ಗೀತರಚನೆಕಾರ ಕಂ ನಿರ್ದೇಶಕ ಕವಿರಾಜ್ ಅವರ ಹೊಸ ಚಿತ್ರ ಶುರುವಾಗಿದೆ. ಈ ಚಿತ್ರದ ಹೆಸರು ‘ಕಾಳಿದಾಸ ಕನ್ನಡ ಮೇಷ್ಟ್ರು’. ಈ ಚಿತ್ರದ ನಾಯಕ- ನಾಯಕಿ ಜೋಡಿಯೇ ಇಂಟರೆಸ್ಟಿಂಗ್ ಇದೆ. ಜಗ್ಗೇಶ್ ನಾಯಕನಾಗಿ, ಮೇಘನಾ ಗಾಂವ್ಕರ್ ನಾಯಕಿಯಾಗಿ ನಟಿಸುತ್ತಿದ್ದಾರೆ. 

ಕವಿರಾಜ್ ಈ ಹಿಂದೆ ‘ಮದುವೆಯ ಮಮತೆಯ ಕರೆಯೋಲೆ’ ಚಿತ್ರ ನಿರ್ದೇಶಿಸಿದ್ದರು. ಈಗ ಅವರ ಎರಡನೇ ಸಿನಿಮಾ ಇದೇ ತಿಂಗಳು 10 ರಿಂದ ಚಿತ್ರೀಕರಣ ಶುರುವಾಗಲಿದೆ. ಚಿತ್ರದ ಹೆಸರಿನಲ್ಲೇ ಕತೆ ಇದೆ. ಈಗಿನ ಎಜುಕೇಷನ್ ಸುತ್ತ ಈ ಸಿನಿಮಾ ಸಾಗುತ್ತದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಮಕ್ಕಳಿಗೆ ನಾವು ಕೊಡಲು ಹೊರಟಿರುವ ಶಿಕ್ಷಣ ಯಾವ ರೀತಿ, ಮಗು ಕಲಿಯಬೇಕಾದ ಪಾಠ, ಮಧ್ಯಮ ವರ್ಗದ ಜನರ ಆಯ್ಕೆಗಳು, ಪ್ರತಿಯೊಂದು ಕ್ಷೇತ್ರವೂ ಮನುಷ್ಯರನ್ನು ಗ್ರಾಹಕರನ್ನಾಗಿ ಮಾಡಿದಂತೆ ಶಿಕ್ಷಣ ಕ್ಷೇತ್ರವೂ ಸಹ ನಮ್ಮ ಕನಸುಗಳೇ ಮಾರುಕಟ್ಟೆಯ ಬಂಡವಾಳ ಆಗುತ್ತಿರುವುದು ಹೇಗೆ ಎಂಬುದನ್ನು ಈ ಚಿತ್ರದ ಮೂಲಕ ಹೇಳುವ ಪ್ರಯತ್ನ ಕವಿರಾಜ್ ಅವರದ್ದು.

ಅಲ್ಲದೆ ಕನ್ನಡ ಭಾಷೆಯ ಮಹತ್ವವನ್ನು ಹೇಳುತ್ತಲೇ ತಾಯಿ ಭಾಷೆಯ ಶಿಕ್ಷಣದ ಅಗತ್ಯವನ್ನು ಪರಿಣಾಮಕಾರಿಯಾಗಿ ಹೇಳುವಂತಹ ಚಿತ್ರವನ್ನು ಮಾಡುತ್ತಿದ್ದಾರಂತೆ. ಹೀಗಾಗಿ ಇದು ಪ್ರತಿಯೊಂದು ಮನೆಯ ಕತೆ ಎಂಬುದು ನಿರ್ದೇಶಕರ ಮಾತು.

ಈ ಚಿತ್ರದಲ್ಲಿ ಅಂಬಿಕಾ ಕೂಡ ಪ್ರಮುಖ ಪಾತ್ರ ಮಾಡುತ್ತಿದ್ದಾರೆ. ಉಳಿದಂತೆ ತಬಲಾ ನಾಣಿ ಹಾಗೂ ಸಾಧು ಕೋಕಿಲಾ ಮುಂತಾದವರು ನಟಿಸುತ್ತಿದ್ದಾರೆ. ಉದಯ್ ಫಿಲಂಸ್ ಲಾಂಛನದಲ್ಲಿ ನಿರ್ಮಾಣವಾಗುತ್ತಿರುವ ಈ ಚಿತ್ರಕ್ಕೆ ಗುರು ಕಿರಣ್ ಸಂಗೀತ, ಗುಂಡ್ಲುಪೇಟೆ ಸುರೇಶ್ ಛಾಯಾಗ್ರಾಹಣ ಮಾಡುತ್ತಿದ್ದಾರೆ.