ಸೂರ್ಯ ಕೂಡ ಅವರ ಜೊತೆಗೂಡುತ್ತಾರಾ ಅಥವಾ ಸ್ವತಂತ್ರವಾಗಿ ಹೊಸ ಹಾದಿ ತುಳಿಯುತ್ತಾರಾ ಎಂಬುದು ಕುತೂಹಲ ಮೂಡಿಸಿದೆ. ಒಂದು ವೇಳೆ ಸೂರ್ಯ ರಾಜಕೀಯಕ್ಕೆ ಬರುವುದು ಅಧಿಕೃತವಾದರೆ, ತಮಿಳುನಾಡು ರಾಜಕೀಯದಲ್ಲಿ ಸಿನಿಮಾ ಸ್ಟಾರ್‌ಗಳ ನಡುವೆಯೇ ದೊಡ್ಡ ಪೈಪೋಟಿ ಏರ್ಪಡಲಿದೆ.

ದಳಪತಿ ವಿಜಯ್ ಬಳಿಕ ತಮಿಳುನಾಡು ರಾಜಕೀಯ ಅಖಾಡಕ್ಕೆ 'ಸಿಂಗಂ' ಸೂರ್ಯ ಎಂಟ್ರಿ ಪಕ್ಕಾನಾ? ಇಲ್ಲಿದೆ ಇಂಟ್ರೆಸ್ಟಿಂಗ್ ಅಪ್‌ಡೇಟ್!

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ತಮಿಳುನಾಡು ರಾಜಕೀಯ ಎಂದರೆ ಅಲ್ಲಿ ಹೈ-ವೋಲ್ಟೇಜ್ ಡ್ರಾಮಾ ಇರಲೇಬೇಕು. ಬೆಳ್ಳಿತೆರೆಯ ಮೇಲೆ ಅಬ್ಬರಿಸುವ ನಾಯಕರು ಶಾಸನಸಭೆಯ ಮೆಟ್ಟಿಲೇರುವುದು ಅಲ್ಲಿನ ದಶಕಗಳ ಇತಿಹಾಸ. ಇತ್ತೀಚೆಗಷ್ಟೇ 'ದಳಪತಿ' ವಿಜಯ್ (Thalapathy Vijay) ತಮ್ಮ 'ತಮಿಳಗ ವೆಟ್ರಿ ಕಳಗಂ' (TVK) ಪಕ್ಷದ ಮೂಲಕ ರಾಜಕೀಯಕ್ಕೆ ಅದ್ಧೂರಿ ಎಂಟ್ರಿ ಕೊಟ್ಟು ಇಡೀ ದೇಶದ ಗಮನ ಸೆಳೆದಿದ್ದರು. ಈಗ ವಿಜಯ್ ಹಾದಿಯಲ್ಲೇ ಕಾಲಿವುಡ್‌ನ ಮತ್ತೊಬ್ಬ ದೈತ್ಯ ನಟ, 'ಸಿಂಗಂ' ಖ್ಯಾತಿಯ ಸೂರ್ಯ (Suriya) ಕೂಡ ರಾಜಕೀಯಕ್ಕೆ ಧುಮುಕಲಿದ್ದಾರಾ? ಎಂಬ ಚರ್ಚೆ ಸೋಷಿಯಲ್ ಮೀಡಿಯಾದಲ್ಲಿ ಕಿಚ್ಚು ಹಚ್ಚಿದೆ.

ವಿಜಯ್ ಅಬ್ಬರದ ಬೆನ್ನಲ್ಲೇ ಸೂರ್ಯ ಸಂಚಲನ:

