ಕನ್ನಡದಲ್ಲಿ ಮಾತನಾಡಿ ಎಂದಿದ್ದಕ್ಕೆ ಅನ್ಯಭಾಷಿಕ ನಿವಾಸಿಗಳು ನಿಂದಿಸಿ, ವಾಟ್ಸಾಪ್ ಗ್ರೂಪ್ನಿಂದ ತೆಗೆದುಹಾಕಿದ್ದಾರೆ. ನಮ್ಮ ನೆಲದಲ್ಲಿ ನಮ್ಮ ಭಾಷೆ ಮಾತನಾಡಿ ಎನ್ನುವುದು ತಪ್ಪೇ ಎಂದು ನಟಿ ಪ್ರಶ್ನಿಸಿದ್ದು, ಘಟನೆ ಚರ್ಚೆಗೆ ಗ್ರಾಸವಾಗಿದೆ.
ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಕನ್ನಡ ಭಾಷೆ ಬಳಸಿ ಅಂತ ಹೇಳೋದು ತಪ್ಪಾ? ಎಂಬ ಪ್ರಶ್ನೆ ಎದುರಾಗಿದೆ. ಏಕೆಂದರೆ ಕನ್ನಡದಲ್ಲಿ ಮಾತನಾಡಿ ಎಂದಿದ್ದಕ್ಕೆ ಅನ್ಯ ಭಾಷಿಕರು ದರ್ಪ ತೋರಿಸುವ ಆರೋಪ ಕೇಳಿ ಬಂದಿದ್ದು, ಸ್ವಾತಂತ್ರ್ಯ ದಿನಾಚರಣೆ ದಿನ ನಡೆದ ಕಾರ್ಯಕ್ರಮದಲ್ಲಿ ಕನ್ನಡ ಬಳಕೆ ಮಾಡಿ ಎಂದು ಕೇಳಿದ್ದಕ್ಕೆ ಕನ್ನಡಿಗರ ವಿರುದ್ಧವೇ ದೌರ್ಜನ್ಯ ಮಾಡಿದ ಘಟನೆ ಕೆಂಗೇರಿಯ ಖಾಸ ಗ್ರಾಂಡ್ (Casa Grand) ಅಪಾರ್ಟ್ಮೆಂಟ್ ನಲ್ಲಿ ನಡೆದಿದೆ.
ಅಸಲಿಗೆ ಆಗಿದ್ದೇನು?
ನಟಿ, ರಂಗಭೂಮಿ ಕಲಾವಿದೆ ಅಕ್ಷತಾ ಪಾಂಡವಪುರ ಮೇಲೆ ದೌರ್ಜನ್ಯ ನಡೆದಿರುವ ಆರೋಪ ಕೇಳಿ ಬಂದಿದ್ದು, ಸ್ವಾತಂತ್ರ ದಿನಾಚರಣೆಯಲ್ಲಿ ಕನ್ನಡ ಏಕೆ ಬಳಸಿಲ್ಲ ಅಂತ ನಟಿ ಪ್ರಶ್ನೆ ಮಾಡಿದ್ದರಂತೆ. ಇದಕ್ಕೆ ಅಲ್ಲಿನ ಅನ್ಯಭಾಷಿಕರು, ನಮಗೆ ಕನ್ನಡ ಬರಲ್ಲ ನಾವು ಬಳಸಲ್ಲ ಎಂದು ಅವಾಜ್ ಹಾಕಿ ನಿಂದಿಸಿದ್ದಾರೆ ಎಂದು ಆರೋಪಿಸಲಾಗಿದೆ.
ಕನ್ನಡ ಬಳಕೆ ಮಾಡಿ ಎಂದಿದ್ದಕ್ಕೆ ನಟಿಯನ್ನು ಅಪಾರ್ಟ್ಮೆಂಟ್ ವಾಟ್ಸಾಪ್ ಗ್ರೂಪ್ ನಿಂದಲೇ ತೆಗೆದಿದ್ದು, ಯಾಕೆ ಈ ರೀತಿ ಮಾಡುತ್ತಿದ್ದೀರಿ ಎಂದು ಕೇಳಿದರೆ ಕೆಟ್ಟ ಭಾಷೆ ಬಳಸಿ ನಿಂದನೆ ಮಾಡಿದ್ದರಂತೆ. ಇದರೊಂದಿಗೆ ಬೆಂಗಳೂರಲ್ಲಿ ಕನ್ನಡಕ್ಕೆ ಅಸ್ಮಿತೆಯೇ ಇಲ್ವೆ? ನಮ್ಮೂರಲ್ಲಿ ನಮ್ಮ ಭಾಷೆ ಮಾತಾಡಿ ಅನ್ನೋದು ತಪ್ಪಾ? ಎಂದು ಲಾವಿದೆ ಅಕ್ಷತಾ ಪಾಂಡವಪುರ ಪ್ರಶ್ನಿಸಿದ್ದಾರೆ.
ಈ ಬಗ್ಗೆ ಏಷ್ಯಾನೆಟ್ ಸುವರ್ಣ ನ್ಯೂಸ್ ಜೊತೆ ಮಾತನಾಡಿದ ನಟಿ, ಬೇರೆ ಕಡೆ ಇಂತಹ ದೌಜನ್ಯಗಳು ನಡೆಯುತ್ತಿದೆ ಅಂತ ಕೇಳಿದ ಸಂದರ್ಭದಲ್ಲಯೇ ನಾವು ಕೇಳಲು ಆಗೋದಿಲ್ಲ. ಇಂತಹ ಸಂದರ್ಭದಲ್ಲಿ ನಮಗೆ ಇದು ಎದುರಾದರೆ ನಾವು ಸುಮ್ಮನೆ ಇರಲು ಆಗುತ್ತಾ. ಸ್ವಾತಂತ್ರ್ಯ ದಿನಾಚರಣೆ ಆಚರಣೆಯ ಸಂದರ್ಭದಲ್ಲಿ ಕನ್ನಡ ಸುಳಿವೆ ಇರಲಿಲ್ಲ. ಈ ಬಗ್ಗೆ ನಾನು ಗ್ರೂಪ್ನಲ್ಲಿ ಪ್ರಶ್ನೆ ಮಾಡಿದ್ದೆ, ಆಗ ಸ್ವಲ್ಪ ಸಮಯ ವಾದ ಮಾಡಿ ನಮ್ಮನ್ನು ಗ್ರೂಪ್ನಿಂದಲೇ ಎಕ್ಸಿಟ್ ಮಾಡಿದರು. ಆ ಬಳಿಕ ವೈಯುಕ್ತಿಕವಾಗಿ ನನ್ನ ಮೇಲೆ ಟಾರ್ಗೆಟ್ ಮಾಡಿದರು. ಈ ಬಗ್ಗೆ ಕನ್ನಡ ಪರ ಹೋರಾಟಗಾರರಿಗೆ ಮಾಹಿತಿ ನೀಡಿದ್ದೆ. ಆಗ ಅವರ ಮೇಲೆಯೇ ಆರೋಪ ಮಾಡಿ ಗ್ರೂಪ್ನಲ್ಲಿ ಇಲ್ಲ ಸಲ್ಲದ ಆರೋಪ ಮಾಡಿದರು. ಈ ಬಗ್ಗೆ ಬಹಳ ಬೇಸರ ಆಯ್ತು ಎಂದು ಹೇಳಿದ್ದಾರೆ.



