ಪ್ರಭಾಸ್ನನ್ನು ಬ್ಯಾಡ್ಬಾಯ್ ಎಂದ ಬಾಹುಬಲಿ ನಿರ್ದೇಶಕ
ಬಾಹುಬಲಿ ಹೀರೋನನ್ನೇ ಬ್ಯಾಡ್ಬಾಯ್ ಎಂದ ರಾಜಮೌಳಿ | ಬಾಹುಬಲಿ ತಂಡವನ್ನು ಕಾಲೆಳೆದ ಕರಣ್ ಜೋಹರ್ | ಪ್ರಭಾಸ್ಗೆ ಯಾಕೆ ಹಾಗಂದ್ರು ರಾಜಮೌಳಿ? ಇಲ್ಲಿದೆ ಇಂಟರೆಸ್ಟಿಂಗ್ ಸುದ್ದಿ.
ಮುಂಬೈ (ಡಿ. 19): ಬಾಲಿವುಡ್ನ ಹೆಸರಾಂತ ನಿರ್ದೇಶಕ ಕರಣ್ ಜೋಹರ್ ‘ಬಾಹುಬಲಿ’ ಚಿತ್ರತಂಡವನ್ನು ಕಾಲೆಳೆದಿದ್ದಾರೆ.
ಇತ್ತೀಚೆಗೆ ಕರಣ್ ಅವರ ಕಾಫಿ ವಿತ್ ಕರಣ್ ಕಾರ್ಯಕ್ರಮಕ್ಕೆ ಬಾಹುಬಲಿ ತಂಡ ಬಂದಿತ್ತು. ಇದರಲ್ಲಿ ನಿರ್ದೇಶಕ ರಾಜಮೌಳಿ ಸೇರಿದಂತೆ ಪ್ರಭಾಸ್, ರಾಣಾ ದಗ್ಗುಬಾಟಿ ಸಹ ಕಾರ್ಯಕ್ರಮದಲ್ಲಿದ್ದರು. ಕಾರ್ಯಕ್ರಮ ಆರಂಭವಾಗುತ್ತಿದ್ದಂತೆ ಕರಣ್ ಅವರು ಪ್ರಭಾಸ್ ಹಾಗೂ ರಾಣಾ ಇಬ್ಬರಲ್ಲಿ ಯಾರು ಕೆಟ್ಟವರು ಎಂದು ಪ್ರಶ್ನಿಸಿದರು.
ಆಗ ರಾಜಮೌಳಿ ಅವರು ‘ಈ ಇಬ್ಬರಲ್ಲಿ ಬ್ಯಾಡ್ಬಾಯ್ ಪ್ರಭಾಸ್. ಆದರೆ ಅವರು ಬ್ಯಾಡ್ಬಾಯ್ ಎಂದು ಯಾವತ್ತೂ ತೋರಿಸಿಕೊಳ್ಳುವುದಿಲ್ಲ’ ಎಂದು ಹೇಳಿದರು. ರಾಜಮೌಳಿ ಮಾತಿಗೆ ಜೊತೆಯಾದ ರಾಣಾ ‘ಚಿತ್ರೀಕರಣದ ವೇಳೆ ನಾನೂ ಹಾಗೂ ಪ್ರಭಾಸ್ ಕಿತಾಪತಿ ಮಾಡುತ್ತಿರುವಾಗ ರಾಜಮೌಳಿ ಸರ್ ಕೈಯಲ್ಲಿ ನಾನು ಸಿಕ್ಕಿ ಹಾಕಿಕೊಂಡೆನೇ ವಿನಾ ಪ್ರಭಾಸ್ ಅವರು ತಪ್ಪಿಸಿಕೊಂಡರು’ ಎಂದು ಹೇಳಿದರು.
ಈ ನಡುವೆ ಕಾರ್ಯಕ್ರಮದ ಮಧ್ಯೆ ಕರಣ್ ಅವರು ಅನುಷ್ಕಾ ಹಾಗೂ ಪ್ರಭಾಸ್ ನಡುವಿನ ಬಾಂಧವ್ಯದ ಬಗ್ಗೆ ಪ್ರಶ್ನಿಸಿದರು. ‘ನೀವು ಅನುಷ್ಕಾ ಜತೆ ಡೇಟಿಂಗ್ ಮಾಡುತ್ತಿದ್ದೀರಿ ಎನ್ನುವ ರೂಮರ್ ಇದೆ. ನಿಜವೋ ಸುಳ್ಳೋ’ ಎಂದು ಕೇಳಿದರು. ಆದರೆ ಆ ಮಾತನ್ನು ಸಾರಾಸಗಟಾಗಿ ತಿರಸ್ಕರಿಸಿದ ಪ್ರಭಾಸ್ ಈ ರೂಮರ್ ಶುರು ಮಾಡಿದ್ದೇ ನೀವು ಎಂದು ಉತ್ತರಿಸಿದರು. ಅಲ್ಲಿಗೆ ಪ್ರಭಾಸ್ ಮತ್ತು ಅನುಷ್ಕಾ ಮಧ್ಯೆ ಇರುವ ಸಂಬಂಧವನ್ನು ಪ್ರಭಾಸ್ ನೇರವಾಗಿಯೇ ತಿರಸ್ಕರಿಸಿದಂತಾಗಿದೆ