ಕನಸಿನಂತೆ ಯೋಜನಾ ಬದ್ದವಾಗಿ ಒಂದು ಚಿತ್ರವನ್ನು ರೂಪಿಸಿದರೆ ಹೇಗಿರುತ್ತದೆ ಎಂಬುದಕ್ಕೆ ‘ಕಾಣದಂತೆ ಮಾಯವಾದನು’ ಚಿತ್ರವೇ ಸಾಕ್ಷಿ. ನಿರ್ದೇಶಕರಾಗಿ, ಕತೆಗಾರರಾಗಿ ಹಾಗೂ ನಟನಾಗಿ ಗುರುತಿಸಿಕೊಂಡಿದ್ದ ಜಯಮ್ಮನ ಮಗ ವಿಕಾಸ್‌, ಮೊದಲ ಬಾರಿಗೆ ನಾಯಕನಾಗಿ ನಟಿಸಿರುವ ಚಿತ್ರವಿದು

ಸದ್ಯದಲ್ಲೇ ತೆರೆಗೆ ಬರಲಿರುವ ಈ ಚಿತ್ರದ ಕುರಿತು ಹೇಳಿಕೊಳ್ಳುವುದಕ್ಕೆ ಚಿತ್ರತಂಡ ಮಾಧ್ಯಮಗಳ ಮುಂದೆ ಬಂತು. ವಿಕಾಸ್‌ ಅವರಿಗೆ ನಾಯಕಿಯಾಗಿ ಸಿಂಧು ಲೋಕನಾಥ್‌ ಕಾಣಿಸಿಕೊಂಡಿದ್ದಾರೆ. ರಾಜ್‌ ಪತ್ತಿಪಾಟಿ ಈ ಚಿತ್ರದ ನಿರ್ದೇಶಕರು. ಚಂದ್ರಶೇಖರ್‌ ನಾಯ್ಡು, ಸೋಮ್‌ ಸಿಂಗ್‌ ಹಾಗೂ ಪುಷ್ಪ ಸೋಮ್‌ಸಿಂಗ್‌ ಜಂಟಿಯಾಗಿ ಈ ಚಿತ್ರವನ್ನು ನಿರ್ಮಿಸಿದ್ದಾರೆ.

Add Asianetnews Kannada as a Preferred SourcegooglePreferred

‘ಚಿತ್ರದ ಬಹುತೇಕ ಕೆಲಸಗಳು ಮುಗಿದಿವೆ. ಸಿಜಿ ಸೇರಿದಂತೆ ಬೇರೆ ಬೇರೆ ಕೆಲಸಗಳಿಗಾಗಿ ಸಮಯ ಬೇಕಿತ್ತು. ಹೀಗಾಗಿ ಸಿನಿಮಾ ಬಿಡುಗಡೆ ತಡವಾಗಿದೆ. ನವೆಂಬರ್‌ ತಿಂಗಳಲ್ಲಿ ಸಿನಿಮಾ ತೆರೆ ಮೇಲೆ ಮೂಡಲಿದೆ. ಇದು ಆತ್ಮದ ಪ್ರೇಮ ಕತೆ. ಜತೆಗೆ ಒಂದು ನಾಯಿ. ಒಂದು ಫ್ಯಾಂಟಸಿ ಲವ್‌ ಸ್ಟೋರಿಯ್ನು ಹೇಳುವ ಪ್ರಯತ್ನ ಮಾಡಿದ್ದೇವೆ’ ಎಂದು ನಿರ್ದೇಶಕರು ಚಿತ್ರದ ಕುರಿತು ವಿವರಣೆ ಕೊಟ್ಟರು.

'ಕಾಣದಂತೆ ಮಾಯವಾದನು' ಅಂದವನಿಗೆ ಸಿಕ್ತು ಬಂಪರ್ ಕ್ಯಾಶ್!

