ಬಿಗ್’ಬಾಸ್ ಮುಗಿಸಿ ಬಂದ ಜೆಕೆ-ಅನುಪಮಾ ಗೌಡ ಏನ್ ಮಾಡ್ತಾ ಇದಾರೆ ಗೊತ್ತಾ?
ಇದು ದಯಾಳ್ ಪದ್ಮನಾಭ್ ಅವರ ಮತ್ತೊಂದು ಕ್ರೈಮ್ ಥ್ರಿಲ್ಲರ್ ಸಿನಿಮಾ. ಹೆಸರು ‘ಆ ಕರಾಳ ರಾತ್ರಿ’. ಮೊನ್ನೆಯಷ್ಟೆ ಎರಡು ಚಿತ್ರಗಳಿಗೆ ಮುಹೂರ್ತ ಮಾಡಿಕೊಂಡರಲ್ಲ, ಅದರಲ್ಲೂ ಇದೂ ಒಂದು. ಇಲ್ಲಿ ರಂಗಾಯಣ ರಘು, ವೀಣಾ ಸುಂದರ್, ಅನುಪಮಾ ಗೌಡ, ಜೆಕೆ, ನವೀನ್ ಕೃಷ್ಣ ಅವರು ನಟಿಸುತ್ತಿದ್ದಾರೆ.
ಬೆಂಗಳೂರು (ಫೆ.23): ಇದು ದಯಾಳ್ ಪದ್ಮನಾಭ್ ಅವರ ಮತ್ತೊಂದು ಕ್ರೈಮ್ ಥ್ರಿಲ್ಲರ್ ಸಿನಿಮಾ. ಹೆಸರು ‘ಆ ಕರಾಳ ರಾತ್ರಿ’. ಮೊನ್ನೆಯಷ್ಟೆ ಎರಡು ಚಿತ್ರಗಳಿಗೆ ಮುಹೂರ್ತ ಮಾಡಿಕೊಂಡರಲ್ಲ, ಅದರಲ್ಲೂ ಇದೂ ಒಂದು. ಇಲ್ಲಿ ರಂಗಾಯಣ ರಘು, ವೀಣಾ ಸುಂದರ್, ಅನುಪಮಾ ಗೌಡ, ಜೆಕೆ, ನವೀನ್ ಕೃಷ್ಣ ಅವರು ನಟಿಸುತ್ತಿದ್ದಾರೆ.
ಇದು ಬಿಗ್ಬಾಸ್ ಮನೆಯಲ್ಲಿ ಹುಟ್ಟಿಕೊಂಡ ಕತೆ. ಹೀಗಾಗಿ ಬಿಗ್ಬಾಸ್ ಮನೆಯ ಸ್ಪರ್ಧಿಗಳೇ ಈ ಚಿತ್ರದ ಮುಖ್ಯ ಪಾತ್ರಧಾರಿಗಳು. ಇದು ಸಾಹಿತಿ ಮೋಹನ್ ಹಬ್ಬು ಎಂಬುವವರು ಬರೆದ ನಾಟಕವನ್ನು ಆಧರಿಸಿ ಈ ಸಿನಿಮಾ ಮಾಡಲಾಗುತ್ತಿದೆ. ಈಗಾಗಲೇ ಇದನ್ನು ಪ್ರೇಕ್ಷಕರು ನಾಟಕ ರೂಪದಲ್ಲಿ ನೋಡಿದ್ದಾರೆ ಮತ್ತು ಓದಿದ್ದಾರೆ. ಈಗ ಅದಕ್ಕೆ ದಯಾಳ್ ಅವರು ಸಿನಿಮಾ ರೂಪ ನೀಡುತ್ತಿದ್ದಾರೆ. ಈ ಚಿತ್ರಕ್ಕೂ ಪಿ ಕೆ ಎಚ್ ದಾಸ್ ಕ್ಯಾಮೆರಾ ಹಿಡಿಯುತ್ತಿದ್ದಾರೆ. ಸಂಗೀತಕ್ಕೆ ಮಾತ್ರ
ಗಣೇಶ್ ಅವರು ಇದ್ದಾರೆ. ನಾಗರಾಜ್ ಎಂಬುವವರು ಈ ಚಿತ್ರದ ನಾಲ್ಕು ಹಾಡುಗಳಿಗೆ ಸಾಹಿತ್ಯ ಬರೆಯುತ್ತಿದ್ದಾರೆ. ಇವಿಷ್ಟು ವಿರಣೆಗಳೊಂದಿಗೆ ಚಿತ್ರತಂಡ ಮಾಧ್ಯಮಗಳ ಮುಂದೆ ಮಾತಿಗೆ ಹಾಜರಾಯಿತು. ಮತ್ತೆ ದಯಾಳ್ ಅವರ ಮಾತು.
