Asianet Suvarna News Asianet Suvarna News

ಮದ್ಯ ಪ್ರಥಮ, ಪ್ರಥಮ್ ಮದ್ಯಮ!

ಈ ಚಿತ್ರದ ಅಡಿಯಿಂದ ಮುಡಿಯವರೆಗೆ ಇರುವ ಏಕೈಕ ಕಲೆಗಾರ. ಅವರೇ ಚಿತ್ರದ ಕೇಂದ್ರ ಬಿಂದು. ಉಳಿದುದೆಲ್ಲವೂ ಈ ಕೇಂದ್ರದ ಸುತ್ತ ಸುತ್ತುತ್ತಿರುತ್ತದೆ. ಹಾಗೆ ನೋಡಿದರೆ ಈ ಚಿತ್ರದ ಉದ್ದೇಶ ಲೋಕ ಮೆಚ್ಚುವಂತದ್ದು. ಒಂದೆಡೆ ರೈತಪರವಾಗಿಯೂ ಇನ್ನೊಂದೆಡೆ ಮದ್ಯವರ್ಜನ ಶಿಬಿರದಂತೆಯೂ ಈ ಚಿತ್ರ ಕೆಲಸ ಮಾಡುತ್ತದೆ.

Devrantha Manusha Movie Review

ಚಿತ್ರ: ದೇವ್ರಂಥ ಮನುಷ್ಯ

ತಾರಾಗಣ: ಪ್ರಥಮ್, ಶ್ರುತಿ, ವೈಷ್ಣವಿ ಮೆನನ್, ತಬಲಾ ನಾಣಿ, ಸುಚೇಂದ್ರ ಪ್ರಸಾದ್, ಪವನ್,

ನಿರ್ದೇಶನ: ಕಿರಣ್ ಶೆಟ್ಟಿ

ನಿರ್ಮಾಣ: ಮಂಜುನಾಥ್ ಎಚ್‌ಸಿ, ತಿಮ್ಮರಾಜು ಕೆ

ಸಂಗೀತ ನಿರ್ದೇಶನ: ಪ್ರದ್ಯೋತ್ತನ್

ಛಾಯಾಗ್ರಹಣ: ಅರುಣ್ ಸುರೇಶ್

 

ಹುಷಾರಿಲ್ಲದ ಅಜ್ಜಿ ಜೀವನ್ಮರಣ ಸ್ಥಿತಿಯಲ್ಲಿ ಆಸ್ಪತ್ರೆಯ ಹಾಸಿಗೆ ಮೇಲೆ ಮಲಗಿದ್ದಾಗ ಎಲ್ಲರೂ ಆತಂಕದಲ್ಲಿ, ನೋವಲ್ಲಿ ಗಂಗಾಜಲ ಬಿಡುತ್ತಿದ್ದರೆ ಇದ್ದಕ್ಕಿದ್ದಂತೆ ಜ್ಞಾನೋದಯವಾದವನಂತೆ ಓಡಿ ಹೋಗಿ ಆಲ್ಕೋಹಾಲ್ ಬಾಟಲ್ ತಂದು ಅಜ್ಜಿಗೆ ಕಂಠಮಟ್ಟ ಕುಡಿಸಿ ಅವರನ್ನು ಬದುಕಿಸಿಕೊಂಡ ವೀರ ಮೊಮ್ಮಗನ ಹೆಸರು ಪ್ರಥಮ್.

ಅಲ್ಲಿಂದ ಶುರುವಾಗುತ್ತದೆ ಪ್ರಥಮನ ಕುಡಿತ ಕಾವ್ಯ. ಸಂಜೆ ಕುಡಿಯದಿದ್ದರೆ ಜೀವನವೇ ಇಲ್ಲ ಅನ್ನುವಂತೆ ಓಡಾಡುವ ಪ್ರಥಮ್ ಇಲ್ಲಿ ಕುಡುಕರ ಸಂಘದ ಅಧ್ಯಕ್ಷ, ಪದಾಧಿಕಾರಿ, ಕಾರ್ಯದರ್ಶಿ ಎಲ್ಲವೂ ಹೌದು. ಜೊತೆಗೆ ಚಿತ್ರದಲ್ಲಿರುವ ನಾಯಕ, ಖಳನಾಯಕ, ಹಾಸ್ಯ ನಟ ಇತ್ಯಾದಿಗಳೂ ಅವರೇ. ಹಾಗಾಗಿ ಮುಂದೊಂದು ದಿನ ಈ ಚಿತ್ರ ಪ್ರಶಸ್ತಿ ಕಮಿಟಿಗಳ ಎದುರು ಬಂದಾಗ ಪ್ರಥಮ್ ಅವರಿಗೆ ಯಾವ ಕೆಟಗರಿಯಲ್ಲಿ ಪ್ರಶಸ್ತಿ ನೀಡಬಹುದು ಅನ್ನುವ ಗೊಂದಲವನ್ನು ಉಂಟುಮಾಡುವಲ್ಲಿ ಈ ಚಿತ್ರ ಯಶಸ್ವಿಯಾಗುತ್ತದೆ.

