ನಿಷ್ಕರ್ಷ: ನಿಮಗೆ ಗೊತ್ತಿರದ ಹತ್ತು ಕುತೂಹಲಗಳು!
ಕನ್ನಡ ಚಿತ್ರರಂಗದ ಮಟ್ಟಿಗೆ ಹಲವು ಪ್ರಥಮಗಳನ್ನು ದಾಖಲಿಸಿದ ಚಿತ್ರ ‘ನಿಷ್ಕರ್ಷ’. ಅದು ತೆರೆ ಕಂಡ 25 ವರ್ಷಗಳ ನಂತರವೀಗ ಹೊಸ ರೂಪದಲ್ಲಿ ಹೊಸ ತಲೆಮಾರಿನ ಪ್ರೇಕ್ಷಕರನ್ನು ರಂಜಿಸಲು ರೆಡಿ ಆಗಿದೆ. ಇದೇ ವಾರ ಈ ಚಿತ್ರ ಕನ್ನಡದ ಜತೆಗೆ ಹಿಂದಿಯಲ್ಲೂ ಬಿಡುಗಡೆ ಆಗುತ್ತಿದೆ. ಈ ಹೊತ್ತಲ್ಲಿ ಚಿತ್ರಮಂದಿರಕ್ಕೆ ಹೋಗಿ ಅದನ್ನು ಕಣ್ತುಂಬಿಕೊಳ್ಳಲು ಪ್ರೇಕ್ಷಕರ ಪಾಲಿಗೆ ಇರುವ ಹತ್ತು ಕುತೂಹಲ ಕಾರಿ ಅಂಶಗಳು ಇಲ್ಲಿವೆ...
1 ವಿಷ್ಣುವರ್ಧನ್ ಅವರ ಸಿನಿ ಕರಿಯರ್ನಲ್ಲಿ ತುಂಬಾ ವಿಶೇಷ ಎನ್ನಬಹುದಾದ ಸಿನಿಮಾಗಳ ಪೈಕಿ ಇದು ಕೂಡ ಒಂದು. ಸಸ್ಪೆನ್ಸ್, ಥ್ರಿಲ್ಲರ್ ಜಾನರ್ ಮೂಲಕ ಕನ್ನಡ ಚಿತ್ರ ರಸಿಕರನ್ನು ಮೊಟ್ಟಮೊದಲು ಭರಪೂರ ರಂಜಿಸಿದ ಖ್ಯಾತಿ ಈ ಚಿತ್ರದ್ದು.
2 ನಿಷ್ಕರ್ಷ ನಿರ್ಮಾಣವಾಗಿ ತೆರೆಗೆ ಬಂದಿದ್ದು 1993ರಲ್ಲಿ . ಸೃಷ್ಠಿ ಫಿಲಂಸ್ ಮೂಲಕ ಶ್ರೀಮತಿ ವನಜಾ ಬಿ. ಪಾಟೀಲ್ ನಿರ್ಮಾಣ ಮಾಡಿದ ಮೊದಲ ಚಿತ್ರ. ಆ ಹೊತ್ತಿಗೆ ಇದು . 60 ಲಕ್ಷ ಬಂಡವಾಳದಲ್ಲಿ ನಿರ್ಮಾಣವಾಗಿತ್ತು.
3 1993 ನಿಷ್ಕರ್ಷ ತೆರೆಗೆ ಬಂದಾಗ ಹಾಡುಗಳಿಲ್ಲದ ಸಿನಿಮಾ ಎಂದು ಗಾಂಧೀನಗರ ಇದನ್ನು ತಿರಸ್ಕರಿಸಿತ್ತು. ಹಂಚಿಕೆದಾರರು ಸಿನಿಮಾ ಕೊಳ್ಳಲು ಹಿಂಜರಿದಿದ್ದರು. ಆದರೆ ಸಿನಿಮಾ ಹಲವಾರು ಕೇಂದ್ರಗಳಲ್ಲಿ ನೂರು ದಿನ ಓಡಿತು.
1 ಕೋಟಿ ವೆಚ್ಚದಲ್ಲಿ ‘ನಿಷ್ಕರ್ಷ’ ಚಿತ್ರಕ್ಕೆ ಹೊಸ ರೂಪ!
4 ಈಗ ಬರುತ್ತಿರುವ ನಿಷ್ಕರ್ಷ ಹೊಸ ರೂಪ ಪಡೆದುಕೊಂಡಿದೆ. ಸಂಪೂರ್ಣ ಡಿಜಿಟಲ್ ಆಗಿದೆ. ಡಿಟಿಎಸ್ ಸೌಂಡು ತಂತ್ರಜ್ಞಾನಕ್ಕೆ ಒಳಪಟ್ಟಿದೆ. ಹೈದರಾಬಾದ್, ಮುಂಬೈನ ಹೆಸರಾಂತ ಸ್ಟುಡಿಯೋಗಳಲ್ಲಿ ಚಿತ್ರದ ತಂತ್ರಜ್ಞಾನದ ಕೆಲಸ ನಡೆದಿದೆ.
5 ಹಾಲಿವುಡ್ನ ‘ ಡೈ ಹಾರ್ಡ್’ ಸಿನಿಮಾದ ಸ್ಪೂರ್ತಿಯಿಂದ ತಯಾರಾಗಿದ್ದ ಸಿನಿಮಾ ಇದು. ಆ ಮೂಲಕ ಮೊದಲ ಬಾರಿಗೆ ನಿರ್ದೇಶಕ ಸುನೀಲ್ ಕುಮಾರ್ ದೇಸಾಯಿ ಕನ್ನಡ ಚಿತ್ರರಸಿಕರಿಗೆ ಸಸ್ಪೆನ್ಸ್, ಥ್ರಿಲ್ಲರ್ ಕಥಾ ಶೈಲಿಯ ಸಿನಿಮಾವೊಂದನ್ನು ಪರಿಚಯಿಸಿದ್ದರು.
6 ನಿಷ್ಕರ್ಷ ಚಿತ್ರೀಕರಣಗೊಂಡಿದ್ದು ಬೆಂಗಳೂರಿನ ಮಣಿಪಾಲ್ ಸೆಂಟರ್ ಬಿಲ್ಡಿಂಗ್ನಲ್ಲಿ. ಚಿತ್ರೀಕರಣದ ಉದ್ದೇಶದಿಂದ ಅಲ್ಲಿನ ಸರ್ಕಾರಿ ಕಚೇರಿವೊಂದನ್ನು ಬೇರೆಡೆ ಸ್ಥಳಾಂತರಿಸಿ, ಆ ಜಾಗವನ್ನು ಬ್ಯಾಂಕ್ ಆಗಿ ಪರಿವರ್ತಿಸಲಾಗಿತ್ತು. ಅಲ್ಲಿ ನಡೆಯುವ ಬ್ಯಾಂಕ್ ದರೋಡೆ ಕತೆಯನ್ನು ಸರಿ ಸುಮಾರು 50 ಕ್ಕೂ ಹೆಚ್ಚು ದಿನಗಳಲ್ಲಿ ಚಿತ್ರೀಕರಿಸಿದ್ದರು ಸುನೀಲ್ ಕುಮಾರ್ ದೇಸಾಯಿ.
ಹಿಂದಿ ಮತ್ತು ಕನ್ನಡದಲ್ಲಿ ‘ನಿಷ್ಕರ್ಷ’ ರೀ-ರಿಲೀಸ್!
7 ಆ ಕಾಲದಲ್ಲೇ ಇದೊಂದು ಮಲ್ಟಿಸ್ಟಾರ್ ಸಿನಿಮಾ. ವಿಷ್ಣುವರ್ಧನ್, ಅನಂತನಾಗ್, ಬಿ.ಸಿ.ಪಾಟೀಲ್, ಸುಮನ್ ನಗರಕರ್, ರಮೇಶ್ಭಟ್, ಅವಿನಾಶ್ ಸೇರಿದಂತೆ ದೊಡ್ಡ ತಾರಾಗಣವೇ ಚಿತ್ರದಲ್ಲಿತ್ತು. ವಿಷ್ಣುವರ್ಧನ್, ಅನಂತ್ ನಾಗ್ ಪೊಲೀಸ್ ಅಧಿಕಾರಿಗಳಾಗಿ ಕಾಣಿಸಿಕೊಂಡಿದ್ದರು. ಚಿತ್ರಕ್ಕೆ ಬಂಡವಾಳ ಹಾಕಿ ನಿರ್ಮಾಪಕರು ಆಗಿದ್ದ ಬಿ.ಸಿ. ಪಾಟೀಲ್ ಖಳನಟರಾಗಿ ಅಭಿನಯಿಸಿದ್ದರು. ಬಿ.ಸಿ. ಪಾಟೀಲ್ ಬಣ್ಣ ಹಚ್ಚಿದ ಮೊದಲ ಸಿನಿಮಾ ಅದು. ಪೊಲೀಸ್ ಇಲಾಖೆಯಲ್ಲಿದ್ದ ಅವರನ್ನು ವೈಟ್ ಕಾಲರ್ ಖಳನಟನ ಮೂಲಕ ಬೆಳ್ಳಿತೆರೆಗೆ ಪರಿಚಯಿಸಿದ್ದು ‘ನಿಷ್ಕರ್ಷ’ ಚಿತ್ರ.
8 ಕನ್ನಡ ಚಿತ್ರರಂಗದಲ್ಲಿ ದಾಖಲೆ ಎನ್ನುವ ಹಾಗೆ ಶತದಿನೋತ್ಸವ ಕಂಡ ಸಿನಿಮಾಗಳ ಪೈಕಿ ಇದು ಕೂಡ ಒಂದು. ಬೆಂಗಳೂರಿನ ಕೆ.ಜೆ. ರಸ್ತೆ ಯ ಸಂತೋಷ್ ಚಿತ್ರಮಂದಿರದಲ್ಲಿ ಈ ಚಿತ್ರ ಯಶಸ್ವಿ 75 ದಿನಗಳ ಪ್ರದರ್ಶನ ಕಂಡಿತು. ಅಲ್ಲಿಂದ ತ್ರಿವೇಣಿಗೆ ಸ್ಥಳಾಂತರಗೊಂಡು ಶತದಿನೋತ್ಸವ ಆಚರಿಸಿತು. ಇದೇ ರೀತಿ ರಾಜ್ಯದ ಹಲವು ಚಿತ್ರಮಂದಿರಗಳಲ್ಲೂ ಇದು ಅಭೂತ ಪೂರ್ವ ಗೆಲುವು ಕಂಡಿದ್ದು ವಿಶೇಷ.
9 ಶತದಿನೋತ್ಸವ ಕಂಡ ಸಿನಿಮಾ ಅಂದಾಕ್ಷಣ ಆ ಕಾಲದಲ್ಲಿ ನಿರ್ಮಾಪಕರಿಗೆ ಲಾಭ ಸಿಕ್ಕಂತೆ ಎನ್ನುವುದು ಮಾಮೂಲಾಗಿತ್ತು. ಆದರೆ ನಿಷ್ಕರ್ಷ ವಿಚಾರದಲ್ಲಿ ಹಾಗಾಗಲಿಲ್ಲ. ಚಿತ್ರಕ್ಕೆ ಗೆಲುವು ಸಿಕ್ಕಿತು. ನಿರ್ಮಾಪಕರಿಗೆ ಲಾಭ ಸಿಗಲಿಲ್ಲ. ಭರ್ಜರಿ ಗೆಲುವಿನ ಜತೆಗೂ ನಿರ್ಮಾಪಕ ಬಿ.ಸಿ. ಪಾಟೀಲ್ಗೆ ಕಲೆಕ್ಷನ್ ವಿಚಾರದಲ್ಲಿ ನಿರಾಸೆ ಉಳಿದುಕೊಂಡಿತ್ತು. ಆದರೆ ಚಿತ್ರಕ್ಕೆ ಹಲವು ಪ್ರಶಸ್ತಿಗಳು ಸಿಕ್ಕಿದ್ದು ಅವರ ನಿರಾಸೆಯನ್ನು ದೂರ ಮಾಡಿತು.
10 ಕಲಾವಿದರ ಪೈಕಿ ಸುಮನ್ ನಗರಕರ್ ಈ ಚಿತ್ರದ ಮೂಲಕ ಸಾಕಷ್ಟುಸುದ್ದಿಯಾದವರು. ಈ ಚಿತ್ರದಲ್ಲಿ ಅವರು ಇದಿದ್ದು ಕೇವಲ ಎದಾರು ನಿಮಿಷ ಮಾತ್ರ. ಅಬಿನಯಿಸಿದ್ದು ರೇಪ್ ಸನ್ನಿವೇಶದಲ್ಲಿ. ಅದಷ್ಟೇ ಭಾರೀ ದೊಡ್ಡ ಸುದ್ದಿ ಆಗಿತ್ತು.ಅದಾಗಲೇ ಅವರು ನಟಿಯಾಗಿ ಜನಪ್ರಿತೆಯಲ್ಲಿದ್ದರು. ಆ ಸ್ಟಾರ್ ಇಮೇಜ್ ಬಿಟ್ಟು, ರೇಪ್ ಸೀನ್ನಲ್ಲಿ ಕಾಣಿಸಿಕೊಂಡಿದ್ದರು.