ಚಿತ್ರದ ಹೆಸರಿಗೆ ತಕ್ಕಂತೆ ಒಂದು ಉಪ ಶೀರ್ಷಿಕೆ ಬೇಕಿತ್ತು. ಅಂದುಕೊಂಡಂತೆ ಸಬ್‌ ಟೈಟಲ್‌ ಸಿಕ್ಕಿದೆ. ‘ಗೋರಿಯಾದ್ಮೇಲೆ ಹುಟ್ಟಿದ್‌ ಸ್ಟೋರಿ’ ಎನ್ನುವ ಉಪ ಶೀರ್ಷಿಕೆಯಂತೆ ಗೋರಿಯಲ್ಲಿ ಹುಟ್ಟಿಕೊಂಡ ಪ್ರೇಮ ಕತೆಗೆ ನಾನು ನಾಯಕ. ಸಿನಿಮಾ ತುಂಬಾ ಚೆನ್ನಾಗಿ ಬಂದಿದೆ. ಗ್ರಾಫಿಕ್ಸ್‌ಗೆ ಮಹತ್ವ ನೀಡಲಾಗಿದೆ. ಈ ಕಾರಣಕ್ಕೆ ಚಿತ್ರ ಕಲ್ಲರ್‌ಫುಲ್ಲಾಗಿದೆ ಎಂಬುದು ವಿಕಾಸ್‌ ಅವರ ಮಾತುಗಳು. ವಠಾರ ಮಹೇಶ್‌, ಉದಯ್‌, ಭಜರಂಗಿ ಲೋಕಿ ಮುಂತಾದವರು ಚಿತ್ರದಲ್ಲಿ ನಟಿಸಿದ್ದಾರೆ. ಚಿತ್ರದ ಆರಂಭದಲ್ಲೇ ಒಂದು ಕೊಲೆ ಆಗುತ್ತದೆ.

ಸತ್ತವನ ಆತ್ಮ ಮಾತ್ರ ಅಲ್ಲಿಯೇ ಇರುತ್ತದೆ. ಪವರ್‌ ಇಲ್ಲದ ಆತ್ಮ ತನ್ನ ಕೊಂದವರನ್ನು ಹೇಗೆ ಬಲಿ ಪಡೆಯುತ್ತದೆ ಎಂಬುದು ಚಿತ್ರದ ಕತೆ. ಜತೆಗೆ ಹಾಗೆ ಕೊಲೆಯಾಗುವ ವ್ಯಕ್ತಿ ಯಾರು ಎಂಬುದು ಚಿತ್ರದ ಮತ್ತೊಂದು ಟ್ವಿಸ್ಟ್‌. ಈ ನಡುವೆ ಆತ್ಮ ಮತ್ತು ಹುಡುಗಿ ನಡುವೆ ಪ್ರೀತಿ ಕೂಡ ಹುಟ್ಟಿಕೊಳ್ಳುತ್ತದೆ. ಚಿತ್ರದಲ್ಲಿ ನಾಲ್ಕು ಹಾಡುಗಳಿದ್ದು, ಗುಮ್ಮಿನೇನಿ ವಿಜಯ್‌ ಸಂಗೀತ ನೀಡಿದ್ದಾರೆ. ಸುಜ್ಞಾನ್‌ ಮೂರ್ತಿ ಕ್ಯಾಮೆರಾ ಹಿಡಿದಿದ್ದಾರೆ. ಚಿತ್ರತಂಡದ ಮಾತು ಮುಗಿದ ಮೇಲೆ ಚಿತ್ರಕ್ಕೆ ಸಬ್‌ ಟೈಟ್‌ ಕೊಟ್ಟು ವಿಜೇತರಾದ ಕುಂದಾಪುರದ ಶಾಲಾ ಶಿಕ್ಷಕ ನರೇಂದ್ರ ಎಸ್‌ ಗಂಗೊಳ್ಳಿ ಅವರಿಗೆ 50 ಸಾವಿರ ರುಪಾಯಿ ಚೆಕ್‌ ನೀಡಲಾಯಿತು.