ಗ್ರಹಗತಿ ಸರಿಯಿಲ್ವೋ ಏನೋ ಗೊತ್ತಿಲ್ಲ! ಸಣ್ಣ ಪುಟ್ಟ ವಿಚಾರಗಳನ್ನು ಮೈ ಮೇಲೆ ಎಳೆದುಕೊಂಡು ಸುದ್ದಿಯಲ್ಲಿದ್ದಾರೆ ಬಾಲಿವುಡ್ 'ಕ್ವೀನ್'. ಇದೀಗ ಪತ್ರಕರ್ತರ ಕೆಂಗಣ್ಣಿಗೂ ಗುರಿಯಾಗಿರುವ 'ಮಣಿಕರ್ಣಿಕಾ' ನಟಿ, ಯಾವ ಬೆದರಿಕೆಗೂ ಜಗ್ಗದೇ, ಪ್ರೆಸ್‌ಗೇ ಸವಾಲು ಹಾಕಿದ್ದಾರೆ!

Add Asianetnews Kannada as a Preferred SourcegooglePreferred

ಚಿತ್ರಕ್ಕೆ ನಾಮಕರಣ ಮಾಡುವುದರಿಂದ ಹಿಡಿದು, ಒಂದಲ್ಲ ಒಂದು ವಿಷಯಕ್ಕೆ ಸುದ್ದಿಯಲ್ಲಿರುವ ಬಾಲಿವುಡ್ ಬಿಂದಾಸ್ ನಟಿ ಕಂಗನಾ ರಣಾವತ್, ಇದೀಗ ಮತ್ತೆ ಟ್ರೆಂಡಿಂಗ್‌ನಲ್ಲಿದ್ದಾರೆ. ಪ್ರೆಸ್ ಕೆಂಗಣ್ಣಿಗೆ ಗುರಿಯಾಗಿರುವ ನಟಿ, ಮಾಧ್ಯಮಕ್ಕೆ ಸವಾಲು ಹಾಕುವ ಮೂಲಕ ಏನೇ ಮಾಡಿದರೂ ತಮ್ಮ ಆತ್ಮವಿಶ್ವಾಸ ಕುಂದುವುದಿಲ್ಲವೆಂಬುದನ್ನು ಪ್ರೂವ್ ಮಾಡಿದ್ದಾರೆ.

ಪತ್ರಕರ್ತನ ಕ್ಷಮೆಯಾಚಿಸಲು ನೋ ಎಂದ ಕಂಗನಾ; ಮಣಿದ ಏಕ್ತಾ ಕಪೂರ್

'ಮಣಿಕರ್ಣಿಕಾ' ಚಿತ್ರದಲ್ಲಿ ಅದ್ಭುತವಾಗಿ ನಟಿಸಿದ್ದರೂ ಪತ್ರಕರ್ತ ಜಸ್ಟಿನ್ ರಾವ್‌ ಕಂಗನಾ ವಿರುದ್ಧ ಲೇಖನ ಬರೆದಿದ್ದರು. ಅದಕ್ಕೆ ಕಂಗನಾ ಕೆಂಡಾಮಂಡಲವಾಗಿದ್ದರು. ಕೆಲದಿನಗಳ ಹಿಂದೆ 'ಜಡ್ಜ್‌ ಮೆಂಟ್ ಹೈ ಕ್ಯಾ?' ಚಿತ್ರದ ಆಡಿಯೋ ಲಾಂಚ್ ಕಾರ್ಯಕ್ರಮ ಅದ್ಧೂರಿಯಾಗಿ ನಡೆದಿತ್ತು. ಅಲ್ಲಿಗೆ ಆಗಮಿಸಿದ್ದ ಜಸ್ಟಿನ್ ಕೇಳಿದ ಯಾವ ಪ್ರಶ್ನೆಗೂ, ಕಂಗನಾ ಕ್ಯಾರೇ ಎನ್ನಲಿಲ್ಲ. ಇದಕ್ಕೆ ಆಕ್ರೋಶ ವ್ಯಕ್ತಪಡಿಸುವ ಸರದಿ ಜಸ್ಟಿನ್ ಅವರದ್ದಾಗಿತ್ತು. ಕಂಗನಾ ಕ್ಷಮೆ ಕೇಳುವವರೆಗೂ ಸಿನಿಮಾ ಪತ್ರಕರ್ತರ ಕೂಟ, ಕಂಗನಾ ಸುದ್ದಿಗಳನ್ನು ಪ್ರಕಟಿಸೋಲ್ಲವೆಂದು ಅನೌನ್ಸ್ ಮಾಡಿತು.

'ಅಯ್ಯೋ, ಸುದ್ದಿ ಪ್ರಕಟಿಸದೇ ಹೋದರೆ ಅಷ್ಟೇ ಹೋಯಿತು...', ಎಂದರೇ ಹೊರತು, ಈ ರಾಣಿ Sorry ಮಾತ್ರ ಕೇಳಲಿಲ್ಲ. ಇದೀಗ ಕಂಗನಾ ಟ್ವೀಟ್ ಮಾಡಿದ್ದು, 'ನಾನು ಭಾರತೀಯ ಮಾಧ್ಯಮ ಬಗ್ಗೆ ಮಾತಾನಾಡುತ್ತಿರುವೆ. ಮಾಧ್ಯಮದವರು ನನ್ನ ಕರಿಯರ್‌ಗೆ ಬಿಗ್‌ ಸಪೋರ್ಟ್‌ ನೀಡಿದ್ದಾರೆ. ಅವರಿಂದ ನಾನು ಎಷ್ಟೋ ನಿರ್ಧಾರಗಳನ್ನು ತೆಗೆದುಕೊಂಡಿದ್ದೇನೆ. ಎಲ್ಲಿ ಒಳ್ಳೆಯವರು ಇರುತ್ತಾರೋ, ಅಲ್ಲಿಯೇ ಕೆಟ್ಟವರೂ ಇರುತ್ತಾತರೆ. ಒಂದಾದರೂ ಒಳ್ಳೆ ವಿಚಾರ ಬರೆದರೆ ತೋರಿಸಿ. ಎಲ್ಲವೂ ಹಣ ಮಾಡುವುದೇ ನಿಮ್ಮ ಉದ್ದೇಶ. ನಿಮಗೆ ಧೈರ್ಯವಿದ್ದರೆ ನನ್ನ ಸುದ್ದಿಗಳನ್ನು ನಿಷೇಧಿಸಿ. ನಮ್ಮ ಸಿನಿಮಾಗಳ ಬಗ್ಗೆ, ನನ್ನ ಬಗ್ಗೆ ಮಾತನಾಡಿಕೊಂಡೇ ನೀವು ಹಣ ಮಾಡುತ್ತಿರುವುದು,' ಎಂದು ಪತ್ರಕರ್ತರಿಗೇ ಸವಾಲು ಹಾಕಿದ್ದಾರೆ.

ಎಂಟರ್ಟೈಮೆಂಟ್ ಜರ್ನಲಿಸ್ಟ್‌ ಗಿಲ್ಡ್ ಆಫ್‌ ಇಂಡಿಯಾಗೆ ಮಣೆ ಹಾಕುವುದೇ ಇಲ್ಲವೆಂದು ಕಡ್ಡಿ ಮುರಿದಂತೆ ಹೇಳಿದ್ದಾರೆ ಗುಂಗುರು ಕೂದಲಿನ ಬಾಲಿವುಡ್ ಬೆಡಗಿ.