ಅದಕ್ಕೆ ಸಾಕ್ಷಿ ಖುದ್ದು ಪ್ರಥಮ್. ಈ ಚಿತ್ರದ ಅಡಿಯಿಂದ ಮುಡಿಯವರೆಗೆ ಇರುವ ಏಕೈಕ ಕಲೆಗಾರ. ಅವರೇ ಚಿತ್ರದ ಕೇಂದ್ರ ಬಿಂದು. ಉಳಿದುದೆಲ್ಲವೂ ಈ ಕೇಂದ್ರದ ಸುತ್ತ ಸುತ್ತುತ್ತಿರುತ್ತದೆ. ಹಾಗೆ ನೋಡಿದರೆ ಈ ಚಿತ್ರದ ಉದ್ದೇಶ ಲೋಕ ಮೆಚ್ಚುವಂತದ್ದು. ಒಂದೆಡೆ ರೈತಪರವಾಗಿಯೂ ಇನ್ನೊಂದೆಡೆ ಮದ್ಯವರ್ಜನ ಶಿಬಿರದಂತೆಯೂ ಈ ಚಿತ್ರ ಕೆಲಸ ಮಾಡುತ್ತದೆ. ಕಡೆ ಕಡೆಗಂತೂ ಪ್ರಥಮ್ ಎಂಥಾ ತ್ಯಾಗಮಯಿಯಾಗುತ್ತಾರೆ ಅಂದ್ರೆ ಅಷ್ಟು ಹೊತ್ತು ಯಾರಾರದೋ ಬೆವರಿಳಿಸುವ ಅವರು ನೋಡುಗರ ಕಣ್ಣಲ್ಲಿ ನೀರಿಳಿಸಿಬಿಡುತ್ತಾರೆ.

ಅಷ್ಟರ ಮಟ್ಟಿಗೆ ಈ ಚಿತ್ರ ಪ್ರಥಮ್‌ಮಯ. ಇನ್ನು ನಟನೆಯ ವಿಚಾರಕ್ಕೆ ಬಂದರೆ ಈ ಪ್ರಥಮ್ ಥೇಟ್ ಆ ಪ್ರಥಮ್‌ನಂತೆಯೇ. ಬಿಗ್‌ಬಾಸ್ ಪ್ರಥಮ್ ನಿಮಗೆ ಇಲ್ಲೂ ಸಿಗುತ್ತಾರೆ. ಮಾತಿನಲ್ಲೇ ಎಲ್ಲಿಂದ ಎಲ್ಲಿಗೋಲೆ‘ ಓವರ್ ಕಟ್ಟುವ ಅವರ ಗುಣ ಇಲ್ಲೂ ಮುಂದುವರಿದಿದೆ.

ಚಿತ್ರದಲ್ಲಿ ಪ್ರೇಕ್ಷಕರಿಗೆ ಆಗಾಗ ಕಾಣಿಸಿಕೊಂಡು ಚಿವುಟುವ ಕೆಲಸವನ್ನು ಮಾಡುವುದು ಸುಚೇಂದ್ರ ಪ್ರಸಾದ್ ಮತ್ತು ತಬಲಾ ನಾಣಿ. ಅವರಿಬ್ಬರು ಹಿರಿಯ ಕುಡುಕರು ಅನ್ನುವುದು ಇಲ್ಲಿ ಗಮನಾರ್ಹ. ಸ್ಕೂಟರಿನಲ್ಲಿ ಸಾಗುವ, ಬೇಸ್ತು ಬೀಳುವ ದೃಶ್ಯಗಳಲ್ಲಿ ಅವರಿಬ್ಬರು ಪ್ರೇಕ್ಷಕರನ್ನು ನಗಿಸುತ್ತಾ ಕೈ ಹಿಡಿದು ನಡೆಸುತ್ತಾರೆ. ಅಷ್ಟರ ಮಟ್ಟಿಗೆ ಅವರ ಪಾತ್ರಕ್ಕೆ ಜೀವಂತಿಕೆ ಸಿಕ್ಕಿದೆ.

ಈ ಚಿತ್ರದಲ್ಲಿ ಮೊದಲು ಕಾಣುವುದು ಪ್ರಥಮ್. ಕತೆ ಏನಿದ್ದರೂ ಕಾಣುವುದು ಕಡೆಯಲ್ಲಿ. ಮೊದಲಾ‘ರ್ದಲ್ಲಿ ಪ್ರಥಮನ ಪಾತ್ರವನ್ನು ಕಟ್ಟಿಕೊಡುವ ನಿರ್ದೇಶಕರು ದ್ವಿತೀಯಾ‘ರ್ದಲ್ಲಿ ಮನಪರಿವರ್ತನೆಗೆ ಬೇಕಾದ ಕಸರತ್ತುಗಳನ್ನು ಮಾಡುತ್ತಾರೆ. ಮದ್ಯವರ್ಜನ ಶಿಬಿರದಿಂದ ಕುಡಿಯುವುದೇ ಇಲ್ಲ ಎಂದು ಹೊರಬಂದ ಕುಡುಕ ಕೆಲವೇ ದಿನಗಳಲ್ಲಿ ಮದ್ಯವರ್ಜನ ಶಿಬಿರವನ್ನೇ ಮರೆಯುವ ಹಾಗೆ ಈ ಚಿತ್ರ ಕತೆಯೂ ಇರುವುದು ಎಂಬ ಪಾಯಿಂಟನ್ನು ನೀವಿಲ್ಲಿ ನೋಟ್ ಮಾಡಿಕೊಳ್ಳಬೇಕು.

- ರಾಜೇಶ್ ಶೆಟ್ಟಿ

- ರೇಟಿಂಗ್- 2

Follow Us:
Download App:
  • android
  • ios