ಹಿರಿಯ ನಟ ಅನುಪಮ್ ಖೇರ್, 'ಧುರಂಧರ್: ದಿ  ರಿವೆಂಜ್' ಚಿತ್ರದ ಯಶಸ್ಸಿನ ಬಗ್ಗೆ ಸೋಮವಾರ ಮಾತನಾಡಿದ್ದಾರೆ. ಸಿನಿಮಾಗಳನ್ನು 'ಪ್ರೊಪಗಾಂಡಾ' ಎಂದು ಕರೆಯುವ ಆರೋಪಗಳನ್ನು ತಳ್ಳಿಹಾಕಿದರು.

IFFD 2026ರಲ್ಲಿ ಮಾತಾಡಿದ ನಟ ಅನುಪಮ್ ಖೇರ್, 'ಧುರಂಧರ್' ಮತ್ತು 'ದಿ ಕಾಶ್ಮೀರ್ ಫೈಲ್ಸ್' ಯಶಸ್ಸಿನ ಬಗ್ಗೆ ಖುಷಿ ವ್ಯಕ್ತಪಡಿಸಿದ್ದಾರೆ. ಸಿನಿಮಾಗಳನ್ನು ಪ್ರೊಪಗಾಂಡಾ ಎನ್ನುವ ಆರೋಪವನ್ನು ತಳ್ಳಿಹಾಕಿದ್ದು, ಏನು ನೋಡಬೇಕೆಂದು ಪ್ರೇಕ್ಷಕರೇ ನಿರ್ಧರಿಸುತ್ತಾರೆ, ಅವರೇನು 'ದಡ್ಡರಲ್ಲ' ಎಂದಿದ್ದಾರೆ.

ಪ್ರೊಪಗಾಂಡಾ ಆರೋಪ ಮತ್ತು ಪ್ರೇಕ್ಷಕರ ಆಯ್ಕೆ ಬಗ್ಗೆ ಅನುಪಮ್ ಖೇರ್ ಮಾತು

ಹಿರಿಯ ನಟ ಅನುಪಮ್ ಖೇರ್, 'ಧುರಂಧರ್: ದಿ ರಿವೆಂಜ್' ಚಿತ್ರದ ಯಶಸ್ಸಿನ ಬಗ್ಗೆ ಸೋಮವಾರ ಮಾತನಾಡಿದ್ದಾರೆ. ಸಿನಿಮಾಗಳನ್ನು 'ಪ್ರೊಪಗಾಂಡಾ' ಎಂದು ಕರೆಯುವ ಆರೋಪಗಳನ್ನು ತಳ್ಳಿಹಾಕಿದ ಅವರು, ಪ್ರೇಕ್ಷಕರು ತಮಗೆ ಬೇಕಾದ ಸಿನಿಮಾವನ್ನು ತಾವೇ ಆಯ್ಕೆ ಮಾಡಿಕೊಳ್ಳುತ್ತಾರೆ ಎಂದು ಸ್ಪಷ್ಟಪಡಿಸಿದ್ದಾರೆ. ದೆಹಲಿಯಲ್ಲಿ ನಡೆದ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ (IFFD 2026) ಮಾಧ್ಯಮಗಳೊಂದಿಗೆ ಅವರು ಮಾತನಾಡಿದರು.

"ಸಿನಿಮಾಗಳನ್ನು ಪ್ರೊಪಗಾಂಡಾ ಫಿಲ್ಮ್ಸ್ ಅಂತ ಕರೆಯೋರಿಗೆ ನಾವು ಏನು ಹೇಳಲು ಸಾಧ್ಯ. ನಾವು ಅವರಿಗೋಸ್ಕರ ಯಾಕೆ ಸುಮ್ಮನೆ ಶಕ್ತಿ ವ್ಯರ್ಥ ಮಾಡಬೇಕು? ಅವರು ಅಪ್ರಸ್ತುತ ಜನರು. ಬನ್ನಿ, 'ದಿ ಕಾಶ್ಮೀರ್ ಫೈಲ್ಸ್' ಯಶಸ್ಸನ್ನು, 'ಧುರಂಧರ್' ಯಶಸ್ಸನ್ನು ಸಂಭ್ರಮಿಸೋಣ. ಜನರೇನು ದಡ್ಡರಲ್ಲ. ಮಧ್ಯರಾತ್ರಿ 12 ಗಂಟೆ ಶೋ ಹೌಸ್‌ಫುಲ್ ಆಗುತ್ತೆ ಅಂದ್ರೆ ಜನ ದಡ್ಡರಲ್ಲ. ಜನರಿಗೆ ಇಷ್ಟವಾದರೆ ಮಾತ್ರ ಸಿನಿಮಾ ನೋಡಲು ಹೋಗುತ್ತಾರೆ. ಇಂತಹ ಸಿನಿಮಾಗಳನ್ನು ಪ್ರೊಪಗಾಂಡಾ ಅಂತ ಕರೆಯೋರಿಗೆ 'ರೆಸ್ಟ್ ಇನ್ ಪೀಸ್' ಹೇಳೋಣ," ಎಂದು ಖೇರ್ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.

