ಗ್ರಾಮೀಣ ಸೊಗಡಿನ ಕಥಾ ಹಂದರ ಹೊಂದಿರುವ ಧಾರಾವಾಹಿ ’ವರಲಕ್ಷ್ಮೀ ಸ್ಟೋರ್ಸ್’ | ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ | ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರ 

ಧಾರಾವಾಹಿಗಳ ಜೀವಂತಿಕೆಗೆ ಪ್ರೇಕ್ಷಕರ ಅನಿಸಿಕೆಗಳು ಉಸಿರಿದ್ದಂತೆ. ಹಾಗಾಗಿ ಪ್ರೇಕ್ಷಕರ ಅನಿಸಿಕೆ, ಅಭಿಪ್ರಾಯಗಳನ್ನು ಪರಿಗಣಿಸುವ ಪ್ರಯತ್ನಕ್ಕೆ ಸಜ್ಜಾಗಿದೆ ಸ್ಟಾರ್ ಸುವರ್ಣ ವಾಹಿನಿ. ಈ ಪ್ರಯತ್ನದ ಮೊದಲ ಗೆಲುವು ‘ವರಲಕ್ಷ್ಮಿ ಸ್ಟೋರ್ಸ್’ ಧಾರಾವಾಹಿ. ಧಾರಾವಾಹಿಗಳು ಅಂದ್ರೆ ಅತ್ತೆ ಸೊಸೆ ಜಗಳ, ಹೆಣ್ಣನ್ನು ಕ್ರೂರಿಯೆಂದು ಬಿಂಬಿಸುವ ಮಾಧ್ಯಮ, ಬಹುತೇಕ ಧಾರಾವಾಹಿಗಳಲ್ಲಿ ಗತಿ ಮತ್ತು ಮತಿಯನ್ನು ಹುಡುಕುವುದು ಅಸಾಧ್ಯ ಎಂಬುದು ಅನೇಕ ವೀಕ್ಷಕರ ಅಭಿಪ್ರಾಯ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಈ ಕಾರಣಕ್ಕೆ ಮಲೈಕಾಗೆ ಅರ್ಜುನ್ ಮೇಲೆ ಸಿಕ್ಕಾಪಟ್ಟೆ ಲವ್ವಾಯ್ತಂತೆ!

ಆದರೆ ಈ ಎಲ್ಲಾ ಆಕ್ಷೇಪಣೆಗಳಿಗೆ ಉತ್ತರವಾಗಿ ಮೂಡಿ ಬರುತ್ತಿದೆ ‘ವರಲಕ್ಷ್ಮಿ ಸ್ಟೋರ್ಸ್’. ‘ವರಲಕ್ಷ್ಮಿ ಸ್ಟೋರ್ಸ್’ ಯಾವುದೋ ವ್ಯವಹಾರಕ್ಕೆ ಸಂಬಂಧಿಸಿದ ಕಥೆಯಲ್ಲ. ಹಳೆಯ ಅಥವಾ ಸಮಕಾಲೀನ ಧಾರವಾಹಿಗಳ ಮಾದರಿಗೆ ವಿರುದ್ಧವಾಗಿ ಸಂದರ್ಭಗಳೇ ಸಮಸ್ಯೆಗಳಾಗಿ ಕಾಡುವ ಕಥಾ ಹಂದರ ಹೊಂದಿರುವ ಈ ಧಾರಾವಾಹಿಯಲ್ಲಿ ಅಂಗಡಿಯೂ ಒಂದು ಪಾತ್ರ. ಪ್ರಸಾರವಾದ ಮೊದಲ ವಾರವೇ ಉತ್ತಮ ಪ್ರತಿಕ್ರಿಯೆ ಪಡೆದು ಗೆಲುವಿನ ಸವಿ ಕಂಡಿದೆ ‘ವರಲಕ್ಷ್ಮಿ ಸ್ಟೋರ್ಸ್’.

ಮಂಡ್ಯದ ಒಂದು ಪುಟ್ಟ ಹಳ್ಳಿಯಲ್ಲಿ ನಡೆಯುವ ಈ ಕಥೆಯಲ್ಲಿ ಜಿಲ್ಲೆಯ ಗ್ರಾಮೀಣ ಸೌಂದರ್ಯ ಮತ್ತು ಭಾಷಾ ಸೊಗಡನ್ನು ಕಾಣಬಹುದಾಗಿದೆ. ರಾಮಮೂರ್ತಿ ಮತ್ತು ಸರಸ್ವತಿ ದಂಪತಿಯ ಜೊತೆಗೆ ರಾಮಮೂರ್ತಿಯ ಮೂವರು ತಮ್ಮಂದಿರಾದ ರಾಜೀವ, ನಂಜುಂಡ ಮತ್ತು ಪುನೀತ್ ನಡುವಿನ ಬಾಂಧವ್ಯದ ಮೇಲೆ ಈ ಕಥೆ ನಿಂತಿದೆ. ಇವರ ತಂದೆ ಪ್ರಾರಂಭಿಸಿದ ‘ವರಲಕ್ಷ್ಮಿ ಸ್ಟೋರ್ಸ್’ ಅಣ್ಣ ತಮ್ಮಂದಿರ ಪರಿಶ್ರಮದಿಂದ ಊರೆಲ್ಲಾ ಪ್ರಸಿದ್ಧಿ ಪಡೆದಿದೆ.

