ಮಂಡ್ಯ ಚುನಾವಣೆ ನಂತರ ನಿಖಿಲ್ ಬೆನ್ನುತಟ್ಟಿದ ಸುಮಲತಾ!
ರಾಜ್ಯಾದ್ಯಂತ ಅದ್ಧೂರಿ ಪ್ರದರ್ಶನ ಕಾಣುತ್ತಿರುವ 'ಮುನಿರತ್ನ ಕುರುಕ್ಷೇತ್ರ' ಚಿತ್ರ ನೋಡಿದ ಮಂಡ್ಯ ಸಂಸದೆ ಸುಮಲತಾ ಪ್ರತಿ ಸ್ಪರ್ಧಿಯಾಗಿ ಸ್ಪರ್ಧಿಸಿದ್ದ ನಿಖಿಲ್ ಕುಮಾರಸ್ವಾಮಿ ಅಭಿನಯಕ್ಕೆ ಭೇಷ್ ಎಂದು ಬೆನ್ನು ತಟ್ಟಿದ್ದಾರೆ.
ಕುರುಕ್ಷೇತ್ರ ಸಿನಿಮಾವನ್ನು ಮೊದಲ ದಿನವೇ ನೋಡುವ ಕಾತುರ ಜನ ಸಾಮಾನ್ಯರಿಗೆ ಮಾತ್ರವಲ್ಲದೇ ಸಿನಿ ತಾರೆಯರಿಗೂ ಇತ್ತು. ಸಂಸದೆ ಸುಮಲತಾ ಸಿನಿಮಾ ನೋಡಿ ಪಾತ್ರಧಾರಿಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಮಂಡ್ಯ ಚುನಾವಣೆ ನಂತರ ನಿಖಿಲ್ ಗೌಡ ಎಲ್ಲಿಯೂ ಕಾಣಿಸಿಕೊಂಡಿರಲಿಲ್ಲ. ಡಬ್ಬಿಂಗ್ ನಲ್ಲಿಯೂ ಭಾಗಿಯಾಗದೇ ಅಂತರ ಕಾಯ್ದುಕೊಂಡಿದ್ದರು. ಇದು ಮಾಧ್ಯಮಗಳಲ್ಲಿ ಸುದ್ದಿಯಾದ ಕೂಡಲೇ ಡಬ್ಬಿಂಗ್ ಗೆ ಬಂದು, ಚುನಾವಣೆ ಒತ್ತಡದಿಂದ ಭಾಗಿಯಾಗಲು ಸಾಧ್ಯವಾಗಲಿಲ್ಲ ಎಂದು ವಿವಾದಕ್ಕೆ ತೇಪೆ ಹಚ್ಚುವ ಪ್ರಯತ್ನ ಮಾಡಿದರು. ಒಟ್ಟಿನಲ್ಲಿ ಸಾಂಗವಾಗಿ ಕುರುಕ್ಷೇತ್ರ ತೆರೆ ಕಾಣುವಂತಾಯಿತು.
ಚಿತ್ರ ರಿಲೀಸ್ಗೂ ಮುನ್ನ ಅಭಿಷೇಕ್ ಅಂಬರೀಶ್ ತನ್ನ ಇನ್ಸ್ಟಾಗ್ರಾಂ ಖಾತೆಯಲ್ಲಿ ಸ್ನೇಹಿತ ನಿಖಿಲ್ ಗೌಡಗೆ ಶುಭಾಶಯ ತಿಳಿಸಿದ್ದರು. ಆ ನಂತರ ಮೊದಲ ದಿನ ಸಿನಿಮಾ ನೋಡಿ ಸಂಸದೆ ಸುಮಲತಾ 'ನಿಖಿಲ್ ಸೂಪರ್ ಆಗಿ ಆ್ಯಕ್ಟ್ ಮಾಡಿದ್ದಾರೆ. ಅವರಿಗೆ ಇದೊಂದು ರೆಕಾರ್ಡ್ ಬ್ರೇಕಿಂಗ್ ಸಿನಿಮಾ' ಎಂದು ಟ್ಟಿಟ್ ಮಾಡಿದ್ದರು.
ವಾದ- ವಿವಾದ, ಆರೋಪ - ಪ್ರತ್ಯಾರೋಪಗಳು ಚುನಾವಣೆಯಲ್ಲಿ ಸಹಜ. ಅದು ರಾಜಕೀಯಕ್ಕೆ ಮಾತ್ರ ಸೀಮಿತ. ವೈಯಕ್ತಿಕವಾಗಿ ಆ ದ್ವೇಷ ಯಾರೂ ಮುಂದುವರೆಸುವುದಿಲ್ಲ ಎನ್ನುವುದಕ್ಕೆ ಇದೊಂದು ಉದಾಹರಣೆ.
ಇನ್ನು ನಿಖಿಲ್ ತೆರೆ ಮೇಲೆ 15 ರಿಂದ 20 ನಿಮಿಷ ಕಾಣಿಸಿಕೊಂಡಿದ್ದಾರೆ. ಕಡಿಮೆ ಸಮಯದಲ್ಲೇ ಜನರಿಗೆ ಇಷ್ಟ ಆಗುವುದಂತೂ ಗ್ಯಾರಂಟಿ!
ಕುರುಕ್ಷೇತ್ರ ನೋಡಿ ಅಂಬರೀಶ್ ನೆನೆದು ಭಾವುಕರಾದ ಸುಮಲತಾ