ಬೆಂಗಳೂರಿನಲ್ಲಿ ನಡೆಯುತ್ತಿದ್ದ ತಮ್ಮ ಸುದ್ದಿಗೋಷ್ಠಿಯಲ್ಲಿ ಮಧ್ಯಪ್ರವೇಶಿಸಿದ ಕನ್ನಡ ಸಂಘಟನೆಯ ಕಾರ್ಯಕರ್ತರು ತಮ್ಮ ಸಿನಿಮಾ ಪ್ರಚಾರವನ್ನು ಅರ್ಧಕ್ಕೆ ನಿಲ್ಲಿಸಿದ್ದ ಘಟನೆಗೆ ಸಂಬಂಧಿಸಿದಂತೆ ಇದೇ ಮೊದಲಿಗೆ ಪ್ರತಿಕ್ರಿಯಿಸಿರುವ ನಟ ಸಿದ್ಧಾರ್ಥ್ ‘ಘಟನೆಯಿಂದ ನನಗೆ ನಿರಾಸೆಯಾಗಿದೆ’ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಮುಂಬೈ (ಅ.01): ಬೆಂಗಳೂರಿನಲ್ಲಿ ನಡೆಯುತ್ತಿದ್ದ ತಮ್ಮ ಸುದ್ದಿಗೋಷ್ಠಿಯಲ್ಲಿ ಮಧ್ಯಪ್ರವೇಶಿಸಿದ ಕನ್ನಡ ಸಂಘಟನೆಯ ಕಾರ್ಯಕರ್ತರು ತಮ್ಮ ಸಿನಿಮಾ ಪ್ರಚಾರವನ್ನು ಅರ್ಧಕ್ಕೆ ನಿಲ್ಲಿಸಿದ್ದ ಘಟನೆಗೆ ಸಂಬಂಧಿಸಿದಂತೆ ಇದೇ ಮೊದಲಿಗೆ ಪ್ರತಿಕ್ರಿಯಿಸಿರುವ ನಟ ಸಿದ್ಧಾರ್ಥ್ ‘ಘಟನೆಯಿಂದ ನನಗೆ ನಿರಾಸೆಯಾಗಿದೆ’ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಅಲ್ಲದೇ ‘ತಮಿಳು ನಾಡು ಮತ್ತು ಕರ್ನಾಟಕ ರಾಜ್ಯಗಳ ನಡುವಿನ ಕಾವೇರಿ ನದಿ ವಿವಾದಕ್ಕೂ ನಮ್ಮ ಚಿತ್ರಕ್ಕೂ ಯಾವುದೇ ಸಂಬಂಧವಿಲ್ಲ. ಚಿತ್ರ ನಿರ್ಮಾಪಕನಾಗಿ ಇದರಿಂದ ನನಗೆ ಹೆಚ್ಚು ನಷ್ಟವಾಗಿದೆ’ ಎಂದಿದ್ದಾರೆ. 

Add Asianetnews Kannada as a Preferred SourcegooglePreferred

ಇನ್‌ಸ್ಟಾಗ್ರಾಂ ಲೈವ್‌ನಲ್ಲಿ ಈ ಬಗ್ಗೆ ಮಾತನಾಡಿರುವ ಅವರು ‘ಅಲ್ಲಿ ಏನಾಯಿತೆಂದು ಎಲ್ಲರೂ ನೋಡಿದ್ದೀರಿ. ಅನೇಕ ಕ್ಯಾಮರಾಗಳ ಮುಂದೆಯೇ ಆ ಘಟನೆ ನಡೆದಿದೆ. ಅದರ ಬಗ್ಗೆ ಮಾತನಾಡಲು ನನಗೆ ಇಷ್ಟವಿಲ್ಲ. ಅಲ್ಲಿನ ಜನರೊಂದಿಗೆ ಉತ್ತಮ ಚಿತ್ರವೊಂದನ್ನು ಹಂಚಿಕೊಳ್ಳಲು ಸಾಧ್ಯವಾಗಲಿಲ್ಲ ಎಂಬುದು ಬೇಸರವಾಗಿದೆ’ ಎಂದಿದ್ದಾರೆ. ತಮಿಳುನಾಡಿಗೆ ಕಾವೇರಿ ನೀರು ಬಿಡುವುದನ್ನು ವಿರೋಧಿಸಿ ಬೆಂಗಳೂರು ಬಂದ್‌ ಮಾಡಿ ಪ್ರತಿಭಟನೆ ನಡೆಸುತ್ತಿದ್ದ ಕನ್ನಡ ಸಂಘದ ಕಾರ್ಯಕರ್ತರು ನಗರದಲ್ಲಿ ಆಯೋಜನೆಗೊಂಡಿದ್ದ ಸಿದ್ಧಾರ್ಥ್ ಅವರ ‘ಚಿಕ್ಕು’ ಸಿನಿಮಾ ಪ್ರಚಾರವನ್ನು ಅರ್ಧಕ್ಕೆ ನಿಲ್ಲಿಸಿದ್ದರು. ಈ ವೇಳೆ ‘ನಮ್ಮ ಸಿನಿಮಾ ನೋಡಿ’ ಎಂದು ಕನ್ನಡದಲ್ಲಿಯೇ ಹೇಳಿ ಕೈ ಮುಗಿದು ಸಿದ್ಧಾರ್ಥ್‌ ಹೊರನಡೆದಿದ್ದರು.

