ಕಿರುತೆರೆಯ ಜನಪ್ರಿಯ ನಟಿಯರು ಬೆಳ್ಳಿತೆರೆಗೆ ಬರುತ್ತಿರುವುದೇನು ಹೊಸದಲ್ಲ. ಸಾಕಷ್ಟು ನಟಿಯರು ಈಗಾಗಲೇ ಬೆಳ್ಳಿತೆರೆಗೆ ಕಾಲಿಟ್ಟು, ಸಾಕಷ್ಟು ಸದ್ದು ಮಾಡುತ್ತಿರುವುದರ ನಡುವೆ ಈಗ ‘ಅಗ್ನಿಸಾಕ್ಷಿ’ ಧಾರಾವಾಹಿಯ ಖ್ಯಾತಿಯ ನಟಿ ವೈಷ್ಣವಿ, ‘ಗಿರ್‌ಗಿಟ್ಲೆ’ ಹೆಸರಿನ ಚಿತ್ರದೊಂದಿಗೆ ಸಿನಿ ಜರ್ನಿ ಶುರು ಮಾಡುತ್ತಿದ್ದಾರೆ. 

ಈ ಚಿತ್ರದ ಈಗ ರಿಲೀಸ್‌ಗೂ ರೆಡಿ ಆಗಿದೆ. ರವಿಕಿರಣ್ ನಿರ್ದೇಶನದ ಈ ಚಿತ್ರ ಶುರುವಾಗಿ ಎರಡು ವರ್ಷಗಳೆ ಕಳೆದಿವೆ. ಈಗ ಚಿತ್ರದ ಆಡಿಯೋ ಬಿಡುಗಡೆ ಆಗಿದೆ.

Add Asianetnews Kannada as a Preferred SourcegooglePreferred

ಪ್ರಾಮುಖ್ಯತೆ ಇರುವ ಪಾತ್ರ: ಹೊಸ ವರ್ಷದ ಆರಂಭದಲ್ಲೇ ಚಿತ್ರವನ್ನು ತೆರೆಗೆ ತರಲು ಸಿದ್ಧತೆ ನಡೆಸಿದೆ. ಮೊದಲ ಚಿತ್ರ ಕೊಂಚ ತಡವಾಗಿ ಬರುತ್ತಿದ್ದರೂ ಅದಕ್ಕೆ ಯಾವುದೇ ಬೇಸರ ಮಾಡಿಕೊಳ್ಳದ ನಟಿ ವೈಷ್ಣವಿ, ಎಂಟ್ರಿಯಲ್ಲೇ ಒಂದೊಳ್ಳೆ ಪಾತ್ರದೊಂದಿಗೆ ಪ್ರೇಕ್ಷಕರ ಮುಂದೆ ಬರುತ್ತಿದ್ದೇನೆ ಎನ್ನುವ ಖುಷಿಯಲ್ಲಿದ್ದಾರೆ.

‘ನನಗೇನು ಆತುರವಿಲ್ಲ. ಸಿನಿಮಾ ತಡವಾಗಿದ್ದಕ್ಕೆ ಕೆಲವು ತಾಂತ್ರಿಕ ಕಾರಣಗಳಿವೆ. ಆ ಬಗ್ಗೆ ನಾನೇನು ಹೇಳಲಾರೆ. ಹಾಗಂತ ನನಗೇನು ಬೇಸರವೂ ಇಲ್ಲ. ಚಿತ್ರದಲ್ಲಿ ನನಗೆ ಒಂದೊಳ್ಳೆ ಪಾತ್ರವೇ ಸಿಕ್ಕಿದೆ. ಕತೆಯೊಳಗೆ ನಾನು ಹೆಚ್ಚು ಸಮಯ ಕಾಣಿಸಿಕೊಳ್ಳದಿದ್ದರೂ, ಕಡಿಮೆ ಸಮಯದಲ್ಲಿ ಬಂದರೂ, ಇಡೀ ಕತೆಗೆ ಟ್ವಿಸ್ಟ್ ನನ್ನ ನಿರ್ವಹಿಸಿದ ಪಾತ್ರದಿಂದಲೇ ಸಿಗುತ್ತದೆ. ಅಂತಹದೊಂದು ಪ್ರಾಮುಖ್ಯತೆ ಆ ಪಾತ್ರಕ್ಕಿದೆ. ಹಾಗಾಗಿಯೇ ನಾನು ಆ ಪಾತ್ರದಲ್ಲಿ ಅಭಿನಯಿಸಲು ಒಪ್ಪಿಕೊಂಡೆ’ ಎನ್ನುತ್ತಾರೆ.