ತಮ್ಮಂದಿರ ಪಾಲಿಗೆ ತಂದೆಯಾಗಿ, ಗೆಳೆಯನಾಗಿ, ಅಣ್ಣನಾಗಿ ಅವರ ಬೆನ್ನೆಲುಬಾಗಿ ನಿಂತು ,ಅವರೇ ತನ್ನ ಸರ್ವಸ್ವವೆಂದು ಬಾಳುತ್ತಿದ್ದ ರಾಮಮೂರ್ತಿಗೆ ತಕ್ಕ ಮಡದಿಯಾಗಿ ಸರಸ್ವತಿ ಸಾಥ್ ನೀಡಿದ್ದಾಳೆ. ತನ್ನ ಮೈದುನರ ಪಾಲಿಗೆ ತಾಯಿಯಾಗಿದ್ದಾಳೆ, ಅವರು ಸಹ ಆತ್ತಿಗೆಯನ್ನು ತಾಯಿ ರೂಪದಲ್ಲಿ ಕಾಣುತ್ತಾರೆ, ತನ್ನ ಮೈದುನರಿಗಾಗಿ ತಾಯಿಯಾಗುವ ಸೌಭಾಗ್ಯವನ್ನೇ ತ್ಯಾಗ ಮಾಡಿದ್ದಾಳೆ.

ಅವಿವಾಹಿತ ಈ ನಟಿಗೆ 3 ವರ್ಷದ ಮಗಳಿದ್ದಾಳೆ!

ಒಗ್ಗಟ್ಟಿನ ಸಾರವನ್ನು ಸಾರುವ ಈ ಕುಟುಂಬದಲ್ಲಿ ಸಂಬಂಧಗಳ ತಕ್ಕಡಿಯನ್ನು ಸಮಾನವಾಗಿ ತೂಗುತ್ತಿರುವ ಸರಸ್ವತಿಗೆ ಮುಂದಿನ ದಿನಗಳಲ್ಲಿ ತುಂಬು ಕುಟುಂಬದ ಅನೇಕ ಸವಾಲುಗಳು ಎದುರಾಗಲಿವೆ. ಈ ಕುಟುಂಬದ ನೆಮ್ಮದಿಗಾಗಿ, ರಾಮಮೂರ್ತಿ ಮತ್ತು ಸರಸ್ವತಿಯ ತ್ಯಾಗ, ತೆಗೆದುಕೊಳ್ಳುವ ನಿರ್ಧಾರಗಳೇ ಅಡಿಪಾಯವಾಗಿದೆ. ವರಲಕ್ಷ್ಮಿ ಸ್ಟೋರ್ಸ್ ಧಾರಾವಾಹಿಯನ್ನು ಕೆ.ಜಿ.ಎಫ್ ಖ್ಯಾತಿಯ ಸಂಕಲನಕಾರ ಶ್ರೀಕಾಂತ್‌ರವರ ಶ್ರೀಕಾಂತ್ ಸ್ಟುಡಿಯೋಸ್ ಬ್ಯಾನರ್‌ನಲ್ಲಿ ರೂಪ.ಜಿ ನಿರ್ಮಿಸಿದ್ದು, ಸರವಣನ್ ನಿರ್ದೇಶಿಸಿದ್ದಾರೆ.

ರವಿ ಮಂಡ್ಯ, ಪ್ರೀತಿ ಶ್ರೀನಿವಾಸ್, ಪ್ರಮೋದ್, ರಾಣವ್, ರಾಕಿ ಗೌಡ, ಶಂಖನಾದ ಅರವಿಂದ್ ತಾರಾಗಣವಿದೆ. ಬಾಂಧವ್ಯಗಳ ನಡುವೆ ವ್ಯಾಪಾರ ಮಾಡದ, ಪ್ರೀತಿಯ ನಡುವೆ ಚೌಕಾಸಿ ಇಲ್ಲದ ಈ ಕುಟುಂಬದ ಕಥೆ ವಾಸ್ತವಕ್ಕೆ ಹತ್ತಿರ. ವೀಕ್ಷಕರ ನಿರೀಕ್ಷೆಗಳಿಗೆ ತಕ್ಕಂತೆ ಮೂಡಿಬರುತ್ತಿದ್ದು, ಮೂಂದೆಯೂ ಹೀಗೆ ಸಾಗಲಿದೆ ಎನ್ನುವುದು ವಾಹಿನಿಯ ಭರವಸೆ. ಸಕ್ಕರೆ, ಬೆಲ್ಲದ ಜೊತೆ ಪ್ರೀತಿಯನ್ನು ಹಂಚುವ ‘ವರಲಕ್ಷ್ಮಿ ಸ್ಟೋರ್ಸ್’ ಸೋಮವಾರದಿಂದ ಶನಿವಾರ ರಾತ್ರಿ 8.30 ಕ್ಕೆ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದೆ.