ದಾವಣಗೆರೆ ಅದಿತಿ: ಬೆಳ್ಳಿ ಪರದೆಯ ಅಂದ ಹೆಚ್ಚಿಸಿದ ಈಕೆಯ ಮೂಗುತಿ!
ಕನ್ನಡದ ಭರವಸೆಯ ನಟಿ. ಕಿರುತೆರೆಯಿಂದ ಹಿರಿತೆರೆಗೆ ಕಾಲಿಟ್ಟ ದಾವಣಗೆರೆಯ ಅಪ್ಪಟ ಪ್ರತಿಭೆ. ಆ್ಯಕ್ಟರ್ ಆಗುವ ಮುನ್ನ ಆ್ಯಂಕರಿಂಗ್ ಮಾಡುತ್ತಿದ್ದರು. ಅಲ್ಲಿ ಹರಳು ಹುರಿದಂತೆ ಮಾತನಾಡುವ ಅವರ ಮಾತಿನ ಪರಿಯೇ ಬೆಳ್ಳಿತೆರೆಗೆ ಬರುವಂತೆ ಮಾಡಿತು. ಅದಿತಿ ಮೊದಲು ಬಣ್ಣ ಹಚ್ಚಿದ್ದು ಸೀರಿಯಲ್ಗೆ. ಅಲ್ಲಿಂದ ‘ಧೈರ್ಯಂ’ ಚಿತ್ರದೊಂದಿಗೆ ಬೆಳ್ಳಿತೆರೆಯ ಪ್ರವೇಶ. ಈಗ ಸಿಂಪಲ್ ಸುನಿ ನಿರ್ದೇಶನದ ‘ಬಜಾರ್’ ಮೂಲಕ ಸುದ್ದಿಯಲ್ಲಿದ್ದಾರೆ. ದುನಿಯಾ ವಿಜಯ್ ಅಭಿನಯದ ‘ಕುಸ್ತಿ’, ಮಧುಸೂಧನ್ ನಿರ್ದೇಶನದ ‘ಅಪರೇಷನ್ ನಕ್ಷತ್ರ’ ಚಿತ್ರಗಳಿಗೆ ನಾಯಕಿ ಆಗಿದ್ದಾರೆ ಅದಿತಿ ಪ್ರಭುದೇವ್. ಸಿನಿಮಾ ಮತ್ತು ಸೀರಿಯಲ್ ಎರಡಲ್ಲೂ ಬ್ಯುಸಿ.
1. ಹುಟ್ಟಿದ್ದು, ಬೆಳೆದಿದ್ದು ದಾವಣಗೆರೆ. ಇಂಜಿನಿಯರಿಂಗ್ ಪದವಿ ಮುಗಿದಿದೆ. ಸಂಗೀತ ಮತ್ತು ನೃತ್ಯ ಎರಡರಲ್ಲೂ ಆಸಕ್ತಿ. ನಿರೂಪಣೆಯ ಆಸಕ್ತಿಯ ಮೂಲಕ ಸಿನಿಮಾ ಜಗತ್ತಿಗೆ ಬರುವಂತಾಯಿತು. ಸದ್ಯಕ್ಕೆ ನಟನೆಯೇ ವೃತ್ತಿ.
2. ಇಂಜಿನಿಯರಿಂಗ್ ಮುಗಿಸಿ, ಒಳ್ಳೆಯ ಜಾಬ್ಗೆ ಹೋಗ್ಬೇಕು ಅನ್ನೋದು ನನ್ನಾಸೆ ಆಗಿತ್ತು. ನಟಿ ಆಗ್ತೇನೆ ಅಂತ ಕನಸು ಕೂಡ ಕಂಡಿರಲಿಲ್ಲ. ಅದೃಷ್ಟ ಅನ್ನೋದು ಎಲ್ಲಿರುತ್ತೋ ಯಾರಿಗೆ ಗೊತ್ತು? ಓದುವಾಗ ಜಾಬ್ ಮಾಡ್ಬೇಕು ಅಂತಂದುಕೊಂಡರು, ಈಗ ನಟಿ ಆಗಿದ್ದೆಲ್ಲ ಆಕಸ್ಮಿಕ. ಒಂದು ರೀತಿ ಅದಕ್ಕೆ ಕಾರಣ ನಿರೂಪಣೆ ಮೇಲಿನ ಆಸಕ್ತಿ. ಕಾಲೇಜು ದಿನಗಳಲ್ಲಿ ಅಲ್ಲಿನ ಎಲ್ಲಾ ಸಾಂಸ್ಕೃತಿಕ ಕಾರ್ಯಕ್ರಮಗಳಿಗೂ ನಾನೇ ಖಾಯಂ ನಿರೂಪಕಿ. ಅದು ನನ್ನೊಳಗೆ ಹೊಸ ಆಸಕ್ತಿಯತ್ತ ತಿರುಗುವಂತೆ ಮಾಡಿತು.
