Asianet Suvarna News Asianet Suvarna News

ಅರವತ್ತಾಗಿದೆ ಅಂದ್ಕೋಬೇಡಿ, ವಯಸ್ಸಾಯ್ತು ಅನ್ನೋದೆಲ್ಲ ನಿಮ್ಮ ತಲೆಗೆ ಬರದೇ ಇರಲಿ ಅಂತಾರೆ ಜನ: ಜಗ್ಗೇಶ್‌

‘ನಮ್‌ ಬೆನ್ನು ನಾವೇ ಕೆರ್ಕೊಳಕ್ಕಾಗಲ್ಲ’ ಅಂತ ಮಾತು ಶುರು ಮಾಡಿದ್ದು ದತ್ತಣ್ಣ. ‘ಹೌದು ಅದಕ್ಕೆ ಯಾರಾದ್ರೊಬ್ರು ಬೇಕು’ ಅಂತ ಕಿಚಾಯಿಸಿದರು ರವಿಶಂಕರ್‌.

Jaggesh Starrer Raghavendra Stores Kannada Movie Sucsess Meet gvd
Author
First Published May 5, 2023, 6:22 AM IST

‘ಬಹಳ ಸಮಯದಿಂದ ಥಿಯೇಟರ್‌ಗೆ ಹೋಗಿ ಜನರ ಜೊತೆ ಕೂತು ಸಿನಿಮಾ ನೋಡಿರಲಿಲ್ಲ. ರಾಘವೇಂದ್ರ ಸ್ಟೋ​ರ್‍ಸ್ ನೆವದಲ್ಲಿ ಅದು ಸಾಧ್ಯವಾಯ್ತು. ಒಬ್ಬ ಹೆಣ್ಣುಮಗಳು ಕಣ್ಣೀರು ಹಾಕುತ್ತಾ ಬಂದು, ನಮ್ಮದೇ ಕಥೆಯನ್ನ ಹೇಳಿದಂಗಿತ್ತು ಸರ್‌. ನಾವು ಗಂಡ ಹೆಂಡತಿ ಇಬ್ಬರೂ ಸಿನಿಮಾ ನೋಡಿ ಅತ್ತು ಬಿಟ್ವಿ ಅಂದರು. ವಯಸ್ಸಾದವರೊಬ್ಬರು, ಬಹಳ ವರ್ಷದ ನಂತರ ನಮ್ಮಂಥವರು ನೋಡೋ ಸಿನಿಮಾ ಮಾಡಿದ್ದೀರಿ ಅಂತ ಖುಷಿಪಟ್ಟರು. ಇನ್ನೊಬ್ಬರು ನಿಮಗೆ ಅರವತ್ತಾಗಿದೆ ಅಂದ್ಕೋಬೇಡಿ ಸರ್‌, ವಯಸ್ಸಾಯ್ತು ಅನ್ನೋದೆಲ್ಲ ನಿಮ್ಮ ತಲೆಗೆ ಬರದೇ ಇರಲಿ, ನೀವು ಸಿನಿಮಾ ಮಾಡ್ತನೇ ಇರಬೇಕು ಅಂದಾಗ ಖುಷಿಯಲ್ಲಿ ನನಗೆ ಕಣ್ಣೀರೇ ಬಂದುಬಿಟ್ಟಿತು.. ’

‘ರಾಘವೇಂದ್ರ ಸ್ಟೋರ್ಸ್‌’ ಸಿನಿಮಾದ ಸಕ್ಸಸ್‌ ಮೀಟ್‌ನಲ್ಲಿ ತಮ್ಮ ಸಿನಿಮಾದಂತೆ ಆರಂಭದಲ್ಲಿ ಕಾಮಿಡಿಯಾಗಿ ಕೊನೆಯಲ್ಲಿ ಭಾವನಾತ್ಮಕವಾಗಿ ಮಾತಾಡಿದ್ರು ಜಗ್ಗೇಶ್‌. ‘ನಮ್‌ ಬೆನ್ನು ನಾವೇ ಕೆರ್ಕೊಳಕ್ಕಾಗಲ್ಲ’ ಅಂತ ಮಾತು ಶುರು ಮಾಡಿದ್ದು ದತ್ತಣ್ಣ. ‘ಹೌದು ಅದಕ್ಕೆ ಯಾರಾದ್ರೊಬ್ರು ಬೇಕು’ ಅಂತ ಕಿಚಾಯಿಸಿದರು ರವಿಶಂಕರ್‌. ಜಗ್ಗೇಶ್‌ ನಟನೆಯ ಬಗ್ಗೆ ಮೆಚ್ಚುಗೆಯಿಂದ ಮಾತನಾಡಿದ ದತ್ತಣ್ಣ, ಜಗ್ಗೇಶ್‌ ಹೇಗೆ ಔಚಿತ್ಯ ಪ್ರಜ್ಞೆಯ ನಟ ಅನ್ನೋದನ್ನು ವಿವರಿಸಿದರು. ರವಿಶಂಕರ್‌ ಗೌಡ, ‘ಈ ಸಿನಿಮಾ ಸೆಟ್‌ನಲ್ಲಿ ಬೇರೆಲ್ಲ ಚೆನ್ನಾಗಿತ್ತು. ಹೆಣ್ಮಕ್ಕಳೇ ಇರಲಿಲ್ಲ’ ಅಂತ ನಿರ್ಲಿಪ್ತವಾಗಿ ಹೇಳಿದರು. 