ಸಿನಿಮಾದ ಎರಡು ಮುಖಗಳು: ಕಲೆ ಮತ್ತು ಬ್ಯುಸಿನೆಸ್

ಸಮಾಜದಲ್ಲಿ ಸಿನಿಮಾದ ಪಾತ್ರದ ಬಗ್ಗೆ ಮಾತನಾಡಿದ ಖೇರ್, "ಸಿನಿಮಾ ಜನರನ್ನು ಬದಲಾಯಿಸಬಲ್ಲುದೇ? ಹೌದು, ಬದಲಾಯಿಸಬಹುದು. ಕತ್ತಲೆ ಆಡಿಟೋರಿಯಂನಲ್ಲಿ ಕೂರುವ ಪ್ರತಿಯೊಬ್ಬ ವ್ಯಕ್ತಿಯ ಮೇಲೆ ಅದು ಅವಲಂಬಿತ. ಆದರೆ, ಸಿನಿಮಾ ಅನ್ನೋದು ಒಂದು ಬ್ಯುಸಿನೆಸ್ ಕೂಡ. ಬೇರೆಲ್ಲಾ ಬ್ಯುಸಿನೆಸ್‌ಗಳ ಹಾಗೆ ಇದೂ ಒಂದು. ಎಷ್ಟೋ ಜನ ಕೇವಲ ಕಥೆ ಹೇಳಬೇಕು ಅಂತ ಚಾನೆಲ್ ನಡೆಸಲ್ಲ, ಅದೊಂದು ಬ್ಯುಸಿನೆಸ್ ಆಗಿ ನಡೆಸುತ್ತಾರೆ. ನಾನು ಒಂದು ಸಿನಿಮಾ ನೋಡಲು ಹೋದರೆ, ಅದರಿಂದ ಏನಾದರೂ ಕಲಿಯಬಹುದು," ಎಂದು ಹೇಳಿದರು.

'ತನ್ವಿ ದಿ ಗ್ರೇಟ್' ಸಿಲ್ವರ್ ಜ್ಯೂಬಿಲಿ ಸಂಭ್ರಮ

ಇದೇ ವೇಳೆ, ತಮ್ಮ 'ತನ್ವಿ ದಿ ಗ್ರೇಟ್' ಚಿತ್ರದ ಯಶಸ್ಸಿನ ಬಗ್ಗೆಯೂ ಖೇರ್ ಸಂತಸ ಹಂಚಿಕೊಂಡರು. "ನನ್ನ 'ತನ್ವಿ ದಿ ಗ್ರೇಟ್' ಸಿನಿಮಾ ಚಿತ್ರಮಂದಿರಗಳಲ್ಲಿ 25 ವಾರಗಳನ್ನು ಪೂರೈಸಿದೆ. ಇದು ಸಿಲ್ವರ್ ಜ್ಯೂಬಿಲಿ ಸಂಭ್ರಮ. ಸೀಮಿತ ಥಿಯೇಟರ್‌ಗಳಲ್ಲಿ ಈ ಸಿನಿಮಾವನ್ನು ಪ್ರದರ್ಶಿಸಬೇಕು ಎಂಬುದು ನನ್ನ ನಂಬಿಕೆಯಾಗಿತ್ತು. ಸಿನಿಮಾ ಮರು-ಬಿಡುಗಡೆಯಾಗಿ 25 ವಾರ ಪೂರೈಸಿರುವುದು ನಿಜಕ್ಕೂ ದೊಡ್ಡ ವಿಷಯ," ಎಂದರು.

