ತ್ರಿವಿಧ ದಾಸೋಹಿ, ಲಕ್ಷಾಂತರ ಮಕ್ಕಳಿಗೆ ಬದುಕು ರೂಪಿಸಿಕೊಟ್ಟು, ಹಸಿದವರಿಗೆ ಅನ್ನ ನೀಡಿ ಸಮಾಜಕ್ಕೆ ಅತ್ಯುತ್ತಮ ಕೊಡುಗೆ ನೀಡಿ ಆದರ್ಶರೆನಿಸಿಕೊಂಡ ತುಮಕೂರಿನ ಸಿದ್ಧಗಂಗಾ ಶ್ರೀಗಳು ಶಿವೈಕ್ಯರಾಗಿದ್ದಾಋಎ. ಸದ್ಯ ಡ್ರಾಮಾ ಜೂನಿಯರ್ಸ್ ವೇದಿಕೆಯಲ್ಲಿ ಪುಟಾಣಿ ಮಕ್ಕಳು ಸಿದ್ದಗಂಗಾ ಶ್ರೀಗಳ ನೆನಪಿನ ಹೆಜ್ಜೆ ಗುರುತುಗಳನ್ನು ಕಣ್ಣಿಗೆ ಕಟ್ಟುವಂತೆ ತೋರಿಸಿಕಟ್ಟಿದ್ದಾರೆ.

ನಡೆದಾಡುವ ದೇವರು, ಕಾರುಣ್ಯ ಮೂರ್ತಿ, ಶತಮಾನದ ಶ್ರೇಷ್ಠ ಶರಣ, ಮಾನವತವಾದಿ ಹೀಗೆ ಬೇರೆ ಬೇರೆ ವಿಶೇಷಣಗಳಿಂದ ಕರೆಯಲ್ಪಡುವ ಶ್ರೀಗಳು ಮಠದ ಮಕ್ಕಳಿಗೆ ಅಪ್ಪಟ ತಾಯಿ. ಮಕ್ಕಳ ತುಂಟಾಟ ನೋಡಿ ಖುಷಿಪಡುತ್ತಿದ್ದರು, ಹಾದಿ ತಪ್ಪಿದಾಗ ಕಿವಿ ಹಿಂಡುತ್ತಿದ್ದರು. ಬೆಳೆದು ದೊಡ್ಡವರಾದಾಗ ಅವರ ಏಳಿಗೆ ಕಂಡು ಖುಷಿ ಪಟ್ಟರು. ಬೆವರಿನ ಮಹತ್ವ ಹೇಳುತ್ತಲೇ ಭವಿಷ್ಯದ ದಾರಿ ತೋರಿದರು. ಜಾತಿ, ಧರ್ಮ, ರಾಜಕೀಯ ಪಕ್ಷ ಹೀಗೆ ಎಲ್ಲವನ್ನೂ ಮೆಟ್ಟಿ ನಿಂತು ಸಮಾಜಕ್ಕೆ ಮಾದರಿಯಾಗಿದ್ದವರು. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಸದ್ಯ ತಮ್ಮ ಜೀವನವನ್ನೇ ಪಾಠಶಾಲೆಯನ್ನಾಗಿಸಿದ್ದ, ಬದುಕನ್ನೇ ಪುಸ್ತಕವನ್ನಾಗಿಸಿದ್ದ, ಸರಳ ಜೀವನದಲ್ಲೇ ಪ್ರತಿಯೊಬ್ಬರಿಗೂ ಆದರ್ಶಪ್ರಾಯರಾಗಿದ್ದ ಶ್ರೀಗಳ ಬದುಕನ್ನು ಜೀ ಕನ್ನಡದ ಡ್ರಾಮಾ ಜೂನಿಯರ್ಸ್ ವೇದಿಕೆಯಲ್ಲಿ ಪುಟ್ಟ ಮಕ್ಕಳು ಪ್ರೇಕ್ಷಕರ ಮನಮುಟ್ಟುವಂತೆ ಕಟ್ಟಿ ಕೊಟ್ಟಿದ್ದಾರೆ. ಜೀ ಕನ್ನಡದ ಫೇಸ್ ಬುಕ್ ಪೇಜ್ ನಲ್ಲಿ ಪ್ರೋಮೋ ಒಂದನ್ನು ಹಾಕಿದ್ದು, ಇದರಲ್ಲಿ ಮಕ್ಕಳು ಶ್ರೀಗಳ ಜೀವನದ ಪ್ರತಿಯೊಂದು ಮಜಲುಗಳನ್ನು ಅದ್ಭುತವಾಗಿ ತೋರಿಸಿಕೊಟ್ಟಿದ್ದಾರೆ.

ಶ್ರೀಗಳೇ ಕಣ್ಮುಂದೆ ಇದ್ದಾರೋ ಎನ್ನುವಷ್ಟು ಅದ್ಭುತವಾಗಿ ಈ ವಿಡಿಯೋ ಮೂಡಿ ಬಂದಿದ್ದು, ಪುಟಾಣಿಗಳ ಪ್ರತಿಭೆಯನ್ನು ಮೆಚ್ಚಲೇಬೇಕು. ನಡೆದಾಡುವ ದೇವರು ಇನ್ನೊಂದು ಲೋಕಕ್ಕೆ ಬೆಳಕು ನೀಡಲು ತೆರಳಿದ್ದಾರೆ. ಅವರ ಬದುಕಿನ 111 ವರ್ಷಗಳ ಪುಸ್ತಕದ ಕೊನೆ ಪುಟ ಉಪಸಂಹಾರ ಆಗಿದೆ. ಹೊಸದಾಗಿ ಮತ್ತೆ ಪುಸ್ತಕ ಓದಲು ಪ್ರತಿಯೊಬ್ಬರೂ ಆರಂಭಿಸಬೇಕಿದೆ. ಅವರ ಆದರ್ಶಗಳು ಮಾತ್ರ ಎಂದೆಂದಿಗೂ ಪ್ರಸ್ತುತ.