Hidden ಕ್ಯಾಮೆರಾ ಹಿಡಿದು ಬಂದ ಯುಟ್ಯೂಬರ್‌ನ ಕಥೆಯನ್ನು 3 ದಿನದಲ್ಲಿ ಕ್ಲೋಸ್ ಮಾಡಿಸಿದೆ: ನಟ ಜಗ್ಗೇಶ್

ಶ್ವೇತಾ ಶ್ರೀವಾಸ್ತವ್‌, ‘ಮಗುವಾದ ನಂತರ ಇಷ್ಟೊಳ್ಳೆ ಅವಕಾಶ ಸಿಕ್ಕಿದ್ದು ನನ್ನ ಬದುಕಿನಲ್ಲಿ ಅತ್ಯಂತ ಸ್ಪೆಶಲ್‌’ ಅಂದರು. ಕೊನೆಯಲ್ಲಿ ಮಾತನಾಡಿದ ನಿರ್ದೇಶಕ ಸಂತೋಷ್‌ ಆನಂದರಾಮ್‌, ‘ಹೆಚ್ಚು ಪ್ರಚಾರವಿಲ್ಲದೇ ಮೌತ್‌ ಪಬ್ಲಿಸಿಟಿಯಿಂದ ಚಿತ್ರ ಗೆದ್ದಿದೆ. ಎಲೆಕ್ಷನ್‌, ಐಪಿಎಲ್‌ ನಡುವೆ ಸಿನಿಮಾ ರಿಲೀಸ್‌ ಮಾಡಲು ಧೈರ್ಯ ಕೊಟ್ಟಿದ್ದು ನಿರ್ಮಾಪಕ ವಿಜಯ ಕಿರಗಂದೂರು. ಅವರ ಲೆಕ್ಕಾಚಾರ ಪಕ್ಕ ಇರುತ್ತೆ. ಇದೊಂದು ಪ್ರಯೋಗಾತ್ಮಕ ಸಿನಿಮಾ, ಹಾಸ್ಯದ ಹೊದಿಕೆಯೊಳಗೆ ಸೆನ್ಸಿಟಿವ್‌ ವಿಚಾರದ ಹೂರಣವಿದೆ’ ಎಂದರು. 

ರಾಘವೇಂದ್ರ ಸ್ಟೋರ್ಸ್‌ನಲ್ಲಿ ವ್ಯಾಪಾರಕ್ಕೆ ನಿಂತ ನಟಿ ಶ್ವೇತಾ ಶ್ರೀವಾಸ್ತವ್ ಫೋಟೋ ವೈರಲ್?

ಈ ಸಿನಿಮಾದ ಹಾಡೊಂದನ್ನು ಭಾವಪೂರ್ಣವಾಗಿ ಹಾಡಿ, ತಾನು ಇಂಡಸ್ಟ್ರಿಗೆ ಕಾಲಿಟ್ಟ ಆರಂಭದಲ್ಲಿ ಜಗ್ಗೇಶ್‌ ಸಿನಿಮಾವೊಂದಕ್ಕೆ ಕೀಬೋರ್ಡ್‌ ನುಡಿಸಿದ್ದನ್ನು ನೆನೆಸಿಕೊಂಡದ್ದು ಸಂಗೀತ ನಿರ್ದೇಶಕ ಅಜನೀಶ್‌ ಲೋಕನಾಥ್‌. ಉಳಿದಂತೆ ಕಲಾವಿದರಾದ ಮಿತ್ರ, ಚಿತ್ಕಳಾ ಬಿರಾದಾರ್‌, ನಿರ್ಮಾಪಕ ಯೋಗಿ ಜಿ ರಾಜ್‌, ಛಾಯಾಗ್ರಾಹಕ ಶ್ರೀಶ ಕುಡುವಳ್ಳಿ, ಕಲಾ ನಿರ್ದೇಶಕ ವಿಶ್ವಾಸ್‌ ಸುದ್ದಿಗೋಷ್ಠಿಯಲ್ಲಿದ್ದರು. ಸಂತೋಷ್‌ ಆನಂದರಾಮ್‌ ನಿರ್ದೇಶನದ ಈ ಸಿನಿಮಾ  40 ವರ್ಷದ ಅವಿವಾಹಿತ ಅಡುಗೆ ಭಟ್ಟನಾಗಿ ಜಗ್ಗೇಶ್‌ ಈ ಸಿನಿಮಾದಲ್ಲಿ ನಟಿಸಿದ್ದಾರೆ. ಅಜನೀಶ್‌ ಲೋಕನಾಥ್‌ ಸಂಗೀತ ಚಿತ್ರಕ್ಕಿದೆ. ಹೊಂಬಾಳೆ ಫಿಲಂಸ್‌ ಬ್ಯಾನರ್‌ನಲ್ಲಿ ವಿಜಯ ಕಿರಗಂದೂರು ಈ ಸಿನಿಮಾ ನಿರ್ಮಿಸಿದ್ದಾರೆ. ಶ್ವೇತಾ ಶ್ರೀವಾತ್ಸವ್‌, ಅಚ್ಯುತ, ದತ್ತಣ್ಣ ಈ ಚಿತ್ರದಲ್ಲಿ ನಟಿಸಿದ್ದಾರೆ.

Follow Us:
Download App:
  • android
  • ios