‘ಬಿಗ್ಬಾಸ್ ಮನೆಯಲ್ಲಿ 12 ವಾರ ಇರುತ್ತೇನೆ. ಕೆಲವು ಟಾಸ್ಕ್ಗಳ ಹೊರತಾಗಿ ಸಮಯ ಇರುತ್ತದೆ. ಅಲ್ಲೇ ಕತೆ ಮಾಡಿಕೊಂಡರೆ ಆಯ್ತು ಅಂತ ಹೋದವನು ನಾನು. ಆದರೆ, 3 ನೇ ವಾರಕ್ಕೆ ಹೊರಗೆ ಬಂದೆ. ಹೀಗಾಗಿ ಸಿನಿಮಾ ಕತೆ ಬೇಕು ಎಂದು ಹುಡುಕುತ್ತಿದ್ದಾಗ ಸಿಕ್ಕಿದ್ದೇ ಮೋಹನ್ ಹಬ್ಬು ಅವರ ನಾಟಕ. ಇದು 1961 ರ ಕಾಲಘಟ್ಟದಲ್ಲಿ ನಡೆದ ಕತೆ. ನಾನು ಇದನ್ನು 1998 ರ ಕಾಲಕ್ಕೆ ತಕ್ಕಂತೆ ಚಿತ್ರಕತೆ ಮಾಡಿಕೊಂಡಿದ್ದೇನೆ. ಹಗ್ಗದ ಕೊನೆಗಿಂತ ದೊಡ್ಡ ಗೆಲುವು ಈ ಚಿತ್ರದಿಂದ ಸಿಗುತ್ತದೆಂಬ ನಂಬಿಕೆ ಇದೆ. ಮೂಡಿಗೆರೆಯರ ಒಂಟಿ ಮನೆಯಲ್ಲಿ ಇದರ ಚಿತ್ರೀಕರಣ ಸಾಗಲಿದೆ. ದುರಾಸೆ ಮತ್ತು ಭಾವನಾತ್ಮಕ ಅಂಶಗಳನ್ನು ಸೇರಿಸಿಕೊಂಡು ಈ ಸಿನಿಮಾ ಮಾಡಲಾಗುತ್ತಿದೆ’ ಎಂಬುದು ದಯಾಳ್ ಮಾತು.
ಕತೆ ತುಂಬಾ ಚೆನ್ನಾಗಿರುವ ಕಾರಣ ಈ ಚಿತ್ರದಲ್ಲಿ ನಟಿಸುವುದಕ್ಕೆ ವೀಣಾ ಸುಂದರ್ ಒಪ್ಪಿಕೊಂಡರಂತೆ. ‘ಪಾತ್ರ ಚೆನ್ನಾಗಿರುವ ಕಾರಣ ನಾನು ಸಂಭಾವನೆ ಬಗ್ಗೆಯೂ ಹೆಚ್ಚು ಯೋಚನೆ ಮಾಡಲಿಲ್ಲ. ದಯಾಳ್ ಒಳ್ಳೆಯ ಸಿನಿಮಾ ಮಾಡುತ್ತಾರೆಂಬ ನಂಬಿಕೆಯಲ್ಲಿ ಈ ಚಿತ್ರದಲ್ಲಿ ನಟಿಸುತ್ತಿರುವೆ’ ಎಂದರು ವೀಣಾ ಸುಂದರ್.
ಜೆಕೆ, ನವೀನ್ ಕೃಷ್ಣ ಅವರು ತಮ್ಮ ಪಾತ್ರಗಳ ಕುರಿತು ಹೇಳಿಕೊಂಡರು. ಗಣೇಶ್ ಅವರು ಹೊಸ ರೀತಿಯ ಸಂಗೀತ ಮಾಡುವ ಕುರಿತು ಮಾತನಾಡಿದರು. ದೊಡ್ಡದಾಗಿ ಬೆಂಕಿ ಹತ್ತಿಕೊಳ್ಳುವುದರೊಂದಿಗೆ ಕತೆ ತೆರೆದುಕೊಳ್ಳುತ್ತದೆ. ಮೂಡಿಗೆರೆ ಸಮೀಪ ಬಾಳೂರು ಎನ್ನುವ ಗ್ರಾಮದಲ್ಲಿ ಪುರಾತನ ಮನೆ ಸನ್ನಿವೇಶಕ್ಕೆ ಹೇಳಿ ಮಾಡಿಸದಂತೆ ಇರುವುದರಿಂದ ಕೆಲವೊಂದು ಬದಲಾವಣೆ ಮಾಡಿಕೊಂಡು 15 ದಿನಗಳ ಕಾಲ ಒಂದೇ ಹಂತದಲ್ಲಿ ಚಿತ್ರೀಕರಣ ನಡೆಸಲಾಗುವುದಕ್ಕೆ ದಯಾಳ್ ನಿರ್ಧರಿಸಿದ್ದಾರೆ. ಈ ಚಿತ್ರಕ್ಕೆ ಮೋಹನ್ ಅವಿನಾಶ್ ಯು. ಶೆಟ್ಟಿ ಸಹ ನಿರ್ಮಾಪಕರು.