ದಳಪತಿ ವಿಜಯ್ ರಾಜಕೀಯಕ್ಕೆ ಬಂದ ಮೇಲೆ ತಮಿಳುನಾಡಿನ ರಾಜಕೀಯ ಚಿತ್ರಣವೇ ಬದಲಾಗಿದೆ. ಎಂಜಿಆರ್ ನಂತರ ಚಿತ್ರರಂಗದಿಂದ ಬಂದು ಇಷ್ಟು ದೊಡ್ಡ ಮಟ್ಟದ ಜನಬೆಂಬಲ ಗಳಿಸಿದ ನಟ ಎಂಬ ಹೆಗ್ಗಳಿಕೆಗೆ ವಿಜಯ್ ಪಾತ್ರರಾಗುತ್ತಿದ್ದಾರೆ. ಈ ಬೆಳವಣಿಗೆಯ ಬೆನ್ನಲ್ಲೇ ಸೂರ್ಯ ಅವರ ಅಭಿಮಾನಿಗಳು ಕೂಡ ತಮ್ಮ ನೆಚ್ಚಿನ ನಟನನ್ನು 'ಜನನಾಯಕ'ನನ್ನಾಗಿ ನೋಡಲು ಹಂಬಲಿಸುತ್ತಿದ್ದಾರೆ. ಸೂರ್ಯ ಕೇವಲ ನಟನಾಗಿ ಮಾತ್ರವಲ್ಲದೆ, ತಮ್ಮ 'ಅಗರಂ ಫೌಂಡೇಶನ್' ಮೂಲಕ ಮಾಡುತ್ತಿರುವ ಸಮಾಜಸೇವೆಯಿಂದಾಗಿ ತಮಿಳುನಾಡಿನ ಪ್ರತಿ ಮನೆಯಲ್ಲೂ ಒಬ್ಬ ನಾಯಕನಾಗಿ ಗುರುತಿಸಿಕೊಂಡಿದ್ದಾರೆ.

ಅಭಿಮಾನಿ ಸಂಘದ ಸಭೆಯಲ್ಲಿ ಸ್ಫೋಟಕ ಹೇಳಿಕೆ!

ಸೂರ್ಯ ರಾಜಕೀಯಕ್ಕೆ ಬರುವುದು ಕೇವಲ ಗಾಳಿ ಸುದ್ದಿಯಲ್ಲ ಎಂಬಂತೆ ಇತ್ತೀಚೆಗೆ ಚೆನ್ನೈನಲ್ಲಿ ನಡೆದ ಒಂದು ಘಟನೆ ಸಾಕ್ಷಿಯಾಗಿದೆ. 'ಅಖಿಲ ಭಾರತ ಸೂರ್ಯ ಚೀಫ್ ಚಾರಿಟೇಬಲ್ ಟ್ರಸ್ಟ್'ನ ಜಿಲ್ಲಾ ಕಾರ್ಯಕಾರಿ ಸಭೆ ಆಯೋಜಿಸಲಾಗಿತ್ತು. ಈ ಸಭೆಯಲ್ಲಿ ಟ್ರಸ್ಟ್‌ನ ಪ್ರಮುಖ ಪದಾಧಿಕಾರಿಯೊಬ್ಬರು ಮಾತನಾಡುತ್ತಾ, "ಕಾಲ ನಿರ್ಧರಿಸಿದೆ, ದೇವರು ನಿರ್ಧರಿಸಿದ್ದಾನೆ. ಸೂರ್ಯ ಅವರು ಜನರ ನಾಯಕನಾಗುವುದನ್ನು ಯಾರಿಂದಲೂ ತಡೆಯಲು ಸಾಧ್ಯವಿಲ್ಲ. ನೀವು ಅವರಿಗಾಗಿ ಕೆಲಸ ಮಾಡಲು ಸಿದ್ಧರಿದ್ದೀರಾ?" ಎಂದು ಅಭಿಮಾನಿಗಳನ್ನು ಕೇಳಿದಾಗ ಇಡೀ ಸಭಾಂಗಣ ಹರ್ಷೋದ್ಗಾರದಿಂದ ನಡುಗಿಹೋಯಿತು. "ನೀವು ಸಿದ್ಧರಿದ್ದರೆ, ಸೂರ್ಯ ಶೀಘ್ರದಲ್ಲೇ ದೊಡ್ಡ ಮಟ್ಟದ ಅಧಿಕಾರ ಹಿಡಿಯುವುದು ಖಚಿತ" ಎಂಬ ಅವರ ಮಾತುಗಳು ಈಗ ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿವೆ.

