ಬಿಡುಗಡೆಗೂ ಮುನ್ನ ಬಾಲಿವುಡ್ಗೆ ಹಾರಿದ 'ರಾಂಚಿ'!
ಒಂದು ಸಿನಿಮಾ ಒಂದು ಭಾಷೆಯಲ್ಲಿ ದೊಡ್ಡ ಹಿಟ್ ಪಡೆದು, ವಿಮರ್ಶಕರಿಂದ ಒಳ್ಳೆಯ ಮೆಚ್ಚುಗೆ ಪಡೆದುಕೊಂಡ ಮೇಲೆ ಮತ್ತೊಂದು ಭಾಷೆಗೆ ರೀಮೇಕ್, ಡಬ್ ಆಗುವುದು ಸಾಮಾನ್ಯ. ಆದರೆ ಟೀಸರ್ ಬಿಡುಗಡೆ ಹಂತದಲ್ಲಿ ಇರುವಾಗಲೇ ನಮ್ಮ ಕನ್ನಡದ ಸಿನಿಮಾ ಒಂದು ಹಿಂದಿಗೆ ರೀಮೇಕ್ ಆಗುವ ಸುವರ್ಣಾವಕಾಶ ಪಡೆದುಕೊಂಡಿದೆ. ಅದು ರಾಂಚಿ. ಅದರ ನಿರ್ದೇಶಕರು ‘ಬಾಲ್ ಪೆನ್’ ಖ್ಯಾತಿಯ ಶಶಿಕಾಂತ್.
‘ರಾಂಚಿ’ ಚಿತ್ರಕ್ಕೆ ಹಿನ್ನೆಲೆ ಸಂಗೀತ ನೀಡಿರುವ ಸಂದೀಪ್ ಚೌಟ ಅವರನ್ನು ಕಾರ್ಯ ನಿಮಿತ್ತ ಭೇಟಿಯಾಗಲು ಆಗಾಗ ಮುಂಬೈಗೆ ಹೋಗುತ್ತಿದ್ದ ನಿರ್ದೇಶಕ ಶಶಿಕಾಂತ್ ಅವರಿಗೆ ಬಾಲಿವುಡ್ನ ನಿರ್ಮಾಪಕ ರೂಪೇಶ್ ಒಜಾ ಅವರನ್ನು ಭೇಟಿಯಾಗುವ ಅವಕಾಶ ಸಿಕ್ಕಿತು. ಅವರಿಗೆ ಹದಿನೈದು ನಿಮಿಷ ಕತೆ ಹೇಳಿದ ತಕ್ಷಣ ಅವರು ಹಿಂದಿಯಲ್ಲಿ ಸಿನಿಮಾ ನಿರ್ಮಾಣ ಮಾಡಲು ಮುಂದೆ ಬಂದಿದ್ದಾರೆ.
ಸಿನಿ ದುನಿಯಾಕ್ಕೆ ಕಾಲಿಟ್ಟ ನಟಿ ತಾರಾ ಪುತ್ರ!
‘ನಮ್ಮ ಚಿತ್ರದ್ದು ವಿಶಾಲವಾದ ಕತೆ. ಹಾಗಾಗಿ ಇದನ್ನು ಹಿಂದಿಯಲ್ಲಿ ಮಾಡಬೇಕು ಎನ್ನುವ ಆಸೆ ನನಗೂ ಇತ್ತು. ಇದಕ್ಕೆ ಸಹಾಯ ಮಾಡಿದ್ದು ನಮ್ಮ ಚಿತ್ರದ ಹಿನ್ನೆಲೆ ಸಂಗೀತ ನಿರ್ದೇಶಕರಾದ ಸಂದೀಪ್ ಚೌಟ. ಅವರ ಮೂಲಕ ರೂಪೇಶ್ ಒಜಾ ಅವರನ್ನು ಭೇಟಿ ಮಾಡಿದೆವು. ಕತೆ ಕೇಳಿದ ಅವರು, ನೀವು ಪಟ್ಟಿರುವ ಸಾಹಸಕ್ಕೆ ಮೆಚ್ಚಿ ನಾನು ಇದಕ್ಕೆ ಗೌರವಾರ್ಥವಾಗಿ ಬಂಡವಾಳ ಹೂಡುತ್ತೇನೆ. ಒಳ್ಳೆಯ ಚಿತ್ರ ಮಾಡೋಣ ಎಂದರು’ ಎಂದು ಬಾಲಿವುಡ್ನಲ್ಲಿ ಅವಕಾಶ ಸಿಕ್ಕಿದ ಪರಿಯನ್ನು ಹೇಳಿಕೊಂಡರು ಶಶಿಕಾಂತ್.
ಕನ್ನಡದ ‘ರಾಂಚಿ’ ಬಿಡುಗಡೆಯಾಗಿ ಹಿಂದಿಗೆ ಬೇರೆಯ ಕಲಾವಿದರನ್ನು ಆಯ್ಕೆ ಮಾಡಿ ಸಿನಿಮಾ ಸೆಟ್ಟೇರಲು ಏನಿಲ್ಲವೆಂದರೂ ಇನ್ನೂ ಒಂದು ವರ್ಷದ ಸಮಯ ಬೇಕು. ಇಲ್ಲಿ ಕ್ಯಾಮರಾ ವರ್ಕ್ ಮಾಡಿರುವ ವಿನೋದ್ ಮತ್ತು ಹಿನ್ನೆಲೆ ಸಂಗೀತ ನೀಡಿರುವ ಸಂದೀಪ್ ಚೌಟ ಅವರನ್ನು ಹಿಂದಿಯಲ್ಲಿಯೂ ಬಳಸಿಕೊಳ್ಳುವ ಆಸೆ ಸದ್ಯಕ್ಕೆ ನಿರ್ದೇಶಕರದ್ದು.