ಕೂಡಲೇ ಬಿಜೆಪಿ ರಾಜ್ಯಾಧ್ಯಕ್ಷರ ಆಯ್ಕೆಯಾಗಲಿ: ಕೆ.ಎಸ್‌.ಈಶ್ವರಪ್ಪ

ಕ್ಷಮೆ ಕೇಳಿದ ನಟ ಶಿವರಾಜ್‌ ಕುಮಾರ್‌: ಕನ್ನಡ ಸಿನಿಮಾ ಕ್ಷೇತ್ರದ ಕಡೆಯಂದ ಸಿದ್ಧಾರ್ಥ ಅವರೇ ರಿಯಲಿ ಸಾರಿ. ಇಲ್ಲಿ ನಡೆದ ಘಟನೆಯಿಂದ ನನಗೆ ತುಂಬಾ ನೋವಾಗಿದೆ. ಇನ್ನೊಂದು ಸಾರಿ ಈ ರೀತಿ ಮಿಸ್ಟೇಕ್‌ ಆಗೋದಿಲ್ಲ. ಕನ್ನಡ ಜನ ತುಂಬಾ ಒಳ್ಳೆಯವರು. ಎಲ್ಲ ಭಾಷೆಯವರನ್ನು ಪ್ರೀತಿಸುತ್ತಾರೆ ಎಂದು ಸ್ಯಾಂಡಲ್‌ವುಡ್‌ ಸ್ಟಾರ್‌ ನಟ ಶಿವರಾಜ್‌ ಕುಮಾರ್‌ ಕಾವೇರಿ ಹೋರಾಟದ ವೇದಿಕೆಯಲ್ಲಿಯೇ ತಮಿಳು ನಟ ಸಿದ್ಧಾರ್ಥ್‌ಗೆ ಕ್ಷಮೆ ಕೇಳಿದ್ದಾರೆ. ಕಾವೇರಿ ಹೋರಾಟದ ಹಿನ್ನೆಲೆಯಲ್ಲಿ ಕನ್ನಡ ಚಿತ್ರರಂಗದಿಂದ ಆಯೋಜಿಸಲಾಗಿದ್ದ ಕರ್ನಾಟಕ ಬಂದ್‌ಗೆ ಬೆಂಬಲಿಸಿ ಹೋರಾಟದ ವೇದಿಕೆಯಲ್ಲಿ ಮಾತನಾಡಿದ ಅವರು, ಕಾವೇರಿ ಹೋರಾಟದ ಪರಿಸ್ಥಿತಿಯನ್ನು ನಾವು ನೋಡಿಕೊಂಡು ಅಡ್ವಾಂಟೇಜ್‌ ತೆಗೆದುಕೊಳ್ಳಬಾರದು. 