ಆಕಸ್ಮಿಕವಾಗಿ ಶುರುವಾಗಿದ್ದು ಸಿನಿಜರ್ನಿ: ‘ಸೀರಿಯಲ್‌ನಲ್ಲೇ ಬ್ಯುಸಿಯಿದ್ದೆ. ಹಾಗಾಗಿ ನಾನು ಸಿನಿಮಾ ಕಡೆ ಯೋಚಿಸಿಯೇ ಇರಲಿಲ್ಲ. ಆದರೆ ಒಂದು ದಿನ ನಮ್ಮ ಮನೆ ಪಕ್ಕದಲ್ಲೇ ‘ಗಿರ್‌ಗಿಟ್ಲೆ ’ ಚಿತ್ರದ ಶೂಟಿಂಗ್ ನಡೆಯುತ್ತಿತ್ತು. ಆಗಿನ್ನು ನಾಯಕಿ ಆಯ್ಕೆ ಆಗಿರಲಿಲ್ಲ. ಪೋಷಕ ಪಾತ್ರಗಳ ಮಾತಿನ ಭಾಗದ ಚಿತ್ರೀಕರಣವದು. ಕುತೂಹಲಕ್ಕೆ ಹತ್ತಿರ ಹೋಗಿ ನೋಡಿದ್ದೆ. ಅದ್ಯಾಕೋ ನನಗೂ ಆಸಕ್ತಿ ಮೂಡಿತು. ವಾಪಸ್ ಬಂದು ಅಮ್ಮನ ಹತ್ತಿರ ಹೇಳಿದೆಯಷ್ಟೇ, ಕಾಕತಾಳೀಯ ಎನ್ನುವ ಹಾಗೆ ನಿರ್ದೇಶಕರು ಮರುದಿನವೇ ಅಮ್ಮನನ್ನು ಕಾಂಟ್ಯಾಕ್ಟ್ ಮಾಡಿ, ಸಿನಿಮಾದ ಅವಕಾಶ ಮತ್ತು ಪಾತ್ರದ ಬಗ್ಗೆ ಹೇಳಿದರು’ ಎನ್ನುವುದರ ಮೂಲಕ ಸಿನಿಮಾ ಜರ್ನಿ ಆರಂಭಗೊಂಡ ಬಗೆ ಹೇಳುತ್ತಾರೆ ವೈಷ್ಣವಿ.

ಅವಕಾಶ ಬಂದಿದ್ದರೂ ಒಪ್ಪಿಕೊಂಡಿರಲಿಲ್ಲ: ಕಿರುತೆರೆಗೆ ಬಂದು ನಾಲ್ಕೈದು ವರ್ಷಗಳಾದವು. ‘ಅಗ್ನಿಸಾಕ್ಷಿ’ಯಿಂದಲೇ ಶುರುವಾಯಿತು ಬಣ್ಣದ ಲೋಕದ ಜರ್ನಿ. ಆರಂಭದಲ್ಲೇ ಅದೊಂದು ಸಕ್ಸಸ್‌ಫುಲ್ ಸೀರಿಯಲ್ ಅನ್ನೋದು ಪ್ರೂವ್ ಆಯ್ತು. ಇದಾಗಿ ಒಂದೆರೆಡು ವರ್ಷ ಕಳೆಯುತ್ತಿದ್ದಂತೆ ಸಿನಿಮಾ ಅವಕಾಶಗಳು ಬಂದವು.