ನಾಯಕತ್ವಕ್ಕೆ ಬೇಕಾದ ಎಲ್ಲಾ ಅರ್ಹತೆ ಸೂರ್ಯನಿಗಿದೆ:

ನಟ ಸೂರ್ಯ ತಮ್ಮ ತಂದೆ ಶಿವಕುಮಾರ್ ಅವರ ಶಿಸ್ತನ್ನು ಮೈಗೂಡಿಸಿಕೊಂಡವರು. ಸಿನಿಮಾಗಳಲ್ಲಿ ಸಮಾಜಮುಖಿ ಸಂದೇಶ ನೀಡುವ ಅವರು, ನಿಜ ಜೀವನದಲ್ಲೂ ಅಗರಂ ಫೌಂಡೇಶನ್ ಮೂಲಕ ಸಾವಿರಾರು ಬಡ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುತ್ತಿದ್ದಾರೆ. ಅವರ ಈ ಶೈಕ್ಷಣಿಕ ಕ್ರಾಂತಿ ತಮಿಳುನಾಡಿನ ಜನರಲ್ಲಿ ಅವರ ಬಗ್ಗೆ ಅಪಾರ ಗೌರವ ಮೂಡಿಸಿದೆ. ಕೇವಲ ಮಾತುಗಳಿಗಿಂತ ಕೆಲಸದಲ್ಲಿ ನಂಬಿಕೆ ಇಟ್ಟಿರುವ ಸೂರ್ಯ, ರಾಜಕೀಯಕ್ಕೆ ಬಂದರೆ ಅದು ದೊಡ್ಡ ಬದಲಾವಣೆಗೆ ನಾಂದಿಯಾಗಲಿದೆ ಎಂಬುದು ವಿಶ್ಲೇಷಕರ ಅಭಿಪ್ರಾಯ.

ಮುಂದಿನ ಚುನಾವಣೆಯೇ ಗುರಿ?

ವಿಜಯ್ ಈಗಾಗಲೇ ಅಖಾಡಕ್ಕೆ ಇಳಿದು ಸಿಎಂ ಪಟ್ಟ ಪಡೆದಿದ್ದಾರೆ. ಈಗ ಸೂರ್ಯ ಕೂಡ ಅವರ ಜೊತೆಗೂಡುತ್ತಾರಾ ಅಥವಾ ಸ್ವತಂತ್ರವಾಗಿ ಹೊಸ ಹಾದಿ ತುಳಿಯುತ್ತಾರಾ ಎಂಬುದು ಕುತೂಹಲ ಮೂಡಿಸಿದೆ. ಒಂದು ವೇಳೆ ಸೂರ್ಯ ರಾಜಕೀಯಕ್ಕೆ ಬರುವುದು ಅಧಿಕೃತವಾದರೆ, ತಮಿಳುನಾಡು ರಾಜಕೀಯದಲ್ಲಿ ಸಿನಿಮಾ ಸ್ಟಾರ್‌ಗಳ ನಡುವೆಯೇ ದೊಡ್ಡ ಪೈಪೋಟಿ ಏರ್ಪಡಲಿದೆ.

ಒಟ್ಟಾರೆಯಾಗಿ, ಕಾಲಿವುಡ್‌ನ ಇಬ್ಬರು ಸ್ಟಾರ್ ನಟರು ರಾಜಕೀಯಕ್ಕೆ ಬರುತ್ತಿರುವುದು ಅಭಿಮಾನಿಗಳಿಗೆ ಹಬ್ಬದಂತಾಗಿದೆ. ಸೂರ್ಯ ಈ ಬಗ್ಗೆ ಅಧಿಕೃತವಾಗಿ ಏನು ಹೇಳುತ್ತಾರೆ ಎಂಬುದು ಈಗ ಮಿಲಿಯನ್ ಡಾಲರ್ ಪ್ರಶ್ನೆ! ಸಿನಿಕೋಟಿಗಳ ಈ ಕುತೂಹಲಕ್ಕೆ ಸೂರ್ಯ ಶೀಘ್ರದಲ್ಲೇ ಉತ್ತರ ನೀಡಲಿದ್ದಾರಾ? ಅಥವಾ, ಈ ಸುದ್ದಿ ಹೀಗೆ ಬಂದು ಹಾಗೆ ಹಾರಿ ಹೋಗುತ್ತಾ? ಕಾದು ನೋಡೋಣ.