OTT ಯುಗದಲ್ಲಿ ತರಬೇತಿ ಪಡೆದ ನಟರ ಮಹತ್ವ

ನಟನೆಗೆ ತರಬೇತಿಯ ಮಹತ್ವವನ್ನು ಒತ್ತಿ ಹೇಳಿದ ಖೇರ್, "ಇವತ್ತಿನ ಕಾಲದಲ್ಲಿ ತರಬೇತಿ ಇಲ್ಲದೆ ನಟರಾಗಲು ಸಾಧ್ಯವೇ ಇಲ್ಲ. ನಾನು 41 ವರ್ಷಗಳಿಂದ ಚಿತ್ರರಂಗದಲ್ಲಿ ಮತ್ತು ಸುಮಾರು 52 ವರ್ಷಗಳಿಂದ ವೃತ್ತಿಪರ ರಂಗಭೂಮಿಯಲ್ಲಿ ಉಳಿದುಕೊಂಡಿದ್ದೇನೆ. 550 ಸಿನಿಮಾಗಳಲ್ಲಿ ನಟಿಸಿದ್ದೇನೆ ಅಂದ್ರೆ, ಅದಕ್ಕೆ ನಾನು ತರಬೇತಿ ಪಡೆದ ನಟನಾಗಿರುವುದೇ ಕಾರಣ. OTT ವೇದಿಕೆಗಳು ನಟರಿಗೆ, ತಂತ್ರಜ್ಞರಿಗೆ, ನಿರ್ದೇಶಕರಿಗೆ ಮತ್ತು ಬರಹಗಾರರಿಗೆ ಸಾಕಷ್ಟು ಅವಕಾಶಗಳನ್ನು ನೀಡಿದೆ. ಇಂತಹ ಫಿಲ್ಮ್ ಫೆಸ್ಟಿವಲ್‌ಗಳು ನಮ್ಮ ಆಲೋಚನೆಗಳನ್ನು ಹಂಚಿಕೊಳ್ಳಲು ಮತ್ತು ಸಿನಿಮಾವನ್ನು ಸಂಭ್ರಮಿಸಲು ಬಹಳ ಮುಖ್ಯ," ಎಂದು ಅಭಿಪ್ರಾಯಪಟ್ಟರು.

ದೆಹಲಿ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಮೆಚ್ಚುಗೆ

ದೆಹಲಿಯಲ್ಲಿ ನಡೆಯುತ್ತಿರುವ ಈ ಫೆಸ್ಟಿವಲ್ ಬಗ್ಗೆ ಖುಷಿ ವ್ಯಕ್ತಪಡಿಸಿದ ಖೇರ್, "ನಾನು ಇಡೀ ಜಾಗವನ್ನು ಸುತ್ತಾಡಿದೆ. ಇಲ್ಲಿನ ವಾತಾವರಣ ಅದ್ಭುತವಾಗಿದೆ. ನನ್ನ 'ತನ್ವಿ ದಿ ಗ್ರೇಟ್' ಸಿನಿಮಾ ಕೂಡ ಇಲ್ಲಿ ಪ್ರದರ್ಶನಗೊಳ್ಳುತ್ತಿರುವುದು ನನಗೆ ತುಂಬಾ ಸಂತೋಷ ತಂದಿದೆ. ಈ ಫೆಸ್ಟಿವಲ್ ದೊಡ್ಡ ಯಶಸ್ಸು ಕಾಣಲಿದೆ. ಇದರ ಆಯೋಜಕರಿಗೆ, ಮುಖ್ಯಮಂತ್ರಿಗಳಿಗೆ, ಸರ್ಕಾರಕ್ಕೆ ಹಾಗೂ ಸಾಂಸ್ಕೃತಿಕ ಮತ್ತು ಪ್ರವಾಸೋದ್ಯಮ ಇಲಾಖೆಗಳಿಗೆ ನನ್ನ ಅಭಿನಂದನೆಗಳು," ಎಂದರು.