ಕಿರುತೆರೆಯ ರಿಯಾಲಿಟಿ ಶೋಗಳು ಈಗ ಸಿನಿ ಎಂಟ್ರಿಯ ದೊಡ್ಡ ವೇದಿಕೆ ಆಗಿವೆ. ಈಗಾಗಲೇ ಸಾಕಷ್ಟುಪ್ರತಿಭೆಗಳು ಅಲ್ಲಿಂದ ಸಿನಿಜಗತ್ತಿಗೆ ಬಂದು ಮಿಂಚುತ್ತಿರುವುದು ನಿಮಗೂ ಗೊತ್ತು. ಈಗ ಆ ಸಾಲಿಗೆ ಹೊಸ ಸೇರ್ಪಡೆ ಬಾಲಿಕಿ ಆರಾಧನಾ ಭಟ್‌. 

ಮಂಗಳೂರಿನ ಆಳ್ವಾಸ್‌ ಆಂಗ್ಲ ಮಾಧ್ಯಮ ಶಾಲೆಯಲ್ಲಿ 9ನೇ ತರಗತಿಯ ಆರಾಧನಾ ಭಟ್‌, ಈಗ ‘ಪುಟಾಣಿ ಪವರ್‌’ ಹೆಸರಿನ ಮಕ್ಕಳ ಚಿತ್ರದ ಪ್ರಮುಖ ಪಾತ್ರಧಾರಿ. ಕಲರ್ಸ್‌ ಸೂಪರ್‌’ನ ಮಜಾ ಭಾರತ ಶೋನಲ್ಲೂ ಭಾಗವಹಿಸಿದ್ದ ಆರಾಧನಾ ಅಲ್ಲಿ ಪ್ರೇಕ್ಷಕರ ಗಮನ ಸೆಳೆದಿದ್ದರು.

Add Asianetnews Kannada as a Preferred SourcegooglePreferred

‘ಇದು ನನ್ನ ಕನಸು. ಪೋಷಕರ ಬೆಂಬಲದಿಂದಲೇ ಬಾಲನಟಿಯಾಗಿ ಬಣ್ಣ ಹಚ್ಚಿದ ದಿನಗಳು ಈಗ ಒಂದು ಹಂತಕ್ಕೆ ತಂದು ನಿಲ್ಲಿಸಿವೆ. ಇದೀಗ ಚಿತ್ರವೊಂದರಲ್ಲಿ ಪ್ರಮುಖ ಪಾತ್ರಕ್ಕೆ ಬಣ್ಣ ಹಚ್ಚುವಂತಹ ಅವಕಾಶ ಸಿಕ್ಕಿದೆ. ನನ್ನ ಭವಿಷ್ಯ ನನ್ನ ಕೈಯಲ್ಲಿದೆ. ಓದಿನ ಜತೆಗೆ ಮುಂದೆ ನಟಿಯಾಗಿಯೇ ಭವಿಷ್ಯ ರೂಪಿಸಿಕೊಳ್ಳಬೇಕೆನ್ನು ಆಸೆ ಹೊತ್ತಿದ್ದೇನೆ. ಅದಕ್ಕೆ ಪುಟಾಣಿ ಪವರ್‌ ಚಿತ್ರ ಬುನಾದಿ ಹಾಕುವ ನಂಬಿಕೆಯಿದೆ’ ಎಂದು ನಗು ಅರಳಿಸುತ್ತಾರೆ ಬಾಲಕಿ ಆರಾಧನಾ ಭಟ್‌.

ಮಂಗಳೂರಿನ ರಾಜಗಿರಿ ಹಾಗೂ ಪದ್ಮಶ್ರೀ ದಂಪತಿಯ ಪುತ್ರಿಯಾದ ಆರಾಧನಾ ಭಟ್‌ ಅಪರೂಪದ ಪ್ರತಿಭೆ. 2015ರಲ್ಲಿ ಆಳ್ವಾಸ್‌ ವಿರಾಸತ್‌ನಲ್ಲಿ ಎಸ್‌.ಪಿ. ಬಾಲಸುಬ್ರಮಣ್ಯಂ ಅವರ ಸಂಗೀತ ಕಾರ್ಯಕ್ರಮ ನಿರೂಪಿಸಿ, ಅಲ್ಲಿ ಪ್ರೇಕ್ಷಕರ ಕಣ್ಣು ಅರಳುವಂತೆ ಮಾಡಿದ್ದರು. ಅಲ್ಲಿಂದಲೇ ಆರಾಧನಾ ಅವರಿಗೆ ತುಳು ಚಿತ್ರವೊಂದರಲ್ಲಿ ಬಾಲ ನಟಿ ಆಗಿ ಅಭಿನಯಿಸುವ ಅವಕಾಶ ಬಂತು. ತುಳು ಚಿತ್ರ ‘ಕರ್ಣೆ’ಯಲ್ಲಿನ ಅಭಿನಯದಿಂದ ಆರಾಧನಾ ಅವರಿಗೆ ಸಾಕಷ್ಟುಅವಕಾಶಗಳು ಬಂದವು. ಅವರ ಪಾತ್ರ ಅದ್ಭುತವಾಗಿ ಮೂಡಿ ಬಂದಿದೆ ಎನ್ನುತ್ತಾರೆ ನಿರ್ದೇಶಕ ಗಜೇಂದ್ರ.