3. ‘‘ಧೈರ್ಯಂ’ ನನ್ನ ಮೊದಲ ಚಿತ್ರ. ನಾನಾಗಲೇ ಕಿರುತೆರೆಯಲ್ಲಿ ಒಂದು ಸೀರಿಯಲ್ನಲ್ಲಿ ಅಭಿನಯಿಸಿದ್ದೆ. ಜತೆಗೆ ಸಾಕಷ್ಟು ಸ್ಟೇಜ್ ಕಾರ್ಯಕ್ರಮಗಳಿಗೆ ನಿರೂಪಕಿ ಆಗಿ ಕ್ಯಾಮರಾ ಎದುರಿಸಿದ್ದೆ. ಚಿತ್ರೀಕರಣ ಹೇಗಿರುತ್ತೆ, ಅದರ ತಾಂತ್ರಿಕ ಕೆಲಸಗಳು ಹೇಗಿರುತ್ತವೆ ಎನ್ನುವುದು ಅಲ್ಪ ಮಟ್ಟಿಗೆ ಗೊತ್ತಿದ್ದರೂ, ಸಿನಿಮಾ ಅದೇ ಸ್ಟ್. ಹೇಗಿರುತ್ತೆ, ಎಂತಿರುತ್ತದೆ ಅಂತೆಲ್ಲ ಒಂದಷ್ಟು ತಿಳಿದುಕೊಳ್ಳುವುದಕ್ಕೆ ಈ ಸಿನಿಮಾ ವೇದಿಕೆ ಆಯಿತು.
4. ನಾನೀಗ ಕಣ್ಣು ಬಿಟ್ಟಿರುವ ನಟಿ. ಈಗಷ್ಟೇ ಒಂದೆರೆಡು ಸಿನಿಮಾ ಆಗಿವೆ. ಇಷ್ಟುಬೇಗ ಪಾತ್ರಗಳಲ್ಲಿ ಚ್ಯೂಸಿ ಅಂಥ ಹೇಳಿದ್ರೆ, ಕಷ್ಟ ಆಗುತ್ತೆ. ಹಾಗಂತ ಎಲ್ಲಾ ರೀತಿಯ ಪಾತ್ರಗಳಿಗೂ ನಾನ್ ರೆಡಿ ಅಂತಲ್ಲ. ಯಾವುದೇ ಪಾತ್ರ ನಾನು ನಟಿಯಾಗಿ ಗುರುತಿಸಿಕೊಳ್ಳಲು ಸಾಧ್ಯವಾಗುವುದಾದರೆ ಅಂತಹ ಪಾತ್ರ ಸಾಕು.
5. ನಿರ್ದಿಷ್ಟವಾಗಿ ಇಂತಹ ನಟಿಯೇ ನನ್ನ ರೋಲ್ ಮಾಡೆಲ್ ಅಂತೇನು ಇಲ್ಲ. ನಾನು ಅಪ್ಪಟ್ಟ ಕನ್ನಡತಿ. ಆರತಿ, ಭಾರತಿ, ಕಲ್ಪನಾ, ಮಂಜುಳಾ, ಲೀಲಾವತಿ ಸೇರಿದಂತೆ ಕನ್ನಡದ ಅಷ್ಟು ನಟಿಯರು ಒಂದಲ್ಲೊಂದು ಕಾರಣಕ್ಕೆ ಇಷ್ಟುವಾಗುತ್ತಾರೆ. ಅವರನ್ನು ನೋಡುತ್ತಾ ಸಾಕಷ್ಟು ಕಲಿತಿದ್ದೇನೆ. ಕಲಿಯುತ್ತಲೂ ಇದ್ದೇನೆ.
-ದೇಶಾದ್ರಿ ಹೊಸ್ಮನೆ