ಮಂಡ್ಯದಲ್ಲಿ ಸುಮಲತಾ ಹೋರಾಟಕ್ಕೆ ಮೈಸೂರು ರಾಜವಂಶಸ್ಥ ಬೆಂಬಲ..!
ರಾಜಕೀಯದಿಂದ ದೂರ ಇರುವ ಮೈಸೂರು ರಾಜವಂಶಸ್ಥ ಯದುವೀರ್, ಪರೋಕ್ಷವಾಗಿ ಸುಮಲತಾ ಅಂಬರೀಶ್ ಅವರಿಗೆ ಬೆಂಬಲ ಸೂಚಿಸಿದ್ದಾರೆ.
ಮೈಸೂರು, [ಏ.02]: ಅಂಬರೀಶ್ ಅವರಿಗೂ ನಮ್ಮ ಕುಟುಂಬಕ್ಕೂ ಅವಿನಾಭಾವ ಸಂಬಂಧ ಇದೆ. ನಮ್ಮ ತಂದೆ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್, ಅಂಬರೀಶ್ ಜೊತೆಯಲ್ಲಿ 35 ವರ್ಷಗಳ ಒಡನಾಟ ಇಟ್ಟುಕೊಂಡಿದ್ದರು ಎಂದು ಯದುವೀರ್ ಅಂಬರೀಶ್ ಅವರನ್ನು ಕೊಂಡಾಡಿದರು.
ಮೈಸೂರಿನಲ್ಲಿ ಮಾತನಾಡಿದ ಅವರು, ಅರಮನೆಯ ಕಷ್ಟದ ಸಂದರ್ಭದಲ್ಲಿ ಅಂಬರೀಶ್ ಅವರು ಬೆನ್ನೆಲುಬಾಗಿ ನಿಂತಿದ್ದರು. ಅವರ ಸಹಾಯವನ್ನು ಮರೆಯುವಂತಿಲ್ಲ. ಅವರಿಗೆ ಮೈಸೂರು ರಾಜ ಮನೆತನ ಎಂದಿಗೂ ಕೃತಜ್ಞವಾಗಿರುತ್ತದೆ ಎಂದು ರಾಜ ವಂಶಸ್ಥ ಯದುವೀರ್ ಒಡೆಯರ್ ಅಂಬಿ ಕಾರ್ಯವೈಖರಿಯನ್ನು ನೆನೆದರು.
ಚಿಹ್ನೆ ಬದಲಾವಣೆ: ಸುಮಲತಾ ಬಯಸಿದ್ದು ಅದೇ, ಚುನಾವಣೆ ಆಯೋಗ ಕೊಟ್ಟಿದ್ದು ಅದನ್ನೇ..!
ಸುಮಲತಾ ಮಂಡ್ಯದಲ್ಲಿ ಸ್ಪರ್ಧೆ ಮಾಡಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಅವರು ಹೋರಾಟಕ್ಕೆ ಒಳ್ಳೆಯದಾಗಲಿ. ಬಹಿರಂಗ ಪ್ರಚಾರಕ್ಕೆ ನಾನು ತೆರಳುವುದಿಲ್ಲ. ನಾನು ರಾಜಕೀಯದಿಂದ ದೂರ ಇದ್ದೇನೆ.
ಮಂಡ್ಯದ ಜನರಿಗೆ ಗೊತ್ತಿದೆ. ಮುಂದಿನ ದಿನಗಳಲ್ಲಿ ಅವರೇ ಉತ್ತರ ನೀಡಲಿದ್ದಾರೆ ಎಂದು ಪರೋಕ್ಷವಾಗಿ ಸುಮಲತಾ ಅಂಬರೀಶ್ಗೆ ಬೆಂಬಲ ಸೂಚಿಸಿದರು. ಆದ್ರೆ ಬಹಿರಂಗವಾಗಿ ರಾಜಕೀಯ ಇಲ್ಲ ಎಂದು ಸ್ಪಷ್ಟಪಡಿಸಿದರು.
ರಾಜಕೀಯಕ್ಕೆ ಬರುತ್ತಾರಾ ಯದುವೀರ್ ಒಡೆಯರ್ .?
ಮೊದಲಿನಿಂದಲೂ ಯದುವೀರ್ ರಾಜಕೀಯದಿಂದ ಅಂತರ ಕಾಯ್ದುಕೊಂಡಿರುವ ಯದುವೀರ್, ಈ ಹಿಂದೆ ಅವರು ಬಿಜೆಪಿ ಸೇರುತ್ತಾರೆ ಎನ್ನುವ ಗುಮಾನಿ ಹಬ್ಬಿತ್ತು. ಅಷ್ಟೇ ಅಲ್ಲದೇ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ 2018 ವಿಧಾನಸಭಾ ಚುನಾವಣೆ ವೇಳೆ ಅರಮನೆಯಲ್ಲಿ ಯದುವೀರ್ ಅವರನ್ನು ಭೇಟಿ ಮಾಡಿರುವುದು ಇದಕ್ಕೆ ಮತ್ತಷ್ಟು ಪುಷ್ಠಿ ನೀಡಿತ್ತು.
ಆದ್ರೆ ಈ ಗಾಳಿ ಸುದ್ದಿಗಳಿಗೆ ಕಿವಿಗಪಡಬೇಡಿ, ಯಾವುದೇ ಕಾರಣಕ್ಕೂ ರಾಜಕಾರಣಕ್ಕೆ ಬರಲ್ಲ ಎಂದು ಯದುವೀರ್ ಸ್ಪಷ್ಟನೆ ನೀಡಿದ್ದನ್ನು ಇಲ್ಲಿ ಸ್ಮರಿಸಬಹುದು.