ನನಸಾಯಿತು ನವರಸನಾಯಕನ ಬಹುದಿನದ ಕನಸು!
ಈಗಾಗಲೇ ಮೊಮ್ಮಗನಿಗೆ ತಾತನಾದ ನವರಸ ನಾಯಕ ಜಗ್ಗೇಶ್ಗೆ ಮನೆಗೊಂದು ಮಹಾಲಕ್ಷ್ಮಿ ಬರಬೇಕೆಂಬ ಆಸೆಯಿತ್ತು. ಅದೀಗ ನೆರವೇರಿದೆ. ಯಾರಿಗೆ ಮಗುವಾಯಿತು?
ಜೀವನದ ಬಂಡಿಯಲ್ಲಿ ದೊಡ್ಡ ದೊಡ್ಡ ಕನಸುಗಳನ್ನು ನನಸು ಮಾಡಿಕೊಂಡ, ನವರಸ ನಾಯಕ ಜಗ್ಗೇಶ್ ಅವರ ಒಂದು ಆಸೆ ಮಾತ್ರ ಈಡೇರಲೇ ಇಲ್ಲ. ಅವರು ವಿಪರೀತ ನಂಬಿರುವ ಮಂತ್ರಾಲಯದ ರಾಯರು ಇದೀಗ ಆ ಆಸೆಯನ್ನೂ ಪೂರೈಸಿದ್ದು 'ಎದ್ದೇಳು ಮಂಜುನಾಥ' ಚಿತ್ರದ ಹೀರೋ ಫುಲ್ ಖುಷಿಯಾಗಿದ್ದಾರೆ.
ಬಹಳ ದಿನಗಳಿಂದಲೂ ಮನೆಗೊಂದು ಮಹಾಲಕ್ಷ್ಮಿ ಬೇಕೆಂಬ ಕನಸಿತ್ತು ಜಗ್ಗೇಶ್ಗೆ. ಹೆಣ್ಣು ಮಕ್ಕಳು ಹಾಗೂ ಅವರ ಸಾಧನೆ ಕಂಡರೆ ನನಗೂ ಹೆಣ್ಣು ಮಗು ಇರಬೇಕಿತ್ತು ಎಂದೆನಿಸುತ್ತಿತ್ತು. ಆದರದು ಆಗಲ್ಲಿಲ್ಲ. ಆದರೆ ಮನೆಗೊಂದು ಮೊಮ್ಮಗಳಾದರೂ ಬರಲಿ ಎಂಬ ಆಸೆ ಇದೆ ಎಂದು ಹೇಳಿಕೊಂಡಿದ್ದರು. ಆದಕ್ಕೂ ಈಗ ರಾಯರು 'ತಥಾಸ್ತು' ಅಂದಿದ್ದಾರೆ.
ತಮ್ಮನಾದ ರಾಮಚಂದ್ರ ಅವರ ಮಗನಿಗೆ ಹೆಣ್ಣು ಮಗು ಹುಟ್ಟಿದ್ದು, ಅದರೊಂದಿಗಿನ ಫೋಟೋವನ್ನು ತಮ್ಮ ಟ್ವೀಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಜಗ್ಗೇಶ್ ಹಿರಿಯ ಪುತ್ರ ಗುರುರಾಜ್ಗೆ ಗಂಡು ಮಗುವಿದ್ದು, ಮೊಮ್ಮಗನೊಂದಿಗೆ ಕಳೆದ ಅದ್ಭುತ ಕ್ಷಣಗಳ ವೀಡಿಯೋವನ್ನು ಈ ಹಿಂದೆ ಅಪ್ಲೋಡ್ ಮಾಡಿದ್ದರು. ಇದೀಗ ಹೆಣ್ಣು ಮಗು ಕುಟುಂಬಕ್ಕೆ ಬಂದಿರುವ ಸಂತೋಷವನ್ನು ಜಗ್ಗೇಶ್ ಅಭಿಮಾನಿಗಳೊಂದಿಗೆ ಹಂಚಿ ಕೊಂಡಿದ್ದಾರೆ.