ಬೆಂಗಳೂರಿನಲ್ಲಿ ಅನ್ಯ ಭಾಷೆಯ ಸಿನಿಮಾದ ಪ್ರಮೋಷನ್‌ ಪ್ರೆಸ್‌ ಮೀಟ್‌ ಮಾಡುವಾಗ ಕೆಲವರು ಅಡ್ಡಿಪಡಿಸಿದ್ದಾರೆಂಬ ವಿಚಾರ ತಿಳಿದು ನನಗೆ ತುಂಬಾ ನೋವಾಯಿತು. ಇವತ್ತು ನಾವು ಕನ್ನಡ ಸಿನಿಮಾ ಕ್ಷೇತ್ರದ ಕಡೆಯಂದ ಸಿದ್ಧಾರ್ಥ ಅವರೇ ರಿಯಲಿ ಸಾರಿ. ಇನ್ನೊಂದು ಸಾರಿ ಈ ರೀತಿ ಮಿಸ್ಟೇಕ್‌ ಆಗೋದಿಲ್ಲ. ಕನ್ನಡ ಜನ ತುಂಬಾ ಒಳ್ಳೆಯವರು. ಎಲ್ಲ ಭಾಷೆಯವರನ್ನು ಪ್ರೀತಿಸುತ್ತಾರೆ, ಎಲ್ಲ ಭಾಷೆಯ ಸಿನಿಮಾಗಳನ್ನು ನೋಡ್ತಾರೆಂದರೆ ಅದು ಕನ್ನಡ ಮತ್ತು ಕರ್ನಾಟಕ ಜನತೆ ಮಾತ್ರವೇ. ಇವತ್ತು ನಾವು ಜಗತ್ತಿನಲ್ಲಿ ಹೆಮ್ಮೆಯಿಂದ ಎಲ್ಲಿಯಾದರೂ ಹೇಳಿಕೊಳ್ಳಬಹುದು. ಕರ್ನಾಟಕ ಜನತೆಗೆ ಈಗಾಗಲೇ ಒಂದುಯ ಮರ್ಯಾದೆ ಇದೆ ಅದನ್ನು ನಾವು ಕಾಪಾಡಿಕೊಳ್ಳಬೇಕು ಎಂದರು.

ತಮಿಳುನಾಡಿಗೆ ಹರಿಸುತ್ತಿರುವ ನೀರನ್ನು ಈ ಕೂಡಲೇ ನಿಲ್ಲಿಸಬೇಕು: ಸಿ.ಎಸ್.ಪುಟ್ಟರಾಜು

ಮೊನ್ನೆ ಬೇರೆ ಭಾಷೆಯ ನಾಯಕ ಬಂದು ಮಾತನಾಡುವಾಗ ಅಲ್ಲಿ ಹೋಗಿ ಅದನ್ನು ನಿಲ್ಲಿಸಿದ್ದಾರೆ. ಅದು ತಪ್ಪಲ್ವಾ? ಆದರೆ, ಅದನ್ನು ಯಾರು ಯಾವ ಕಾರಣಕ್ಕೆ ನಿಲ್ಲಿಸಿದ್ದಾರೆ ಗೊತ್ತಿಲ್ಲ. ನಮ್ಮ ಕನ್ನಡ ಜನ ಎಲ್ಲವನ್ನೂ ಎಲ್ಲರನ್ನೂ ಸ್ವಾಗತ ಮಾಡುತ್ತಾರೆ. ನಮ್ಮಲ್ಲಿ ಯಾವುದೇ ಸಮಸ್ಯೆಗಳಿದ್ದರೂ ಅದನ್ನು ಸ್ವೀಕರಿಸಬೇಕು. ಪ್ರತಿಯೊಂದು ಸಮಸ್ಯೆಯನ್ನು ನಾವು ತೆಗೆದುಕೊಳ್ಳಬೇಕು. ಸಮಸ್ಯೆ ತೆಗೆದುಕೊಳ್ಳದವನು ಮನುಷ್ಯನೇ ಅಲ್ಲ. ಇನ್ನು ಸಮಸ್ಯೆಯಿಂದ ಹೇಗೆ ಹೊರ ಬರಬೇಕು ಎಂಬುದನ್ನು ತಿಳಿದುಕೊಂಡು ಎದುರಿಸಬೇಕು. ಸುಮ್ಮನೆ ಕುಳಿತುಕೊಂಡು ಹೋರಾಟ ಮಾಡೋಣ, ಮಾತನಾಡೋಣ ಎಂದು ಹೇಳಿದರೆ ಅದಕ್ಕೆ ಪರಿಹಾರ ಸಿಗುವುದಿಲ್ಲ ಎಂದು ಹೇಳಿದರು.