ಜನ ಫಿದಾ ಆಗಿದ್ದಾರೆ. ಕನ್ನಡದ ಜೊತೆಗೆ ತಮಿಳು ಸೀರಿಯಲ್ ನಲ್ಲಿ ನಟಿಸಿರುವ ಮೂಲಕ ಪರಭಾಷೆಗೂ ಪಾದಾರ್ಪಣೆ ಮಾಡಿದ್ದಾರೆ.
ರೂಪದರ್ಶಿ ಯೂ ಹೌದು!
ನಟನೆಯ ಜೊತೆಗೆ ರೂಪದರ್ಶಿಯಾಗಿಯೂ ರಾಧಿಕಾ ಸೈ ಎನಿಸಿಕೊಂಡಿದ್ದಾರೆ. ಮೈಸೂರ್ ಸಿಲ್ಕ್ಸ್, ಚೈನ್ನೈ ಸಿಲ್ಕ್ಸ್ , ಶಕ್ತಿ ಮಸಾಲಾ, ಜ್ಯುವೆಲ್ಲರಿ ಜಾಹೀರಾತಯಗಳಿಗೆ ರೂಪದರ್ಶಿಯಾಗಿ ಮನೆ ಮಾತಾಗಿರುವ ರಾಧಿಕಾ ಅನುಬಂಧ ಅವಾರ್ಡ್ಸ್ 2 ರ ಸ್ಟೈಲ್ ಐಕಾನ್ ಫೀಮೇಲ್ ಮತ್ತು ಜನ ಮೆಚ್ಚಿದ ಮಂಥರೆ ವಿಭಾಗಕ್ಕೆ ನಾಮಿನೇಟ್ ಆಗಿದ್ದಾರೆ.
- ಅನಿತಾ ಬನಾರಿ